Advertisement

ಸಾಹಸ ಸಂಗತಿ : ಕಾಂಚನಜುಂಗಾ ಶಿಖರವೇರಿದ ಹರ್ಷದ್‌ ರಾವ್‌

06:07 PM Apr 13, 2020 | Karthik A |

ಕುಂದಾಪುರ: ಪರ್ವತಾಹರೋಹಣ ಮಾಡುವುದು ಕೆಲವರಿಗೊಂದು ಹವ್ಯಾಸ. ಅದರಲ್ಲೂ ಹಿಮಪ್ರದೇಶಗಳಲ್ಲಿ ಶಿಖರವೇರುವುದು ಅಸಾಮಾನ್ಯ ಸಾಧನೆಯೇ ಸರಿ. ಕುಂದಾಪುರದ ಆರ್ಡಿ ಮೂಲದವರಾದ ಹರ್ಷದ್‌ ರಾವ್‌ ಅವರು ಅಂತಹುದೇ ಒಂದು ಸಾಧನೆಯನ್ನು ಈಗ 28,169 ಅಡಿ ಎತ್ತರದ ಕಾಂಚನಜುಂಗಾ (ಕಾಂಚನಗಂಗಾ- ಕೆ-2) ಪರ್ವತವೇರುವ ಮೂಲಕ ಮಾಡಿದ್ದಾರೆ.

Advertisement

2016ರಲ್ಲಿ ವಿಶ್ವದ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವೇರಿದ್ದ 29ರ ಹರೆಯದ ಹರ್ಷದ್‌ ರಾವ್‌ ಅವರು ಈ ವರ್ಷದ ಮೇ 20ಕ್ಕೆ ಭಾರತದ ಅತೀ ಎತ್ತರದ ಪರ್ವತವಾಗಿರುವ ಸಿಕ್ಕಿ ರಾಜ್ಯ ಹಾಗೂ ನೇಪಾಳ ದೇಶದ ಮಧ್ಯೆ ಬರುವ ಕಾಂಚನಜುಂಗಾವನ್ನು ಏರುವ ಮೂಲಕ ಭಾರತದ ಶ್ರೇಷ್ಠ ಪರ್ವತಾರೋಹಿತಗಳ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಹರ್ಷದ್‌ ರಾವ್‌ ಅವರು ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದು, ಆರ್ಡಿಯ ಕಮಲಾಕ್ಷ ರಾವ್‌ ಹಾಗೂ ಹೇಮಲತಾ ರಾವ್‌ ದಂಪತಿಯ ಪುತ್ರ.

2014ರ ಅನಂತರ ಮೊದಲಿಗರು
2014ರ ಅನಂತರ ಕಾಂಚನ ಜುಂಗಾ ಶಿಖರವೇರುತ್ತಿರುವವರ ಪೈಕಿ ಹರ್ಷದ್‌ ಮೊದಲಿಗರು. ಕಾರಣ ಕಾಂಚನಜುಂಗಾ ಶಿಖರವೇರಲು ಹಲವು ಮಂದಿ ಪ್ರಯತ್ನಪಟ್ಟರೂ ಕೂಡ ಯಾರೂ ಅದರಲ್ಲಿ ಸಫಲತೆ ಕಂಡಿರಲಿಲ್ಲ. 2016ರಲ್ಲಿಯೂ ಅನೇಕ ಮಂದಿ ಪರ್ವತಾವೇರಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.


ಎವರೆಸ್ಟ್‌ಗಿಂತ ಯಾಕೆ ಕೆ-2 ಕಷ್ಟ?

ಪರ್ವತಾರೋಹಣದಲ್ಲಿ ಯಾವಾಗಲೂ ಸವಾಲು ಹವಾಮಾನ. ಮಂಜುಗಡ್ಡೆ ಯಾವಾಗ ಕರಗುತ್ತದೋ ಗೊತ್ತಾಗುವುದಿಲ್ಲ. ಎವರೆಸ್ಟ್‌ಗೆ ಏರಿದಾಗಲೂ ಆಕ್ಸಿಜನ್‌ ರೆಗ್ಯುಲೇಟರ್‌ ಕೈ ಕೊಟ್ಟಿತ್ತು. ಆದರೂ ಬೇರೆಯವರ ಸಹಾಯದಿಂದ ಶಿಖರವೇರಿದ್ದರು. ಕೆ-2 ನಲ್ಲೂ ಅದೇ ರೀತಿ ಆಕ್ಸಿಜನ್‌ ಸಮಸ್ಯೆ ಕಾಡಿತ್ತು. ಶಿಖರವೇರುವಾಗ 4 ಹಂತಗಳಿದ್ದು, ಅದರಲ್ಲಿ ಕೊನೆಯ ಸಮ್ಮಿಟ್‌ (ಮುಕ್ತಾಯ) ಎನ್ನುವ ಹಂತದಿಂದ ಕೆ-2ನ ತುತ್ತತುದಿಗೆ 1,200 ಮೀ. ಎತ್ತರವಿದ್ದರೆ, ಅದೇ ಎವರೆಸ್ಟ್‌ನಲ್ಲಿ ಇದು ಸುಮಾರು 300 ಮೀ. ಎತ್ತರದ ಕಡಿಮೆ ಇರುತ್ತದೆ. ಆ ಕಾರಣದಿಂದ ಕೆ-2 ಶಿಖರವೇರುವುದು ತ್ರಾಸದಾಯಕ ಎಂದು ಹರ್ಷದ್‌ ತಮ್ಮ ಪರ್ವತಾರೋಹಣದ ಅನುಭವವನ್ನು ಬಿಚ್ಚಿಡುತ್ತಾರೆ. ಹರ್ಷದ್‌ ರಾವ್‌ ಅವರು ವಿಶ್ವದ ಎರಡು ಶ್ರೇಷ್ಠ ಶಿಖರಗಳನ್ನು ಏರಿ, ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಕರಾವಳಿಗರಿಗೆ ಮಾತ್ರವಲ್ಲದೆ, ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

ಎವರೆಸ್ಟ್‌ಗಿಂತ ಕೆ-2ಗೇರುವುದು ಕಷ್ಟ
12 ಗಂಟೆ ಶಿಖರವೇರಿ, 13 ಗಂಟೆ ಅವರೋಹಣ ಮಾಡುವುದು ತ್ರಾಸದಾಯಕವಾದ ಕೆಲಸ. ನಾನು ಒಂದು ಹಂತದಲ್ಲಿ ಸಂಪೂರ್ಣ ಬಸವಳಿದು ಹೋಗಿದ್ದೆ. ಆದರೂ ಗುರಿ ತಲುಪಿ ತ್ರಿವರ್ಣ ಧ್ವಜವನ್ನು ಕಾಂಚನಜುಂಗಾದ (ಕೆ-2) ತುತ್ತತುದಿಯಲ್ಲಿ ಹಾರಿಸಿದ್ದು, ಆ ಎಲ್ಲ ಆಯಾಸ, ಬಳಲಿಕೆಯನ್ನು ತಿಳಿಗೊಳಿಸಿತು. ಮೌಂಟ್‌ ಎವರೆಸ್ಟ್‌ ವಿಶ್ವದ ಎತ್ತರದ ಶಿಖರವಾಗಿದ್ದರೂ, ಕಾಂಚನಜುಂಗಾವನ್ನು ಹತ್ತುವುದು ಅಷ್ಟು ಸುಲಭವಲ್ಲ.
– ಹರ್ಷದ್‌ ರಾವ್‌

Advertisement

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next