Advertisement

ಕಾಳಿ ನದಿ ಉಸುಕು ತೆಗೆಯಲು ಅನುಮತಿಗೆ ನಿರಾಕರಣೆ

04:57 PM Nov 17, 2018 | Team Udayavani |

ಕಾರವಾರ: ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದ್ದು, ತಕ್ಷಣ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ತಾಪಂ ಸದಸ್ಯರು ಠರಾವು ಕೈಗೊಂಡರು. ಠರಾವನ್ನು ತುರ್ತಾಗಿ ಜಿಲ್ಲಾಡಳಿತಕ್ಕೆ ಕಳುಹಿಸಬೇಕೆಂದು ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ ಇಒಗೆ ಸೂಚಿಸಿದರು. ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

Advertisement

ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮರಳಿನ(ಉಸುಕು) ಕೊರತೆ ಸಮಸ್ಯೆಯಾಗಿದೆ ಎಂದು ಕದ್ರಾ ಸದಸ್ಯೆ ಅಶ್ವಿ‌ನಿ ಪೆಡ್ನೇಕರ ಗಮನಕ್ಕೆ ತಂದರು. ಬಳಿಕ ಈ ಬಗ್ಗೆ ಚರ್ಚೆ ನಡೆದು, ಅಂಕೋಲಾ, ಹೊನ್ನಾವರ ತಾಲೂಕುಗಳಿಗೆ ಮರಳು ತೆಗೆಯಲು ಪರವಾನಗಿ ಸಿಕ್ಕಿದೆ. ಆದರೆ ಕಾರವಾರ ತಾಲೂಕಿನ ಕಾಳಿ ನದಿಯಲ್ಲಿ ಮಾತ್ರ ಉಸುಕು ತೆಗೆಯಲು ಅನುಮತಿ ನೀಡದೇ ದೂರ ಇಡಲಾಗಿದೆ. ಕೇಂದ್ರ ಸರ್ಕಾರ ಮರಳು ತೆಗೆಯಲು ಅಡ್ಡಗಾಲು ಹಾಕಿದೆ ಎಂದು ಪರಿಸರ ಇಲಾಖೆ ಹೇಳುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಮರುಪರಿಶೀಲನೆ ನಡೆಸಬೇಕು ಎಂದು ಶಿರವಾಡ ಸದಸ್ಯ ಮಾರುತಿ ನಾಯ್ಕ, ವೈಲವಾಡಾ ಸದಸ್ಯ ಪ್ರಶಾಂತ್‌ ಗೋವೇಕರ ಸೇರಿದಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು.

ತಾಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿದ್ದು, ಸಂಬಂಧಪಟ್ಟ ತಾಲೂಕು ಆರೋಗ್ಯ ಅಧಿ ಕಾರಿಗಳು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಲ್ಲದೇ ಸಭೆಗೂ ಬಂದಿಲ್ಲ. ಅವರ ಬದಲಿಗೆ ಬೇರೆ ಸಿಬ್ಬಂದಿ ಕಳುಹಿಸಿದ್ದರಿಂದ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುರುಷೋತ್ತಮ್‌ ಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಅಮದಳ್ಳಿ ತಾಪಂ ವ್ಯಾಪ್ತಿಯ ಜಡಿಗದ್ದೆ ಗ್ರಾಮದ ಗರ್ಭಿಣಿಯರು ದೂರದ ತೋಡುರಿಗೆ ಹೋಗಿ ತಾಯಿ ಕಾರ್ಡ್‌ನ ಸೌಲಭ್ಯ ಪಡೆಯಬೇಕಾಗಿದೆ. ತೋಡೂರಿನ ಬದಲಾಗಿ ಅಮದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಎಲ್ಲ ಸೌಲಭ್ಯ ಸಿಗುವ ವ್ಯವಸ್ಥೆಯಾಗಬೇಕು ಎಂದರು.

ತಾಲೂಕಿನ ಎಸ್‌ಬಿಐ ಬ್ಯಾಂಕ್‌ನಲ್ಲಂತೂ ಹಿರಿಯ ನಾಗರಿಕರು ವೃದ್ಧಾಪ್ಯ ವೇತನ, ನಿವೃತ್ತಿ ವೇತನ ಪಡೆಯಲು ಹೆಣಗಾಡಬೇಕಾಗಿದೆ. ಇಲ್ಲಿ 200 ರಿಂದ 300 ವಿಕಲಚೇತನರು, ಹಿರಿಯ ನಾಗರೀಕರು ದಿನವೀಡಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಬ್ಯಾಂಕ್‌ನಲ್ಲಿ ಟೋಕನ್‌ ಸಿಸ್ಟಂ ಬಂದ್‌ ಮಾಡಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಸದಸ್ಯ ಮಾರುತಿ ನಾಯ್ಕ ಗಮನಸೆಳದರು.

Advertisement

ಲೀಡ್‌ ಬ್ಯಾಂಕ್‌ನ ಅಧಿ ಕಾರಿ ಪಿಂಜಾರಾ ಮಾತನಾಡಿ, ಟೋಕನ್‌ ಸಿಸ್ಟಂನ್ನು ಸದ್ಯ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಮಾತ್ರ ಚಾಲನೆಯಲ್ಲಿದೆ. ಸುಧಾರಿತ ಟೋಕನ್‌ ಪದ್ಧತಿಯನ್ನು ಹಂತ ಹಂತವಾಗಿ ಎಲ್ಲ ಬ್ಯಾಂಕ್‌ಗಳಿಗೆ ವಿಸ್ತರಿಸಲಾಗುವುದು. ಎಸ್‌ಬಿಐನಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಳಗೇಜೂಗ್‌ನ ಮಾಜಿ ಸೈನಿಕನಿಗೆ 25 ಗುಂಟೆ ಬದಲಾಗಿ 5 ಗುಂಟೆ ನಿವೇಶನ ಮಂಜೂರಾಗಿದ್ದು, ಇನ್ನೂ ತನಕ ಹಸ್ತಾಂತರವಾಗಿಲ್ಲ ಎಂದು ಪ್ರಶಾಂತ್‌ ಗೋವೇಕರ ಸಭೆಯ ಗಮನಕ್ಕೆ ತಂದಾಗ, ಸೈನಿಕ ಬೋರ್ಡ್‌ನಿಂದ ಯುದ್ಧದಲ್ಲಿ ಮಡಿದ ವೀರಯೋಧರು ಹಾಗೂ ಅಂಗವಿಕಲರಾದವರಿಗೆ ಉಚಿತವಾಗಿ ನಿವೇಶನ ನೀಡಲಾಗುತ್ತದೆ. ಆದರೆ ಇತರೆ ಸೈನಿಕರಿಗೆ ನಿವೇಶನ ನೀಡಲು 2 ಲಕ್ಷ ರೂ. ದೊಳಗಿನ ಆದಾಯದ ಮಿತಿ ಇದೆ. ಅಲ್ಲದೇ ಕೆಲವು ನಿಯಮಾವಳಿ ಪ್ರಕಾರ ನಿವೇಶನ ಮಂಜೂರಿ ಮಾಡಲಾಗುತ್ತದೆ ಎಂದು ಸೈನಿಕ ಬೋರ್ಡ್‌ನ ಸಹಾಯಕ ಅಧಿಕಾರಿ ವಿವರಿಸಿದರು.

ಕೆಲವು ವಾಹನ ಸವಾರರು ಮೂಲ ಬಲ್ಬ್ ಗಳನ್ನು ತೆರುವುಗೊಳಿಸಿ, ಎಲ್‌ಇಡಿ, ಎಲೋಜಿನ್‌ ಬಲ್ಬ್ ಗಳನ್ನು  ವಾಹನಗಳಿಗೆ ಅಳವಡಿಸಿ ಓಡಾಡುತ್ತಾರೆ. ಇದರಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್‌ಟಿಓ ಅಧಿಕಾರಿಗಳಿಗೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆಗ್ರಹಿಸಿದರು. ತಾಪಂ ಇಒ ಡಾ| ಬಾಲಪ್ಪನವರ್‌ ಆನಂದಕುಮಾರ್‌, ದೇವಿದಾಸ್‌ ಬೇಳೂರಕರ, ಗಂಗಾ ನಾಯ್ಕ, ಅಶ್ವಿ‌ನಿ ಗುನಗಿ, ಶ್ರೀಧರ್‌ ತಾಮಸೆ, ಇನಾಸಿನ್‌ ಡಿಕೋಸ್ತಾ, ನಾಗವೇಣಿ ಗೊಂಡ, ಸರೋಜಿನಿ ಗೌಡ, ಲಕ್ಷ್ಮಿ ಪರಶುರಾಮ್‌ ಭಜಂತ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next