Advertisement

Karkala: ಹೊಟ್ಟೆ ತಣಿಸಲು ತರಕಾರಿ ಊಟ, ಆದಾಯಕ್ಕೆ ಕೃಷಿ ತೋಟ

12:39 PM Dec 07, 2023 | Team Udayavani |

ಕಾರ್ಕಳ: ಇದೊಂದು ಹಳ್ಳಿಯ ಶಾಲೆ. ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಕನ್ನಡ ಈ ಶಾಲೆಯಲ್ಲಿ ಪಠ್ಯದ ಕಲಿಕೆಯೊಂದಿಗೆ ಬದುಕುವುದು ಹೇಗೆ ಎನ್ನುವ ಪಾಠವನ್ನೂ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳೇ ಪ್ರಗತಿಪರ ಕೃಷಿಕರಂತೆ ಕಾಣುತ್ತಾರೆ. ನಾವೇ ಬೆಳೆದ ತರಕಾರಿ ಊಟವೂ ಅವರ ಹೊಟ್ಟೆಯನ್ನು ತಂಪಾಗಿಸುವುದರ ಜತೆಗೆ ಜತೆಗೆ ಶಾಲೆಯ ಆದಾಯಕ್ಕೂ ಅಡಿಕೆ ತೋಟವನ್ನು ನಿರ್ಮಿಸಿ ಸ್ವಾವಲಂಬಿಯಾಗುವ ಕನಸು ಕಂಡಿದ್ದಾರೆ.

Advertisement

ಕಾರ್ಕಳ ತಾ|ನ ಮಾಳ ಕೊಡಂಗೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ವಿಚಾರವಾಗಿ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮಕ್ಕಳ ಕೊರತೆಯಿಂದ ಮುಚ್ಚುವ ಹಂತದಲ್ಲಿತ್ತು ಈ ಶಾಲೆ. ಊರ ವಿದ್ಯಾಭಿಮಾನಿಗಳ ಸ್ಪಂದನೆಯಿಂದ ಕನ್ನಡ ಮಾಧ್ಯಮ ಶಾಲೆ ಪ್ರಗತಿ ಪಥದಲ್ಲಿದೆ.

ಒಂದರಿಂದ ಏಳನೇ ತರಗತಿಯಿರುವ ಈ ಶಾಲೆಯಲ್ಲಿ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರಾಶಸ್ತ್ರ ನೀಡಲಾಗಿದೆ.
ಶಿಕ್ಷಕರು, ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿಯವರೆಲ್ಲರೂ ಸೇರಿ ಕನ್ನಡ ಶಾಲೆಯ ಶ್ರೇಯೋಭಿವೃದ್ಧಿಗೆ ಪಣತೊಟ್ಟಿದ್ದಾರೆ.

1961ರಲ್ಲಿ ಆರಂಭಗೊಂಡು ವಜ್ರಮಹೋತ್ಸವ ಕಂಡ ಈ ಶಾಲೆ ಆರಂಭದಲ್ಲಿ ಕೊಡಂಗೈ ಎಂಬಲ್ಲಿನ ಮುನಿರಾಜ ಬಲ್ಲಾಳ್‌ ಮತ್ತು ಜಯಕುಮಾರ್‌ ಬಳ್ಳಾಲ್‌ ಅವರ ಸಹಕಾರದಿಂದ ಪ್ರಾರಂಭಗೊಂಡಿತ್ತು. ಅನಂತರದಲ್ಲಿ ಹಂತ ಹಂತವಾಗಿ ಶಾಲೆ ಅಭಿವೃದ್ಧಿಗೊಂಡು ಊರಿನ ಅಸಂಖ್ಯಾಕ ಮಂದಿಗೆ ಶಿಕ್ಷಣ ಧಾರೆ ಎರೆಯಲು ಕಾರಣವಾಗಿದೆ.

ಶಾಲೆ ಕೈ ತೋಟದಲ್ಲಿ ತರಕಾರಿ
2016ರಲ್ಲಿ ವಿಶೇಷವಾದ ಚಟುವಟಿಕೆಗೆ ನಾಂದಿ ಹಾಡಲಾಗಿತ್ತು. ಅಕ್ಷರ ದಾಸೋಹವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದು, ಮಕ್ಕಳ ಊಟಕ್ಕೆ ಬೇಕಾದ ಅಡುಗೆಗೆ ತರಕಾರಿಗಳನ್ನು ಶಾಲೆ ಆವರಣದಲ್ಲೇ ಬೆಳೆಯಲಾಗಿತ್ತು. ಬಸಳೆ, ತೊಂಡೆ, ಬದನೆಕಾಯಿ, ನುಗ್ಗೆ, ಪಪ್ಪಾಯಿಯನ್ನು ಬೆಳೆಯಲಾಗುತ್ತಿದೆ. ತೆಂಗಿನ ಕಾಯಿಯೂ ಶಾಲೆಯ ಬಳಕೆಗೆ ಸಾಕಾಗುವಷ್ಟು ಸಿಗುತ್ತದೆ. ಹಲಸಿನ ಮರಗಳನ್ನು ಬೆಳೆಸಲಾಗಿದ್ದು, ವಿವಿಧ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ.

Advertisement

ಶಾಲೆ ಆದಾಯಕ್ಕೆ ಅಡಿಕೆ ತೋಟ
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವಂತೆ ಅಡಕೆ ತೋಟವನ್ನು ನಿರ್ಮಿಸಲಾಗಿದೆ. ಸುಮಾರು 1 ಎಕರೆ ಸ್ಥಳದಲ್ಲಿ 207 ಅಡಿಕೆ ನೆಡಲಾಗಿದೆ, ನೆಟ್ಟು 2 ವರ್ಷವಾಗಿದ್ದು, ಇನ್ನು 2 ವರ್ಷ ಅವಧಿ ಫ‌ಸಲು ಬರುವುದಕ್ಕೆ ಬೇಕಿದೆ. ಉತ್ತಮ ಎಸ್‌ಡಿಎಂಸಿ ಅಧ್ಯಕ್ಷ ಎಂಬ ಪ್ರಶಸ್ತಿಗೆ ಪಾತ್ರರಾಗಿರುವ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಶಾಂತ್‌ ಮೂಲ್ಯ ಈ ಕುರಿತು ವಿಶೇಷ ಮುತುವರ್ಜಿ ವಹಿಸಿದ್ದು ಅಡಿಕೆ ತೋಟದಲ್ಲಿ ಬಂದಿರುವ ಆದಾಯವನ್ನು ಶಾಲೆಯ ಸಮಗ್ರ ಅಭಿವೃದ್ಧಿಗೆ ಬಳಸಬೇಕೆನ್ನುವ ಚಿಂತನೆ ಹೊಂದಿದ್ದಾರೆ.

ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೀಡುವ ಸೌಲಭ್ಯದಂತೆ ಮಕ್ಕಳಿಗೆ ಶಾಲಾ ವಾಹನದ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ಸಹಕಾರ ಕೂಡ ಇಲ್ಲಿ ಹೆಚ್ಚಿದ್ದು, ಶಾಲೆಗೆ 3.65 ಲಕ್ಷ ರೂ. ವೆಚ್ಚದಲ್ಲಿ ಬಾಲವನ ನಿರ್ಮಾಣ, ಧ್ವಜ ಸ್ತಂಭ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಆರ್ಥಿಕ ನೆರವು ನೀಡಿದ್ದಾರೆ. ಹಲವು ದಾನಿಗಳು ಊರಿನ ಶಾಲೆ ಎನ್ನುವ ಪ್ರೀತಿಯಿಂದ ಸಹಕಾರ ನೀಡುತ್ತಿದ್ದಾರೆ.

ಮಕ್ಕಳ ಸಂಖ್ಯೆ ಹೆಚ್ಚಿದೆ, ಮುಖ್ಯ ಶಿಕ್ಷಕರ ನೇಮಕವಾಗಬೇಕಿದೆ
ಪ್ರಸ್ತುತ ಶಾಲೆಯಲ್ಲಿ 73 ವಿದ್ಯಾರ್ಥಿಗಳಿದ್ದಾರೆ. ಸರಕಾರದ ನಿಯಮಗಳ ಪ್ರಕಾರ ನಾಲ್ವರು ಶಿಕ್ಷಕರು ಇರಬೇಕು. ಇತ್ತೀಚಿನ ವರೆಗೂ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಿತ್ತು. ಆದರೀಗ ಸರಕಾರದಿಂದ 2 ಮಂದಿ ಶಿಕ್ಷಕರನ್ನು ನಿಯೋಜನೆಯಾಗಿದೆ. ನಿಯಮ ಪ್ರಕಾರ 61 ಮಕ್ಕಳಿಗೆ ಒಬ್ಬರು ಮುಖ್ಯ ಶಿಕ್ಷಕರಿರಬೇಕು. ಆ ಸಂದರ್ಭ 60 ವಿದ್ಯಾರ್ಥಿಗಳಿರುವುದರಿಂದ ಅಲ್ಲಿದ್ದ ಮುಖ್ಯ ಶಿಕ್ಷಕ ಹುದ್ದೆ ತೆರವಾಗಿದೆ. ಅಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದವರು ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಮುಖ್ಯ ಶಿಕ್ಷಕ ಹುದ್ದೆ ಈಡೇರಿದರೆ ಶಾಲೆಯಲ್ಲಿ ಶಿಕ್ಷಕರ ಸಮಸ್ಯೆ ಸದ್ಯದ ಸ್ಥಿತಿಯಲ್ಲಿ ಸುಧಾರಿಸುತ್ತದೆ.

ಸೌಲಭ್ಯ ವಂಚಿತರಾಗಬಾರದು
ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗದೆ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು
ಎನ್ನುವ ಹಂಬಲ ನಮ್ಮದು. ಪ್ರಯತ್ನಕ್ಕೆ ತಕ್ಕಂತ ಪ್ರತಿಫ‌ಲ ಸಿಕ್ಕಲ್ಲಿ ಖಂಡಿತ ನಮ್ಮ ನಿರೀಕ್ಷೆ ಈಡೇರುವುದೆನ್ನುವ ಆಶಯವಿದೆ.
ಪ್ರಶಾಂತ್‌ ಮೂಲ್ಯ,
ಅಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next