Advertisement

Karnataka Bandh; ಬೆಂಗಳೂರಿನಲ್ಲಿ 144 ಸೆಕ್ಷನ್, ಓಲಾ- ಊಬರ್- ಹೋಟೆಲ್ ಬಂದ್

05:01 PM Sep 28, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಾಟಾಳ್ ನಾಗರಾಜ್ ಸೇರಿ ಹಲವು ಸಂಘಟನೆಗಳು ಶುಕ್ರವಾರ (ಸೆ.29) ಕರ್ನಾಟಕ ಬಂದ್ ಮಾಡಲು ಕರೆ ನೀಡಿದೆ.

Advertisement

ಬೆಂಗಳೂರು ನಗರದಲ್ಲಿ ಬಂದ್ ಮಾಡಲು ಯಾವುದೇ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಗುರುವಾರ ಹೇಳಿದ್ದಾರೆ. ಗುರುವಾರ ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

144 ಸೆಕ್ಷನ್ ಜಾರಿ ವೇಳೆ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಗುಂಪು ಸೇರುವಂತೆ ಇಲ್ಲ. ಬಂದ್‌ಗಳನ್ನು ಕರೆಯುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಬಂದ್ ವೇಳೆ ಆಸ್ತಿ ಪಾಸ್ತಿ ನಾಶ ಮತ್ತು ಸಾವು ನೋವಿಗೆ ಸಂಘಟಕರೇ ಹೊಣೆಯಾಗುತ್ತಾರೆ. ವಾಹನಗಳನ್ನು ತಡೆಯುವುದು, ಹಾನಿ ಮಾಡುವುದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದಲ್ಲಿ ವ್ಯಾಪಕ ರಕ್ಷಣಾ ಕ್ರಮ ಜರುಗಿಸಲಾಗುತ್ತದೆ. ಪ್ರತಿಭಟನೆ, ಮೆರವಣಿಗೆಗೆ ಯಾವುದೇ ಅವಕಾಶವಿಲ್ಲ ಎಂದಿದ್ದಾರೆ.

ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ಎಂದಿನಂತೆ ಶುಕ್ರವಾರ ಕಾರ್ಯ ನಿರ್ವಹಿಸಲಿದೆ. ಮೆಟ್ರೋ ಕೂಡಾ ಎಂದಿನಂತೆ ಓಡಾಟ ನಡೆಸಲಿದೆ.

ಓಲಾ ಊಬರ್ ಇಲ್ಲ: ಕರ್ನಾಟಕ ಬಂದ್ ಗೆ ಓಲಾ ಮತ್ತು ಊಬರ್ ಸಂಘಟನೆಗಳು ಬೆಂಬಲ ನೀಡಿದೆ. ಹೀಗಾಗಿ ಶುಕ್ರವಾರ ಓಲಾ- ಊಬರ್ ಓಡಾಟ ಇರುವುದಿಲ್ಲ. ಕೆಲವು ಆಟೋ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದು, ಶುಕ್ರವಾರ ರಸ್ತೆಯಲ್ಲಿ ಆಟೋ ಓಡಾಟ ಎಂದಿನಂತೆ ಇರುವುದಿಲ್ಲ.

Advertisement

ಹೋಟೆಲ್ ಬಂದ್: ಕೆಲ ದಿನಗಳ ಹಿಂದೆ ನಡೆದ ಬೆಂಗಳೂರು ಬಂದ್ ಗೆ ಕೇವಲ ನೈತಿಕ ಬೆಂಬಲ ನೀಡಿದ್ದ ನಗರದ ಹೋಟೆಲ್ ಅಸೋಸಿಯೇಶನ್ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಹೀಗಾಗಿ ಶುಕ್ರವಾರ ಹೋಟೆಲ್ ಗಳು ತೆರೆಯುವುದಿಲ್ಲ.

ಚಿನ್ನದಂಗಡಿ ಬಂದ್: ಕರ್ನಾಟಕ ಬಂದ್ ಗೆ ಚಿನ್ನ ಬೆಳ್ಳಿ ಅಂಗಡಿಗಳು ಬೆಂಬಲ ಸೂಚಿಸಿದೆ. ಹೀಗಾಗಿ ಚಿನ್ನದಂಗಡಿಗಳು ಮುಚ್ಚಿರಲಿದೆ.

ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು ಸಂಪೂರ್ಣ ಸ್ಥಗಿತವಾಗಲಿದೆ.

ಕರ್ನಾಟಕ ಬಂದ್​ಗೆ ನೈತಿಕ ಬೆಂಬಲ ನೀಡಲು ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಾಬ್ದಾರಿಯನ್ನು ಆಯಾ ಆಡಳಿತ ಮಂಡಳಿ ತಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.

ಚಿತ್ರರಂಗದ ಬೆಂಬಲ: ಕರ್ನಾಟಕ ಬಂದ್ ​ಗೆ ರಾಜ್ಯ ಚಿತ್ರ ಮಂದಿರಗಳ ಸಂಘ ಬೆಂಬಲ ವ್ಯಕ್ತಪಡಿಸಿದೆ. ಸಂಜೆವರೆಗೆ ಚಲನಚಿತ್ರಗಳ ಪ್ರಸಾರ ಬಂದ್ ಮಾಡಲಿದ್ದು, ಸಂಜೆ ನಂತರದಿಂದ ಎಂದಿನಂತೆ ಪ್ರದರ್ಶನಗಳು ನಡೆಯಲಿವೆ ಎಂದು ಸಂಘ ತಿಳಿಸಿದೆ.

ಧ್ವನಿವರ್ಧಕ ಮೂಲಕ ಸೂಚನೆ: ಶುಕ್ರವಾರದ ಬಂದ್ ಗೆ ಬೆಂಬಲ ನೀಡುವಂತೆ ಬೆಂಗಳೂರು ನಗರದ ಹಲವೆಡೆ ಗುರುವಾರ ಧ್ವನಿವರ್ಧಕಗಳ ಮೂಲಕ ಘೋಷಣೆ ಕೂಗಲಾಗಿದೆ.

ಕರಾವಳಿಯಲ್ಲಿ ನೈತಿಕಕ ಬೆಂಬಲ ಮಾತ್ರ: ಕರ್ನಾಟಕ ಬಂದ್ ಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದೆ. ಹೋಟೆಲ್ ಉದ್ಯಮ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next