Advertisement

ಕನ್ನಡ ವಿಭಾಗ ಮುಂಬಯಿ ವಿವಿಯಿಂದ ಪತ್ರಿಕೋದ್ಯಮ,ಸಾಹಿತ್ಯ ಸಂವಾದ

05:01 PM Mar 22, 2017 | Team Udayavani |

ಮುಂಬಯಿ: ಪತ್ರಕರ್ತನಲ್ಲಿ ಸಾಹಿತ್ಯದ ಅರಿವಿದ್ದರೆ ವರದಿಗಳು ಓದುಗರನ್ನು ಆಕರ್ಷಿಸುವುದು. ಆಕರ್ಷಕ ಮತ್ತು ಪಾರದರ್ಶಕತೆಯ ವರದಿಗಳೇ ಪತ್ರಕರ್ತನಿಗೆ ಪ್ರತಿಷ್ಠೆ  ತರುವುದು. ಪತ್ರಕರ್ತರು ವಿಷಯವನ್ನು ಅಪ್ಪಿ-ಒಪ್ಪಿಕೊಂಡು ಮುನ್ನಡೆದಾಗ ವರದಿ ಫಲಿಸುವುದು. ಕ್ರಿಯಾತ್ಮಕ 

Advertisement

ಪತ್ರಕರ್ತನಿಂದ ಸಕಾರಾತ್ಮಕ ಸುದ್ದಿ ಸಾಧ್ಯವಾಗಿದ್ದು, ಸಾಹಿತ್ಯ ಮತ್ತು ಪತ್ರಿಕೋದ್ಯಮ ಸಂಬಂಧ ಅನ್ಯೋನ್ಯತೆಯಿಂದ ಕೂಡಿದೆ ಎಂದು ಹಿರಿಯ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯ ಶ್ರೀಧರ್‌ ಉಚ್ಚಿಲ್‌ ನುಡಿದರು.

ಮಾ. 20ರಂದು ಕನ್ನಡ ವಿಭಾಗ ಮುಂಬಯಿ ವಿವಿ ಕನ್ನಡ ವಿಭಾಗದ ವತಿಯಿಂದ ಸಾಂತಾಕ್ರೂಜ್‌ ಪೂರ್ವ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‌ನ ರಾನಡೆ ಭವನದಲ್ಲಿ ಆಯೋಜಿಸಿದ್ದ “ಪತ್ರಿಕೋದ್ಯಮ ಮತ್ತು ಸಾಹಿತ್ಯ’ ವಿಚಾರಿತ ಸಾಹಿತ್ಯ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಸಂದರ್ಶನಗಳನ್ನು ಮಾಡುವಾಗ ಸಾಧಕರ ಸಾಧನೆಯ ಅರಿವು ಕಲೆ ಹಾಕುವುದು ಅತ್ಯವಶ್ಯವಾಗಿರುತ್ತದೆ. ಅಂತಹ ಸಂದರ್ಶನ ಸಫಲತೆಯಾಗಿ ಇತಿಹಾಸದ ಪುಟಗಳಲ್ಲಿ ಉಳಿಯಬಲ್ಲದು. ಇಲ್ಲವೇ ಸಂದರ್ಶನ ಅನವಶ್ಯ ಆಗಬಲ್ಲದು. ಇದನ್ನು ನಾನು ನನ್ನ ಸಂದರ್ಶಕರ ಅಂಕಣ ಪುಸ್ತಕ ಕಲಾಕ್ಷೇತ್ರದಲ್ಲಿ ಬಿತ್ತರಿಸಿದ್ದೇನೆ. ಸಂದರ್ಶನಗಳ ಸರಮಾಲೆ ನನ್ನ ಜೀವನಕ್ಕೆ ಕಳೆ ತಂದಿದೆ ಎಂದರು.

ಪತ್ರಕರ್ತರ ಸಂಘದ ಸಕ್ರಿಯ ಸದಸ್ಯ, ಅಂಕಣಕಾರ ಹಾಗೂ ದಿ| ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ವಿಜೇತ ಪತ್ರಕರ್ತ ನವೀನ್‌ ಕೆ. ಇನ್ನ ಮಾತನಾಡಿ, ನನ್ನ ಬರವಣಿಗೆಯ ಮೊದಲ ಲೇಖನವೇ ನನ್ನಲ್ಲಿ ಪತ್ರಕರ್ತನಾಗುವ ಉತ್ಸುಕತೆ ತುಂಬಿತು. ಪತ್ರಿಕೋದ್ಯಮದಲ್ಲಿ ಅಂಕಣಕಾರರು ಸ್ವತಂತ್ರವಾಗಿರುತ್ತಾರೆ. ಈ ವಿಭಾಗವನ್ನು ಎಂದೂ ಟೀಕೆ ಟಿಪ್ಪಣಿ, ನಿಂದಿಸಲು ಬಳಸುವುದು ಸಲ್ಲದು. ಬದಲಾಗಿ ಅಂಕಣಗಳು ಜನಜಾಗೃತಿ ಮೂಡಿಸಿ ಸಮಾಜ ತಿದ್ದುವಂತಾಗಬೇಕು ಎಂದರು.

ನಕಾರಾತ್ಮಕ ಅಲೋಚನೆಯಿಂದ ಪತ್ರಕರ್ತರು ದೂರವಿದ್ದಾಗ ಸಮಾಜವನ್ನು ತಿದ್ದಬಹುದು. ಘಟನೆಯ ಅನಂತರ ಪ್ರಕಟನೆ ಆಗುವುದರಿಂದ ತನಿಖಾತ್ಮಕ ವರದಿಗೆ ಪತ್ರಕರ್ತರು ಬದ್ಧರಾಗ
ಬೇಕು. ಸೂಕ್ತ ದಾಖಲೆಗಳನ್ನು ಸಂಗ್ರಹಿಸುವ ವರದಿಗಳು ಯಾವೊತ್ತೂ ಫಲಿಸುವುದು. ಪತ್ರಕರ್ತರು ನಿಷ್ಠೆವುಳ್ಳವರಾದರೆ ಪರಿಪಕ್ವ ಪತ್ರಕರ್ತರೆನಿಸಬಹುದು.  ವರದಿಗಾರರಲ್ಲಿ ಬಹುವಿಧ ವೈವಿಧ್ಯಗಳಿದ್ದು, ರಾಜಕೀಯ, ಅಪರಾಧ, ಕಾನೂನು, ವೈದ್ಯಕೀಯ, ಸಾರಿಗೆ, ಕಲೆ, ಕ್ರೀಡೆ, ಸಂಸ್ಕೃತಿ, ವಾಣಿಜ್ಯ, ವಿಜ್ಞಾನ, ಶಿಕ್ಷಣ, ಆಧ್ಯಾತ್ಮಿಕ, ಮನೋರಂಜನೆ, ಇತ್ಯಾದಿ

Advertisement

ಪ್ರಮುಖವು. ಇವುಗಳ ವ್ಯಾಪ್ತಿಗನುಗುಣವಾಗಿ ಪತ್ರಕರ್ತರು ಪಳಗಿದರೆ ಫಲವತ್ತಾದ ವರದಿ ಸಾಧ್ಯವಾಗುತ್ತದೆ. ಸದ್ಯ ಸಂಕ್ಷಿಪ್ತ ವರದಿಗಳೇ ಸೂಕ್ತ ವರದಿಗಳಾಗಿದ್ದು, ಇದಕ್ಕೆ ಭಾಷೆ ಮತ್ತು ಭಾಷಾ ಗೂಢಾರ್ಥದ ತಿಳಿವಳಿಕೆ ಅವಶ್ಯವಿದೆ ಎಂದು ಮೊಗ ವೀರ ಮಾಸಿಕದ ಮಾಜಿ ಸಂಪಾದಕ ಪತ್ರಕರ್ತರ ಸಂಘದ ಜತೆ ಕೋಶಾಧಿಕಾರಿ ಅಶೋಕ್‌ ಎಸ್‌. ಸುವರ್ಣ ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ,  ಶ್ರಮ ಸಾಧಿಸಿ ಗಳಿಸಿದ ಹೆಸರು ಎಂದಿಗೂ ಶಾಶ್ವತವಾಗಿರುತ್ತದೆ. ಇವತ್ತಿನ ಮೂರೂ ಸಂಪನ್ಮೂಲ ವ್ಯಕ್ತಿಗಳು ಲೋಕಮುಖಕ್ಕೆ ವರದಿಗಳನ್ನು ಬಿತ್ತರಿಸಿದವರು.  ಇವರು ಓದುಗರಿಗೆ ಲೇಸು ಭರಿಸುವ ಕಾಯಕಗೈದು ಮುಂಬಯಿಯಲ್ಲಿ ಕನ್ನಡ ಬೆಳೆಸಿ ಉಳಿಸಿದ ಹಿರಿಯ ವರದಿಗಾರರು. ಇಂದು ಮುಂಬಯಿಯಲ್ಲಿ ಕನ್ನಡ ಪತ್ರಿಕಾರಂಗ ದೊಡ್ಡ ಓದುಗ ವರ್ಗ ಬೆಳೆಸಿದ್ದು ಇದರ ಕೀರ್ತಿ ಇವರಿಗೂ ಸಲ್ಲುತ್ತದೆ. ಇವರು ಕನ್ನಡ ಪರಂಪರೆಯ ವಾರಸುದಾರರೂ ಹೌದು. ಮುಂದಿನ ದಿನಗಳಲ್ಲಿ ಇವರು ಕ್ರಿಯಾಶೀಲರಾದರೆ ಸಮಾಜವೂ ಕ್ರಿಯಾತ್ಮಕವಾಗಬಲ್ಲದು. ಸಂವಾದ ಸಾಧ್ಯವಾಗದಿದ್ದರೆ ಗುಮಾನಿ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಇಂತಹ ಸಾಹಿತ್ಯ ಸಂವಾದಗಳ ಅಗತ್ಯವಿದೆ. ಅದನ್ನು ಪ್ರಾಮಾಣಿಕವಾಗಿ ಕನ್ನಡ ವಿಭಾಗ ಮಾಡುತ್ತಿದೆ ಎಂದು ನುಡಿದರು. ಮೂವರು ಸಂಪನ್ಮೂಲ ವ್ಯಕ್ತಿಗಳನ್ನು ಸ್ವರ್ಣಪದಕವನ್ನಿತ್ತು ಕೃತಿಗೌರವದೊಂದಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜ್ಯೋತಿ ಎನ್‌. ಶೆಟ್ಟಿ, ಶಿವರಾಜ್‌ ಎಂ. ಜೆ, ಸುರೇಖಾ ಎಸ್‌. ದೇವಾಡಿಗ, ಕೆ. ಎ. ಮದಾಳೆ, ಎಚ್‌. ಪರಸಪ್ಪ, ಗಣಪತಿ ಕೆ. ಮೊಗವೀರ, ಕುಮುದಾ ಆಳ್ವ, ಅನಿತಾ ಎಸ್‌. ಶೆಟ್ಟಿ, ಗೀತಾ ಆರ್‌. ಎಸ್‌, ಶೀಲಾ ಎಲ್‌. ಆರ್‌,  ಸುರೇಖಾ ಹರಿಪ್ರಸಾದ್‌ ಶೆಟ್ಟಿ, ನಳಿನಾ ಪ್ರಸಾದ್‌ ಎಸ್‌, ಸುಕನ್ಯಾ ಪಾಟೀಲ, ಎಚ್‌. ಎಸ್‌. ಅಪರ್ಣಾ, ಹೇಮಾ ಎಸ್‌. ಅಮೀನ್‌, ಮಧುಸೂಧನ್‌ ರಾವ್‌, ಜಯ ಸಾಲ್ಯಾನ್‌, ಅನಿತಾ ಪೂಜಾರಿ ತಾಕೋಡೆ, ಅಮೃತಾ ಎ. ಶೆಟ್ಟಿ, ದಿನಕರ ಎನ್‌. ಚಂದನ್‌ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಕೆ. ಶೆಟ್ಟಿ ಪ್ರಾರ್ಥನೆಗೈದರು. ಡಾ| ರಮಾ ಉಡುಪ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next