Advertisement

ಕರಿಮಾರದ್ದು ಸಹಜ ಸಾವೋ, ಪಾಕ್‌ ಕೃತ್ಯವೋ?

01:50 AM Dec 24, 2020 | sudhir |

ದಶಕಗಳ ಪಾಕಿಸ್ಥಾನದ ಕ್ರೌರ್ಯದಿಂದ ಬೇಸತ್ತು ಪ್ರತ್ಯೇಕ ಬಲೂಚಿಸ್ಥಾನಕ್ಕಾಗಿ ಹೋರಾಡುತ್ತಿರುವವರೆಲ್ಲ ನಿಗೂಢವಾಗಿ ಕಣ್ಮರೆಯಾಗುತ್ತಿರುವ ಅಥವಾ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವ ಘಟನೆಗಳು ಕೆಲವು ವರ್ಷಗಳಿಂದ ಹೆಚ್ಚುತ್ತಲೇ ಇವೆ. ಇದರಲ್ಲಿ ತನ್ನ ಕೈವಾಡವಿಲ್ಲ ಎಂದು ಪಾಕ್‌ ಸರಕಾರ ಹೇಳುತ್ತದಾದರೂ, ಅಲ್ಲಿಂದ ತಪ್ಪಿಸಿಕೊಂಡು ವಿದೇಶಗಳಲ್ಲಿ ಆಶ್ರಯ ಪಡೆದ ಬಲೂಚ್‌ ಪರ ಹೋರಾಟಗಾರರು ಕಣ್ಮರೆಯಾಗುತ್ತಿರುವುದು ಅಥವಾ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವುದನ್ನೆಲ್ಲ ನೋಡಿದರೆ, ಪಾಕ್‌ ಬಗ್ಗೆ ಅನುಮಾನ ಹೆಚ್ಚುವುದು ಸಹಜವೇ.

Advertisement

ಈಗ ಕೆನಡಾದ ಟೊರಾಂಟೋದ ಹಾರ್ಬರ್‌ಫ್ರಂಟ್‌ ಬಳಿ ಪತ್ತೆಯಾಗಿರುವ ಬಲೂಚಿಸ್ಥಾನ ಪರ ಹೋರಾಟಗಾರ್ತಿ 37 ವರ್ಷದ  ಕರಿಮಾ ಬಲೂಚ್‌ ಮೃತದೇಹವೂ ಅನುಮಾನಗಳನ್ನು ಹುಟ್ಟುಹಾಕಿದೆ.

ಪಾಕಿಸ್ಥಾನದಲ್ಲಿ ಮನಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದ ಕರಿಮಾ ಪಾಕ್‌ ಸೇನೆಯಿಂದ ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಅಲ್ಲಿನ ಪತ್ರಕರ್ತರ ಅನುಮಾನಾಸ್ಪದ ಸಾವುಗಳು, ಬಲೂಚ್‌ನ ಮಹಿಳೆಯರ ಮೇಲೆ ಸೇನೆಯಿಂದ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾಧ್ಯಮಗಳಲ್ಲಿ, ಬ್ಲಾಗ್‌ಗಳಲ್ಲಿ ಕಟು ಶಬ್ದಗಳಲ್ಲಿ ಮಾತನಾಡುತ್ತಲೇ ಇದ್ದರು. ಇದರಿಂದಾಗಿ ಪಾಕ್‌ ಸೇನೆ ಹಾಗೂ ಐಎಸ್‌ಐನ ತೀವ್ರ ಕೆಂಗಣ್ಣಿಗೆ ಅವರು ಗುರಿಯಾಗಬೇಕಾಯಿತು. ಈ ಕಾರಣಕ್ಕಾಗಿ ಸುಮಾರು ಹತ್ತು ವರ್ಷಗಳವರೆಗೆ ಅವರು ತಲೆಮರೆಸಿಕೊಂಡೇ ಓಡಾಡುವಂತಾಗಿತ್ತು. ಆದರೆ ಯಾವಾಗ ಕರಿಮಾ 2014ರಲ್ಲಿ ಬಲೂಚಿಸ್ಥಾನದ ಪರವಿರುವ ನಿಷೇಧಿತ ಬಲೂಚ್‌ ವಿದ್ಯಾರ್ಥಿ ಒಕ್ಕೂಟ(ಬಿಎಸ್‌ಒ)ದ ನಾಯಕಿಯಾದರೋ, ಪಾಕ್‌ ಅವರ ಧ್ವನಿಯನ್ನು ಅಡಗಿಸಲು ಪಣತೊಟ್ಟಿತು. ಬಿಎಸ್‌ಒ ಅನ್ನು ಉಗ್ರ ಸಂಘಟನೆ ಎಂದು ಘೋಷಿಸಿದ್ದ ಪಾಕ್‌ಗೆ ಕರಿಮಾರನ್ನು ಹತ್ತಿಕ್ಕಲು ಇದೊಂದು ದೊಡ್ಡ ಅವಕಾಶವಾಯಿತು. ಅಪಾಯವನ್ನು ಗ್ರಹಿಸಿದ ಕರಿಮಾ ಸುಮಾರು 2 ವರ್ಷಗಳವರೆಗೆ ಐಎಸ್ಐ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಭೂಗತವಾಗಿದ್ದರು. ಕೊನೆಗೆ 2016ರಲ್ಲಿ ಕೆಲವು ಗೆಳೆಯರು ಹಾಗೂ ವಿವಿಧ ರಾಷ್ಟ್ರಗಳಲ್ಲಿನ ಮಾನವ ಹಕ್ಕು ಹೋರಾಟಗಾರರ ನೆರವಿನಿಂದ ಕೆನಡಾಕ್ಕೆ ಪಲಾಯನಗೈದು, ಅಲ್ಲಿ ಆಶ್ರಯ ಪಡೆಯುವಲ್ಲಿ ಯಶಸ್ವಿಯಾದರು.

ಕೆನಡಾದಲ್ಲಿ ಆಶ್ರಯ ಪಡೆದ ಅವರು ನಿರಂತರವಾಗಿ ಪಾಕ್‌ ಸರಕಾರ ಹಾಗೂ ಐಎಸ್‌ಐನ ಪೈಶಾಚಿಕ ಮುಖವನ್ನು ಜಗತ್ತಿನೆದುರು ಅನಾವರಣಗೊಳಿಸುತ್ತಲೇ ಬಂದರು. ಹೀಗಾಗಿ ಅವರ ಧ್ವನಿಯನ್ನು ಅಡಗಿಸುವ ಮೂಲಕ ಬಲೂಚ್‌ ಪರ ಹೋರಾಟಗಾರರನ್ನು ಬೆದರಿಸಬೇಕೆಂದು ಐಎಸ್‌ಐ ನಿರಂತರ ಪ್ರಯತ್ನಿಸುತ್ತಲೇ ಇತ್ತು ಎನ್ನುತ್ತವೆ ಗುಪ್ತಚರ ವರದಿಗಳು.
ಇವೆಲ್ಲದರ ನಡುವೆಯೇ ಆಶ್ಚರ್ಯ ಹುಟ್ಟಿಸುತ್ತಿರುವ ಸಂಗತಿಯೆಂದರೆ, 2016ರಲ್ಲಿ ಬಿಬಿಸಿಯ “ಜಗತ್ತಿನ 100 ಅತ್ಯಂತ ಪ್ರಭಾವಿ ಮಹಿಳೆ’ಯ ರ ಪಟ್ಟಿಯಲ್ಲಿ ಹೆಸರು ಪಡೆದಿದ್ದ ಕರಿಮಾರಂಥ ದಿಟ್ಟ ಹೋರಾಟಗಾರ್ತಿಯ ಸಾವು ಜಾಗತಿಕವಾಗಿ ಹೆಚ್ಚು ಸದ್ದು ಮಾಡದೇ ಇರುವುದು! ಅದರಲ್ಲೂ ಮಾತೆತ್ತಿದರೆ ಮಾನವ ಹಕ್ಕುಗಳ ಬಗ್ಗೆ ಜಗತ್ತಿಗೆ ಪಾಠ ಹೇಳಲು ಮುಂದಾಗುವ ಜಸ್ಟಿನ್‌ ಟ್ರಿಡ್ನೂ ನೇತೃತ್ವದ ಕೆನಡಾ ಸರಕಾರ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮೌನವಹಿಸಿರುವುದು. ಟೊರಾಂಟೋದ ಪೊಲೀಸರಂತೂ “ಪ್ರಾಥಮಿಕ ತನಿಖೆ ಪ್ರಕಾರ, ಕರಿಮಾರದ್ದು ಅಸಹಜ ಸಾವಲ್ಲ. ಆಕೆಯ ಸಾವಿನ ಹಿಂದೆ ಯಾರದ್ದಾದರೂ ಕೃತ್ಯವಿದೆಯೆಂದು ಅನಿಸುತ್ತಿಲ್ಲ’ ಎಂದು ತ್ವರಿತ ಹೇಳಿಕೆ ನೀಡಿದ್ದಾರೆ. ಕರಿಮಾರದ್ದು ಸಹಜ ಸಾವೋ, ಅಸಹಜವೋ ಎನ್ನುವುದು ಮುಂದೆ ತಿಳಿಯಲಿದೆಯಾದರೂ, ಈ ವಿಷಯದಲ್ಲಿ ಕೆನಡಾ ಸರಕಾರದ ಮೌನವೂ ಅನುಮಾನ ಹುಟ್ಟಿಸುತ್ತಿದೆ.

ಕೆನಡಾದಲ್ಲಿ ಹೆಚ್ಚುತ್ತಿದೆ ಲಾಬಿ
ಕಳೆದೊಂದು ದಶಕದಿಂದ ಕೆನಡಾ ರಾಜಕೀಯದಲ್ಲಿ ಪಾಕ್‌ ಹಾಗೂ ಖಲಿಸ್ಥಾನ ಪರ ಲಾಬಿಗಳು ಅಧಿಕವಾಗುತ್ತಲೇ ಇವೆ. ಈ ಲಾಬಿಗಳ ಗುಣವೆಂದರೆ, ಇವು ಭಾರತದ ವಿರುದ್ಧ ಮಾನವ ಹಕ್ಕು ಉಲ್ಲಂಘನೆಯ ಕಟ್ಟುಕತೆಗಳನ್ನು ಹೆಣೆಯುತ್ತವೆಯೇ ಹೊರತು, ಪಾಕಿಸ್ಥಾನ ನಡೆಸುತ್ತಿರುವ ಕ್ರೌರ್ಯಗಳಿಗೆಲ್ಲ ಕುರುಡಾಗಿ ಬಿಡುತ್ತವೆ.

Advertisement

ನೆನಪಿಡಬೇಕಾದ ಅಂಶವೆಂದರೆ 1980ರಲ್ಲಿ ಪ್ರತ್ಯೇಕ ಖಲಿಸ್ಥಾನ ಸ್ಥಾಪನೆಗಾಗಿ ಆರಂಭವಾದ ಖಲಿಸ್ತಾನಿ ಭಯೋತ್ಪಾದನ ಕೃತ್ಯಗಳಿಗೆ ಪಾಕಿಸ್ಥಾನದ ಮಿಲಿಟರಿ, ಐಎಸ್‌ಐ ಹಾಗೂ ಅಲ್ಲಿನ ಸರಕಾರ ಬಹಳ ಬೆಂಬಲ ನೀಡಿತ್ತು. ಖಲಿಸ್ಥಾನಿ ಪ್ರತ್ಯೇಕವಾದಿಗಳಿಂದಾಗಿ ಅಂದು ಭಾರತದಲ್ಲಿ ಸಾವಿರಾರು ಅಮಾಯಕರು ಹತ್ಯೆಯಾಗಿದ್ದರು. ಆದಾಗ್ಯೂ ಭಾರತದಲ್ಲಿ ಖಲಿಸ್ಥಾನಿ ಪರ ಧ್ವನಿಗಳೆಲ್ಲ ಈಗ ಅಡಗಿವೆಯಾದರೂ, ಪಾಕಿಸ್ಥಾನವು ಪ್ರಪಂಚದಾದ್ಯಂತ ಹರಡಿರುವ ಖಲಿಸ್ಥಾನಿ ಪರ ಜನರನ್ನು ಒಗ್ಗೂಡಿಸಿ, ಮತ್ತೆ ಈ ವಿಷಯವನ್ನು ಬೃಹತ್ತಾಗಿ ಬೆಳೆಸಲು ಪ್ರಯತ್ನಿಸುತ್ತಿದೆ.

ಕೆನಡಾದ ರಾಜಕೀಯದಲ್ಲಿ ಯಾವಾಗ ಖಲಿಸ್ಥಾನ ಪರ ಒಲವಿರುವವರು ಮತ್ತು ಪಾಕಿಸ್ಥಾನ ಮೂಲದವರು ಉನ್ನತ ಹುದ್ದೆಗಳಲ್ಲಿ ಕುಳಿತುಕೊಳ್ಳಲಾರಂಭಿಸಿದರೋ ಅಂದಿನಿಂದ ಇವರೆಲ್ಲ ಅಲ್ಲಿನ ಆಡಳಿತದ ಮೇಲೆ ಬಹಳ ಪ್ರಭಾವ ಬೀರಲಾರಂಭಿಸಿದ್ದಾರೆ. ಅದರಲ್ಲೂ ಜಸ್ಟಿನ್‌ ಟ್ರಿಡ್ನೂ ನೇತೃತ್ವದ ಸರಕಾರ ಪಾಕ್‌ಹಾಗೂ ಖಲಿಸ್ಥಾನ ಪರ ಲಾಬಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎನ್ನುತ್ತಾರೆ ರಕ್ಷಣ ಪರಿಣತರು.

ಕೆನಡಾದ ವಿಪಕ್ಷ ನ್ಯೂ ಡೆಮಾಕ್ರಟಿಕ್‌ ಪಾರ್ಟಿಯ ನಾಯಕ ಜಗ್ಮಿತ್‌ ಸಿಂಗ್‌ ಕೂಡ ನಿರಂತರವಾಗಿ ಖಲಿಸ್ಥಾನ ಹಾಗೂ ಪಾಕ್‌ ಪರ ಧೋರಣೆಗಳನ್ನು ತೋರಿಸುತ್ತಲೇ ಬಂದವರು. ಅದರಲ್ಲೂ ಪಾಕಿಸ್ಥಾನಿ ಮೂಲದ ಕೆನಡಿಯನ್‌ ಸಂಸದೆ ಇಖಾ ಖಾಲಿದ್‌ ಐಎ ಸ್‌ಐ ಹಾಗೂ ಪಾಕ್‌ ಸರಕಾರದೊಂದಿಗೆ ಆಳವಾದ ನಂಟು ಹೊಂದಿದ್ದಾರೆ ಎನ್ನಲಾಗುತ್ತದೆ. ಮತ್ತೂಬ್ಬ ಸಂಸದ ಜಾವೇದ್‌ ಹುಸೇನ್‌ ಖುರೇಷಿ “ದ ಪ್ರೈವಿ ಕೌನ್ಸಿಲ್ ನ’ ಪ್ರಮಖ ಚಹರೆಯಾಗಿದ್ದು, ಸರಕಾರದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕೆನಡಾದಲ್ಲಿ ಪಾಕಿಸ್ಥಾನದ ಪ್ರಭಾವ ಎಷ್ಟು ಗಾಢವಾಗಿದೆಯೆಂದರೆ, ವ್ಯಾಂಕೋವರ್‌ ನಗರದಲ್ಲಿ ಕೆಲವೇ ಕೆಲವು ಪಾಕಿಸ್ಥಾನಿಯರಿದ್ದರೂ, ಆ ನಗರಿಯಲ್ಲಿ ಇಸ್ಲಾಮಾಬಾದ್‌ನ ರಾಯಭಾರ ಕಚೇರಿಯಿದೆ. ಈ ಕಚೇರಿಯು ವ್ಯಾಂಕೋವರ್‌ನಲ್ಲಿ ಬೃಹತ್‌ ಪ್ರಮಾಣದಲ್ಲಿರುವ ಖಲಿಸ್ಥಾನ ಪರವಿರುವ ಸಿಕ್ಖರೊಂದಿಗೆ ನಿರಂತರ ಸಂಪರ್ಕದಲ್ಲಿ ಇದೆ ಎನ್ನಲಾಗುತ್ತದೆ. ಇನ್ನು ಕೆನಡಾ ಸರಕಾರದ ನೀತಿ ನಿರೂಪಣೆ ಸಮಿತಿಯಲ್ಲಿರುವ ನಾಲ್ವರು ಪಾಕಿಸ್ಥಾನದ ಮೂಲದ ವ್ಯಕ್ತಿಗಳಿಗೂ ಪಾಕ್‌ ಇಂಟೆಲಿಜೆನ್ಸ್‌ ಏಜೆನ್ಸಿ ಐಎಸ್‌ಐನೊಂದಿಗೆ ಬಹಳ ನಂಟಿದೆ ಎನ್ನಲಾಗುತ್ತದೆ.

ಈ ಅಂಶಗಳನ್ನೆಲ್ಲ ಗಮನಿಸಿದಾಗ ಕರಿಮಾ ಬಲೂಚ್‌ರ ಸಾವಲ್ಲಿ ಪಾಕಿಸ್ಥಾನದ ಕೈವಾಡವಿರಬಹುದು ಎಂದೆನಿಸುವುದು ಸಹಜವೇ. ಆದರೆ, ಮಾತೆತ್ತಿದರೆ ಕಾಶ್ಮೀರದ ವಿಚಾರವನ್ನು ಹಿಡಿದು ಭಾರತವನ್ನು ಸುಖಾಸುಮ್ಮನೆ ಕಟಕಟೆಯಲ್ಲಿ ನಿಲ್ಲಿಸಲು ಪ್ರಯತ್ನಿಸುವ ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳು, ಪಶ್ಚಿಮ ರಾಷ್ಟ್ರಗಳು ಪಾಕಿಸ್ಥಾನದ ವಿಚಾರದಲ್ಲಿ ಮೌನ ವಹಿಸುತ್ತಿರುವುದು ಏಕೋ ತಿಳಿಯುತ್ತಿಲ್ಲ?  ಬಹುಶಃ ಚೀನಕ್ಕೆ ಹೆದರಿ ಅವು ಮೌನವಹಿಸುತ್ತಲೂ ಇರಬಹುದು!

ಬಲೂಚಿಸ್ಥಾನ ಸಾವಿರಾರು ನಾಗರಿಕರು ನಾಪತ್ತೆ
ಪಾಕಿಸ್ಥಾನದ ದಶಕಗಳ ಧಾರ್ಮಿಕ-ರಾಜಕೀಯ ಪ್ರೇರಿತ ಕ್ರೌರ್ಯದಿಂದ ಬೇಸತ್ತಿರುವ ಬಲೂಚಿಸ್ಥಾನಿಯರು ತಮ್ಮ ಸ್ವಾತಂತ್ರಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಪಾಕ್‌ ವಿರುದ್ಧ ಬಲೂಚಿಸ್ಥಾನದಲ್ಲಿ ಹಲವಾರು ಬಂಡುಕೋರ ಗುಂಪುಗಳೂ ಸೃಷ್ಟಿಯಾಗಿದ್ದು, ಇದನ್ನೇ ನೆಪವಾಗಿಸಿಕೊಂಡಿರುವ ಪಾಕ್‌ ಸರಕಾರ ಬಲೂಚ್‌ ನಾಗರಿಕರನ್ನು ಹತ್ತಿಕ್ಕಲು ಸೇನೆ ಹಾಗೂ ಉಗ್ರರನ್ನು ಬಳಸಿಕೊಳ್ಳಲಾರಂಭಿಸಿದೆ.  ಪರಿಣಾಮವಾಗಿ ನಿತ್ಯವೂ ಬಲೂಚಿಸ್ಥಾನದ ಪತ್ರಕರ್ತರು, ವಿದ್ಯಾರ್ಥಿಗಳು, ಹೋರಾಟಗಾರರು ಅನುಮಾನಾಸ್ಪದವಾಗಿ ಕಾಣೆಯಾಗುತ್ತಿದ್ದಾರೆ. ಇಮ್ರಾನ್‌ ಖಾನ್‌ರ ಮಾತು ನಂಬಿ ಅವರ ಸರಕಾರದ ಭಾಗವಾಗಿದ್ದ ಬಲೂಚ್‌ ನ್ಯಾಶನಲಿಸ್ಟ್‌ ಪಾರ್ಟಿ(ಬಿಎನ್‌ಪಿ)ಯು, ಈ ವರ್ಷ ಮೈತ್ರಿಯಿಂದ ಹೊರಬಿದ್ದಿದೆ. ಮೈತ್ರಿ ಮಾಡಿಕೊಳ್ಳುವ ಮುನ್ನ ಬಿಎನ್‌ಪಿಯು ಇಮ್ರಾನ್‌ ಖಾನ್‌ ಅವರಿಗೆ ಕಾಣೆಯಾಗಿರುವ 5,128 ಬಲೂಚಿಗಳ ಪಟ್ಟಿಯನ್ನು ಕೊಟ್ಟಿತ್ತು. ಇವರೆಲ್ಲರ ಕಥೆ ಏನಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ! ಇವರಲ್ಲಿ ಬಹುತೇಕರು ಬಲೂಚಿ ಉಗ್ರ ಸಂಘಟನೆ ಸೇರಿರಬಹುದೆಂದು ಪಾಕ್‌ ಸೇನೆ ವಾದಿಸುತ್ತಿದೆ. ಮೈತ್ರಿಯಿಂದ ಹೊರಬಂದ ಅನಂತರ ಬಿಎನ್‌ಪಿ ನಾಯಕ ಅಖ್ತರ್‌ ಮೆಂಗಲ್‌ -“ನಿಮಗೆ ನಮ್ಮ ಜನರನ್ನು ಹುಡುಕಿ ಕರೆತರಲು ಸಾಧ್ಯವಾಗದಿದ್ದರೂ ಅಡ್ಡಿಯಿಲ್ಲ, ಆದರೆ ಮತ್ತಷ್ಟು ಜನರನ್ನು ಕಣ್ಮರೆ ಮಾಡದಿರಿ’ ಎಂದು ಆಕ್ರೋಶದಿಂದ ನುಡಿದಿದ್ದರು.

– ಡಾ| ಮಹೇಂದ್ರ ಎಸ್‌.ಡಿ., ರಕ್ಷಣ ಪರಿಣತ

Advertisement

Udayavani is now on Telegram. Click here to join our channel and stay updated with the latest news.

Next