Advertisement

Karataka Damanaka Movie Review; ಕಿಲಾಡಿ ಜೋಡಿಯ ಮಸ್ತ್ ಕಮಾಲ್‌!

10:35 AM Mar 09, 2024 | Team Udayavani |

ಅವರಿಬ್ಬರು ಬಾಲ್ಯದ ಸ್ನೇಹಿತರು. ಮಾತಿನಲ್ಲೇ ಎದುರಿಗಿರುವ ಎಂಥವರನ್ನೂ ಮೋಡಿ ಮಾಡ ಬಲ್ಲ ಮಹಾನ್‌ ಚಾಲಾಕಿಗಳು. ನರ ಜನಗಳ ನಡುವೆಯೇ ಇದ್ದು ನರಿಗಳಂತೆ ಹೊಂಚು ಹಾಕಿ ಅಂದುಕೊಂಡಿದ್ದನ್ನು ಸಾಧಿಸ ಬಲ್ಲ ಕಿಲಾಡಿಗಳು. ಬೋಳು ತಲೆಯಂತೆ ಗುಂಡಾಗಿರುವ ಭೂಮಿಯಲ್ಲಿ ಸಿಕ್ಕ ಸಿಕ್ಕವರಿಗೆ ಟೋಪಿ ಹಾಕುವುದು ತಪ್ಪಲ್ಲ ಎಂಬ ಮಾತನ್ನು ಅಕ್ಷರಶಃ ಚಾಚೂ ತಪ್ಪದೆ ಪಾಲಿಸುವ ಈ ಸ್ನೇಹಿತರು ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡು ಜೈಲು ಪಾಲಾಗಿರುತ್ತಾರೆ. “ಕರಟಕ ದಮನಕ’ ಎಂಬ ಕುತಂತ್ರಿ ನರಿಗಳ ಪ್ರತಿರೂಪ ಎಂದೇ ಕರೆಸಿಕೊಳ್ಳುವ ಈ ಜೋಡಿಯ “ಪ್ರತಿಭೆ’ ಕಂಡ ಜೈಲರ್‌, ಅವರನ್ನು ತನ್ನ ಕೆಲಸವೊಂದನ್ನು ಮಾಡಿಸಿಕೊಳ್ಳುವ ಸಲುವಾಗಿ ಪೆರೋಲ್‌ ಮೇಲೆ ಹೊರಗೆ ಬಿಡುತ್ತಾನೆ. ಹೀಗೆ ಜೈಲಿನಿಂದ ಹೊರಬಂದ “ಕರಟಕ ದಮನಕ’ ಉತ್ತರ ಕರ್ನಾಟಕದ ಬರದ ಹಳ್ಳಿ ನಂದಿಕೋಲೂರಿನತ್ತ ಹೆಜ್ಜೆ ಹಾಕುತ್ತಾರೆ. ಆನಂತರ ನಿಧಾನವಾಗಿ “ಕರಟಕ ದಮನಕ’ ಎಂಬ ನರರೂಪದ ನರಿಗಳ ಅಸಲಿ ಆಟ ಶುರುವಾಗುತ್ತದೆ. ನೋಡ ನೋಡುತ್ತಿದ್ದಂತೆ ಅಲ್ಲೊಂದಷ್ಟು ಕೌತುಕ, ವಿಸ್ಮಯಗಳು ತೆರೆದುಕೊಳ್ಳುತ್ತದೆ.

Advertisement

ಇದು ಈ ವಾರ ತೆರೆಗೆ ಬಂದಿರುವ “ಕರಟಕ ದಮನಕ’ ಸಿನಿಮಾದ ಕಥೆಯ ಒಂದು ಎಳೆ. ಆರಂಭದಲ್ಲಿಯೇ ಹೇಳಿರುವಂತೆ, ಕಥೆಗಳಲ್ಲಿ ಬರುವ “ಕರಟಕ ದಮನಕ’ ಎಂಬ ಎರಡು ಕುತಂತ್ರಿ ನರಿಗಳ ಗುಣಾವಗುಣಗಳನ್ನು ಇಟ್ಟು ಕೊಂಡು ಅದೇ ಹೆಸರಿನಲ್ಲಿ ಸಿನಿಮಾವಾಗಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌. ಇವಿಷ್ಟು ಹೇಳಿದ ಮೇಲೆ ಇದೊಂದು ಹೊಂಚು ಹಾಕಿ ಕಾರ್ಯ ಸಾಧಿಸಬಲ್ಲವರ ಆಟ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನರರನ್ನು ನರಿಗಳಿಗೆ ಹೋಲಿಸಿ ಮನರಂಜನೆಯ ಜೊತೆ ಜೊತೆಗೇ ಒಂದು ಮನಮುಟ್ಟುವ ಕಥೆಯನ್ನು ಹೇಳಿರುವ ನಿರ್ದೇಶಕ ಯೋಗರಾಜ್‌ ಭಟ್‌ ಪ್ರಯತ್ನ ತೆರೆಮೇಲೆ ಬಹುತೇಕ ಯಶಸ್ವಿಯಾಗಿದೆ. ಹಾಡು, ಸಂಭಾಷಣೆ ಮತ್ತು ದೃಶ್ಯಗಳಲ್ಲಿ ಉತ್ತರ ಕರ್ನಾಟಕದ ಸೊಗಡನ್ನು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ ಭಟ್ಟರು. ಸಿನಿಮಾ ಓಟ ಇನ್ನಷ್ಟು ಹೆಚ್ಚಾಗಿರುತ್ತಿತ್ತು. ಚಿತ್ರದಲ್ಲಿ ಇವತ್ತು ಇಡೀ ರಾಜ್ಯವನ್ನು ಕಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ ಹೇಳಲಾಗಿದೆ. ಜೊತೆಗೆ ಊರು, ಊರಿನ ಮಹತ್ವ ಸೇರಿದಂತೆ ಹಲವು ಅಂಶಗಳು ಪ್ರೇಕ್ಷಕರನ್ನು ಕಾಡುವುದರಲ್ಲಿ ಅನುಮಾನವಿಲ್ಲ.

ಇನ್ನು “ಕರಟಕ ದಮನಕ’ ಎಂಬ ಎರಡು ಕುತಂತ್ರಿ ನರಿಗಳ ಗುಣವಿರುವ ಪಾತ್ರಗಳಲ್ಲಿ ನಟರಾದ ಶಿವರಾಜಕುಮಾರ್‌ ಮತ್ತು ಪ್ರಭುದೇವ ಜೋಡಿ ತೆರೆಮೇಲೆ ಸೈ ಎನಿಸಿ ಕೊಂಡಿದೆ. ಶಿವರಾಜಕುಮಾರ್‌ ತಮ್ಮ ಲುಕ್‌, ಮ್ಯಾನರಿಸಂನಿಂದ ಗಮನ ಸೆಳೆದರೆ, ಪ್ರಭು ದೇವ ಡ್ಯಾನ್ಸ್‌ ಮತ್ತು ಡೈಲಾಗ್‌ ಡೆಲಿವರಿ ಮಾಡುವ ಶೈಲಿಯಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ರವಿಶಂಕರ್‌, ತನಿಕೆಲ್ಲ ಭರಣಿ ತಮ್ಮ ಅಭಿನಯಕ್ಕೆ ಫ‌ುಲ್‌ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ನಟಿಯರಾದ ಪ್ರಿಯಾ ಆನಂದ್‌, ನಿಶ್ವಿ‌ಕಾ ನಾಯ್ಡು ಇಬ್ಬರೂ ಅಂದ ಮತ್ತು ಅಭಿನಯ ಎರಡರಲ್ಲೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ.

ಥಿಯೇಟರಿನಿಂದ ಹೊರಗೂ ಗುನುಗುವಂತೆ ಎರಡು-ಮೂರು ಹಾಡುಗಳು, ಕ್ಯಾಚಿಯಾಗಿರುವ ಸಾಹಿತ್ಯದ ಸಾಲುಗಳು, ಛಾಯಾಗ್ರಹಣ, ಅದ್ಧೂರಿ ಮೇಕಿಂಗ್‌ ಎಲ್ಲವೂ “ಕರಟಕ ದಮನಕ’ ಸಿನಿಮಾದ ತಾಂತ್ರಿಕ ಹೈಲೈಟ್ಸ್‌ ಅಂಶಗಳು ಎನ್ನಬಹುದು. ಬಿಗ್‌ಸ್ಟಾರ್‌ ಕಾಸ್ಟಿಂಗ್‌, ಹಾಡು, ಡ್ಯಾನ್ಸ್‌, ಆ್ಯಕ್ಷನ್‌, ಕಾಮಿಡಿ ಹೀಗೆ ಎಲ್ಲ ಥರದ ಅಂಶಗಳನ್ನು ಇಟ್ಟುಕೊಂಡು ಬಂದಿರುವ “ಕರಟಕ ದಮನಕ’ ಒಂದಷ್ಟು ಮನರಂಜನೆ ನೀಡುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.

 ಜಿ.ಎಸ್‌.ಕಾರ್ತಿಕ ಸುಧನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next