Advertisement

ಕರ್ನಾಟಕ ರಾಜ್ಯೋತ್ಸವ ಇತಿಹಾಸ; ಏಕೀಕರಣದ ಕಾರಣಪುರುಷ…ಕನ್ನಡ ಕುಲಪುರೋಹಿತ ಆಲೂರು…

01:39 PM Oct 31, 2022 | Team Udayavani |

ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈಗಿನ ಕರ್ನಾಟಕ ಮೊದಲು ಮೈಸೂರು ಪ್ರಾಂತ್ಯವಾಗಿತ್ತು. 1950ರಲ್ಲಿ ಭಾರತ ಗಣರಾಜ್ಯವಾದ ನಂತರ ದೇಶದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು.

Advertisement

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು 1905ರಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಆರಂಭಿಸಿದ್ದರು. 1956ರ ನವೆಂಬರ್ 1ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ನೂತನವಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಈ ಹಿನ್ನೆಲೆಯಲ್ಲಿ 1956ರ ನವೆಂಬರ್ 1ರಂದು ರಾಜ್ಯ ಉದಯವಾದ ಸಂಕೇತವಾಗಿ ರಾಜ್ಯೋತ್ಸವ ಆಚರಣೆಗೆ ಚಾಲನೆ ಸಿಕ್ಕಿತ್ತು. ಕರ್ನಾಟಕ ರಾಜ್ಯೋತ್ಸವ ದಿನವನ್ನು ವಿಶ್ವಾದ್ಯಂತ ಕನ್ನಡಿಗರು ಸಂಭ್ರಮದಿಂದ ಆಚರಿಸಲಿದ್ದು, ಕರ್ನಾಟಕ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುತ್ತದೆ.

ಹಳದಿ-ಕೆಂಪು ಬಾವುಟ:

ನವೆಂಬರ್ 1ರಂದು ರಾಜ್ಯಾದ್ಯಂತ ಕೆಂಪು ಮತ್ತು ಹಳದಿ ಬಣ್ಣದ ಕನ್ನಡ ಧ್ವಜಗಳು ಎಲ್ಲೆಡೆ ರಾರಾಜಿಸಲಿದೆ. ಕನ್ನಡ ಚಳವಳಿ ಹೋರಾಟಗಾರ ಎಂ.ರಾಮಮೂರ್ತಿಯವರು ಈ ಹಳದಿ, ಕೆಂಪು ಬಾವುಟವನ್ನು ಪ್ರಥಮ ಬಾರಿಗೆ ತಯಾರಿಸಿ ಬಳಸಿದ್ದರು. ಮುಂಬಯಿ, ದೆಹಲಿ ಮುಂತಾದ ಸ್ಥಳಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರ್ಗಾಂವ್, ಚೆನ್ನೈ, ಅಮೆರಿಕ, ಸಿಂಗಾಪುರ್, ದುಬೈ, ಮಸ್ಕತ್, ನ್ಯೂಜಿಲ್ಯಾಂಡ್ ಸೇರಿದಂತೆ ವಿವಿಧೆಡೆ ನೆಲೆಸಿರುವ ಕನ್ನಡಿಗರು ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸುತ್ತಾರೆ.

Advertisement

1973ರ ನವೆಂಬರ್ 1ರಂದು ರಾಜ್ಯದ ಹೆಸರನ್ನು “ಕರ್ನಾಟಕ” ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ದೇವರಾಜ್ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಅನಕೃ, ಕೋಟ ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವಾರು ಗಣ್ಯರು ಶ್ರಮಿಸಿದ್ದರು.

ಆಲೂರು ವೆಂಕಟರಾಯರು:

ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯ ಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದ ಕನ್ನಡ ಕುಲಪುರೋಹಿತ ಎಂಬ ಗೌರವಾನ್ವಿತ ಸ್ಥಾನ ಪಡೆದುಕೊಂಡಿದ್ದಾರೆ. ಆಲೂರು ವೆಂಕಟರಾಯರು 1880ರ ಜುಲೈ 12ರಂದು ವಿಜಯಪುರದಲ್ಲಿ ಜನಿಸಿದ್ದರು. ಇವರ ವಂಶಜರು ಧಾರವಾಡ ಸಮೀಪದ ಆಲೂರ(ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ)ಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯ, ತಾಯಿ ಭಾಗೀರಥಮ್ಮ.

1921ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳವಳಿಯಲ್ಲಿ ಆಲೂರು ಭಾಗವಹಿಸಿದ್ದರು. ಕರ್ನಾಟಕ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಕರ್ನಾಟಕ ವಿವಿ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ(ಧಾರವಾಡ) ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next