Advertisement

Karnataka: ಮಳೆ ಕೊರತೆಯಿಂದ ಮೇಲೇಳದ ಬೆಳೆ

11:33 PM Jul 15, 2023 | Team Udayavani |

ಪ್ರಸಕ್ತ ವರ್ಷ ಮುಂಗಾರು ಮಳೆ ಬರೋಬ್ಬರಿ ಒಂದು ತಿಂಗಳು ವಿಳಂಬವಾಗಿ ಆಗಮಿಸಿದ್ದು ಕೃಷಿ ಕಾರ್ಯಗಳಿಗೆ ಭಾರಿ ಹಿನ್ನಡೆಯಾಗಿದೆ. ಮುಂಗಾರು ಆರಂಭದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಕೆಲವೆಡೆ ಬಿತ್ತನೆ ಮಾಡಲಾಗಿದೆ. ಆದರೆ ನಂತರ ಮಳೆ ಬಾರದೆ ಬೆಳೆ ಭೂಮಿಯಿಂದ ಮೇಲೆಳದೇ ಬಾಡುತ್ತಿವೆ. ಈ ಹಿನ್ನೆಲೆಯಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಕೊರತೆ ಎಂಬ ಮಾಹಿತಿ ಇಲ್ಲಿದೆ.

Advertisement

ಕಲಬುರಗಿಯಲ್ಲಿ ಶೇ. 60 ಮಳೆ ಕೊರತೆ
ಕಲಬುರಗಿ: ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಸರಾಸರಿಗಿಂತ ಶೇ 20ರಿಂದ 30ರಷ್ಟು ಹೆಚ್ಚು ಮಳೆಯಾಗಿದ್ದರೆ ಪ್ರಸಕ್ತ ವರ್ಷ ಸರಾಸರಿಗಿಂತ ಶೇ. 60ರಷ್ಟು ಕೊರತೆಯಾಗಿದೆ. ಮೂರ್‍ನಾಲ್ಕು ತಾಲೂಕುಗಳಲ್ಲಿ ಶೇ.70-75ರಷ್ಟು ಮಳೆ ಕೊರತೆಯಾಗಿದ್ದು, ಹೊಲಗಳಲ್ಲಿ ಹುಲ್ಲಿನ ಕಡ್ಡಿ ಸಹ ಬೆಳೆಯದಂತಹ ಭೀಕರ ಪರಿಸ್ಥಿತಿಯಿದೆ. ಅಫ‌ಜಲಪುರ, ಆಳಂದ, ಜೇವರ್ಗಿ ಹಾಗೂ ಕಲಬುರಗಿ ತಾಲೂಕಿನಲ್ಲಿ ಶೇ. 70ರಷ್ಟು ಮಳೆ ಕೊರತೆಯಿದ್ದರೆ ಚಿಂಚೋಳಿ, ಸೇಡಂ, ಚಿತ್ತಾಪುರ ಸೇರಿ ಇತರ ತಾಲೂಕುಗಳಲ್ಲಿ ಶೇ.40ರಿಂದ 50ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಆರಂಭದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಕೆಲವೆಡೆ ಬಿತ್ತನೆ ಮಾಡಲಾಗಿದೆ. ಆದರೆ ನಂತರ ಮಳೆ ಬಾರದೆ ಬೆಳೆ ಭೂಮಿಯಿಂದ ಮೇಲೆಳದೇ ಬಾಡುತ್ತಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 8.80 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 5.93 ಲಕ್ಷ ಹೆಕ್ಟೇರ್‌ ತೊಗರಿ ಬಿತ್ತನೆ ಗುರಿ ಇದ್ದು, ಕೇವಲ 1.80 ಲಕ್ಷ ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ತೊಗರಿಗೆ ಉತ್ತಮ ದರ ಇರುವುದರಿಂದ ಹೆಚ್ಚಿನ ರೈತರು ಬಿತ್ತನೆಗೆ ಮುಂದಾಗಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟಿದೆ.

ದಾವಣಗೆರೆಯಲ್ಲಿ ಶೇ. 29 ರಷ್ಟು ಮಳೆ ಕೊರತೆ
ದಾವಣಗೆರೆ: ಈ ಬಾರಿ ಮುಂಗಾರು ಪೂರ್ವ ವಾಡಿಕೆಯಂತೆ 102 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 66 ಮಿ.ಮೀ. ಮಳೆಯಾಗಿದ್ದು ಸರಾಸರಿ ಶೇ. 30 ರಷ್ಟು ಮಳೆ ಕೊರತೆಯಾಗಿತ್ತು. ಜೂನ್‌ ತಿಂಗಳಲ್ಲಿ ವಾಡಿಕೆಯಂತೆ ಸರಾಸರಿ 79ಮಿ.ಮೀ. ಮುಂಗಾರು ಮಳೆಯಾಗಬೇಕಿತ್ತು. ಆದರೆ, ಕೇವಲ 48 ಮಿ.ಮೀ. ಮಳೆಯಾಗಿದೆ. ಸರಾಸರಿ ಶೇ.39ರಷ್ಟು ಮಳೆ ಕಡಿಮೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 40ರಷ್ಟು ಮಳೆ ಕೊರತೆಯಾಗಿತ್ತು. ಕಳೆದ ಎರಡು ವಾರಗಳಿಂದ ಸಾಧಾರಣದಿಂದ ಕೂಡಿದ ಮಳೆಯಾಗುತ್ತಿದ್ದು ಪ್ರಸ್ತುತ ಶೇ.29ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆ ಕಾರ್ಯವೂ ವಿಳಂಬವಾಗಿದ್ದು ಕಳೆದೆರಡು ವಾರಗಳಿಂದ ಮಳೆಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆ ಈಗ ಚುರುಕುಗೊಂಡಿದೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ಕೇವಲ 98,632 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಮಳೆ ಕೊರತೆ ಭತ್ತ ಬಿತ್ತನೆಗೆ ಹೊಡೆತ
ಉಡುಪಿ: ಮುಂಗಾರು ಕೊರತೆಯಿಂದ ಉಡುಪಿ ಜಿಲ್ಲೆಯಲ್ಲಿ ಬಿತ್ತನೆ ಒಂದು ತಿಂಗಳು ವಿಳಂಬವಾಗಿದೆ. ಜಿಲ್ಲೆಯಲ್ಲಿ ಭತ್ತ ಹೊರತುಪಡಿಸಿ ಬೇರೆ ಯಾವುದೇ ಬೆಳೆ ಮುಂಗಾರಿನಲ್ಲಿ ಬೆಳೆಯುವುದಿಲ್ಲ. ಸುಮಾರು 38 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬಿತ್ತನೆಯ ಗುರಿ ನಿಗದಿ ಮಾಡಲಾಗಿದೆ. ಜು. 14ರ ಅಂತ್ಯಕ್ಕೆ 23,241 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 61ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಜೂನ್‌ ಸಹಿತವಾಗಿ ಜನವರಿಯಿಂದ ಈವರೆಗೂ ವಾಡಿಕೆ ಮಳೆಯಲ್ಲಿ ಶೇ. 22ರಷ್ಟು ಕಡಿಮೆಯಾಗಿದೆ. ಜನವರಿಯಿಂದ ಜುಲೈ ವರೆಗೆ 1,899 ಮಿ.ಮೀ., ವಾಡಿಕೆ ಮಳೆಯಾಗಬೇಕಿದ್ದು, 1,484 ಮಿ.ಮೀ. ಮಾತ್ರ ಮಳೆಯಾಗಿದೆ. ಜುಲೈ ತಿಂಗಳಲ್ಲಿ 603 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 915 ಮಿ.ಮೀ. ಮಳೆಯಾಗಿದ್ದು ಶೇ. 52ರಷ್ಟು ಮಳೆ ಹೆಚ್ಚಾಗಿದೆ.

ರಾಯಚೂರಲ್ಲಿ ಎದುರಾಯ್ತು ಬರ
ರಾಯಚೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ರೈತರು ಬೆಳೆ ರಕ್ಷಣೆಗೆ ಟ್ಯಾಂಕರ್‌ ಮೂಲಕ ನೀರು ಹರಿಸುವಂತಾಗಿದೆ. ಈವರೆಗೆ 113 ಮಿಮೀ ವಾಡಿಕೆ ಮಳೆ ಸುರಿಯಬೇಕಿದ್ದು, ಈವರೆಗೂ 81 ಮಿ.ಮೀ. ಮಳೆಯಾಗಿದೆ. ಅಲ್ಲಲ್ಲಿ ಉತ್ತಮ ಮಳೆ ಸುರಿದಿದ್ದು ಬಿಟ್ಟರೆ ಬಹುತೇಕ ಕಡೆ ಮಳೆ ಆಗಿಲ್ಲ. ಸಿರವಾರ ಹೊರತುಪಡಿಸಿ ಬಹುತೇಕ ಎಲ್ಲ ತಾಲೂಕುಗಳಲ್ಲೂ ಮಳೆ ಅಭಾವವಿದೆ. ಅಲ್ಪ ಸ್ವಲ್ಪ ಸುರಿದ ಮಳೆ ನಂಬಿ ರೈತರು ಹತ್ತಿ, ತೊಗರಿ, ಕೂರಿಗೆ ಪದ್ಧತಿಯಡಿ ಭತ್ತ ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದೇ ರೈತರು ಬೆಳೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ತೊಗರಿ 1.45 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು 38,241 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಹತ್ತಿ 1.53 ಲಕ್ಷ ಹೆಕ್ಟೇರ್‌ ಗುರಿ ಇದ್ದು, 87,618 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇನ್ನೂ ಕೆಲವೆಡೆ ಕೂರಿಗೆ ಪದ್ಧತಿಯಡಿ ಭತ್ತ ಬಿತ್ತನೆ ಮಾಡಿದ್ದು, ಅತ್ತ ಮಳೆಯೂ ಬಾರದೆ, ಇತ್ತ ಕಾಲುವೆಗೂ ನೀರು ಬಾರದೆ ಸಮಸ್ಯೆಯಾಗುತ್ತಿದೆ.

Advertisement

ಕಲ್ಪತರು ನಾಡಿನಲ್ಲಿ ಶೇ.15 ಮಾತ್ರ ಬಿತ್ತನೆ
ತುಮಕೂರು: ಮುಂಗಾರು ಮಳೆ ಕಳೆದ ಒಂದು ವಾರದಿಂದ ನಿರಂತರವಾಗಿ ಬರುತ್ತಿದ್ದು, ಈ ವೇಳೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 212.9 ಮಿ.ಮೀ ಬರಬೇಕಾಗಿದ್ದು, ಇಲ್ಲಿಯವರೆಗೆ 276.7 ಮಿ.ಮೀ ಮಳೆ ಬಂದಿದೆ. ವಾಡಿಕೆಗಿಂತ ಶೇ.30 ಅಧಿಕ ಮಳೆ ಬಂದಿದ್ದರೂ ಸಕಾಲದಲ್ಲಿ ಮಳೆ ಸುರಿಯದ ಹಿನ್ನಲೆಯಲ್ಲಿ ಬಿತ್ತನೆ ಕುಂಠಿತ ವಾಗಿದೆ. ಈ ಮುಂಗಾರು ಹಂಗಾಮಿನಲ್ಲಿ 3.14,630 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿಯ ವರಗೆ 47,477 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಯಾಗಿದ್ದು ಶೇ.15 ಮಾತ್ರ ಬಿತ್ತನೆಯಾಗಿದೆ. ರಾಜ್ಯದಲ್ಲಿಯೇ ಹೆಚ್ಚು ರಾಗಿ ಬೆಳೆಯುವ ಪ್ರದೇಶ ಎಂದೇ ಗರುತಿಸಿ ಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ರಾಗಿ ಬಿತ್ತನೆ 1,50,229 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಹೊಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯ ವರೆಗೆ 5087 ಹೆಕ್ಟೇರ್‌ ಪ್ರದೇಶದಲ್ಲಿ ಶೇ.3.4 ರಷ್ಟು ರಾಗಿ ಬಿತ್ತನೆ ಯಾಗಿದೆ.

ಮುಂಗಾರು ಕ್ಷೀಣ: ಆತಂಕದಲ್ಲಿ ಅನ್ನದಾತ
ರಾಮನಗರ: ಜೂ.1ರಿಂದ ಜಿಲ್ಲೆಯಲ್ಲಿ ಮಾನ್ಸೂನ್‌ ಹಂಗಾಮ ಪ್ರಾರಂಭವಾಗಿದ್ದು, ಬಿತ್ತನೆ ಕಾರ್ಯ ಆರಂಭಗೊಳ್ಳಬೇಕಿತ್ತು. ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶೇ.1ರಷ್ಟು ಬಿತ್ತನೆ ಕಾರ್ಯ ನಡೆದಿಲ್ಲ. ಈ ತಿಂಗಳ ಅಂತ್ಯದೊಳಗೆ ಮುಂಗಾರು ಆರಂಭಗೊಳ್ಳದೆ ಹೋದಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದ್ದು, ಬರ ಆವರಿಸಲಿದೆ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ 103 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಕೇವಲ 67 ಮಿಮೀ ನಷ್ಟು ಮಳೆ ಸುರಿದಿದ್ದು, ಶೇ.35 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಕೆಲ ಭಾಗಗಳಲ್ಲಿ ಸಮರ್ಪಕ ಮಳೆ ಇಲ್ಲದೆ ಶೇ.50ಕ್ಕಿಂತ ಹೆಚ್ಚಿನ ಮಳೆ ಕೊರತೆ ಇದೆ. ಜೂನ್‌ ತಿಂಗಳಲ್ಲಿ Í 70 ಮಿಮೀ ವಾಡಿಕೆ ಮಳೆ ಇದ್ದು, ಕೇವಲ 35 ರಷ್ಟು ಮಳೆಯಾಗಿದೆ. ಈ ವೇಳೆಗಾಗಲೆ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಬೇಕಿತ್ತು. ಆದರೆ, ಶೇ.90 ರಷ್ಟು ಭೂಮಿಯಲ್ಲಿ ಚೊಚ್ಚಲ ಉಳುಮೆಯನ್ನೇ ಮಾಡಿಲ್ಲ. ಮಳೆರಾಯನ ಕೃಪೆಗೆ ರೈತರು ಆಗಸದತ್ತ ಮುಖಮಾಡಿ ಮೊರೆಯಿಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next