Advertisement

ಎಚ್ಕೆ-ಸ್ಯಾಟ್ ಉಪಗ್ರಹ ಅಭಿವೃದ್ಧಿಗೆ ಯೋಜನೆ

09:54 AM Aug 28, 2019 | |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಬಾಹ್ಯಾಕಾಶದ ಸದ್ಬಳಕೆ ನಿಟ್ಟಿನಲ್ಲಿ ಇಸ್ರೋ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ 2023ರ ವೇಳೆಗೆ ‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದು ಹೈ.ಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ಕೆಸಿಸಿಐ) ಅಧ್ಯಕ್ಷ ಅಮರನಾಥ ಪಾಟೀಲ ಮತ್ತು ದೆಹಲಿಯ ಕ್ಸೋವಿಯನ್‌ ಬಾಹ್ಯಾಕಾಶ ಸಂಸ್ಥೆಯ ಅಂಕಿತ್‌ ಬಥೇಸಾ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಬಾಹ್ಯಾಕಾಶ ಕ್ಷೇತ್ರ ಮುಂಚೂಣಿಯಲ್ಲಿ ಸಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದ ಹಲವು ಸದುಪಯೋಗಳಿವೆ. ಹೈಕ ಭಾಗದಲ್ಲೂ ಬಾಹ್ಯಾಕಾಶ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಹೆಸರು ಮಾಡಬಲ್ಲ ಪ್ರತಿಭಾವಂತ ಯುವಕರಿದ್ದಾರೆ. ಆದರೆ, ಇಲ್ಲಿ ಅವರಿಗೆ ಸರಿಯಾದ ವೇದಿಕೆ ಸಿಗದ ಕಾರಣ ದೇಶ ಹಾಗೂ ಜಗತ್ತಿನ ದೊಡ್ಡ-ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮಲ್ಲೇ ಅವರಿಗೆ ಅವಕಾಶಗಳನ್ನು ಕಲ್ಪಿಸಿದಲ್ಲಿ ನಮ್ಮ ಭಾಗದ ಪ್ರಗತಿ ಸಾಧಿಸಲು ಸುಲಭವಾಗಲಿದೆ ಎಂದರು.

ಹೈ.ಕ ಭಾಗದ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಎರಡೂ ಕ್ಷೇತ್ರಗಳ ಅಭಿವೃದ್ಧಿಯಿಂದ ಆರೋಗ್ಯ, ಕೃಷಿ, ನೀರು ಮತ್ತು ನವೀಕರಿಸಬಹುದಾದ ಇಂಧನ ಮತ್ತು ಖನಿಜ ಸಂಪತ್ತು, ಮಾರುಕಟ್ಟೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲಿವೆ. ಇದಕ್ಕೆ ಬೇಕಾದ ಸಂಶೋಧನೆ ಹಾಗೂ ಆವಿಷ್ಕಾರಗಳು ಅನುಕೂಲವಾಗುವ ನಿಟ್ಟಿನಲ್ಲಿ ಎಚ್ಕೆಸಿಸಿಐ ಬಾಹ್ಯಾಕಾಶ ಸಂಸ್ಥೆಗಳು, ಉನ್ನತ ಶಿಕ್ಷಣ ಸಂಸ್ಥೆಗಳಾದ ಕೇಂದ್ರೀಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳೊಂದಿಗೆ ಸಹಕಾರ ಪಡೆಯುತ್ತಿದೆ ಎಂದು ಹೇಳಿದರು.

‘ಎಚ್ಕೆ-ಸ್ಯಾಟ್’ ಉಪಗ್ರಹ: ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಹೈ.ಕ ಪ್ರದೇಶದಲ್ಲಿ ವಿಫುಲವಾಗಿ ಲಭ್ಯವಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ, ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ನಡುವೆ ಎಚ್ಕೆಸಿಸಿಐ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಬಳಸಿಕೊಂಡು ‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಎಚ್ಕೆಸಿಸಿಐ ಅಂಗಸಂಸ್ಥೆಯಾದ ಹೈದ್ರಾಬಾದ ಕರ್ನಾಟಕ ಇನ್ನೋವೇಷನ್‌ ಮತ್ತು ಇನ್‌ಕ್ಯೂಬೇಷನ್‌ ಸೆಂಟರ್‌ (ಎಚ್ಕೆಐಐಸಿ) ಮತ್ತು ಇಸ್ರೋ, ಸಿಸ್ಕೋ, ಓರ್ಯಾಕಲ್ ಸಂಸ್ಥೆಗಳು ಕೈ ಜೋಡಿಸುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಚ್ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ, ಓರ್ಯಾಕಲ್ ಸಂಸ್ಥೆಯ ಸಿರೀಶ್‌, ತಜ್ಞರಾದ ಸಂದೀಪ, ಶಿವರಾಮೇಶ್ವರ ಗೌಡ, ಸಜ್ಜನ ಪಟ್ಟಣ ಶೆಟ್ಟಿ, ಸಿದ್ರಾಮಪ್ಪ ಮತ್ತು ಶರಣಬಸಪ್ಪ ಅಂಬೆಸಿಂಗೆ ಉಪಸ್ಥಿತರಿದ್ದರು.

Advertisement

‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಮೊದಲು ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಾಗುವುದು. ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಮತ್ತು ಆಸಕ್ತಿದಾಯಕ ವಿದ್ಯಾರ್ಥಿಗಳಿಗೆ 15 ದಿನಗಳ ತರಬೇತಿ ನೀಡಲಾಗುವುದು. ನಂತರ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಅವರವರ ಆಸಕ್ತಿಯ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಅಣಿಗೊಳಿಸಲಾಗುವುದು. ‘ಎಚ್ಕೆ-ಸ್ಯಾಟ್’ ಉಪಗ್ರಹ ಸಾಕಾರಗೊಂಡಲ್ಲಿ ಆರು ಸಾವಿರ ಜನರಿಗೆ ಉದೋಗ್ಯ ಸಿಗಲಿದೆ. •ಅಂಕಿತ್‌ ಬಥೇಸಾ,
 ಕ್ಸೋವಿಯನ್‌ ಬಾಹ್ಯಾಕಾಶ ಸಂಸ್ಥೆ

ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಈ ಭಾಗದ ಐವರು ಸಂಸದರು, ಶಾಸಕರೊಂದಿಗೆ ಚರ್ಚಿಸಲಾಗಿದೆ. ‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸಲು ಮೂರು ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ಎಚ್ಕೆಆರ್‌ಡಿಬಿ ಸಹಕಾರ ಕೋರಲಾಗುವುದು. ಉಪಗ್ರಹದ ಬಗ್ಗೆ ಚರ್ಚಿಸಲು ಅಕ್ಟೋಬರ್‌ನಲ್ಲಿ ಬೆಂಗಳೂರಿನ ಇಸ್ರೋದ ನಿರ್ದೇಶಕರಾದ ಡಾ| ವಿ.ಎಸ್‌. ಹೆಗ್ಡೆ ಕಲಬುರಗಿಗೆ ಆಗಮಿಸುವ ಸಾಧ್ಯತೆ ಇದೆ. ಜತೆಗೆ ಯುವಕರು ಕೈಜೋಡಿಸಿದರೆ 2023ರ ವೇಳೆಗೆ ‘ಎಚ್ಕೆ-ಸ್ಯಾಟ್’ ಉಪಗ್ರಹ ಅಭಿವೃದ್ಧಿ ಪಡಿಸುವ ವಿಶ್ವಾಸ ಇದೆ. •ಅಮರನಾಥ ಪಾಟೀಲ,
 ಅಧ್ಯಕ್ಷ, ಎಚ್ಕೆಸಿಸಿಐ

Advertisement

Udayavani is now on Telegram. Click here to join our channel and stay updated with the latest news.

Next