Advertisement

ಕರಿಯಪ್ಪನ ಕಲರ್‌ಫ‌ುಲ್‌ ಕೆಮಿಸ್ಟ್ರಿ

05:40 AM Feb 16, 2019 | |

“ನಿನ್‌ ಮಗನಿಗೆ ಈ ಜನ್ಮದಲ್ಲಿ ಮದುವೆ ಆಗೋದಿಲ್ಲ…’ ಹೀಗೆ ಕೋಪದಿಂದಲೇ ಆ ಮ್ಯಾರೇಜ್‌ ಬ್ರೋಕರ್‌ ಬೈದು ಹೋಗುತ್ತಾನೆ. ಅಷ್ಟೊತ್ತಿಗಾಗಲೇ, ಕರಿಯಪ್ಪ ತನ್ನ ಮಗನಿಗೆ ಹೆಣ್ಣು ಹುಡುಕಿ ಹುಡುಕಿ ರೋಸಿ ಹೋಗಿರುತ್ತಾನೆ. ಹೆಣ್ಣು ಸಿಗದೇ ಇರುವುದಕ್ಕೆ ಕಾರಣ, ಮಗ ಮೂಲನಕ್ಷತ್ರದವನು ಅನ್ನೋದು. ಕೊನೆಗೆ ಹೇಗೋ ಮಗನೇ ಒಂದು ಹುಡುಗಿಯನ್ನು ಪಟಾಯಿಸಿ ಮದುವೇನೂ ಆಗ್ತಾನೆ. ಆದರೆ, ಮೊದಲ ರಾತ್ರಿಗೆ ಮುನ್ನವೇ ಅಲ್ಲೊಂದು ಘಟನೆ ನಡೆದು ಹೋಗುತ್ತೆ. ಅದೇ ಚಿತ್ರದ ಟ್ವಿಸ್ಟು ಮತ್ತು ಟೆಸ್ಟು!!

Advertisement

ಚಿತ್ರದ ಶೀರ್ಷಿಕೆಯಲ್ಲೇ ಒಂದು ಮಜ ಇದೆ. ಆ ಮಜ ಚಿತ್ರದ ಕಥೆ ಮತ್ತು ನಿರೂಪಣೆಯಲ್ಲೂ ಇದೆ. ಇದೊಂದು ಹಾಸ್ಯಮಯ ಚಿತ್ರವೆನಿಸಿದರೂ, ಇಲ್ಲೊಂದು ಗಂಭೀರ ವಿಷಯವಿದೆ. ಗಂಭೀರ ವಿಷಯ ಇಟ್ಟುಕೊಂಡೇ ಚಿತ್ರದುದ್ದಕ್ಕೂ ಹಾಸ್ಯಬೆರೆಸಿ, ಸುಮ್ಮನೆ ನೋಡಿಸಿಕೊಂಡು ಹೋಗುವ ಪ್ರಯತ್ನ ಇಲ್ಲಿ ಸಫ‌ಲಗೊಂಡಿದೆ. ಮನರಂಜನೆಗೆ ಇಲ್ಲಿ ಕೊರತೆ ಇಲ್ಲ. ಚಿತ್ರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ, ಕರಿಯಪ್ಪನ ಕೆಮಿಸ್ಟ್ರಿ ವರ್ಕೌಟ್‌ಗೆ ಸಮಸ್ಯೆ ಇಲ್ಲ.

ಸಿನಿಮಾ ಅಂದರೆ, ಗ್ಲಾಮರ್‌, ಭರ್ಜರಿ ಆ್ಯಕ್ಷನ್‌, ಕಮರ್ಷಿಯಲ್‌ ಸಾಂಗ್‌ ನೆನಪಾಗುತ್ತೆ.  ಆದರೆ, ಕರಿಯಪ್ಪ ಅವೆಲ್ಲವುಗಳಿಂದ ಹೊರತಾಗಿಯೂ ಗಮನಸೆಳೆಯುತ್ತಾನೆ ಅಂದರೆ, ಅದು ಅವನ ಮಾತು ಮತ್ತು ಮಾತು. ಹಾಗೆ ನೋಡಿದರೆ, ಇಲ್ಲಿ ಸ್ಟಾರ್‌ಗಳಿಲ್ಲ. ಇಲ್ಲಿ ಕಥೆಯೇ ಎಲ್ಲವನ್ನೂ ಪ್ರತಿನಿಧಿಸಿದೆ. ನೈಜ ಘಟನೆಯ ಅಂಶ ಇಟ್ಟುಕೊಂಡು ಹೆಣೆದ ಕಥೆಯಲ್ಲಿ ಸಾಕಷ್ಟು ಗಂಭೀರತೆ ಇದ್ದರೂ, ಅದನ್ನು ನಿರ್ದೇಶಕರು ನಿರೂಪಿಸಿರುವ ಜಾಣತನ ಮೆಚ್ಚಿಕೊಳ್ಳಬೇಕು.

ಪುಟ್ಟ ಸಂಸಾರದಲ್ಲಿ ಆಗುವಂತಹ ಎಡವಟ್ಟುಗಳು, ಸಮಸ್ಯೆಗಳನ್ನು ತುಂಬಾ ನೀಟ್‌ ಆಗಿ ತೋರಿಸುವ ಮೂಲಕ ಏನು ಹೇಳಬೇಕೋ, ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ಹೇಳಿ, ನೋಡುಗರ ತಾಳ್ಮೆ ಪರೀಕ್ಷಿಸಿಲ್ಲ ಎಂಬುದು ಸಮಾಧಾನದ ವಿಷಯ. ಸಿನಿಮಾದಲ್ಲಿ ಆ್ಯಕ್ಷನ್‌ ಇಲ್ಲ, ಕಣ್ತುಂಬಿಕೊಳ್ಳುವಂತಹ ಗ್ಲಾಮರ್‌ ಕೂಡ ಇಲ್ಲ. ಮರಸುತ್ತುವ ಹಾಡುಗಳೂ ಇಲ್ಲ. ಆದರೂ ನೋಡುಗರನ್ನು ಹಿಡಿದು ಕೂರಿಸುವ ಅಂಶಗಳು ಇಲ್ಲಿವೆ.

ಮೊದಲರ್ಧ ಕೆಲವೆಡೆ ಕರಿಯಪ್ಪನ ಕೆಮಿಸ್ಟ್ರಿ ವರ್ಕೌಟ್‌ ಆಗದೇ ಇದ್ದರೂ, ದ್ವಿತಿಯಾರ್ಧ ಮಾತ್ರ ಕರಿಯಪ್ಪನ ಸಂಸಾರದ ಕೆಮಿಸ್ಟ್ರಿ ಎಲ್ಲರಿಗೂ ವರ್ಕೌಟ್‌ ಆಗದೇ ಇರದು. ಅಷ್ಟರ ಮಟ್ಟಿಗೆ ಗಟ್ಟಿಕಥೆಯೊಂದಿಗೆ, ಗಂಭೀರ ಮತ್ತು ಕುತೂಹಲ ಅಂಶಗಳೊಂದಿಗೆ ಸಾಗುತ್ತದೆ. ಇಲ್ಲಿನ ಪ್ರಮುಖ ಅಂಶವೆಂದರೆ ಅಕ್ಕಪಕ್ಕದ ಮನೆಗಳಲ್ಲಿ ನಡೆಯುವಂತಹ ದೃಶ್ಯಗಳೇನೋ ಎಂಬಂತೆ ಕಟ್ಟಿಕೊಟ್ಟಿರುವುದು.

Advertisement

ಸಣ್ಣ ಮನೆಯಲ್ಲೇ ಮೂರು ಪ್ರಮುಖ ಪಾತ್ರಗಳ ನಡುವಿನ ಕಿತ್ತಾಟ, ಸಂಕಟ ಮತ್ತು ಒದ್ದಾಟವನ್ನು ಹಾಸ್ಯರೂಪದಲ್ಲಿ ಬಿಂಬಿಸಲಾಗಿದೆ. ಇಡೀ ಚಿತ್ರದ ಮತ್ತೂಂದು ವಿಶೇಷವೆಂದರೆ, ಸಂಭಾಷಣೆ. ಮಾತೇ ಚಿತ್ರದ ಬಂಡವಾಳ ಅಂದರೂ ತಪ್ಪಿಲ್ಲ. ಕೆಲವು ಕಡೆ ಡಬ್ಬಲ್‌ ಮೀನಿಂಗ್‌ಗೆ ಒತ್ತು ಕೊಡಲಾಗಿದೆ. ಮಿಕ್ಕಂತೆ ಕಥಾನಾಯಕನ ಮದುವೆ ಪ್ರಸಂಗವನ್ನು ತೋರಿಸಿರುವ ರೀತಿ ನೋಡುಗರಿಗೆ ಖುಷಿ ಕೊಡುತ್ತದೆ.

ಕರಿಯಪ್ಪನದು ಚಿಕ್ಕ ಸಂಸಾರ. ಹೆಂಡತಿ, ಮಗ, ಹಳೇ ಬಜಾಜ್‌ ಸ್ಕೂಟರ್‌ ಮತ್ತು ಒಂದು ನ್ಯಾನೋ. ಸಣ್ಣ ಮನೆಯಲ್ಲೇ ವಾಸಿಸುವ ಕರಿಯಪ್ಪ ತನ್ನ ಮಗ ಉತ್ತರ ಕುಮಾರನಿಗೆ ಮದುವೆ ಮಾಡಲು ಪಡುವಂತಹ ಕಷ್ಟ ಹೇಳತೀರದು. ನೂರಕ್ಕೂ ಹೆಚ್ಚು ಹೆಣ್ಣು ನೋಡಿದರೂ, ಯಾವೊಂದು ಹುಡುಗಿಯೂ ಮಗನಿಗೆ ಸಿಗಲ್ಲ. ಕಾರಣ ಹತ್ತಾರು. ಆದರೆ, ಉತ್ತರಕುಮಾರನಿಗೊಂದು ಹುಡುಗಿ ಫೋನ್‌ ಮೂಲಕ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ ಮದುವೆಯೂ ಆಗಿಬಿಡುತ್ತೆ.

ಇನ್ನೇನು ಮೊದಲ ರಾತ್ರಿ ಆಗಬೇಕು ಅನ್ನುವಷ್ಟರಲ್ಲಿ ಆಕೆ, ವಿಚ್ಛೇದನ ನೋಟೀಸ್‌ ಕಳಿಸಿಬಿಡುತ್ತಾಳೆ. ಅವಳು ಯಾಕೆ ಡೈವೋರ್ಸ್‌ಗೆ ಅಪ್ಲೆ ಮಾಡ್ತಾಳೆ, ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಮಜವಾದ ಕಥೆ. ಆ ಮಜ ಅನುಭವಿಸುವ ಆಸೆ ಇದ್ದರೆ, ಕರಿಯಪ್ಪನ ಕೆಮಿಸ್ಟ್ರಿ ಹೇಗಿದೆ ಅನ್ನೋದನ್ನು ತಿಳಿಯಬಹುದು. ಇಡೀ ಚಿತ್ರದ ಆಕರ್ಷಣೆ ತಬಲನಾಣಿ. ಅವರೇ ಇಲ್ಲಿ ಹೀರೋ ಅಂದರೆ ತಪ್ಪಿಲ್ಲ. ಅವರ ಅಭಿನಯ ಮತ್ತು ಮಾತುಗಳು ಚಿತ್ರದ ವೇಗವನ್ನು ಹೆಚ್ಚಿಸಿವೆ. ಇಡೀ ಚಿತ್ರವನ್ನು ಆವರಿಸಿಕೊಂಡಿರುವ ತಬಲನಾಣಿ, ಪ್ರತಿ ದೃಶ್ಯದಲ್ಲೂ ನಗಿಸುತ್ತಲೇ ಸೂಕ್ಷ್ಮ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಾರೆ.

ಚಂದನ್‌ಗೆ ಇಲ್ಲಿ ಹೇಳಿ ಮಾಡಿಸಿದಂತಹ ಪಾತ್ರವಿದೆ. ನಟನೆ ಪರವಾಗಿಲ್ಲ. ಡ್ಯಾನ್ಸ್‌ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಸಂಜನಾ ನಟನೆಯಲ್ಲಿ ಲವಲವಿಕೆ ತುಂಬಿದೆ. ಉಳಿದಂತೆ ಅಪೂರ್ವ ಅಮ್ಮನಾಗಿ ಗಮನಸೆಳೆಯುತ್ತಾರೆ. ತೆರೆ ಮೇಲೆ ಬರುವ ಇತರೆ ಪಾತ್ರಗಳಿಗೂ ಆದ್ಯತೆ ಇದೆ. ಆರವ್‌ ರಿಶಿಕ್‌ ಸಂಗೀತದಲ್ಲಿ “ಸುಪ್ರಭಾತ ಶುರುವಾಯ್ತು’ ಹಾಡು ಗುನುಗುವಂತಿದೆ. ಸಂಜಯ್‌ಕುಮಾರ್‌ ಹಿನ್ನೆಲೆ ಸಂಗೀತ ಕೆಲವು ಕಡೆ ಮಾತುಗಳನ್ನೇ ನುಂಗಿಹಾಕಿದೆ. ಶಿವಸೀನ ಛಾಯಾಗ್ರಹಣದಲ್ಲಿ ಕರಿಯಪ್ಪನ ಕೆಮಿಸ್ಟ್ರಿ ವರ್ಕೌಟ್‌ ಆಗಿದೆ.

ಚಿತ್ರ: ಕೆಮಿಸ್ಟ್ರಿ ಆಫ್ ಕರಿಯಪ್ಪ
ನಿರ್ಮಾಣ: ಡಾ.ಡಿ.ಎಸ್‌.ಮಂಜುನಾಥ್‌
ನಿರ್ದೇಶನ: ಕುಮಾರ್‌
ತಾರಾಗಣ: ತಬಲಾನಾಣಿ, ಚಂದನ್‌ ಆಚಾರ್‌, ಸಂಜನಾ, ಅಪೂರ್ವ, ಸುಚೇಂದ್ರಪ್ರಸಾದ್‌, ಡಾ.ಮಂಜುನಾಥ್‌, ರಾಕ್‌ಲೈನ್‌ ಸುಧಾಕರ್‌, ಮೈಕೋ ನಾಗರಾಜ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next