Advertisement

ಕನ್ನಡಕ್ಕೆ ಅನ್ಯಾಯ ಸಹಿಸುವುದಿಲ್ಲ : ಪುಂಡರೀಕಾಕ್ಷ

06:15 AM May 27, 2018 | Team Udayavani |

ಕಾಸರಗೋಡು: ಭಾಷೆ, ಸಂಸ್ಕೃತಿಗೆ ಅಪಾಯ ಬಂದಾಗ ಯಾವ ರೀತಿ ನಾವು ಒಗ್ಗೂಡುತ್ತೇವೆ ಎಂಬುದಕ್ಕೆ ಇಲ್ಲಿ ನೆರೆದಿರುವ ಮಹಿಳೆಯರೇ ಸಾಕ್ಷಿ. ಸಂಸ್ಕೃತಿಯ ಉಳಿವು ಎಂದರೆ ಭಾಷೆಯ ಉಳಿವು. ನಮಗೆ ಮಲಯಾಳ ಭಾಷೆ, ಸಂಸ್ಕೃತಿಯ ಬಗ್ಗೆ ವಿರೋಧವಿಲ್ಲ. ಕನ್ನಡಕ್ಕೆ ಅನ್ಯಾಯವನ್ನು ಸಹಿಸುವುದಿಲ್ಲ. ನಮ್ಮ ಹಕ್ಕು, ಸವಲತ್ತುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು ಯಾರ ವಿರುದ್ಧವೂ ಅಲ್ಲ. ಕಾಸರಗೋಡು ಬಹುಭಾಷೆಯನ್ನಾಡುವ ಜಿಲ್ಲೆ. ಇಲ್ಲಿ ನಾವೆಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಆದರೆ ಒಂದು ಭಾಷೆ, ಸಂಸ್ಕೃತಿಗೆ ಅನ್ಯಾಯವಾದರೆ ನಾವೆಲ್ಲ ಒಗ್ಗೂಡಿ ಪ್ರತಿಭಟಿಸುತ್ತೇವೆ. ಜಾತಿ, ಮತ, ಪಂಥ, ಪಕ್ಷವನ್ನು ಮೀರಿ ಭಾಷಾ ಅಲ್ಪಸಂಖ್ಯಾಕರ ಭಾಷೆ, ಸಂಸ್ಕೃತಿಗೆ ಅಪಾಯ ಬಂದಲ್ಲಿ ಹೋರಾಡುತ್ತೇವೆ ಎಂದು ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುಂಡರೀಕಾಕ್ಷ ಅವರು ಹೇಳಿದರು.

Advertisement

ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ನಾಲ್ಕನೇ ದಿನವಾದ ಶನಿವಾರದ ಚಳವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ನೀಡಿರುವ ಹಕ್ಕು, ಸವಲತ್ತುಗಳನ್ನು ಕಸಿಯಲು ಸಾಧ್ಯವಿಲ್ಲ. ನಮ್ಮ ಹಕ್ಕು, ಸವಲತ್ತುಗಳನ್ನು ಕಸಿಯಲು ಪ್ರಯತ್ನಿಸಿದರೆ ಅದರ ವಿರುದ್ಧ ಕೊನೆಯ ಉಸಿರಿನ ತನಕ ಹೋರಾಟ ನಿಲ್ಲದು. ಭಾಷಾ ಮಸೂದೆ ವಿಷದ ಗುಳಿಗೆ. ಈ ಮೂಲಕ ಕನ್ನಡಿಗರನ್ನು ಮೋಸ ಮಾಡಲು ಸರಕಾರ ಹೊರಟಿದೆ. ಕಾಸರಗೋಡಿನ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಈ ಮಸೂದೆಯನ್ನು ತಂದಿದೆ. ಇದರ ವಿರುದ್ಧ ಹಾಗೂ ನ್ಯಾಯಕ್ಕಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ನ್ಯಾಯಯುತ  ಹೋರಾಟ 
ಕಾಸರಗೋಡು ಸಂವಿಧಾನಬದ್ಧವಾಗಿ ಭಾಷಾ ಅಲ್ಪಸಂಖ್ಯಾತ ಪ್ರದೇಶ. ಇಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ವಿರುದ್ಧ ಯಾವುದೇ ಆದೇಶ ಬಂದರೂ ಅದರ ವಿರುದ್ಧ ಹೋರಾಟ ಮಾಡಿಯೇ ಸಿದ್ಧ. ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವವರಲ್ಲ. ದೇಶದಲ್ಲಿ ಸ್ವಾತಂತ್ರÂಕ್ಕಾಗಿ ಮಹಿಳೆಯರೂ ಹೋರಾಟದ ಮುಂಚೂಣಿಯಲ್ಲಿದ್ದರು. ಅದೇ ರೀತಿ ಕನ್ನಡ ಭಾಷೆ, ಸಂಸ್ಕೃತಿಗೆ ಅಡ್ಡಿಯಾದಾಗ ಮಹಿಳೆಯರು ಹಿಂದೆ ಸರಿಯುವುದಿಲ್ಲ ಎಂಬುದನ್ನು ಈ ಧರಣಿ ಸತ್ಯಾಗ್ರಹ ತೋರಿಸಿಕೊಟ್ಟಿದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಹೇಳಿದರು.

ಮನೆಯಿಂದಲೇ ಹೋರಾಟ ಆರಂಭ 
ಜೋಗುಳದಿಂದಲೇ ಕನ್ನಡತನವನ್ನು ರೂಢಿಸಿಕೊಳ್ಳಬೇಕು. ಕನ್ನಡ ಭಾಷೆ, ಸಂಸ್ಕೃತಿ ನಮ್ಮ ನರನಾಡಿಗಳಲ್ಲಿರ
ಬೇಕು. ಕನ್ನಡ ಪರ ಹೋರಾಟ ಮನೆಯಿಂದಲೇ ಆರಂಭವಾಗಬೇಕೆಂದು ಲೇಖಕಿ, ಕತೆಗಾರ್ತಿ ಶೀಲಾಲಕ್ಷಿ$¾ ಅವರು ಹೇಳಿದರು.

Advertisement

ಅಕಾಡೆಮಿ ಅಗತ್ಯವೇ 
ಕೇರಳ ಸರಕಾರ ತುಳು ಅಕಾಡೆಮಿ ಮತ್ತು ಪಾರ್ತಿಸುಬÛ ಯಕ್ಷಗಾನ ಕಲಾಕ್ಷೇತ್ರವನ್ನು ಆರಂಭಿಸಿದ್ದರೂ ಈ ಎರಡೂ ಸಂಸ್ಥೆಗಳೂ ಇದ್ದೂ ಇಲ್ಲದಂತಾಗಿವೆ. ಈ ಸಂಸ್ಥೆಗಳನ್ನು ಸೂಕ್ತ ಅನುದಾನ ನೀಡದೆ ಸತಾಯಿಸಲಾಗುತ್ತಿದೆ. ಈ ಕಾರಣದಿಂದ ಈ ಮೂಲಕ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಸದಸ್ಯರಾಗಿರುವ ಸತೀಶ ಅಡಪ ಸಂಕಬೈಲು ಅವರು ಹೇಳಿದರು. ಹೀಗಿರುವಾಗ ಕನ್ನಡ ಅಕಾಡೆಮಿ ಎಷ್ಟ ಅಗತ್ಯ ಎಂದು ಅವರು ಪ್ರಶ್ನಿಸಿದರು.

ಶಾಸಕರು ಧರಣಿ ಹೂಡಲಿ 
ಸಂವಿಧಾನಬದ್ಧವಾಗಿ ನೀಡಲಾದ ಹಕ್ಕು, ಸವಲತ್ತುಗಳನ್ನು ಕಸಿದು ಕೊಳ್ಳುತ್ತಿರುವ ಸರಕಾರದ ಧೋರಣೆಯ ವಿರುದ್ಧ ಹೋರಾಟ ನ್ಯಾಯ ಯುತವಾಗಿದೆ. ಮಂಜೇಶ್ವರ ಮತ್ತು ಕಾಸರಗೋಡಿನ ಶಾಸಕರು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮಲಯಾಳ ಕಡ್ಡಾಯಗೊಳಿಸುವ ತೀರ್ಮಾನದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ವಸತಿ ಮುಂದೆ ಧರಣಿ ಹೂಡಬೇಕು ಎಂದು ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ. ಎಂ.  ಅಶ್ರಫ್  ಹೇಳಿದರು.

ಶಾಸಕರು ಮತ್ತೆ ಭೇಟಿ 
ಕೇರಳ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸತ್ಯಾಗ್ರಹ ಚಪ್ಪರಕ್ಕೆ ಶನಿವಾರ ಮತ್ತೆ ಬಂದು ಸತ್ಯಾಗ್ರಹಿಗಳ ಜೊತೆ ಕುಳಿತು ಕನ್ನಡ ಪರ ಹೋರಾಟದಲ್ಲಿ ನಾನೂ ನಿಮ್ಮೊಂದಿಗಿದ್ದೇನೆ ಎಂದು ಶಾಸ ಕರು ಮತ್ತೆ ಭರವಸೆ ನೀಡಿದ್ದಾರೆ. ಅಗತ್ಯಬಿದ್ದಲ್ಲಿ ಮುಖ್ಯಮಂತ್ರಿಗಳ ವಸತಿಯ ಮುಂದೆ ಮಾತ್ರವಲ್ಲ ಅದಕ್ಕೂ ಮೇಲೆ ಧರಣಿ ಹೂಡಲು ಸಿದ್ಧ ಎಂದಿದ್ದಾರೆ.

ಬಿಲ್ಲವ ಸಂಘದ ಮುಂದಾಳು ಸರೋಜಿನಿ, ನ್ಯಾಯವಾದಿ ಥೋಮಸ್‌ ಡಿ’ಸೋಜಾ, ನಾರಾಯಣ ಹೆಗ್ಡೆ, ತಾರಾನಾಥ ಮಧೂರು, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್‌ ಮಾತನಾಡಿದರು. ಧರಣಿ ಸತ್ಯಾಗ್ರಹದಲ್ಲಿ ವಿಜಯಾ ಸುಬ್ರಹ್ಮಣ್ಯ ಅವರು ಅಧ್ಯಕ್ಷತೆ ವಹಿಸಿದರು. ಡಾ| ಯು.ಮಹೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಶನಿವಾರದ ಧರಣಿಯನ್ನು ಮಹಿಳೆಯರೇ ನಿರ್ವಹಿಸಿದರು. ಕನ್ನಡ ಪರ ಘೋಷಣೆ ಕೂಗಿ ಸರಕಾರದ ಭಾಷಾ ನೀತಿಯನ್ನು ಪ್ರತಿಭಟಿಸಿದರು.

ಚಿತ್ರ : ಶ್ರೀಕಾಂತ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next