Advertisement

Karnataka Rajyotsava Award 2023: ಕನ್ನಡ ಕಾಯಕಕ್ಕೆ ಸಂದ ರಾಜ್ಯೋತ್ಸವ ಪುರಸ್ಕಾರದ ಮನ್ನಣೆ

01:22 AM Nov 01, 2023 | Team Udayavani |

ಹೊರನಾಡ ಕನ್ನಡಿಗ ಚುಚ್ಚಿ ದೀಪಕ್‌ ಶೆಟ್ಟಿ
ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚುಚ್ಚಿಯ ದೀಪಕ್‌ ಶೆಟ್ಟಿ ಕತಾರ್‌ನಲ್ಲಿ ನೆಲೆಸಿದ್ದಾರೆ. ವಿಜಯ ಬ್ಯಾಂಕ್‌ ನಿವೃತ್ತ ಮುಖ್ಯ ಕಾರ್ಯ ನಿರ್ವಣಾ ಧಿಕಾರಿ ದಿ| ಸಚ್ಚಿದಾನಂದ ಶೆಟ್ಟಿ ಅವರ ಹಿರಿಯ ಪುತ್ರ. ಕರ್ನಾಟಕ ಸಂಘ ಕತಾರ್‌ನ ಸಲಹಾ ಸಮಿತಿ ಅಧ್ಯಕ್ಷರಾಗಿ, ಸಂಘದ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದಾರೆ.
23 ವರ್ಷಗಳಿಂದ ದೋಹಾ ಕತಾರ್‌ನಲ್ಲಿ ಉದ್ಯೋಗದೊಂದಿಗೆ ತುಳುಕೂಟ, ಕನ್ನಡಸಂಘ, ಬಂಟರ ಸಂಘ, ಭಾರತೀಯ ಸಾಂಸ್ಕೃತಿಕ ಕೇಂದ್ರ, ಕತಾರ್‌ನ ಭಾರತೀಯ ರಾಯಭಾರಿ ಕೇಂದ್ರದ ಅಧೀನದಲ್ಲಿರುವ ಭಾರತೀಯ ಸಮುದಾಯ ಕ್ಷೇಮಾಭ್ಯುದಯ ವೇದಿಕೆ ಉಪಾಧ್ಯಕ್ಷರಾಗಿ ಸಕ್ರಿಯವಾಗಿದ್ದಾರೆ. ಬಡಮಕ್ಕಳ ಹೃದಯ ಚಿಕಿತ್ಸೆಗೆ ಸಹಕಾರ, ಕನ್ನಡ ಶಾಲೆ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಧನ ಇತ್ಯಾದಿ ಸಮಾಜ ಸೇವೆಯಲ್ಲಿ ಕಾರ್ಯನಿರತರಾಗಿದ್ದಾರೆ.

Advertisement

ಹೊರನಾಡಲ್ಲಿದ್ದು ಮಾಡಿದ ಆತ್ಮಾಭಿಮಾನದ ಕೆಲಸವಾದ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಪಟ್ಟ ಸೇವೆಯನ್ನು ° ಸರಕಾರ ಗುರುತಿಸಿದೆ. ಇದು ಕನ್ನಡದ ಕೆಲಸಕ್ಕೆ ಇನ್ನಷ್ಟು ಉತ್ತೇಜನ ದೊರೆತಂತಾಗಿದೆ.
– ಚುಚ್ಚಿ ದೀಪಕ್‌ ಶೆಟ್ಟಿ , ಕತಾರ್‌

ಹಸನಬ್ಬ ಯು. ಚಾರ್ಮಾಡಿ
ಬೆಳ್ತಂಗಡಿ: ಹಸನಬ್ಬ ಯು. ಅವರು “ಚಾರ್ಮಾಡಿಯ ಆಪತಾºಂಧವರೆಂದೇ’ ಹೆಸರು. ಕೇವಲ 2ನೇ ತರಗತಿ ಶಿಕ್ಷಣ ಪಡೆದಿರುವ ಅವರು ಚಾರ್ಮಾಡಿಯಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದಾರೆ.ಚಾರ್ಮಾಡಿ ಘಾಟಿ ಪರಿಸರದಲ್ಲಿ ಅಪಘಾತದ ಸಂಭವಿಸುತ್ತಿದ್ದಾಗ ರಾತ್ರಿ ಹಗಲೆನ್ನದೆ ಸೇವೆ ನೀಡಿದವರು. 1985ರಲ್ಲಿ ಇಬ್ಬರು ಲಾರಿ ಚಾಲಕರನ್ನು ರಕ್ಷಿಸುವ ಮೂಲ ಸಮಾಜ ಸೇವೆ ಆರಂಭಿಸಿದ ಅವರು ಇಲ್ಲಿವರೆಗೆ 1 ಸಾವಿರಕ್ಕೂ ಮಿಕ್ಕಿ ಅಪಘಾತಕ್ಕೊಳಗಾದವರ ರಕ್ಷಣೆ ಮಾಡಿದ್ದಾರೆ. ಘಾಟಿ ಭಾಗದಲ್ಲಿ ನಡೆದ ಅನೇಕ ಕೊಲೆ ಪ್ರಕಣಗಳ ಮೃತದೇಹ ಹುಡುಕಲು ಸಹಕಾರ ಸೇರಿದಂತೆ ಅನೇಕ ಪ್ರಕರಣಕ್ಕೆ ಸಾಕ್ಷಿಯಾಗಿದ್ದಾರೆ. ಬ್ಯಾರಿ ಸಮುದಾಯಕ್ಕಾಗಿ ಅವರ ಸೇವೆ ಅಪಾರವಾಗಿದೆ. 2001ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ನನ್ನ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸರಕಾರ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಹಣ, ಆಸ್ತಿ ಮುಖ್ಯವಲ್ಲ ಜನಗಳ ಪ್ರೀತಿ ಸಿಕ್ಕಾಗ ಇನ್ನಷ್ಟು ಸೇವೆ ಮಾಡುವ ಉತ್ತೇಜನ ಬರುತ್ತದೆ.
– ಹಸನಬ್ಬ ಯು., ಚಾರ್ಮಾಡಿ

ಲೀಲಾವತಿ ಬೈಪಾಡಿತ್ತಾಯ
ತೆಂಕುತಿಟ್ಟು ಯಕ್ಷಗಾನದ ತವರೂರು ಮಧೂರಿನಲ್ಲಿ ಹುಟ್ಟಿ ಬೆಳೆದ ಲೀಲಾವತಿ ಬೈಪಾಡಿತ್ತಾಯ ಅವರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. ಸಾಮಾಜಿಕ ಪ್ರೋತ್ಸಾಹವಾಗಲೀ, ಮಾಧ್ಯಮಗಳ ಪ್ರಚಾರವಾಗಲೀ ಇಲ್ಲದ ಕಾಲದಲ್ಲೇ ಅವರು ಬೆಳೆದ ಬಗೆ ಅದ್ಭುತ.ಬೈಪಾಡಿತ್ತಾಯ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿ 2010ರಲ್ಲಿ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2012ರಲ್ಲಿ ಸಾಧಕ ಹಿರಿಯ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾದ ಕೆ. ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ, ಯಕ್ಷಗಾನ ಕಲಿಸಿದರು. ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಬೆಳೇದರು. ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಅಗ್ಗಳಿಕೆ ಇವರದ್ದು.

Advertisement

ರಾಜ್ಯೋತ್ಸವ ಪ್ರಶಸ್ತಿ ಖುಷಿ ತಂದಿದೆ. ಕೆಲವು ವರ್ಷಗಳ ಹಿಂದೆಯೇ ಪ್ರಶಸ್ತಿ ಬರುವ ನಿರೀಕ್ಷೆಯಿತ್ತು. ಕೊನೆಗೂ ಸರಕಾರ ಗುರುತಿಸಿ ಪ್ರಶಸ್ತಿ ನೀಡಿದೆ.
– ಕೆ. ಹರಿನಾರಾಯಣ ಬೈಪಾಡಿತ್ತಾಯ (ಪತಿ)

ದಿನೇಶ್‌ ಅಮಿನ್‌ ಮಟ್ಟು
ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು 39 ವರ್ಷಗಳ ಕಾಲ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಮಟ್ಟುವಿನವರು. ಬಿಕಾಂ, ಎಲ್‌ಎಲ್‌ಬಿ ಪದವೀಧರು. 1983ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸಂಪಾದಕತ್ವದ “ಮುಂಗಾರು’ ದಿನಪತ್ರಿಕೆಯ ಮೂಲಕ ಪತ್ರಿಕಾ ವೃತ್ತಿಜೀವನ ಆರಂಭಿಸಿದ್ದರು. 2013ರಿಂದ 2018ರ ವರೆಗೆ 5 ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದರು. ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರರ ಸಮಿತಿ ಸದಸ್ಯರಾಗಿ, ಮಂಗಳೂರು ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಸರಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ.
– ದಿನೇಶ್‌ ಅಮೀನ್‌, ಮಟ್ಟು

ಆರ್ಗೋಡು ಮೋಹನದಾಸ್‌ ಶೆಣೈ
ಕುಂದಾಪುರ: ಕಮಲಶಿಲೆ ಸಮೀಪದ ಆರ್ಗೋಡು ನಿವಾಸಿ, 2 ವರ್ಷಗಳ ಹಿಂದೆ ವೃತ್ತಿ ತಿರುಗಾಟದಿಂದ ನಿವೃತ್ತರಾದ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್‌ ಶೆಣೈ ಪ್ರಸಂಗಕರ್ತ, ಯಕ್ಷಗುರು. 1950ರಲ್ಲಿ ಭಾಗವತ ದಿ| ಗೋವಿಂದರಾಯ ಶೆಣೈ – ಮುಕ್ತಾಬಾಯಿ ದಂಪತಿಗೆ ಜನಿಸಿ 18ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಕಮಲಶಿಲೆ ಮಹಾಬಲ ದೇವಾಡಿಗ ಹಾಸ್ಯಗಾರರಲ್ಲಿ ಹೆಜ್ಜೆ ಅಭ್ಯಸಿಸಿ, ಹವ್ಯಾಸಿಯಾಗಿ 2 ವರ್ಷ ವೇಷಧರಿಸಿ, ಕುಂದಾಪುರ ಲಕ್ಷ್ಮೀ ವೆಂಕಟೇಶ ಮೇಳ, 1976ರಲ್ಲಿ ಹಿರಿಯಡ್ಕ, ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮ, ಮೂಲ್ಕಿ, ಮಂದಾರ್ತಿ, ಶಿರಸಿ, ಸುದೀರ್ಘಾವಧಿ ಕಮಲಶಿಲೆ ಮೇಳದಲ್ಲಿ ತಿರುಗಾಟ ಮಾಡಿದ ಅನುಭವಿ. ರಾಮ, ಕೃಷ್ಣ, ಭೀಷ್ಮ, ದೇವವ್ರತ, ಪರಶುರಾಮ, ದಶರಥ, ವೀರಮಣಿ, ಹನೂಮಂತ, ಕೌರವ, ಜಾಂಬವ, ವಿಕ್ರಮಾದಿತ್ಯ, ಋತುಪರ್ಣ, ಶಂತನು ಮೊದಲಾದ ಪಾತ್ರಗಳು ಕಲಾವಲಯದಲ್ಲಿ ಅಚ್ಚೊತ್ತಿವೆ. ಯಶೋದಾ ಕೃಷ್ಣ, ಮೃಗನಯನೆ, ರಕ್ತ ತಿಲಕ, ಕರ್ಣ ಕಥಾಮೃತಮ್‌ ಮೊದಲಾದ ಪ್ರಸಂಗಗಳನ್ನು ರಚಿಸಿದ್ದಾರೆ.

ಪರಿಶ್ರಮದಿಂದ ಕಮಲಶಿಲೆ ಮೇಳ ನಡೆಸಿದ ದೊಡ್ಡಪ್ಪ ಆರ್ಗೋಡು ರಾಮಚಂದ್ರ ಶೆಣೈ, ತಂದೆ ಗೋವಿಂದರಾಯ ಶೆಣೈ ಅಂತಹವರಿಗೆ ಇಂತಹ ಪ್ರಶಸ್ತಿ ದೊರೆಯಬೇಕಿತ್ತು. ತಡವಾಗಿಯಾದರೂ ಬೇಗನೇ ಬಂದಿದೆ ಎಂದಷ್ಟೇ ಭಾವಿಸಬೇಕಿದೆ.
– ಆರ್ಗೋಡು ಮೋಹನದಾಸ ಶೆಣೈ

ಕಬ್ಬಿನಾಲೆ ವಸಂತ ಭಾರದ್ವಾಜ
ಹೆಬ್ರಿ: ಹೆಬ್ರಿ ತಾಲೂಕಿನ ಕಬ್ಬಿನಾಲೆ ವಸಂತ ಭಾರದ್ವಾಜ ಮಧು ಸೂದನ ಭಟ್‌ ಹಾಗೂ ಸಮತಿ ದಂಪತಿಯ ಪುತ್ರನಾಗಿ 1961 ಡಿ. 5ರಂದು ಜನಿಸಿದ್ದು, ಮಹಾಕಾವ್ಯಗಳ ಕವಿಯಾಗಿ, ಯಕ್ಷಗಾನ ಪ್ರಸಂಗಕರ್ತ, ಹೊಸಚಿಂತನೆಯ ಗಮಕ ವ್ಯಾಖ್ಯಾನಕಾರ, ವಾಗ್ಮಿ, ಅಷ್ಟಾವಧಾನಿಯಾಗಿ ಪ್ರಸಿದ್ಧರು. ಹಲವು ಕೃತಿಗಳನ್ನು ರಚಿಸಿದ್ದು, ಕುವೆಂಪು ರಾಮಾಯಣವನ್ನು ಆಧರಿಸಿ ರಚಿಸಿದ “ಶ್ರೀàರಾಮಲೀಲಾದರ್ಶನಂ’ ಯಕ್ಷಗಾನ ಮಹಾಕಾವ್ಯವೆಂಬ ಮನ್ನಣೆಗೆ ಪಾತ್ರವಾಗಿದೆ. ಯಕ್ಷಗಾನ ಛಂದಸ್ಸಿನ ಕುರಿತಾದ ಸಂಶೋಧನ ಮಹಾಪ್ರಬಂಧಕ್ಕೆ ಮೈಸೂರು ವಿ.ವಿ. ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.ರಾಜ್ಯ ಸರಕಾರದ “ಕನಕ ಗೌರವ’, ಯಕ್ಷಗಾನ ಅಕಾಡೆಮಿಯ “ಪಾರ್ತಿಸುಬ್ಬ’ ಪ್ರಶಸ್ತಿ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಿಬಂದಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ದುಡಿದು ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.

ಬ್ಯಾಂಕಿನ ಅಧಿಕಾರಿ ಹುದ್ದೆಯನ್ನು ತೊರೆದು ಸಾಹಿತ್ಯವನ್ನು ತಪಸ್ಸು ಎಂದು ತಿಳಿದು ಅದರಲ್ಲಿ ಕೃಷಿ ಕಾಯಕದಲ್ಲಿ ತೊಡ ಗಿಸಿಕೊಂಡಿದ್ದೇನೆ. ಸಮುದಾಯ, ಸಮಾಜ ಗಮನಿಸದಿದ್ದರೂ ಸರಕಾರ ಗುರುತಿಸಿ ನೀಡಿದ ಈ ಗೌರವ ಅತ್ಯಂತ ಸಂತೋಷ ತಂದಿದೆ.
– ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್‌

ಹಾಜಿ ಅಬ್ದುಲ್ಲಾ ಪರ್ಕಳ
ಉಡುಪಿ: ಮಣಿಪಾಲದ ಡಾ| ಟಿ.ಎ. ಪೈ ಅವರ ಸಲಹೆ ಹಾಗೂ ಉತ್ತೇಜನದಿಂದ ಸಣ್ಣ ಉದ್ಯಮ ಪ್ರಾರಂಭಿಸಿದ ಹಾಜಿ ಅಬ್ದುಲ್ಲಾ ಪರ್ಕಳ ಅವರು ಕ್ರಮೇಣ ತಮ್ಮ ಪರಿಶ್ರಮದಿಂದ ತಮ್ಮ ಉದ್ಯಮವನ್ನು ವಿಸ್ತರಿಸುತ್ತ ಉಡುಪಿಯ ಓರ್ವ ಯಶಸ್ವೀ ಉದ್ಯಮಿಯಾಗಿ ಬೆಳೆದವರು.

ಮಣಿಪಾಲಕ್ಕೆ ದೇಶ-ವಿದೇಶಗಳಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಅರಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಮತ್ತು ಬಡಜನರಿಗೆ ಸಹಾಯ ಹಸ್ತ ನೀಡುತ್ತಿ¨ªಾರೆ. ಮಣಿಪಾಲದಲ್ಲಿ ಮಸ್ಜಿದ್‌-ಎ- ಮಣಿಪಾಲ್‌ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಜಮೀಯತುಲ್‌ ಫ‌ಲಾಹ್‌, ಮುಸ್ಲಿಂ ವೆಲ್ಫೆàರ್‌ ಅಸೋಸಿಯೇಶನ್‌, ಮಿಲ್ಲತ್‌ ಎಜುಕೇಶನ್‌ ಟ್ರಸ್ಟ್‌, ಝಿಯಾ ಎಜುಕೇಶನ್‌ ಟ್ರಸ್ಟ್‌ ಮುಂತಾದ ಸಂಘ- ಸಂಸ್ಥೆಗಳಲ್ಲಿ ವಿವಿಧ ಹು¨ªೆಗಳನ್ನು ಅಲಂಕರಿಸಿದ್ದರು. ಕಾಂಗ್ರೆಸ್‌ ಅಲ್ಪಸಂಖ್ಯಾಕರ ಉಡುಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಜಿÇÉಾ ಮುಸ್ಲಿಮ್‌ ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿದ್ದರು. ಈಗ ಅದರ ಗೌರವಾಧ್ಯಕ್ಷರಾಗಿ¨ªಾರೆ.

ಹಲವಾರು ವರ್ಷಗಳಿಂದ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರಶಸ್ತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
– ಹಾಜಿ ಅಬ್ದುಲ್ಲಾ , ಪರ್ಕಳ

ಡಾ| ಪ್ರಶಾಂತ್‌ ಶೆಟ್ಟಿ
ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್‌ ಶೆಟ್ಟಿ ಅವರು ಕಾರ್ಕಳ ತಾಲೂಕಿನ ಹೆಬ್ರಿಯ ಮಾಬ್ಳಿಯವರು. 1994ರಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನಲ್ಲಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾಗಿ ಬಿ.ಎನ್‌.ವೈ.ಎಸ್‌. ಪದವಿ ಪಡೆದರು. ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ವೈದ್ಯಾಧಿಕಾರಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು.
2006ರಲ್ಲಿ ಬೆಂಗಳೂರಿನಲ್ಲಿ ಎಸ್‌. ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2014ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು. ಪ್ರಸ್ತುತ ಭಾರತ ಸರಕಾರದ ಆಯುಷ್‌ ಮಂತ್ರಾಲಯದ ಟಾಸ್ಕ್ಫೋರ್ಸ್‌ ಸದಸ್ಯರಾಗಿ, ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಹಾಗೂ ರಾಜ್ಯದ ರಾಜೀವ್‌ ಗಾಂಧಿ ಆರೋಗ್ಯ ವಿ.ವಿ.ಯಲ್ಲಿ ಸೆನೆಟ್‌ ಸದಸ್ಯರಾಗಿದ್ದಾರೆ. ಪ್ರಸ್ತುತ ಕರ್ನಾಟಕ ಸರಕಾರದ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಸಲಹಾ ಮಂಡಳಿ ಸದಸ್ಯರಾಗಿ, ರಾಜೀವ್‌ ಗಾಂಧಿ ವಿ.ವಿ.ಯ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾಗಿದ್ದಾರೆ.

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವದಿಂದ ಸ್ಥಾಪಿಸಿದ ಪ್ರಕೃತಿ ಚಿಕಿತ್ಸಾ ಕಾಲೇಜಿನಿಂದ ಇಂದು ಸಾವಿರಾರು ಮಂದಿ ಸಾಧನೆ ತೋರುವಂತಾಗಿದೆ. ಅದರಲ್ಲಿ ನಾನೂ ಒಬ್ಬ ಎಂಬುದಕ್ಕೆ
ಹೆಮ್ಮೆಯಾಗಿದೆ.
– ಡಾ| ಪ್ರಶಾಂತ್‌ ಶೆಟ್ಟಿ

ಡಾ| ಶಶಿಕಿರಣ್‌ ಶೆಟ್ಟಿ
ಮುಂಬಯಿ: ಉದ್ಯಮಿ, ಸಮಾಜ ಸೇವಕ ಡಾ| ಶಶಿಕಿರಣ್‌ ಶೆಟ್ಟಿ ಅವರು ಆಲ್‌ಕಾರ್ಗೋ ಗ್ರೂಪ್‌ ಸಂಸ್ಥೆಯ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಡಾ| ಶಶಿಕಿರಣ್‌ ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು.1957ರಲ್ಲಿ ಜನಿಸಿದ ಅವರು 1978ರಲ್ಲಿ ಮುಂಬಯಿಗೆ ಆಗಮಿಸಿ ಇಂಟರ್ಮೋಡಲ್‌ ಟ್ರಾನ್ಸ್‌ಪೊàರ್ಟ್‌ ಮತ್ತು ಟ್ರೇಡಿಂಗ್‌ ಸಿಸ್ಟಮ್ಸ… ಪ್ರೈ. ಲಿ. ಮೂಲಕ ಲಾಜಿಸ್ಟಿಕ್ಸ್‌ ಉದ್ಯಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು. 25ನೇ ಹರೆಯದಲ್ಲೇ ಟ್ರಾನ್ಸ್‌ ಇಂಡಿಯಾ ಫ್ರೈಟ್‌ ಸರ್ವಿಸಸ್‌ ಪ್ರೈ. ಲಿ. ಎಂಬ ಪ್ರಥಮ ಉದ್ಯಮ ಸ್ಥಾಪಿಸಿ ಯಶಸ್ಸನ್ನು ಕಂಡು 1994ರಲ್ಲಿ ಆಲ್‌ಕಾರ್ಗೋ ಲಾಜಿಸ್ಟಿಕ್ಸ್‌ ಲಿ. ಸ್ಥಾಪಿಸಿದರು.

ಪ್ರಸ್ತುತ ಭಾರತದ ಅತೀದೊಡ್ಡ ಸಮಗ್ರ ಲಾಜಿಸ್ಟಿಕ್ಸ್‌ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಆಲ್‌ಕಾರ್ಗೋ ಸಂಸ್ಥೆಯು 100ಕ್ಕೂ ಹೆಚ್ಚು ದೇಶಗಳಿಗೆ ವಿಸ್ತಾರಗೊಂಡಿದ್ದು, 180ಕ್ಕೂ ಹೆಚ್ಚು ಸ್ವಂತ ಶಾಖೆಗಳೊಂದಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಅವರನ್ನು ಭಾರತ ಸರಕಾರದ ಶಿಕ್ಷಣ ಸಚಿವಾಲಯವು ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ (ಎನ್‌ಐಟಿಐಇ)ನ ಸೊಸೈಟಿ ಮತ್ತು ಬೋರ್ಡ್‌ ಆಫ್ ಗವರ್ನರ್‌ಗಳ ಅಧ್ಯಕ್ಷರನ್ನಾಗಿ ನೇಮಿಸಿದೆ. ಕೊರೊನಾ ಸಂದರ್ಭ ಇವರ ಸಮಾಜ ಸೇವೆಯನ್ನು ಭಾರತ ಸರಕಾರ ಗುರುತಿಸಿ ಗೌರವಿಸಿದೆ.

ಲೆ| ಜ| ಕೋದಂಡ ಪಿ. ಕಾರ್ಯಪ್ಪ
ಮಡಿಕೇರಿ: ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತರಾಗಿರುವ ಕೊಡಗಿನ ಲೆಫ್ಟಿನೆಂಟ್‌ ಜನರಲ್‌ ಕೋದಂಡ ಪಿ. ಕಾರ್ಯಪ್ಪ. ಅವರು ಸೋಮವಾರಪೇಟೆ ತಾಲೂಕಿನ ಮಾದಾಪುರದ ಕೋದಂಡ ಕುಟುಂಬದವರು. ಸೇನೆಯಿಂದ ನಿವೃತ್ತರಾದ ಬಳಿಕ ಮುಂಬಯಿಯಲ್ಲಿ ನೆಲೆಸಿದ್ದಾರೆ. ಲೆಫ್ಟಿನೆಂಟ್‌ ಜನರಲ್‌ ಕೆ.ಪಿ. ಕಾರ್ಯಪ್ಪ ಅವರು ಭಾರತದ ರಾಷ್ಟ್ರಪ‌ತಿಗಳ ಕಾರ್ಯದರ್ಶಿಯ ಗೌರವಾನ್ವಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಲ್ಲದೆ, ಸೇನೆಯಲ್ಲಿ ನೂತನವಾಗಿ ಸೃಷ್ಟಿಸಲಾದ ಮಾಸ್ಟರ್‌ ಜನರಲ್‌ ಸಸ್ಟೆ ನೆನ್ಸ್‌ ಹುದ್ದೆಯನ್ನು ನಿರ್ವಹಿಸಿದ ಮೊದಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿರುವುದು ವಿಶೇಷ.
ರಜಪೂತ್‌ ರೈಫ‌ಲ್ಸ್‌ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು, ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ದೇಶದ ರಕ್ಷಣ ಪಡೆಗಳ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿಗಳ ಪರ್ಸನಲ್‌ ಆಫೀಸರ್‌ ಆಗಿ, ಪ್ರಿನ್ಸಿಪಲ್‌ ಸ್ಟಾಫ್ ಆಫೀಸರ್‌ ಟು ಚೀಫ್ ಆಫ್ ಆರ್ಮಿ ಸ್ಟಾಫ್ ಹುದ್ದೆಗಳನ್ನು ಅಲಂಕರಿಸಿದ್ದರು.

ಮಾರುತಿ ಜನ ಸೇವಾ ಸಂಘ ಉಳ್ಳಾಲ
ಸಮಾಜ ಸೇವೆಯನ್ನೇ ಮೂಲ ಮಂತ್ರವನ್ನಾಗಿಟ್ಟುಕೊಂಡು ಉಳ್ಳಾಲ ಮೊಗವೀರ ಪಟ್ಟಣದಲ್ಲಿ ಆರಂಭವಾದ 1985ರಲ್ಲಿ ಆರಂಭವಾದ ಸಂಸ್ಥೆಯೇ ಮಾರುತಿ ಜನ ಸೇವಾ ಸಂಘ. ಆರಂಭದಲ್ಲಿ 15 ಮಂದಿಯ ತಂಡ ಕ್ರಿಕೆಟ್‌ ಆಟವನ್ನು ಆಡಿ, ಅದರಲ್ಲಿ ಬಂದ ಹಣದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಾಯಿತು. ಕಳೆದ 35 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ 1.5 ಕೋ.ರೂ. ಮೊತ್ತದಲ್ಲಿ ಶಾಲೆಯೊಂದನ್ನು ನಿರ್ಮಿಸಿದ್ದು, ಕೋವಿಡ್‌ ಸಮಯದಲ್ಲಿ ಸ್ಥಳೀಯ 625ಕ್ಕೂ ಕುಟುಂಬಗಳಿಗೆ ಕಿಟ್‌ ನೀಡಿ ಸಹಕರಿಸಿತ್ತು. ಸಂಘದಲ್ಲಿ ಪ್ರಸ್ತುತ 35-40 ಮಂದಿ ಸದಸ್ಯರಿದ್ದರು ತಮ್ಮ ದುಡಿಮೆಯ ಒಂದಂಶವನ್ನು ಸಂಘದ ಮೂಲಕ ಸಮಾಜ ಸೇವೆಗೆ ಉಪಯೋಗಿಸುತ್ತಿದ್ದು, ಪ್ರತೀ ವರ್ಷ 15-20 ಲಕ್ಷ ರೂ. ಇದಕ್ಕಾಗಿ ವಿನಿಯೋಗಿಸುತ್ತಿದೆ. 2014ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿತ್ತು.

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮಂಗಳೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ಸೃಷ್ಟಿಸಲು ಶ್ರಮಿಸುತ್ತಿರುವ ಸಂಸ್ಥೆಯೇ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ. ಕರಾವಳಿಯ ಮುಸ್ಲಿಂ ಸಮುದಾಯದ ಪ್ರಮುಖರು 2001ರಲ್ಲಿ ಆರಂಭಿಸಿರುವ ಈ ಒಕ್ಕೂಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 180ಕ್ಕೂ ಅಧಿಕ ಶಾಲೆಗಳು ಒಕ್ಕೂಟದ ಸದಸ್ಯತ್ವ ಪಡೆದಿವೆ. ಮಾಜಿ ಸಚಿವ ದಿ| ಬಿ.ಎ. ಮೊದೀನ್‌ ಅವರ ಕನಸಿನ ಕೂಸಾಗಿರುವ ಈ ಸಂಘಟನೆ 22 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಗ್ರಾಮೀಣ ಪ್ರದೇಶದ ಬಡ ಹಾಗೂ ಅರ್ಹ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗಳೂರು ಬೆಂಗಳೂರುಗಳ ತಾಂತ್ರಿಕ ಕಾಲೇಜುಗಳಲ್ಲಿ ಉಚಿತ ಸೀಟು ಒದಗಿಸಿ ನೆರವಾಗಿದೆ ಮೀಫ್‌. ಜತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರಿಗೆ ತರಬೇತಿ ನೀಡುತ್ತಿರುವುದು “ಮೀಫ್‌’ನ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾಗಿವೆ.

ಚಿಣ್ಣರ ಬಿಂಬ ಮುಂಬಯಿ
ಮುಂಬಯಿ: ಮುಂಬಯಿಯ ಚಿಣ್ಣರಬಿಂಬ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮುಂಬಯಿಯಲ್ಲಿ 21 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ಚಿಣ್ಣರ ಬಿಂಬವು ಮಕ್ಕಳಿಗೆ ನಮ್ಮ ನಾಡಿನ ರೀತಿ ನೀತಿಗಳನ್ನು, ಕಟ್ಟುಕಟ್ಟಳೆಗಳನ್ನು, ಧಾರ್ಮಿಕ ವಿಧಿ-ವಿಧಾನಗಳನ್ನು, ಕಲಿಸುವಂಥ ಕಾರ್ಯದಲ್ಲಿ ಸಂಸ್ಥೆ ಕಾರ್ಯ ನಿರತವಾಗಿದೆ. ಕನ್ನಡ ಭಾಷೆ, ಮತ್ತು ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಮತ್ತೂಂದು ತಲೆಮಾರಿಗೆ ವರ್ಗಾಯಿಸುವ ಗುರು ತರವಾದ ಕಾಯಕದಲ್ಲಿ ತೊಡಗಿದೆ. ಹೆಚ್ಚಾಗಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಚಿಣ್ಣರ ಬಿಂಬದ ಮಕ್ಕಳು ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಕನ್ನಡದಲ್ಲಿ ಸ್ಪಷ್ಟವಾಗಿ, ಸುಲಲಿತವಾಗಿ ಮಾತನಾಡುತ್ತಾರೆ. ಪೂಜಾ ಭಂಡಾರಿ ಸ್ಥಾಪಕಾ ಧ್ಯಕ್ಷೆಯಾಗಿ, ನೈನಾ ಪ್ರಕಾಶ್‌ ಭಂಡಾರಿ ಕಾರ್ಯಾಧ್ಯಕ್ಷರಾಗಿದ್ದಾರೆ. ಪ್ರಕಾಶ್‌ ಭಂಡಾರಿಯವರ ನಾಯಕತ್ವ, ಈ ಸಂಸ್ಥೆಗಿದೆ.

ಸಾವಿರಾರು ಮಂದಿ ಸಂಸ್ಥೆಯ ಅಭಿವೃದ್ಧಿಗಾಗಿ ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮರಾಠಿ ಮಣ್ಣಿನಲ್ಲಿ ಚಿಣ್ಣರ ಬಿಂಬದ ನಾಡುನುಡಿ ಸೇವೆಯನ್ನು ಗುರುತಿಸಿರುವುದಕ್ಕೆ ಸಂತೋಷವಾಗುತ್ತಿದೆ.
– ಪ್ರಕಾಶ್‌ ಭಂಡಾರಿ, ಚಿಣ್ಣರ ಬಿಂಬದ ರೂವಾರಿ

Advertisement

Udayavani is now on Telegram. Click here to join our channel and stay updated with the latest news.

Next