Advertisement

karnataka polls 2023; ಅತಂತ್ರದ ಭೀತಿ-ಬಹುಮತಕ್ಕೆ ಅಂಗಲಾಚುತ್ತಿರುವ ಪಕ್ಷಗಳು!

12:03 AM Apr 10, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸರಿಯಾಗಿ 30 ದಿನಗಳು ಬಾಕಿ ಉಳಿದಿರುವಾಗ ರಾಜಕೀಯ ಪಕ್ಷಗಳ ವರಸೆಗಳು ದಿನಕ್ಕೊಂದು ರೀತಿ ಬದಲಾಗತೊಡಗಿವೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ನಮಗೆ ಬಹುಮತ, ನಮ್ಮದೇ ಸರ್ಕಾರ, ನಮ್ಮ ಪರವಾದ ಅಲೆ ಇದೆ ಎಂದು ಹೇಳಿಕೊಂಡು ಬೀಗುತ್ತಿದ್ದ ಪಕ್ಷಗಳು ಈಗ ಅತಂತ್ರ ಫ‌ಲಿತಾಂಶದ ಭೀತಿಯಿಂದಾಗಿ ಬಹುಮತ ಕೊಡಿ ಎಂದು ಅಂಗಲಾಚತೊಡಗಿವೆ.

Advertisement

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಕೇಂದ್ರದ ಮಾಜಿ ಸಚಿವ ಶಶಿ ತರೂರ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿ, ಕಾಂಗ್ರೆಸ್‌ ನಾಯಕರ ಇತ್ತೀಚಿನ ಹೇಳಿಕೆಗಳು ಯಾವುದೇ ಪಕ್ಷಕ್ಕೂ ಈ ಸಲವೂ ಬಹುಮತ ದೊರೆಯುವುದಿಲ್ಲ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬಹುಮತ ಗಿಟ್ಟಿಸುವ ನಿಟ್ಟಿನಲ್ಲಿ ಮತದಾರರ ವಿಶ್ವಾಸ ಪಡೆ ಯಲು ರಾಜಕೀಯ ಪಕ್ಷಗಳು ವಿಫ‌ಲವಾಗುತ್ತಿ ವೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಕಳೆದ 2018ರ ಚುನಾವಣೆಯಂತೆ ಈ ಸಲವೂ ಯಾವುದೇ ರಾಜಕೀಯ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಫ‌ಲಿತಾಂಶ ಬರಬಹುದು ಎಂಬ ರಾಜ ಕೀಯ ನಾಯಕರ ಹೇಳಿಕೆ, ಆತಂಕ ನೋಡಿದರೆ ಈ ಸಲವೂ ಅತಂತ್ರ ವಿಧಾನಸಭೆ ಸೃಷ್ಟಿಯಾಗು ವುದು ನಿಶ್ಚಿತ ಎಂದು ಹೇಳಬಹುದು. ಈ ಕಾರಣ ದಿಂದಲೇ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಬಹುಮತ ಕೊಡಿ ಎಂದು ಅಂಗಲಾಚ ತೊಡಗಿವೆ. ಅಲ್ಲದೆ ಜೆಡಿಎಸ್‌ ಕೂಡ ನಮಗೂ ಒಂದಾÕರಿ ಬಹುಮತ ಕೊಡಿ ಎಂದು ಕೇಳುತ್ತಿರು ವುದನ್ನು ನೋಡಿದರೆ ಅತಂತ್ರದ ಸುಳಿವು ಸಿಕ್ಕಿದೆ ಎಂದರ್ಥ.

ಈಗಲೂ ನೂರರ ಗಡಿ ದಾಟಿಲ್ಲ: ಇತ್ತೀಚೆಗೆ ಮಾರ್ಚ್‌ ಅಂತ್ಯದಲ್ಲಿ ವಿವಿಧ ಪಕ್ಷಗಳು ನಡೆಸಿದ ಆಂತರೀಕ ಸಮೀಕ್ಷೆ ಪ್ರಕಾರ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ನೂರರ ಗಡಿ ದಾಟಿಲ್ಲ. ಸರ್ಕಾರ ರಚನೆಗೆ 113 ಮ್ಯಾಜಿಕ್‌ ನಂಬರ್‌. ಆದರೆ, ಈ ಎರಡೂ ಪಕ್ಷಗಳು ನೂರರ ಆಸುಪಾಸಿಗೆ ಬಂದು ನಿಂತಿವೆ. ಈ ಅಂಕಿ ಅಂಶಗಳೇ ಈಗ ಉಭಯ ಪಕ್ಷಗಳ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಆಡಳಿತರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದರೆ ಪ್ರತಿಪಕ್ಷ ಕಾಂಗ್ರೆಸ್‌ ತನ್ನದೇ ಆದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್ನು ಜೆಡಿಎಸ್‌ ತನ್ನದೇ ಲೆಕ್ಕಾಚಾರದಲ್ಲಿ ಹೊರಟಿದ್ದು ಅತಂತ್ರ ಚುನಾವಣೆ ಫ‌ಲಿತಾಂಶದ ಲಾಭದ ನಿರೀಕ್ಷೆಯಲ್ಲಿದೆ.

2018ರ ವಿಧಾನಸಭಾ ಚುನಾವಣಾ ಫ‌ಲಿತಾಂಶದ ಬಳಿಕ ರಚನೆಯಾದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾ ರದ ವ್ಯವಸ್ಥೆ ಯಶಸ್ವಿಯಾ ಗಲಿಲ್ಲ. ಆಂತರೀಕ ಕಚ್ಚಾಟ ದಿಂದ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಬಿಜೆ ಪಿಗೆ ಬಹುಮತ ಇಲ್ಲದಿ ದ್ದರೂ ಬಿಜೆಪಿ ಬಹುಮತ ಮಾಡಿಕೊಂಡಿತು. ಈಗ ಸಮ್ಮಿಶ್ರ ಸರ್ಕಾರದ ವ್ಯವಸ್ಥೆ ರಾಜ್ಯಕ್ಕೆ ಶಾಪವೆಂದು ಅದರ ಫ‌ಲಾನುಭವಿಗಳೇ ಹೇಳತೊಡಗಿದ್ದಾರೆ. ಅಂದರೆ ಮತದಾರರು ಯಾವುದಾದರೂ ಒಂದು ಪಕ್ಷಕ್ಕೆ ಸ್ಪಷ್ಟಬಹುಮತ ಕೊಡದಿದ್ದರೆ ಅತಂತ್ರ ಫ‌ಲಿತಾಂಶ ರಾಜ್ಯಕ್ಕೆ ಮತ್ತೆ ಶಾಪವಾಗಲಿದೆ ಎಂದು ಹೇಳುವ ಮೂಲಕ ಮತದಾರರನ್ನು ಜಾಗೃತಿಗೊಳಿ ಸುವ ಇಲ್ಲವೇ ಎಚ್ಚರಿಸುವ ಕೆಲಸವನ್ನು ಮಾಡತೊಡಗಿವೆ.

Advertisement

ಕಾರಣ ಏನು?: ಬಿಜೆಪಿ ಆಡಳಿತವಿದ್ದರೂ ಅದು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿ ಆಗಿದ್ದರೂ ಮಾಜಿ ಸಿಎಂ ಬಿ.ಎಸ್‌.ಯಡಿಯೂ ರಪ್ಪ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇ ವೆಂದು ಘೋಷಿಸುವ ಮೂಲಕ ಯಡಿಯೂರ ಪ್ಪಗೆ ಹೆಚ್ಚಿನ ಮನ್ನಣೆ ನೀಡಲಾಯಿತು. ಇದು ಒಂದು ರೀತಿಯಲ್ಲಿ ಬಿಜೆಪಿ ವರಿಷ್ಠರೇ ಸೃಷ್ಟಿಸಿದ ನಾಯಕತ್ವದ ಗೊಂದಲ. ಪರಿಶಿಷ್ಟರು, ಲಿಂಗಾಯ ತರು, ಒಕ್ಕಲಿಗರ ಮೀಸಲಾತಿ ಪ್ರಮಾಣ ಹೆಚ್ಚಳ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಘೋಷಣೆಯಾಗಿದ್ದರೂ ಸಾಕಷ್ಟು ಗೊಂದಲ ಗಳನ್ನು ಸೃಷ್ಟಿಸಿದೆ. ಇನ್ನು ಭ್ರಷ್ಟಾಚಾರ ವಿಷಯವನ್ನು ಕಾಂಗ್ರೆಸ್‌ ಹಾದಿ ಬೀದಿ ರಂಪ ಮಾಡಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ. ಆಡಳಿತ ವೈಖರಿ ಕೂಡ ಅಷ್ಟೇನೂ ತೃಪ್ತಿ ಇಲ್ಲ ಎಂಬುದು ಜನಾಭಿಪ್ರಾಯ. ಹೀಗಾಗಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸು ತ್ತಿರುವ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಭಗೀರಥ ಪ್ರಯತ್ನ ಮಾಡುತ್ತಿದ್ದರೂ ಮತದಾರ ಮಾತ್ರ ಇನ್ನೂ ಕಮಲದ ಕಡೆ ಪೂರ್ಣ ಪ್ರಮಾ ಣದಲ್ಲಿ ವಾಲಿಲ್ಲ. ಹೀಗಾಗಿ ಬಿಜೆಪಿಗೂ ಬಹುಮತ ದೊರೆಯುವುದು ಕಷ್ಟ ಎಂಬುದು ಆಯಾ ಪಕ್ಷಗಳ ಆಂತರೀಕ್ಷ ಸಮೀಕ್ಷೆಗಳ ಲೆಕ್ಕಾಚಾರ.

ಸಮಸ್ಯೆಗಳ ಗೂಡು: ಪ್ರತಿಪಕ್ಷ ಕಾಂಗ್ರೆಸ್‌ ಸಮ ಸ್ಯೆಗಳ ಗೂಡಾಗಿದೆ. ಸರ್ಕಾರದ ವಿರುದ್ಧ ಹೋರಾ ಟಕ್ಕೆ ಸಿಕ್ಕ ಪ್ರಬಲ ಅಸ್ತ್ರಗಳನ್ನು ಸರಿಯಾಗಿ ಬಳಸದ ಕಾರಣ ಯಾವುದೇ ಅವ್ಯವಹಾರ/ಹಗರಣಗಳು ತಾರ್ಕಿಕ ಅಂತ್ಯ ಕಾಣಲಿಲ್ಲ. ವಿಧಾನಸಭೆಯ ಒಳಗೆ-ಹೊರಗೆ ಕಾಂಗ್ರೆಸ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದೆ ಹೆಚ್ಚು. ನಿರ್ದಿಷ್ಟ ಪ್ರಕರಣವನ್ನು ಮುಂದಿಟ್ಟುಕೊಂಡು ಕಾನೂನಾತ್ಮಕವಾಗಿ ಹೋರಾಟ ಮಾಡಲೇ ಇಲ್ಲ. ಸರ್ಕಾರದ ವೈಫ‌ಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಪ್ರತಿಪಕ್ಷವಾಗಿ ವಿಫ‌ಲವಾಗಿದೆ ಎಂಬ ಮಾತಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರ ಆರೋಪ ಕೇವಲ ಬಾಯಿ ಮಾತಿಗೆ ಸೀಮಿತವಾಯಿತು. ಕಾಂಗ್ರೆಸ್‌ನ ಅದೃಷ್ಟವೇನೋ ಎಂಬಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಕರಣವನ್ನು ಸಾಕ್ಷಿ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸಿತು. ಜತೆಗೆ ಮತದಾರರ ಮನ ಸೆಳೆಯಲು ಉಚಿತ ಅಕ್ಕಿ, ವಿದ್ಯುತ್‌ ಜತೆಗೆ ಗೃಹಿಣಿಯರು, ಪದವೀಧರಿಗೆ ಮಾಸಾಶನದ ಗ್ಯಾರೆಂಟಿ ನೀಡಿದ್ದರೂ ಕಾಂಗ್ರೆಸ್‌ ಕಡೆ ಇನ್ನೂ ಮತದಾರ ಕೈ ಚಾಚಿದಂತೆ ಕಾಣುತ್ತಿಲ್ಲ.

ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಗ್ಯಾರೆಂಟಿಯೇ ಇಲ್ಲ. ಆದರೆ, ಫ‌ಲಿತಾಂಶಕ್ಕೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಹುದ್ದೆ ಕುರಿತು ನಡೆಯುತ್ತಿರುವ ಶೀತಲ ಸಮರ ದಿನೇ ದಿನೇ ಜೋರಾಗುತ್ತಿದೆ. ಸಿಎಂ ಕುರ್ಚಿ ಕಿತ್ತಾಟದ ಜತೆಗೆ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಒಲವು ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ. ಟಿಕೆಟ್‌ ಹಂಚಿಕೆಯಲ್ಲೂ ಬಣ ರಾಜಕಾರಣ ನಡೆದಿದೆ ಎಂಬ ಆರೋಪವಿದೆ. ಬಿಡುಗಡೆಯಾಗಿರುವ 166 ಕ್ಷೇತ್ರಗಳಲ್ಲಿ ಒಂದು ಡಜನ್‌ಗೂ ಹೆಚ್ಚು ಕಡೆ ಬಂಡಾಯ ಇಲ್ಲವೇ ಅಸಮಾಧಾನವನ್ನು ಕಾಂಗ್ರೆಸ್‌ ಎದುರಿಸುತ್ತಿದೆ. ಇವೆಲ್ಲಾ ಮುಂದೆ ತೊಡಕಾಗುವ ಲಕ್ಷಣಗಳಿವೆ.

ಒಂಟಿ ಸಲಗ -ಒಂಟಿ ಧ್ವನಿ
ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರದು ಒಂದು ರೀತಿ ಒಂಟಿ ಸಲಗದ ಹೋರಾಟ. ನಮಗೂ ಒಂದ್ಸಲ ಬಹುಮತ ಕೊಡಿ ಎಂಬ ಒಂಟಿ ಧ್ವನಿ ಜೋರಾಗಿದೆ. ಬಿಜೆಪಿ-ಕಾಂಗ್ರೆಸ್‌ ಪಕ್ಷಗಳ ನಾಯಕರು ಪೈಪೋಟಿಗಿಳಿದವರಂತೆ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ಧಾರೆ. ಫ‌ಲಿತಾಂಶ ಹೆಚ್ಚುಕಡಿಮೆಯಾದರೆ ನಮ್ಮ ಜತೆ ಬರುವಂತೆ ಆಹ್ವಾನ ನೀಡಲು ತಾ ಮುಂದು-ನಾ ಮುಂದು ಎಂಬಂತೆ ನಿಂತಿದ್ದಾರೆ ಎಂಬ ಹೇಳಿಕೆ ಕೂಡ ಅತಂತ್ರ ಫ‌ಲಿತಾಂಶದ ಮುನ್ಸೂಚನೆಯೆಂದೇ ಹೇಳಬ ಹುದು. ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿದ್ದರೂ ಕುಮಾರಸ್ವಾಮಿ ಅವರಿಗೆ ತಮ್ಮ ಪಕ್ಷದ ಇತಿಮಿತಿಯೂ ಗೊತ್ತಿದೆ. ಆ ಇತಿಮಿತಿ ನಡುವೆಯೇ ಹಲವು ರಾಜಕೀಯ ಲೆಕ್ಕಾಚಾರಗಳನ್ನಿಟ್ಟುಕೊಂಡಿದ್ದಾರೆ.

-ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next