Advertisement

ಕಾರ್ಕಳ: ಬೈಕ್‌ ಮರಕ್ಕೆ ಢಿಕ್ಕಿ; ಸವಾರರ ಸಾವು

03:45 AM Jan 05, 2017 | Team Udayavani |

ಕಾರ್ಕಳ: ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರ್ಕಳ ಜೋಡುರಸ್ತೆ ರಾಜ್ಯ ಹೆದ್ದಾರಿ 1ರಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಜೋಡುರಸ್ತೆ ನಿವಾಸಿ ರಕ್ಷಿತ್‌ (26) ಹಾಗೂ ಸಹಸವಾರ ನಿಟ್ಟೆ ಪದವು ನಿವಾಸಿ ಅರುಣ್‌ ನಾಯಕ್‌ (27) ಮೃತಪಟ್ಟವರು. ರಕ್ಷಿತ್‌ ಅವರು ಬೈಕ್‌ ಚಲಾಯಿಸುತ್ತಿದ್ದರು.

Advertisement

ಇವರು ತಡರಾತ್ರಿ ಸ್ನೇಹಿತರ ಜತೆ ನಗರದ ಹೊಟೇಲೊಂದರಲ್ಲಿ ಊಟ ಮಾಡಿ  ಬೈಕ್‌ನಲ್ಲಿ ಮನೆಯತ್ತ ಮರಳುತ್ತಿದ್ದಾಗ ಜೋಡುರಸ್ತೆ ಸಮೀಪ ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗೆ ಬೈಕ್‌ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿದ ಬೈಕ್‌ ಕೊಂಚ ದೂರದಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆಯಿತು. ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಸ್ವಲ್ಪ ಸಮಯದ ಬಳಿಕ ಅದೇ ದಾರಿಯಾಗಿ ಸಾಗುತ್ತಿದ್ದ ಪ್ರಯಾಣಿಕರು ಇವರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಪದವು ನಿವಾಸಿ ಅರುಣ್‌ ನಾಯಕ್‌ ಮನೆಯಲ್ಲಿ ತಂದೆ, ತಾಯಿ ಹಾಗೂ ತಂಗಿ ವಾಸವಾಗಿದ್ದರು. ತಂದೆ ಸಣ್ಣ ವ್ಯಾಪಾರ ನಡೆಸುತ್ತಿದ್ದರು. ಇಡೀ ಮನೆಗೆ ಅರುಣ್‌ ಆದಾಯದ ಮೂಲವಾಗಿದ್ದರು. ಮಂಗಳವಾರ ಅರುಣ್‌ ಮನೆ ಗೃಹ ಪ್ರವೇಶವಾಗಿ 1 ವರ್ಷದ ಸಂಭ್ರಮಾಚರಣೆಯಲ್ಲಿತ್ತು.

ರಕ್ಷಿತ್‌ ಮೂಲತಃ ಹೆಬ್ರಿಯ ಕುಚ್ಚಾರು ನಿವಾಸಿ. ಕಳೆದ ಕೆಲ ವರ್ಷಗಳ ಹಿಂದೆ ಕಾರ್ಕಳ ಅಯ್ಯಪ್ಪ ನಗರದಲ್ಲಿ ಇವರ ಕುಟುಂಬ ನೆಲೆಯೂರಿತ್ತು. ತಂದೆ ಬಾಬು ನಾಯಕ್‌ ನಿವೃತ್ತ ಬ್ಯಾಂಕ್‌ ಉದ್ಯೋಗಿ. ಅವರು ತಂದೆ, ತಾಯಿ ಹಾಗೂ ತಮ್ಮನನ್ನು ಅಗಲಿದ್ದಾರೆ.

ಸಾವಿನಲ್ಲೂ ಒಂದಾದ ಗೆಳೆಯರು
ಅರುಣ್‌ ಹಾಗೂ ರಕ್ಷಿತ್‌ ಉತ್ತಮ ಸ್ನೇಹಿತರಾಗಿದ್ದು, ಕೇರಳದಲ್ಲಿ ಎಲೆಕ್ಟ್ರೀಶಿಯನ್‌ ಉದ್ಯೋಗದಲ್ಲಿದ್ದರು. ಕೆಲವು ಸಮಯದ ಹಿಂದೆ ಉದ್ಯೋಗವನ್ನು ತ್ಯಜಿಸಿ ಊರಿಗೆ ಮರಳಿದ್ದು, ಬೇರೆ ಉದ್ಯೋಗದ ಹುಡುಕಾಟದಲ್ಲಿದ್ದರು. ಅರುಣ್‌ ಉತ್ತಮ ವಾಲಿಬಾಲ್‌ ಆಟಗಾರರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next