Advertisement

ಮಹಾರಾಷ್ಟ್ರದ ಗಡಿವರೆಗೆ ಕನ್ನಡ ಪಾದಯಾತ್ರೆ

04:35 PM Oct 30, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಕಡೆಗಣಿಸಿ ಪರಭಾಷೆಯ ವ್ಯಾಮೋಹ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಯುವಕನೊಬ್ಬ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಶ್ರೀಭುವನೇಶ್ವರಿ ದೇವಿಯ ಮಂದಿರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆಉದ್ಯೋಗದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲು ಹಾವೇರಿ ಜಿಲ್ಲೆಯ ಯುವಕನೊಬ್ಬ ಪಾದಯಾತ್ರೆ ಆರಂಭಿಸಿದ್ದಾರೆ.

Advertisement

ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ತಾಲೂಕಿನ ಮುಗುಳಿ ಗ್ರಾಮದ ಮಂಜುನಾಥ್‌ ಬದ್ರಿಶೆಟ್ಟಿ ಎಂಬವರು ರಾಜ್ಯದ ಗಡಿ ಪ್ರದೇಶವಾದ ಕಾಂಚನಪಲ್ಲಿಯಿಂದ ಮಹಾರಾಷ್ಟ್ರದ ನಿಪ್ಪಾಣಿ ಗಡಿವರೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ನೆರೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಟಾಳಿಕೆ ನಿಲ್ಲಿಸಬೇಕು, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಬೇಕು,ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ತಾಲೂಕು ಕೇಂದ್ರಗಳಲ್ಲಿ ಶ್ರೀಭುವನೇಶ್ವರಿ ತಾಯಿಯ ಮಂದಿರ ನಿರ್ಮಿಸುವ ಉದ್ದೇಶದೊಂದಿಗೆ ಕನ್ನಡ ಧ್ವಜ, ವಸ್ತ್ರಗಳನ್ನು ಧರಿಸಿ ಪಾದಯಾತ್ರೆ ಆರಂಭಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಪ್ರದೇಶವಾಗಿರುವ ಕಾಂಚನಪಲ್ಲಿ (ಆಂಧ್ರಪ್ರದೇಶದ ಹಿಂದೂ ಪುರಕ್ಕೆ ಹೊಂದುಕೊಂಡಿರುವ) ಪಾದಯಾತ್ರೆಯನ್ನು ಗುರು ವಾರದಿಂದ ಆರಂಭಿಸಿ ಈಗಾಗಲೇ 60 ಕಿ.ಮೀ. ಕ್ರಮಿಸಿದ್ದಾರೆ. ಈ ಮಾರ್ಗದಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರು ಸ್ವಾಭಿಮಾನಿ ಕನ್ನಡಿಗನಿಗೆ ಆದರದ ಸ್ವಾಗತ ಕೋರಿ ಕೈಲಾದಷ್ಟು ನೆರವು ನೀಡುವ ಮೂಲಕ ಪ್ರೋತ್ಸಾಹಿಸಿ ಬೀಳ್ಕೊಡುತ್ತಿದ್ದಾರೆ.

ಮನೆ ಮಗನಾಗಿ ಆರೈಕೆ: ಜಿಲ್ಲೆಯ ಗಡಿ ಪ್ರದೇಶದಿಂದ ಪಾದಯಾತ್ರೆ ಆರಂಭಿಸಿರುವ ಕನ್ನಡಿಗನಿಗೆ ಮಾರ್ಗ ಮಧ್ಯೆ ಮನೆ ಮಗನಾಗಿ ಆರೈಕೆ ಮಾಡುತ್ತಿದ್ದಾರೆ. ಕೇವಲ ಗಡಿವರೆಗೆ ಮಾತ್ರವಲ್ಲದೆ ಅದರ ಮುಂದೆಯೂ ಪಾದಯಾತ್ರೆ ಮುಂದು ವರಿಸಲು ಆಯಾಸ ಆಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪದವೀಧರ: ಬಿಎ, ಬಿಎಡ್‌ ಪದವಿ ಪಡೆದಿರುವ ಮಂಜುನಾಥ್‌ ಬದ್ರಿಶೆಟ್ಟಿ, ಶಿಗ್ಗಾಂವ್‌ ತಾಲೂಕಿನ ಗುಡ್ಡಿಗೋಡಿ ಜಾನಪದ ವಿವಿಯಲ್ಲಿ ಎಂಎ (ದ್ವಿತೀಯ ವರ್ಷ) ವ್ಯಾಸಂಗ ಮಾಡುತ್ತಿದ್ದಾರೆ. ಯುವಕರು ಕನ್ನಡ ಅಭಿಮಾನ ಮೈಗೂಡಿಸಿಕೊಂಡು ಕನ್ನಡಪರ ಚಳ ವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪದವಿಗೆ ತಕ್ಕಂತೆ ಉದ್ಯೋಗ ಬಯಸದೆ ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಂಡರೆ ಮುಂದಿನ ದಿನಗಳಲ್ಲಿ ದೇವರು ಒಳ್ಳೆಯದನ್ನು ಮಾಡುತ್ತಾನೆಂದು ತಿಳಿಸಿದರು.

Advertisement

ಘೋಷಣೆಗಳು: ಕನ್ನಡ ವಿಶ್ವ ಲಿಪಿಗಳ ರಾಣಿ. ಕನ್ನಡಿಗರು ಕನ್ನಡಕ್ಕಾಗಿ ದಿಲ್ಲಿಯವರೆಗೆ ಅಲ್ಲ, ಗಲ್ಲಿಗೆ ಹೋಗಲೂ ಸಿದ್ಧರು. ಕನ್ನಡಿಗರು ನಾಡು ನುಡಿ ಸಾಹಿತ್ಯ, ಸಂಸ್ಕೃತಿಗಾಗಿ ತಮ್ಮ ರಕ್ತವನ್ನೇ ಹರಿಸಲು ಸಿದ್ಧರೆಂದರೆ ತಾಯಿ ಮತ್ತು ತಾಯ್ನಾಡು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರೆಂದು ಜಗತ್ತಿಗೆ ಸಾರಲು ಹೊರಟಿದ್ದೇನೆ’ ಎಂಬ ಘೋಷಣೆಗಳೊಂದಿಗೆ ಕನ್ನಡ ಫ‌ಲಕಗಳನ್ನು ಹಿಡಿದು ಪಾದಯಾತ್ರೆ ಮಾಡುತ್ತಿದ್ದಾರೆ.

ಮಂದಿರ, ಶಾಲೆಯಲ್ಲಿ ವಿಶ್ರಾಂತಿ :  ಪಾದಯಾತ್ರೆ ಆರಂಭಿಸಿ ಸಂಜೆ ವೇಳೆಗೆ ಯಾವುದಾದರು ಒಂದು ಹಳ್ಳಿ ಅಥವಾ ನಗರ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಲು ಗುಡಿ ಮತ್ತು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಪಾದಯಾತ್ರೆಯ ಅನುಭವಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿರುವ ಮಂಜುನಾಥ್‌ ಬದ್ರಿಶೆಟ್ಟಿ, ಈಗಾಗಲೇ ಜಿಲ್ಲೆಯ ಗೌರಿಬಿದನೂರಿನಲ್ಲಿ ನಾಗರಿಕರು 2,500 ರೂ. ಸಹಾಯ ಮಾಡಿದ್ದಾರೆ. ನನ್ನ ಪಾದಯಾತ್ರೆ ಸಂದರ್ಭದಲ್ಲಿ ನಾಗರಿಕರು ನೀಡುವ ದೇಣಿಗೆಯನ್ನು ಕೊನೆಯಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದರು.

ಕ‌ನ್ನಡ ಭಾಷೆ ಮತ್ತು ಕನ್ನಡಿಗರ ಮೇಲಿನ ಅಭಿಮಾನದಿಂದ ಪಾದಯಾತ್ರೆ ಆರಂಭಿಸಿದ್ದೇನೆ. ಈಗಾಗಲೇ ಒಂದು ಬಾರಿ ಕನ್ನಡಿಗರಿಗೆ ನ್ಯಾಯ ಒದಗಿಸಲು ರಕ್ತದಿಂದ ಪತ್ರ ಬರೆದಿದ್ದೇನೆ. ಕನ್ನಡಕ್ಕಾಗಿ ಪ್ರಾಣ ತ್ಯಾಗ ಮಾಡಲೂ ಸಿದ್ಧನಿದ್ದೇನೆ. ಈಗಾಗಲೇ “ಅನುಭವದ ಅಲೆಗಳು’ ಎಂಬ 52 ಪುಟಗಳ ಕೃತಿಯನ್ನು ರಕ್ತದಲ್ಲಿ ಬರೆದಿದ್ದು ಕಸಾಪ ಅಧ್ಯಕ್ಷರಿಗೆ ಹಸ್ತಾಂತರ ಮಾಡುತ್ತೇನೆ. ಮಂಜುನಾಥ್‌ ಬದ್ರಿಶೆಟ್ಟಿ, ಪಾದಯಾತ್ರೆ ಕೈಗೊಂಡವರು

 

ಎಂ.ಎ.ತಮೀಮ್‌ಪಾಷ

Advertisement

Udayavani is now on Telegram. Click here to join our channel and stay updated with the latest news.

Next