Advertisement

Kasaragod: ಟೆಲಿಫೋನ್‌ ಕಂಬಕ್ಕೆ ಬೈಕ್‌ ಢಿಕ್ಕಿ; ಇಬ್ಬರ ಸಾವು

06:42 PM Jun 08, 2024 | Team Udayavani |

ಕಾಸರಗೋಡು: ಪಯ್ಯನ್ನೂರು ಪರಿಸರದಲ್ಲಿ ನಿಯಂತ್ರಣ ತಪ್ಪಿದ ಮೋಟಾರ್‌ ಬೈಕ್‌ ಟೆಲಿಫೋನ್‌ ಕಂಬಕ್ಕೆ ಢಿಕ್ಕಿ ಹೊಡೆದು ತೃಕ್ಕರಿಪುರ ಮೊಟ್ಟಮ್ಮಲ್‌ ಈಸ್ಟ್‌ನ ಮುಹಮ್ಮದ್‌ ಕುಂಞಿ ಅವರ ಪುತ್ರ ವಿ.ಪಿ.ಎಂ.ಮುಹಮ್ಮದ್‌ ಸುಹೈಸ್‌ (27) ಮತ್ತು ಪಯ್ಯನ್ನೂರು ಪೆರುಂಬಳ ಕಕ್ಕೋಟಕ್ಕತ್ತ್ ನಿವಾಸಿ ಶಾಹುಲ್‌ ಹಮೀದ್‌ ಅವರ ಪುತ್ರ ಕೆ. ಶಾಹಿದ್‌ (22) ಮೃತಪಟ್ಟರು.

Advertisement

ಜೂ. 6ರಂದು ರಾತ್ರಿ 12.30ಕ್ಕೆ ಅಪಘಾತ ಸಂಭವಿಸಿದ್ದು ಬೈಕ್‌ನಿಂದ ಬಿದ್ದ ಯುವಕರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

———————————————————————————————————————————-

ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚನೆ: ಮಹಿಳೆಯ ವಿರುದ್ಧ ಕೇಸು ದಾಖಲು

ಕಾಸರಗೋಡು: ನಕಲಿ ಚಿನ್ನದೊಡವೆ ಅಡವಿರಿಸಿ ಬ್ಯಾಂಕ್‌ನಿಂದ 1,79,000 ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಸೂರ್ಲು ನಿವಾಸಿ ಸುಬೈದಾ ಮಂಜಿಲ್‌ನ ಖೈರುನ್ನೀಸಾ (45) ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಇ.ಎಸ್‌.ಎ.ಎಫ್‌. ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಕಾಸರಗೋಡು ಶಾಖೆಯ ಮೆನೇಜರ್‌ ಅನೀಶ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಬ್ಯಾಂಕ್‌ನಿಂದ ಖೈರುನ್ನೀಸಾ 2023ರ ಡಿ.6ರಂದು 48.36 ಗ್ರಾಂ ನಕಲಿ ಚಿನ್ನದ ಬಳೆಗಳನ್ನು ಅಡವಿರಿಸಿ 1,79,000 ರೂ. ಸಾಲ ಪಡೆದು ವಂಚಿಸಿದ್ದಾಗಿ ಬ್ಯಾಂಕ್‌ ಮೆನೇಜರ್‌ ಪೊಲೀಸರಿಗೆ ದೂರು ನೀಡಿದ್ದರು.

—————————————————————————————————————————————-

ಕಾರಡ್ಕ ಸೊಸೈಟಿ ವಂಚನೆ ಪ್ರಕರಣ ಸೂತ್ರಧಾರ ಪೊಲೀಸ್‌ ವಶದಲ್ಲಿ

ಕಾಸರಗೋಡು:ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೇರ್ ಕೋ-ಆಪರೇಟಿವ್‌ ಸೊಸೈಟಿಯಿಂದ 4.76 ಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಕರಣದಲ್ಲಿ ಸೂತ್ರಧಾರ ಕಲ್ಲಿಕೋಟೆ ರಾಮನಾಟುಕರ ನಿವಾಸಿ ನಬೀಲ್‌ (42)ನನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಸೊಸೈಟಿಯ ಕಾರ್ಯದರ್ಶಿ ಕರ್ಮಂತೋಡಿ ಬಾಳಕಂಡದ ಕೆ.ರತೀಶನ್‌, ಕಣ್ಣೂರು ಚೊವ್ವ ನಿವಾಸಿ, ಪಯ್ಯನ್ನೂರಿನಲ್ಲಿ ವಾಸಿಸುವ ಜಬ್ಟಾರ್‌ ಯಾನೆ ಮಂಞಕಂಡಿ ಅಬ್ದುಲ್‌ ಜಬ್ಟಾರ್‌ನಿಂದ ಲಭಿಸಿದ ಮಾಹಿತಿಯಂತೆ ನಬೀಲ್‌ನನ್ನು ವಶಕ್ಕೆ ತೆಗೆದುಕೊಂಡಿದೆ.

ಸೊಸೈಟಿಯಿಂದ ರತೀಶನ್‌ ಎಗರಿಸಿದ ಹಣವೂ ಜಬ್ಟಾರ್‌ ಮುಖಾಂತರ ನಬೀಲ್‌ನ ಕೈಗೆ ಸೇರಿದೆಯೆಂದು ಅವರಿಬ್ಬರು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಬೀಲ್‌ ಹಾಗೂ ಜಬ್ಟಾರ್‌ ಸೇರಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ವಂಚನೆ ನಡೆಸಿದ್ದಾಗಿ ತಿಳಿದು ಬಂದಿದೆ. ಜಬ್ಟಾರ್‌ಗೆ ಬ್ರಿಟನ್‌ನಿಂದ 673 ಕೋಟಿ ರೂ. ಲಭಿಸಲಿದೆಯೆಂದು ತಿಳಿಸುವ ರಿಸರ್ವ್‌ ಬ್ಯಾಂಕ್‌ನ ಹೆಸರಿನಲ್ಲಿರುವ ನಕಲಿ ದಾಖಲೆ ಪತ್ರವನ್ನು ತೋರಿಸಿ ತಂಡ ವಂಚನೆ ನಡೆಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಿಸರ್ವ್‌ ಬ್ಯಾಂಕ್‌ ಗವರ್ನರ್‌ನ ನಕಲಿ ಸಹಿ ಹಾಕಿ ದಾಖಲೆಪತ್ರ ಸೃಷ್ಟಿಸಿಲಾಗಿತ್ತು. ಪೊಲೀಸರ ವಶದಲ್ಲಿರುವ ನಬೀಲ್‌ ಎನ್‌ಐಎ ಅಧಿಕಾರಿ ಎಂದು ಹೇಳಿಕೊಂಡು ಕೋಟ್ಯಂತರ ರೂ. ವಂಚನೆ ನಡೆಸಿರುವುದಾಗಿ ತನಿಖಾ ತಂಡಕ್ಕೆ ಸೂಚನೆ ಲಭಿಸಿದೆ. ಎನ್‌ಐಎ ಅಧಿಕಾರಿಗಳು ಬಳಸುವ ಓವರ್‌ ಕೋಟ್‌ ಧರಿಸಿ ನಬೀಲ್‌ ಬಂದೂಕು ಕೈವಶವಿರಿಸಿ ವ್ಯಕ್ತಿಗಳನ್ನು ಕಾಣಲು ತೆರಳುತ್ತಿದ್ದನೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಂಬಾxಜೆ ಪಂಚಾಯತ್‌ ವ್ಯಾಪ್ತಿಯ ನಿವಾಸಿಯೋರ್ವ ಶಾಮೀಲಾಗಿದ್ದು, ಈತನಿಗಾಗಿ ಶೋಧ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next