Advertisement

ಅಮಿತ್‌ ಶಾ ಮುಂದೆ ಒಗ್ಗಟ್ಟು ಪ್ರದರ್ಶನಕ್ಕೆ  ವೇದಿಕೆ ಸಿದ್ಧ

11:41 AM Aug 11, 2017 | Team Udayavani |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯ ಭೇಟಿಗೆ ಇನ್ನೊಂದು ದಿನ ಬಾಕಿ ಇರುತ್ತಿದ್ದಂತೆ ಪಕ್ಷದ ರಾಜ್ಯ ಘಟಕ ಕಾರ್ಯಕ್ರಮಗಳ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದರೆ, ನಾಯಕರು ತಮ್ಮ ಭಿನ್ನಮತ ದೂರವಿಟ್ಟು ಒಗ್ಗಟ್ಟಿನ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.

Advertisement

ಪಕ್ಷದಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿದ್ದರೂ ಒಳಗೊಳಗೇ ಅಸಮಾಧಾನ ಮುಂದುವರಿದಿದೆ. ಆದರೆ, ಅಮಿತ್‌ ಶಾ ಮುಂದೆ ಕಾಣಿಸಿಕೊಂಡರೆ ಎಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೋ ಎಂಬ ಕಾರಣಕ್ಕೆ ಅಸಮಾಧಾನವನ್ನು ಅದುಮಿಟ್ಟುಕೊಳ್ಳುವ
ಪ್ರಯತ್ನ ಮಾಡುತ್ತಿದ್ದಾರೆ.

ಶನಿವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸುತ್ತಿರುವ ಅಮಿತ್‌ ಶಾ, ಆರಂಭದಲ್ಲೇ ಪಕ್ಷದ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತಾವು ಬೆಂಗಳೂರಿಗೆ ಆಗಮಿಸುವ ಮುನ್ನವೇ ಅವರು ತಮ್ಮದೇ ಆದ ಮೂಲಗಳಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತಾರೆ. ಹೀಗಾಗಿ ಅವರಿಂದ ಯಾವುದನ್ನೂ ಮುಚ್ಚಿಡುವುದು ಕಷ್ಟಸಾಧ್ಯ ಎಂಬುದು ರಾಜ್ಯ ನಾಯಕರಿಗೆ ಗೊತ್ತಿದೆ. ಈ ಕಾರಣಕ್ಕಾಗಿಯೇ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿ ಹಿಂದುಳಿದವರ ಸಂಘಟನೆಗೆ ಮುಂದಾಗಿದ್ದ ಕೆ.ಎಸ್‌. ಈಶ್ವರಪ್ಪ ಈಗ ಯಡಿಯೂರಪ್ಪ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಮಧ್ಯೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಸೇರಿ ಉತ್ತರ ಕರ್ನಾಟಕ ಭಾಗದ ಕೆಲವು ಮುಖಂಡರಿಗೆ ಯಡಿಯೂರಪ್ಪ ಅವರ ಕಾರ್ಯವೈಖರಿ ಸಂಪೂರ್ಣ ಸಮಾಧಾನ ತಂದಿಲ್ಲವಾದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳುವ ಧೈರ್ಯ ತೋರುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಪಕ್ಷದಲ್ಲಿನ ಅತೃಪ್ತಿ
ಶಾ ಅವರಿಗೆ ಬಹಿರಂಗವಾಗಿ ಗೋಚರಿಸುವ ಸಾಧ್ಯತೆಯಿಲ್ಲ.

ಒಳಗೊಳಗೇ ಅಸಮಾಧಾನ: ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಬಿಎಸ್‌ ವೈ ವಿರುದ್ಧ ಈ  ಹಿಂದೆ ಪಕ್ಷ ಉಳಿಸಿ ಎಂಬ ಹೋರಾಟ ನಡೆಸಿದ್ದ ಮಾಜಿ ಶಾಸಕ ಸೊಗಡು ಶಿವಣ್ಣ, ಮಾಜಿ ಉಪಾಧ್ಯಕ್ಷರಾದ ನಿರ್ಮಲ್‌ ಕುಮಾರ್‌ ಸುರಾನಾ, ಭಾನುಪ್ರಕಾಶ್‌, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಮತ್ತಿತರರು ಸದ್ಯಕ್ಕೆ ಮೌನವಾಗಿದ್ದಾರೆ. ಪ್ರಕರಣದಲ್ಲಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂತೋಷ್‌ ಅವರ ಹೆಸರೂ ಪ್ರಸ್ತಾಪವಾಗಿದ್ದರಿಂದ ಅವರ ಬಗ್ಗೆ ಸಹಾನುಭೂತಿ ಹೊಂದಿರುವ ಪಕ್ಷದ ಕೆಲವು ಮುಖಂಡರು ಕೂಡ ಸುಮ್ಮನಿದ್ದಾರಾದರೂ ಅಸಮಾಧಾನವನ್ನು ಒಳಗೇ ಇಟ್ಟುಕೊಂಡು ಸಂದರ್ಭಕ್ಕಾಗಿ ಕಾಯುತ್ತಿದ್ದಾರೆ.

Advertisement

ಇನ್ನೊಂದೆಡೆ ಯಡಿಯೂರಪ್ಪ ಏಕಪಕ್ಷೀಯವಾಗಿ ಅನ್ಯ ಪಕ್ಷಗಳಿಂದ ಕೆಲವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವುದು ಕೆಲವರಿಗೆ ಬೇಸರವಿದೆ. ಹೊಸಬರು ಪಕ್ಷಕ್ಕೆ ಬಂದ ಮೇಲೆ ಸ್ಥಳೀಯವಾಗಿ ಅವರಿಗೇ ಆದ್ಯತೆ ನೀಡಲಾಗುತ್ತಿದೆ. ಹಳೆಯ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆಂಬ ಮಾತುಗಳೂ ಕೇಳಿಬರುತ್ತಿದೆ. ಇವರು ಕೂಡ ತಮ್ಮ ಸರದಿಗಾಗಿ ಎದುರು ನೋಡುತ್ತಿದ್ದಾರೆ.

ಬೆಕ್ಕಿಗೆ ಗಂಟೆ ಕಟ್ಟುವವರಾರು? 
ಸದ್ಯಕ್ಕೆ ಉಳಿದಿರುವ ಪ್ರಶ್ನೆ ಎಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬಂತೆ ತಮ್ಮ ಅಸಮಾಧಾನ ಮತ್ತು ಅದಕ್ಕೆ ಕಾರಣಗಳನ್ನು ಅಮಿತ್‌ ಶಾ ಮುಂದೆ ಹೇಳುವವರು ಯಾರು ಎಂಬುದು. ಮೊದಲನೆಯದಾಗಿ ಅಮಿತ್‌ ಶಾ ಎಲ್ಲ ಹಂತದ ಪದಾಧಿಕಾರಿಗಳ ಸಭೆಯನ್ನು ಒಟ್ಟಾಗಿ ಕರೆದಿದ್ದಾರೆ. ಬಹುತೇಕ ಎಲ್ಲಾ ಸಭೆಗಳಲ್ಲಿ ಯಡಿಯೂರಪ್ಪ ಇರುತ್ತಾರೆ. ಅವರ ಮುಂದೆ ಅಸಮಾಧಾನ ಹೇಳಲು ಸಾಧ್ಯವಿಲ್ಲ. ಅಸಮಾಧಾನಗೊಂಡು ಸದ್ಯ ಮೌನವಾಗಿರುವವರನ್ನು ಶಾ ಅವರು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸುವ ಸಾಧ್ಯತೆಯೂ ಇಲ್ಲ. ಹೀಗಾಗಿ ತಮ್ಮ ಅಹವಾಲುಗಳನ್ನು ಅಮಿತ್‌ ಶಾ ಅವರ ಮುಂದೆ ಇಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಅಸಮಾಧಾನಿತರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next