Advertisement

Kannada Rajyotsava: ಉದ್ಯಾನನಗರಿಯ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವದ ಸಡಗರ

09:58 AM Nov 02, 2023 | Team Udayavani |

ಬೆಂಗಳೂರು: ಗಲ್ಲಿ-ಗಲ್ಲಿಗಳಲ್ಲಿ ಅನುರಣಿಸಿದ ಕನ್ನಡ ಡಿಂಡಿಮ, ಹೆಸರಾದ ಕರ್ನಾಟಕ- ಉಸಿರಾದ ಕನ್ನಡ, ಅನ್ಯ ಭಾಷಿಕರೇ ಇರುವ ಬೀದಿಗಳಲ್ಲೂ ಬೆಳಗಿದ ಕರು  ನಾಡ ದೀಪ, ಎಲ್ಲೆಡೆ ಕನ್ನಡಾಂಬೆಯ ಆರಾಧನೆ, ನಾಡಿನ ಹಬ್ಬಕ್ಕೆ ವಧುವಿನಂತೆ ಸಿಂಗಾರಗೊಂಡಿದ್ದ ರಾಜಧಾನಿ. – 68ನೇ ಕನ್ನಡ ರಾಜ್ಯೋತ್ಸವದಲ್ಲಿ ನಗರದಲ್ಲಿ ಕಂಡುಬಂದ ದೃಶ್ಯಗಳಿವು. ಕನ್ನಡದ ಹಬ್ಬವನ್ನು ಬುಧವಾರ ನಗರದಾದ್ಯಂತ ಸಡಗರದಿಂದ ಆಚರಿಸಲಾಯಿತು.

Advertisement

ಬಿಎಂಟಿಸಿ ಬಸ್‌ಗಳು, ಆಟೋಗಳು ಕನ್ನಡ ಧ್ವಜ ಧರಿಸಿಕೊಂಡು ಊರು ಸುತ್ತುವ ಮೂಲಕ ರಾಜ್ಯೋತ್ಸವ ಆಚರಿಸಿದರೆ, ನಿಲ್ದಾಣಗಳು, ರಸ್ತೆ ಬದಿಯ ಅಂಗಡಿಗಳು, ನಗರದ ವಿವಿಧ ಬಡಾವಣೆಗಳ ಮಹಾದ್ವಾರಗಳನ್ನು ಹಳದಿ-ಕೆಂಪು ಮಿಶ್ರಿತ ಬಣ್ಣ ಬಳಿದು, ಹೂವಿನಿಂದ ಸಿಂಗರಿಸಲಾಗಿತ್ತು. ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದ ನಾಡು-ನುಡಿಗೆ ಸಂಬಂಧಿಸಿದ ಗೀತೆಗಳು ಕೇಳುಗರಲ್ಲಿ ನಾಡಿನ ಬಗ್ಗೆ ಸ್ವಾಭಿಮಾನ ಕೆರಳಿಸುವಂತೆ ಮಾಡಿದವು.

ನಗರದ ಪ್ರಮುಖ ಸಭಾಂಗಣಗಳು, ರಂಗಮಂದಿರಗಳು, ಉದ್ಯಾನಗಳು ಕನ್ನಡಾಂಬೆಯ ಸ್ಮರಣೆಗೆ ಮೀಸಲಾಗಿದ್ದವು. ಕನ್ನಡದ ಸೇವೆ ಮಾಡಿದವರಿಗೆ ಸನ್ಮಾನ, ಗೀತ ಗಾಯನ, ನೃತ್ಯ ರೂಪಕ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳ ಮೂಲಕ ಕನ್ನಡ ಮನಸ್ಸುಗಳು ರಾಜ್ಯೋತ್ಸವ ಆಚರಿಸಿದವು. ಸಿಹಿ ಹಂಚಿ ಸಂಭ್ರಮಿಸಿದರು.

ಸೆಂಟ್ರಲ್‌ ಕಾಲೇಜು ಹಳೆಯ ವಿದ್ಯಾರ್ಥಿಗಳಸಂಘ: ಬೆಂಗಳೂರು ಸೆಂಟ್ರಲ್‌ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕಚೇರಿ ಆವರಣದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಿವೃತ್ತ ಇತಿಹಾಸ ಪ್ರಾಧ್ಯಾಪಕಿ ಶ್ಯಾಮಲಾ ರತ್ನಕುಮಾರಿ ಧ್ವಜಾರೋಹಣ ನೆರವೇರಿಸಿದರು.

ಸಂಘದ ಅಧ್ಯಕ್ಷ ನಿವೃತ್ತ ಹಿರಿಯ ಪೋಲೀಸ್‌ ಅಧಿಕಾರಿ ಡಾ.ಕೆ. ಶ್ರೀನಿವಾಸನ್‌, ಕಾರ್ಯದರ್ಶಿ ಎಂ.ವಿ. ಮುನಿರತ್ನಪ್ಪ, ಖಜಾಂಚಿ ಡಿ.ನಂ. ವೆಂಕಟರಮಣಯ್ಯ, ವಸಂತ ಕವಿತಾ ಉಪಸ್ಥಿತರಿದ್ದರು.

Advertisement

ನಾಡು- ನುಡಿಗಾಗಿ ಶ್ರಮಿಸಿದ ಐವರು ಹಿರಿಯರನ್ನು ಸನ್ಮಾನಿಸಲಾಯಿತು.

ಮಹಾಲಕ್ಷ್ಮೀ ಲೇಔಟ್‌: ಕ್ಷೇತ್ರದ ಶಾಸಕರ ಭವನದಲ್ಲಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಶಾಸಕ ಕೆ. ಗೋಪಾಲಯ್ಯ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಜಯರಾಮಣ್ಣ, ವೆಂಕಟೇಶ್‌ಮೂರ್ತಿ, ವೆಂಕಟೇಶ್‌ ನಿಸರ್ಗ ಮತ್ತಿತರರು ಇದ್ದರು. ಇದೇ ವೇಳೆ ಕ್ಷೇತ್ರದ 200ಕ್ಕೂ ಹೆಚ್ಚಿನ ಕ್ಷಯ ರೋಗಿಗಳಿಗೆ ಉಚಿತ ಆರೋಗ್ಯ ಕಿಟ್‌ ವಿತರಿಸಲಾಯಿತು.

ಬಿಜೆಪಿ ಕಚೇರಿಯಲ್ಲಿ ರಾಜ್ಯೋತ್ಸವ: “ಹೊರರಾಜ್ಯ, ಹೊರದೇಶಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷೆ ಮಾತನಾಡುವವರಿಗೆ ನಾವು ಕನ್ನಡ ಕಲಿಸಬೇಕು’ ಎಂದು ಸಂಸದ ಪಿ.ಸಿ. ಮೋಹನ್‌ ಮನವಿ ಮಾಡಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಎಂಎಲ್‌ ಎ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಹೆಗಡೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಜಿ. ಮಂಜುನಾಥ್‌ ಇತರರಿದ್ದರು.

ಗೆಳೆಯರ ಬಳಗದಿಂದ ರಾಜ್ಯೊತ್ಸವ: “ಕರ್ನಾಟಕ ಸುವರ್ಣ ಮಹೋತ್ಸವದ ನೆನಪಿಗಾಗಿ ಬೆಂಗಳೂರಿನಲ್ಲಿ ರಾಜ್ಯದ ಭವ್ಯ ಇತಿಹಾಸ, ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ “ಸಮಗ್ರ ಕರ್ನಾಟಕ ದರ್ಶನ ಉದ್ಯಾನ’ ನಿರ್ಮಿಸಬೇಕು ಎಂದು ಬಳಗ ಒತ್ತಾಯಿಸಿದೆ. ಬಸವನಗುಡಿ ನ್ಯಾಷನಲ್‌ ಸ್ಕೂಲ್‌ ವೃತ್ತದಲ್ಲಿರುವ ಬಿ.ಎಂ.ಶ್ರೀ ಅವರ ಪತ್ರಿಮೆ ಎದುರು ಕನ್ನಡ ಚಿಂತನ ಸಭೆ ನಡೆಯಿತು.

ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಆರ್‌. ಲಕ್ಷ್ಮೀನಾರಾಯಣ್‌ ಮಾತನಾಡಿ, ಕನ್ನಡದ ಅಭಿಮಾನವೊಂದೇ ಸಾಲದು; ಕನ್ನಡ ನಮ್ಮ ಅಸ್ಮಿತೆ, ಅಕ್ಕರೆಗಳ ಸೆಲೆಯಾಗಬೇಕು ಎಂದರು.

ಬಿಎಂಆರ್‌ಸಿಎಲ್‌: ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ 200ಕ್ಕೂ ಹೆಚ್ಚು ನೌಕರರು ಸ್ವಯಂಪ್ರೇರಿತವಾಗಿ ರಕ್ತದನ ಮಾಡಿದರು. ಕಾರ್ಯಕ್ರಮವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಉದ್ಘಾಟಿಸಿದರು. ಕಾರ್ಯ ನಿರ್ವಹಣಾ ನಿರ್ದೇಶಕ ಎ.ಎಸ್‌. ಶಂಕರ್‌, ಬಿ.ಎಲ್‌. ಯಶವಂತ್‌ ಚವ್ಹಾಣ್‌, ಶಶಿಕಾಂತ್‌ ಇತರರಿದ್ದರು.

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ರಾಜ್ಯೋತ್ಸವ:

ಕರ್ನಾಟಕ ಸಂಭ್ರಮ- 50ರ ಅಂಗವಾಗಿ ಹೆಸರಾಯಿತು ಕರ್ನಾಟಕ – ಉಸಿರಾಗಲೀ ಕನ್ನಡ ಘೋಷವಾಕ್ಯದಡಿ ನಿಗಮದ ಕೇಂದ್ರ ಕಚೇರಿ ಆವರಣದಲ್ಲಿ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಕಚೇರಿಯಲ್ಲಿ ತಾಯಿ ಭುವನೇಶ್ವರಿ ದೇವಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನುºಕುಮಾರ್‌ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ಡಾ.ಕೆ. ನಂದಿನಿದೇವಿ, ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಎಂಟಿಸಿ: ಕನ್ನಡ-ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕರ್ನಾಟಕ ಸಂಭ್ರಮ- 50 (ಹೆಸರಾಯಿತು ಕರ್ನಾಟಕ – ಉಸಿರಾಗಲೀ ಕನ್ನಡ) ಅಂಗವಾಗಿ ಗೀತ ಗಾಯನ ಕಾರ್ಯಕ್ರಮ ಸಂಸ್ಥೆಯ ಕೇಂದ್ರ ಕಚೇರಿ ಆವರಣದಲ್ಲಿ ವಿಶಿಷ್ಟವಾಗಿ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ತಯಾರಿಸಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಛಾಯಾಚಿತ್ರ, ಸಂಸ್ಥೆಯ 25 ವರ್ಷಗಳ ರಜತ ಮಹೋತ್ಸವದ ಚಿತ್ರ ಹಾಗೂ ಸರ್ಕಾರದ “ಶಕ್ತಿ’ ಯೋಜನೆ ಸಂದೇಶವಿರುವ ಸ್ತಬ್ದ ಚಿತ್ರ ಸಿದ್ಧಪಡಿಸಲಾಗಿತ್ತು. ಕೇಂದ್ರ ಕನ್ನಡ ಕ್ರಿಯಾ ಸಮಿತಿ ಗೌರವ ಅಧ್ಯಕ್ಷ ಡಾ. ಮನು ಬಳಿಗಾರ, ಅಧ್ಯಕ್ಷತೆ ವಹಿಸಿದ್ದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆ ಪ್ರತಿಭಾ ಪುರಸ್ಕಾರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next