Advertisement

ನಾಡೋಜ ಕವಿ ನಡೆದ ಕಣಿವೆ ಹಾದಿ; ಅಪ್ಪಟ ದೇಶಿ ಮನೆತನದ ಪ್ರತಿಭೆ

05:36 PM Feb 17, 2022 | Team Udayavani |
1949ರಲ್ಲಿ ಪ್ರಕಟವಾದ "ಕಾವ್ಯಾಕ್ಷಿ', 1950ರಲ್ಲಿ ಪ್ರಕಟವಾದ "ಭಾವಜೀವಿ' ಸಂಗ್ರಹಗಳಲ್ಲಿ ಈ ಅಂಶಗಳನ್ನೂ ಗುರುತಿಸಬಹುದು. 1953ರಲ್ಲಿ ಕಣವಿಯವರ ಮೂರನೆಯ ಕವಿತಾ ಸಂಗ್ರಹ "ಆಕಾಶಬುಟ್ಟಿ' ಪ್ರಕಟವಾಯಿತು. ಅಡಿಗರ ನವ್ಯಕಾವ್ಯದ ಪ್ರಭಾವ ಆ ಕಾಲದ ಎಲ್ಲ ಕವಿಗಳನ್ನು ಆವರಿಸಿ ಕೊಂಡಿದ್ದಾಗಲೂ ಅಡಿಗರ ಕಾವ್ಯ ಪ್ರವಾಹದ ಸೆಳೆತ ದಲ್ಲಿ ಕೊಚ್ಚಿ ಹೋಗದಷ್ಟು ಸಂಯಮವನ್ನು ಕಣವಿ ಸಾಧಿಸಿಕೊಂಡಿದ್ದರು. ಹೀಗಾಗಿಯೇ ಭಿನ್ನವಾಗಿ ಕಾವ್ಯ ರಚಿಸಲು ಸಾಧ್ಯವಾಯಿತು.ಕಣವಿಯವರು ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಧಾಟಿಯಲ್ಲಿ ಬರೆದರು. ದಾಂಪತ್ಯ, ಮಕ್ಕಳು, ನಿಸರ್ಗವನ್ನು ಕುರಿತು, ಅಷ್ಟೇಕೆ, ಪ್ರಾಣಿ-ಪಕ್ಷಿಗಳನ್ನು ಕುರಿತೂ ಅವರು ಕವಿತೆಗಳನ್ನು ಬರೆದಿದ್ದಾರೆ. 1960ರಲ್ಲಿ "ಮಣ್ಣಿನ ಮೆರವಣಿಗೆ' ಪ್ರಕಟವಾಗುವ ವೇಳೆಗೆ ಕಣವಿ ಅವರ ಕಾವ್ಯವ್ಯಕ್ತಿತ್ವ ಸಾಕಷ್ಟು ಮಾಗಿತ್ತು...
Now pay only for what you want!
This is Premium Content
Click to unlock
Pay with

ಅಪ್ಪಟ ದೇಶಿ ಮನೆತನದಿಂದ ಬಂದ ನಾಡೋಜ ಡಾ|ಚೆನ್ನವೀರ ಕಣವಿ, ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928, ಜೂ.28ರಂದು ಜನಿಸಿದರು. ತಂದೆ ಸಕ್ಕರೆಪ್ಪ – ತಾಯಿ ಪಾರ್ವತವ್ವ. ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೇ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿದ ಕಣವಿ, 1952ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂಎ ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. 1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು.ಧಾರವಾಡದ ಪ್ರಕೃತಿ, ಸಾಂಸ್ಕೃತಿಕ ವಾತಾವರಣ ಮತ್ತು ಸಾಹಿತ್ಯದ ನೆಲೆಯಲ್ಲಿ ಗಟ್ಟಿಯಾಗಿ ಬೇರೂರಲು ಸಹಾಯಕ್ಕೆ ಬಂದಿದ್ದು ಅಂದಿನ ನವೋದಯದ ಕಾವ್ಯ ರಚನೆ ಕಾಲ.

Advertisement

ಕುವೆಂಪು, ಬೇಂದ್ರೆ, ಮಧುರಚೆನ್ನರ ಸಾಹಿತ್ಯವು ಅಂದಿನ ಯುವ ಸಾಹಿತಿಗಳನ್ನು ಸಮ್ಮೊಹಿಸಿದ ಕಾಲಘಟ್ಟವದು. ಕವಿ ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂತಹ ಪ್ರಭಾವಗಳ ನೆಲೆಯನ್ನು ಗುರುತಿಸಬಹುದು. ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ.

1949ರಲ್ಲಿ ಪ್ರಕಟವಾದ “ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ “ಭಾವಜೀವಿ’ ಸಂಗ್ರಹಗಳಲ್ಲಿ ಈ ಅಂಶಗಳನ್ನೂ ಗುರುತಿಸಬಹುದು. 1953ರಲ್ಲಿ ಕಣವಿಯವರ ಮೂರನೆಯ ಕವಿತಾ ಸಂಗ್ರಹ “ಆಕಾಶಬುಟ್ಟಿ’ ಪ್ರಕಟವಾಯಿತು. ಅಡಿಗರ ನವ್ಯಕಾವ್ಯದ ಪ್ರಭಾವ ಆ ಕಾಲದ ಎಲ್ಲ ಕವಿಗಳನ್ನು ಆವರಿಸಿ ಕೊಂಡಿದ್ದಾಗಲೂ ಅಡಿಗರ ಕಾವ್ಯ ಪ್ರವಾಹದ ಸೆಳೆತ ದಲ್ಲಿ ಕೊಚ್ಚಿ ಹೋಗದಷ್ಟು ಸಂಯಮವನ್ನು ಕಣವಿ ಸಾಧಿಸಿಕೊಂಡಿದ್ದರು. ಹೀಗಾಗಿಯೇ ಭಿನ್ನವಾಗಿ ಕಾವ್ಯ ರಚಿಸಲು ಸಾಧ್ಯವಾಯಿತು.

ಕಣವಿಯವರು ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಧಾಟಿಯಲ್ಲಿ ಬರೆದರು. ದಾಂಪತ್ಯ, ಮಕ್ಕಳು, ನಿಸರ್ಗವನ್ನು ಕುರಿತು, ಅಷ್ಟೇಕೆ, ಪ್ರಾಣಿ-ಪಕ್ಷಿಗಳನ್ನು ಕುರಿತೂ ಅವರು ಕವಿತೆಗಳನ್ನು ಬರೆದಿದ್ದಾರೆ. 1960ರಲ್ಲಿ “ಮಣ್ಣಿನ ಮೆರವಣಿಗೆ’ ಪ್ರಕಟವಾಗುವ ವೇಳೆಗೆ ಕಣವಿ ಅವರ ಕಾವ್ಯವ್ಯಕ್ತಿತ್ವ ಸಾಕಷ್ಟು ಮಾಗಿತ್ತು.

ಕಣವಿಯವರ ಸಾಹಿತ್ಯ ಕೃಷಿ
ಕವನ ಸಂಕಲನಗಳು
ಕಾವ್ಯಾಕ್ಷಿ , ಭಾವಜೀವಿ , ಆಕಾಶಬುಟ್ಟಿ , ಮಧುಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲ-ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಚಿರಂತನ ದಾಹ, ಜೀವಧ್ವನಿ, ಹಕ್ಕಿಪುಚ್ಚ, ಕಾರ್ತೀಕದ ಮೋಡ , ಹೊಂಬೆಳಕು, ಜೀನಿಯಾ, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ, ಹೂ ಹೊರಳುವವು ಸೂರ್ಯನ ಕಡೆಗೆ

Advertisement

ಪ್ರಬಂಧ ಸಂಕಲನಗಳು
ಸಾಹಿತ್ಯ ಸಿಂಚನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ

ಶಿಶು ಸಾಹಿತ್ಯ
ಚಿಣ್ಣರ ಲೋಕವ ತೆರೆಯೋಣ, ಹಕ್ಕಿಪುಕ್ಕ

ಸಂಪಾದನೆ
ಕನ್ನಡದ ಕಾಲು ಶತಮಾನ, ಸಿದ್ಧಿ ವಿನಾಯಕ ಮೋದಕ, ಕವಿತೆಗಳು

ಸಂಪಾದನೆ (ಇತರರೊಂದಿಗೆ)
ನವಿಲೂರು ಮನೆಯಿಂದ, ನವ್ಯದ ಧ್ವನಿ, ನೈವೇದ್ಯ, ನಮ್ಮೆಲ್ಲರ ನೆಹರೂ, ಜೀವನ ಸಿದ್ಧಿ, ಆಧುನಿಕ ಕನ್ನಡ ಕಾವ್ಯ, ಸುವರ್ಣ ಸಂಪುಟ, ರತ್ನ ಸಂಪುಟ, ಬಾಬಾ ಫ‌ರೀದ

ವಿದೇಶದಲ್ಲಿ ಪುರಸ್ಕಾರ
2006ರಲ್ಲಿ ಅಮೆರಿಕದ ಮೇರಿಲ್ಯಾಂಡ್‌ನ‌ ಬಾಲ್ಟಿಮೋರ್‌ನಲ್ಲಿ ನಡೆದ 4ನೇ ವಿಶ್ವ ಕನ್ನಡ ಸಮ್ಮೇಳನ (ಅಕ್ಕ ಸಮ್ಮೇಳನ)ಕವಿಗೋಷ್ಠಿಯ ಅಧ್ಯಕ್ಷತೆ, 2010ರ ದುಬಾೖ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

ಕವಿ ಮತ್ತು ಶ್ರೀ ಸಾಮಾನ್ಯ!
ಆರು ದಶಕಕ್ಕೂ ಹೆಚ್ಚು ಕಾಲ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದವರು ಕಣವಿ. ಅವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಗಳ ಸಂಖ್ಯೆ ಸಾವಿರಕ್ಕೆ ತಲುಪಿರಬಹುದು ಎನ್ನುವವರುಂಟು. ಸಾಹಿತ್ಯದ ವೇದಿಕೆಗಳಲ್ಲಂತೂ ಎಂದೆಂದಿಗೂ ಅವರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಅವರನ್ನು ನೂರಾರು ಸಂಘ-ಸಂಸ್ಥೆಗಳು ಅಭಿನಂದಿಸಿವೆ, ಗೌರವಿಸಿವೆ. ಸಾಹಿತ್ಯದ ತವರೂರಾದ ಧಾರವಾಡಕ್ಕೆ ಸರಕಾರ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡದೇ ಇದ್ದಾಗ ಪತ್ರಿಕೆಗಳ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದ ಕಣವಿಯವರು, ಏಕಕಾಲಕ್ಕೆ ಕವಿ ಮತ್ತು ಶ್ರೀಸಾಮಾನ್ಯನಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಿದ್ದರು.

ವಿವಾದಗಳಿಂದ ದೂರವಿದ್ದರು
ಸಮಕಾಲಿನ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಕಣವಿಯವರು ಅತ್ಯಂತ ಸೌಮ್ಯ ದಾಟಿಯಲ್ಲೇ ವ್ಯಕ್ತಪಡಿಸುತ್ತಿದ್ದರು. ಕೆಲವು ಬಾರಿ ಅವರ ಮಾತುಗಳು ವಿವಾದದ ಕೇಂದ್ರ ಬಿಂದುವಾಗಿದ್ದೂ ಉಂಟು. ಆದರೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆ ಎಂದಿಗೂ ಕಣವಿ ಅವರು ಸಾರ್ವಜನಿಕ ಟೀಕೆಗೆ ಗುರಿಯಾದ ಉದಾಹರಣೆ ಇಲ್ಲ. ಡಾ| ಕಲಬುರ್ಗಿ ಹತ್ಯೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಮಠಗಳ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ, ಶರಣರ ಕುರಿತ ವಿವಾದಾತ್ಮಕ ಕೃತಿಗಳು ಪ್ರಕಟವಾದಾಗಲೂ ಸಹ ಕಣವಿಯವರು ಅತ್ಯಂತ ಸೌಮ್ಯವಾಗಿಯೇ ತಮ್ಮ ಅನಿಸಿಕೆಯನ್ನು ದಾಖಲಿಸುತ್ತಿದ್ದರು.

ಅರಸಿ ಬಂದ ಪ್ರಶಸ್ತಿ – ಬಹುಮಾನ
ಆಕಾಶಬುಟ್ಟಿ ಕವನ ಸಂಕಲನಕ್ಕೆ ಮುಂಬಯಿ ರಾಜ್ಯದ ಪ್ರಥಮ ಬಹುಮಾನ (1955), ದೀಪಧಾರಿ ಹಾಗೂ ನೆಲ-ಮುಗಿಲು ಕವನ ಸಂಕಲನಕ್ಕೆ ವಿಶಾಲ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಇಲಾಖೆ ಬಹುಮಾನ (1957-1966), ಜೀವಧ್ವನಿ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1982), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1985), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1989), ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಪೌರ ಸಮ್ಮಾನ (1996), 1996ರಿಂದ 1998ರ ವರೆಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಂಸ್ಕೃತಿ ಇಲಾಖೆಯ ಫೆಲೋಶಿಪ್‌, ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ (1999), ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್‌ (2002), ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್‌ ಪದವಿ (2004), ಬಸವರಾಜ ಮನಸೂರ ಪ್ರಶಸ್ತಿ (2006), ಕರ್ನಾಟಕ ಕವಿರತ್ನ ಪ್ರಶಸ್ತಿ (2006), ಕಾಯಕ ಶ್ರೀ ಪ್ರಶಸ್ತಿ (2008), ಉಡುಪಿ ಪೇಜಾವರ ಮಠದಿಂದ ಶ್ರೀಕೃಷ್ಣ ಪ್ರಶಸ್ತಿ, ಬೇಂದ್ರೆ ರಾಷ್ಟ್ರೀಯ ಕಾವ್ಯ ಪ್ರಶಸ್ತಿ (2010), ಧಾರವಾಡ ಮುರುಘಾಮಠದಿಂದ ಮೃತ್ಯುಂಜಯ- ಮಹಾಂತ ಪ್ರಶಸ್ತಿ (2013), ದೂರದರ್ಶನದ ಚಂದನ ಪ್ರಶಸ್ತಿ (2014), ವಿ.ಕೃ.ಗೋಕಾಕ ಪ್ರಶಸ್ತಿ (2014), ಆಳ್ವಾಸ್‌ ನುಡಿಸಿರಿ ದಶಮಾನೋತ್ಸವ ಸಮ್ಮಾನ (2014), ದುಬಾೖ ಕನ್ನಡ ರತ್ನ ಪ್ರಶಸ್ತಿ (2018), 2019ರಲ್ಲಿ ರಾಜ್ಯದ ನೃಪತುಂಗ ಪ್ರಶಸ್ತಿಗೆ ಕವಿ ಕಣವಿ ಭಾಜನರಾಗಿದ್ದಾರೆ.

ಭಾವಗೀತೆಗಳ ಧ್ವನಿಸುರುಳಿ
1992ರಲ್ಲಿ ಜಿ.ವಿ.ಅತ್ರಿ ಸಂಗೀತ ನಿರ್ದೇಶನದ “ಮಲ್ಲಿಗೆ ದಂಡೆ’, ಲಹರಿ ಕಂಪೆ‌ನಿಯ “ಒಂದು ಮುಂಜಾವಿನಲಿ’, ಜಯಶ್ರೀ ಅರವಿಂದ್‌ ಸಂಗೀತ ನಿರ್ದೇಶನದ “ಮಧು ಕೋಗಿಲೆ’, ಮೃತ್ಯುಂಜಯ ದೊಡವಾಡ ಸಂಗೀತ ನಿರ್ದೇಶನದಲ್ಲಿ “ಬರುವುದೆಲ್ಲ ಬರಲಿ ಬಿಡು’ ಧ್ವನಿ ಸುರುಳಿಗಳು ಬಿಡುಗಡೆಗೊಂಡಿವೆ. ರಾಜ್ಯ ವಾರ್ತಾ ಇಲಾಖೆ ಹಾಗೂ ಮೈಸೂರಿನ ಭಾಷಾ ಸಂಸ್ಥೆಯಿಂದ ಕಣವಿ ಅವರ ಸಾಕ್ಷéಚಿತ್ರ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.