Advertisement

ಕರಿನಂಜನಪುರ ರಸ್ತೆಗೆ ಮಾಜಿ ಶಾಸಕ ಸಿ.ಗುರುಸ್ವಾಮಿ ಹೆಸರಿಡಲು ಗುಂಡ್ಲುಪೇಟೆ ಶಾಸಕ ಸಲಹೆ

07:47 PM Sep 20, 2020 | sudhir |

ಚಾಮರಾಜನಗರ: ಮಾಜಿ ಶಾಸಕ ಸಿ. ಗುರುಸ್ವಾಮಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಅವರ ಮನೆಯ ಮುಂದಿನ ಕರಿನಂಜನಪುರ ರಸ್ತೆಗೆ ಅವರ ಹೆಸರನ್ನು ನಾಮಕಾರಣ ಮಾಡಬೇಕು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನಕುಮಾರ್ ಸಲಹೆ ನೀಡಿದರು.

Advertisement

ಇತ್ತೀಚಿಗೆ ಕೋವಿಡ್‌ನಿಂದ ಮೃತರಾದ ಮಾಜಿ ಶಾಸಕ, ಬಿಜೆಪಿ ಮುಖಂಡ, ವಕೀಲ ಸಿ. ಗುರುಸ್ವಾಮಿಯವರ ಸ್ಮರಣಾರ್ಥ ಮಾಜಿ ಶಾಸಕ ದಿ. ಸಿ. ಗುರುಸ್ವಾಮಿ ಅವರ ಅಭಿಮಾನಿಗಳ ಬಳಗ ಹಾಗೂ ಹಿತೈಷಿಗಳು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ, ಗುರುಸ್ವಾಮಿ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೇರ ನಡೆ, ನುಡಿ ಹಾಗೂ ನಿಷ್ಠುರವಾದಿಯಾಗಿದ್ದ ಗುರುಸ್ವಾಮಿಯವರು ಓರ್ವ ಪ್ರಜ್ಞಾವಂತ ರಾಜಕಾರಣಿಯಾಗಿದ್ದರು. ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿದರು.

1999 ರಲ್ಲಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿ ಪಡಿಸುವ ಜೊತೆಗೆ ಬಹಳ ಯೋಜನೆಗಳನ್ನು ಜಾರಿ ಮಾಡಿದ್ದರು. ಇಂಥವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲು ರಸ್ತೆಗೆ ಅವರು ಹೆಸರು ನಾಮಕರಣ ಮಾಡಬೇಕೆಂದರು.

ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಿ. ಗುರುಸ್ವಾಮಿ ಮತ್ತು ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಜನತಾ ಪರಿವಾರದಲ್ಲಿದ್ದ ಅವರು ನಮ್ಮ ತಂದೆ ಬಿ. ರಾಚಯ್ಯನವರ ಶಿಷ್ಯರು ಕೂಡ. ನಮ್ಮ ತಂದೆಯರು ಜಿಲ್ಲಾ ಪರಿಷತ್‌ಗೆ ಟಿಕೆಟ್ ನೀಡಿ, ಪ್ರಥಮ ಬಾರಿಗೆ ಅವರನ್ನು ಗೆಲ್ಲಿಸಿದ್ದರು. ಅಲ್ಲಿಂದ ಅವರು ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಗುರುಸ್ವಾಮಿ ಅವರು ಅನುಭವಿಗಳಾಗಿದ್ದರು. ವಕೀಲ ಪದವಿ ಪಡೆದು, ಉತ್ತಮ ವಾಗ್ಮಿಗಳು. ಅವರ ನಿಧನದ ಸುದ್ದಿ ಕೇಳಿ ಸ್ವಲ್ವ ವಿಚಲತನಾದೆ. ಅವರ ಆತ್ಮಕ್ಕೆ ಭಗವಂತ ಚಿರಾಶಾಂತಿಯನ್ನು ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದರು.

ಜೆ.ಎಸ್.ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎ.ಜಿ. ಶಿವಕುಮಾರ್ ನುಡಿ ನಮನ ಸಲ್ಲಿಸಿ ಮಾತನಾಡಿ, ಮಾಜಿ ಶಾಸಕರಾಗಿದ್ದ ಸಿ. ಗುರುಸ್ವಾಮಿ ಅವರು ಹಠವಾದಿ ಹಾಗು ನಿಷ್ಠುರವಾದಿಯಾಗಿದ್ದರು. ಹೀಗಾಗಿ ಅವರು ಇತ್ತೀಚಿನ ರಾಜಕೀಯಕ್ಕೆ ಸರಿಹೊಂದಲಿಲ್ಲ. ಅವರ ಒಮ್ಮೆ ಮಾತ್ರ ಶಾಸಕರಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ವಕೀಲ ವೃತ್ತಿಯನ್ನು ಆರಂಭಿಸಿ, ಬಡವರಿಗೆ ಹೆಚ್ಚಿನ ಸಹಾಯ ಮಾಡುತ್ತಿದ್ದರು. ಬಹಳಷ್ಟು ಕೇಸುಗಳನ್ನು ನಡೆಸಿ, ಹಣವನ್ನೇ ಪಡೆದುಕೊಳ್ಳುತ್ತಿರಲಿಲ್ಲ. ಜಾತ್ಯತೀತ ನಾಯಕರಾಗಿದ್ದ ಅವರು, ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು ಎಂದು ಸ್ಮರಿಸಿದರು.

Advertisement

ಜಿ.ಪಂ. ಮಾಜಿ ಅಧ್ಯಕ್ಷೆ ಹಾಗೂ ದಿ. ಗುರುಸ್ವಾಮಿ ಅವರ ಪುತ್ರಿ ಜಿ. ನಾಗಶ್ರೀ ಪ್ರತಾಪ್ ಮಾತನಾಡಿ, ನನ್ನ ತಂದೆ ಅವರ ಮೇಲಿನ ಅಭಿಮಾನದಿಂದ ಕೋವಿಡ್‌ನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯು ನುಡಿನಮನ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಮಿಸಿರುವ ತಮ್ಮೆಗೆಲ್ಲರಿಗೂ ನಾನು ಚಿರಋಣಿ. ಅವರ ಅದರ್ಶ ಮತ್ತು ಮಾರ್ಗದರ್ಶನದಲ್ಲಿಯೇ ನಾನು ಮುಂದುವರಿಯುತ್ತೇನೆ ಎಂದು ಗದ್ಗದಿತರಾದರು.

ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಹನುಮಂತಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಜಿ.ಪಂ. ಸದಸ್ಯ ಸಿ.ಎನ್. ಬಾಲರಾಜು, ಶಿವಮೂರ್ತಿ, ವಕೀಲ ಜಗದೀಶ್, ವೆಂಕಟರಮಣಸ್ವಾಮಿ (ಪಾಪು), ಲಕ್ಷ್ಮಿನರಸಿಂಹ, , ಕಾಳನಹುಂಡಿ ಗುರುಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಹಂಡ್ರಕಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ, ಹರವೆ ಮಠದ ಸರ್ಪಭೂಷಣಸ್ವಾಮೀಜಿ ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ದಾನೇಶ್ವರಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಆರ್.ಎಂ. ಸ್ವಾಮಿ, ಜಿ. ಮಹದೇವಪ್ರಸಾದ್, ಬಿ.ಕೆ. ರವಿಕುಮಾರ್, ಶಮಿತ್‌ಕುಮಾರ್, ದೊಡ್ಡರಾಯಪೇಟೆ ಗಿರೀಶ್, ಕೆಲ್ಲಂಬಳ್ಳಿ ಸತೀಶ್ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next