Advertisement

ಕನ್ನಡ ಇದು ನಮ್ಮ ಮೂಲ ಆಸ್ತಿ. ಅದು ಕ್ಷೀಣಿಸಬಾರದು :ಇಟಗಿ

01:20 PM Feb 14, 2021 | Team Udayavani |

ಧಾರವಾಡ: ಕನ್ನಡ ಇದು ನಮ್ಮ ಮೂಲ ಆಸ್ತಿ. ಅದು ಕ್ಷೀಣಿಸಬಾರದು. ಈ ನಿಟ್ಟಿನಲ್ಲಿ ‌ನಮ್ಮ ಪ್ರಯತ್ನ ಇರಬೇಕು. ಕನ್ನಡದ ಬಗೆಗೆ ನಮಗಿರಬೇಕಾದ ನಿಷ್ಠೆ ಬದ್ದತೆ ನಿತ್ಯ ಜೊತೆಗಿರಬೇಕು ಎಂದು ಧಾರವಾಡ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನಾಧ್ಯಕ್ಷರಾದ ಮಕ್ಕಳ ಸಾಹಿತಿ ಲಿಂಗಣ್ಣ ಕುಂಟಿ ( ಇಟಗಿ)  ಹೇಳಿದರು.

Advertisement

ತಾಲೂಕಿನ ಇಟಿಗಟ್ಟಿ ಗ್ರಾಮದಲ್ಲಿ ಧಾರವಾಡ ತಾಲೂಕು ಕಸಾಪ ಘಟಕದಿಂದ ಹಮ್ಮಿಕೊಂಡಿದ್ದ ಧಾರವಾಡ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕನ್ನಡವಿದು ನಮ್ಮೆದೆಯ ಭಾಷೆಯಿದು ಎಂಬಂತೆ ನಮ್ಮ ಕನ್ನಡ ಭಾಷೆಯು ನಮ್ಮದೆಯ ಭಾಷೆಯಾಗಬೇಕು. ಮನೆತನದ ಪಾಯವಾಗಬೇಕು. ಈ‌ ನಿಟ್ಟಿನಲ್ಲಿ ಪ್ರಾದೇಶಿಕ ( ಮಾತೃಭಾಷೆ) ಭಾಷೆಯಲ್ಲಿ 1 ರಿಂದ 5ನೇಯ ತರಗತಿವರೆಗಿನ ಮಕ್ಕಳಿಗೆ ಕೊಡುವ ಶಿಕ್ಷಣ ಭದ್ರ ಬುನಾದಿ ನೀಡುತ್ತದೆ‌ ಎಂದರು.

ಇದು ಭಾಷೆಯ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿಕೊಳ್ಳಲು ತುಂಬಾ ಸಹಕಾರಿ. ಬದಲಾವಣೆ ಬೇಕೆನ್ನುವ ಅನಿವಾರ್ಯತೆಯಲ್ಲಿಯೂ ಮಾತೃಭಾಷೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ಇರಬೇಕೆನ್ನುವ ಬಗ್ಗೆ ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದರು.

ಅಸಂಖ್ಯಾತ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಸಂಖ್ಯೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿಲ್ಲ. ಹೀಗಾಗಿ ಶಿಕ್ಷಕರ ನೇಮಕಾತಿ ಚುರುಕುಗೊಳ್ಳಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಕಂಡು ಬರುವ ಕೊರತೆಗಳನ್ನು ನೀಗಿಸಬೇಕು ಎಂದರು.

Advertisement

ಇದನ್ನೂ ಓದಿ:ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ನದಿಯಲ್ಲಿ ಹೆಣವಾಗಿ ಪತ್ತೆ

ಶಾಲಾ ಕಟ್ಟಡಕ್ಕೆ ಕೇವಲ ಸುಣ್ಣ ಬಣ್ಣ ಬಳಿದು ಚಂದಗೊಳಿಸಿದರೆ ಸಾಲದು‌. ವರ್ಗದ ಕೋಣೆಗಳಲ್ಲಿಯ ಪ್ರಗತಿ ಹೆಚ್ಚಾಗಬೇಕು. ರಾಷ್ಟ್ರದ ಭವಿಷ್ಯ ಶಾಲಾ ಕೋಣೆಗಳಲ್ಲಿ ರೂಪಿತಗೊಳ್ಳುತ್ತದೆ. ಅದು ರಾಷ್ಟ್ರ ನಿರ್ಮಾಣದಲ್ಲಿ ಸಿಂಹಪಾಲು ಹೊಂದಿರುವ ಶಿಕ್ಷಕರಿಂದ ಮಾತ್ರ ಎನ್ನುವುದನ್ನು ಚೆನ್ನಾಗಿ ಮನಗಾಣಬೇಕು ಎಂದರು.

ಧಾರವಾಡ ತಾಲೂಕು ಸಾಹಿತ್ಯ ಪರಿಷತ್ತು, ಧಾರವಾಡ ಶಹರವನ್ನು ಒಳಗೊಂಡು ಬಹಳ ದೊಡ್ಡ ವ್ಯಾಪ್ತಿ‌ ಹೊಂದಿದೆ. ಆದರೆ ಶಹರದಲ್ಲಿಯೇ ಹೆಚ್ಚು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುವುದರಿಂದ ಗ್ರಾಮೀಣ ಭಾಗಕ್ಕೆ ಕೊಡಬೇಕಾದಷ್ಟು ಅವಕಾಶ ಸಿಗುತ್ತಿಲ್ಲ. ಈ ಕಾರಣದಿಂದ ಧಾರವಾಡ ಶಹರವನ್ನು ಒಂದು‌ ಸಾಹಿತ್ಯ ಘಟಕವನ್ನಾಗಿಸಿ ಧಾರವಾಡ ತಾಲೂಕಿನ ಹಳ್ಳಿಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವ ಹಾಗೇ ಕ್ರಮ‌ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಿರ್ಜೀವ ವಸ್ತುಗಳಿಗೆ ಕೃತಕ ಜೀವ ತುಂಬಿ ಅದರಿಂದ ಭವಿಷ್ಯ ರೂಪಿಸುವುದು ಸದ್ಯದ ಆಘಾತಕಾರಿ ಅಂಶ. ಅಂತರ್ಜಾಲ (ಆನ್ ಲೈನ್) ಶಿಕ್ಷಣದ ತೊಳಲಾಟದಿಂದ ಮಕ್ಕಳನ್ನು ಪಾರು ಮಾಡುವಲ್ಲಿ ಶಿಕ್ಷಣ ತಜ್ಞರು, ಪಾಲಕರು, ಪೋಷಕರು ಚಿಂತನೆ ಮಾಡುವ ಅವಶ್ಯಕ ಎಂದು ನುಡಿದರು.

ಸಮ್ಮೇಳನ ಉದ್ಘಾಟಿಸಿದ ಕಲಬುರ್ಗಿ ಕೇಂದ್ರೀಯ ವಿಶ್ರಾಂತ ಕುಲಪತಿ ಡಾ.ಎಚ್.ಎಂ.ಮಹೇಶ್ವರಯ್ಯ ಮಾತನಾಡಿ, ಕನ್ನಡ ಪ್ರಜ್ಞೆಯನ್ನು ವಿಶ್ವದ ಪ್ರಜ್ಞೆಯನ್ನಾಗಿ ಮಾಡಬೇಕಿದೆ ಎಂದರು‌.

ಸಾವಿರಾರು ಇತಿಹಾಸ ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಆದರೆ ಅದಕ್ಕೆ ತಕ್ಕಂತೆ ಕೆಲಸ ಆಗುತ್ತಿಲ್ಲ. ವಿಳಂಬ ಆಗುತ್ತಿದೆ. ಅದಕ್ಕಾಗಿ ಕನ್ನಡವನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಕಾರ್ಯ ಆಗಬೇಕು. ಅದಕ್ಕಾಗಿ ಒಂದು ಸಚಿವಾಲಯ ಮಾಡಬೇಕಿದೆ ಎಂದರು.

ವಿಶ್ವದ ಭೂಪಟದಲ್ಲಿ ಕನ್ನಡ ಗುರುತಿಸುವಂತೆ ಮಾಡಲು ಕನ್ನಡವನ್ನು ಡಿಜಿಟಲೀಕರಣ ಮಾಡಿ ತಂತ್ರಜ್ಞಾನಕ್ಕೆ ಅಳವಡಿಸುವ ತುರ್ತು ಅಗತ್ಯವಿದೆ. ಕನ್ನಡವನ್ನು ವಿಶ್ವದ ಶಕ್ತಿ, ಜ್ಞಾನ ಕೋಶದ‌ ಶ್ರೇಷ್ಠ ಭಾಷೆಯನ್ನಾಗಿ‌ ಮಾಡಲು ಕನ್ನಡಕ್ಕಾಗಿ ಕನ್ನಡಲ್ಲಿಯೇ ಪ್ರತ್ಯೇಕ‌ ವಿಕಿಪೀಡಿಯಾ ರೂಪಿಸುವ ಅಗತ್ಯವಿದೆ ಎಂದರು.

ನಿಕಟಪೂರ್ವ ಅಧ್ಯಕ್ಷರಾದ ಡಾ.ರಾಜೇಶ್ವರಿ ಮಹೇಶ್ವರಯ್ಯ, ಮಾಜಿ ಶಾಸಕಿ ಸೀಮಾ ಮಸೂತಿ, ತಾ.ಪಂ.ಅಧ್ಯಕ್ಷ ರವಿವರ್ಮ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ತಾಲೂಕಾಧ್ಯಕ್ಷ ಎಫ್.ಬಿ.ಕಣವಿ ಇದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ಚಕ್ಕಡಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜರುಗಿತು. ಈ ಮೆರವಣಿಗೆಯಲ್ಲಿ ಕಲಾತಂಡಗಳು ಪಾಲ್ಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next