Advertisement

ಟ್ಯಾಕ್ಸೋನೊಮಿ ಪ್ರಭೆ “ಸೈಲೆಂಟ್‌ ಭಟ್‌’

12:16 AM Feb 12, 2022 | Team Udayavani |

ಆಗುಂಬೆಯಂತಹ ಪ್ರದೇಶದಲ್ಲಿ ತಾಯಿ ಮಂಗಗಳು ಮರಿ ಮಂಗಗಳೊಂದಿಗೆ ಓಡಾಡುತ್ತವೆ. ಎಲ್ಲ ತಾಯಿ ಮಂಗಗಳು, ಎಲ್ಲ ಮರಿ ಮಂಗಗಳು ಒಂದೇ ತೆರನಾಗಿ ಕಂಡು ಇವು ಆಯಾ ಮರಿ, ತಾಯಿಯನ್ನು ಗುರುತಿಸುವುದು ಹೇಗೆಂದು ಅಚ್ಚರಿ ಮೂಡಬಹುದು. ಅದೇ ವೇಳೆ ಎಲ್ಲ ಮನುಷ್ಯರೂ ಮಕ್ಕಳೂ ಒಂದೇ ತೆರನಾಗಿ ಮಂಗಗಳಿಗೆ ಕಂಡು ಇಷ್ಟು ಜನ ತಾಯಂದಿರು, ಅಪ್ಪಂದಿರು ಮಕ್ಕಳನ್ನು ಮತ್ತು ಮಕ್ಕಳು ತಂದೆ ತಾಯಿಯನ್ನು ಹೇಗೆ ಗುರುತಿಸುತ್ತಾರೆಂದು ಅವು ತಲೆ ಕೆರೆದುಕೊಳ್ಳಲೂಬಹುದು. ಇವೆಲ್ಲಕ್ಕಿಂತ ಸಸ್ಯಗಳಿಗೂ ಕುಟುಂಬ, ಪ್ರಭೇದ, ಜಾತಿ, ತಳಿ, ಹೆಣ್ಣು-ಗಂಡು ವರ್ಗೀಕರಣಗಳಿವೆ ಎಂದು ಕರಾರುವಾಕ್ಕಾಗಿ ಹೇಳುವುದು ಕುತೂಹಲ ತರುವುದಿಲ್ಲವೆ?

Advertisement

ಮನುಷ್ಯರಲ್ಲಿ ಜಾತಿ, ಕುಟುಂಬ, ತಳಿಗಳನ್ನು ಗುರುತಿಸಿದರೆ ಯಾರೂ ಅಚ್ಚರಿಪಡುವುದಿಲ್ಲ. ಸಸ್ಯಗಳಲ್ಲಿ ಈ ಪ್ರಭೇದಗಳ ಜಾಡು ಹಿಡಿದು ಜೀವಮಾನ ಪೂರ್ತಿ ಸವೆಸಿದ ಜಾಗತಿಕ ಸ್ತರದ ಸಸ್ಯವಿಜ್ಞಾನದ ಸಸ್ಯವರ್ಗೀಕರಣ ಶಾಸ್ತ್ರ (ಟ್ಯಾಕ್ಸೋನೊಮಿ) ವಿಜ್ಞಾನಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ|ಕೆ. ಗೋಪಾಲಕೃಷ್ಣ ಭಟ್‌ ನಮ್ಮ ನಡುವೆ ಸುದೀರ್ಘ‌ ಕಾಲದಿಂದ ಇದ್ದಾರೆ. ಕಾರ್ಯಮಗ್ನತೆಯವರಾದ ಕಾರಣ “ಸೈಲೆಂಟ್‌ ಭಟ್‌’ ಆದರು.

ಫೇಲ್‌ ಆದರೂ ಸಾಧನೆ ಸಾಧ್ಯ
ಕಾಸರಗೋಡು ಪೆರಡಾಲ ಕಾಕುಂಜೆಯವರಾದ ಭಟ್‌ರಲ್ಲಿದ್ದ ಮೇಧಾವಿತನ ಬಾಲ್ಯದಲ್ಲಿ ಕಂಡುಬಂದಿರಲಿಲ್ಲ. ಹತ್ತನೆಯ ತರಗತಿಯಲ್ಲಿ ಒಮ್ಮೆ ಫೇಲ್‌ ಕೂಡ ಆಗಿದ್ದರು. “ದಡ್ಡನಾಗಿಯೇ ಇದ್ದರೆ ಮುಂದೆ ಕಷ್ಟ’ ಎಂದು ಚಿಂತನೆ ನಡೆಸಿ ಮತ್ತೆ ಬೆಳೆದುನಿಂತ ಗೋಪಾಲಕೃಷ್ಣ ಭಟ್‌ ಹೆಮ್ಮರವಾಗಿರುವುದನ್ನು ಕಂಡಾಗ ಫೇಲ್‌ ಆಗುವವರು, ಸಾಮಾನ್ಯ ವಿದ್ಯಾರ್ಥಿಗಳೂ ನಿರಾಶೆ ಪಡಬೇಕಾಗಿಲ್ಲ ಎಂದು ಕಾಣುತ್ತದೆ.

ಸಸ್ಯಸಂಕುಲಗಳ ಲೋಕ
1600ರ ಬಳಿಕ ಸ್ವೀಡಿಶ್‌ನ ಸಸ್ಯಶಾಸ್ತ್ರಜ್ಞ ಲಿನೆಯಸ್‌ ಗಿಡಗಳಿಗೆ ನಾಮಕರಣ ಮಾಡುವುದನ್ನು ಆರಂಭಿಸಿದ. ಹೂವು ಬಿಡುವ (ಪುಷ್ಪವಂತ) ಸುಮಾರು 3.5 ಲಕ್ಷ ಸಸ್ಯ ಸಂಕುಲಗಳ ಸಹಿತ ಒಟ್ಟು 3.99 ಲಕ್ಷ ಸಂಕುಲಗಳಿವೆ. ಇವುಗಳಲ್ಲಿ ಆರು ಸಸ್ಯಗಳನ್ನು ಆ ಪಟ್ಟಿಗೆ ಒದಗಿಸಿದವರು ಡಾ|ಭಟ್‌. ಇವರು ಹುಲ್ಲುಗಳ ಅಧ್ಯಯನದಲ್ಲಿ ಎತ್ತಿದ ಕೈ. ಕರಾವಳಿಯಲ್ಲಿ 73 ಹುಲ್ಲಿನ ಜಾತಿ, 162 ಪ್ರಭೇದಗಳನ್ನು ಕರಾರುವಾಕ್ಕಾಗಿ ಗುರುತಿಸಿದ್ದಾರೆ. ಪ್ರತೀ ಹುಲ್ಲಿನ ತಳಿ ಭಟ್ಟರಿಗೆ ಕರತಲಾಮಲಕ. ಒಂದು ಹುಲ್ಲಿನ ಪೊದೆ ಕಂಡರೆ 400-500 ಪ್ರಭೇದಗಳಿರಬಹುದು. ಆದರೆ ಸಸ್ಯಶಾಸ್ತ್ರಜ್ಞರಿಗೂ ಇವೆಲ್ಲ ಒಂದೇ ತೆರನಾಗಿ ಕಂಡುಬರುತ್ತದೆ. ಭಟ್ಟರ ಕಣ್ಣಿಗೆ ಮಾತ್ರ ಇವು ಬೇರೆ ಬೇರೆ ಆಗಿ ತೆರೆದುಕೊಳ್ಳುತ್ತವೆ ಎನ್ನುತ್ತಾರೆ “ಟ್ಯಾಕ್ಸೋನೊಮಿ ಭಟ್ಟರ ಯಾನ’ ಕೃತಿಕಾರ, ಸಸ್ಯಶಾಸ್ತ್ರಜ್ಞ ಪ್ರೊ|ವೀ. ಅರವಿಂದ ಹೆಬ್ಟಾರ್‌.

ಪ್ರಪಂಚದಲ್ಲೆಲ್ಲೂ ಗುರುತಿಸದ ಆರು ಸಸ್ಯ ಪ್ರಭೇದಗಳನ್ನು ಭಟ್‌ ಹುಡುಕಿದ್ದಾರೆ. ಮಣಿಪಾಲದ ಜಿಂಜಿಬರೇಸಿ ಶುಂಠಿ ಕುಟುಂಬಕ್ಕೆ ಸೇರಿದ ಭಟ್ಟಿಯೈ, ಹುಲ್ಲು ವೆಲ್ಡ್‌ಕ್ಯಾಂಪಿ, ಮಡಿಕೇರಿಯ ಹುಲ್ಲು ಎರಗ್ರೊಸ್ಟಿಸ್‌ ಸಂತಪೊಯ್‌, ಚಾರ್ಮಾಡಿಯ ಕ್ರೈಸೊಪೋಗಾನ್‌ ಸ್ಯೂಡೋಝಲ್ಯಾನಿಕಸ್‌, ಸಂಪಾಜೆ ಘಾಟಿಯ ಶುಂಠಿ ಕುಟುಂಬದ ಅಮೋಮಂ ಘಟಿಕಂ, ಪಾಣಾಜೆ ವೈದ್ಯ ವೆಂಕಟರಾಮ ದೈತೋಟರ ತೋಟದ ಕಾಂಬ್ರಿಟಂ ರಾಝಿಯಾನಂ ಇವೆಲ್ಲ ಹೆಸರುಗಳು ಇರುವುದೇ ಲ್ಯಾಟಿನ್‌ ಭಾಷೆಯಲ್ಲಿ. ಭಟ್ಟಿಯೈ ಹೆಸರನ್ನು ಇಟ್ಟವರು ಸ್ಕಾಟ್ಲಂಡ್‌ ಎಡಿನ್‌ಬರೋದ ಶುಂಠಿ ಸಸ್ಯಕುಟುಂಬ ತಜ್ಞೆ ಡಾ|ರೋಸ್‌ ಮೇರಿ ಸ್ಮಿತ್‌. ಭಟ್ಟರಿಗೆ ಲ್ಯಾಟಿನ್‌ ಗೊತ್ತಿಲ್ಲದ ಕಾರಣ ನಾಮಕರಣದ ಪೌರೋಹಿತ್ಯವನ್ನು ಡಾ| ಸ್ಮಿತ್‌ರಿಗೆ ವಹಿಸಿಕೊಟ್ಟಾಗ ಭಟ್ಟರ ಹೆಸರನ್ನು ಸೇರಿಸಿ ಲ್ಯಾಟಿನ್‌ ಭಾಷೆಯಲ್ಲಿ ಭಟ್ಟಿಯೈ ಎಂದು ನಾಮಕರಣ ಮಾಡಿದರು. ಈ ಸಸ್ಯವೀಗ ಎಡಿನ್‌ಬರೋ ಹಬೇರಿಯಾಲಯದಲ್ಲಿದೆ. ಕೇರಳದ ಕಲ್ಲಿಕೋಟೆಯಿಂದ ಕಳುಹಿಸಿದ ಪಾರಾಕೌಟ್ಲೆಯಾ ಭಟ್ಟಿಯೈ ಮಾದರಿ ಇಂಗ್ಲೆಂಡ್‌ನ‌ ಕ್ಯೂ ಬೊಟಾನಿಕಲ್‌ ಗಾರ್ಡನ್‌ನಲ್ಲಿದೆ. ಇಲ್ಲಿನ ಕ್ಯುರೇಟರ್‌ ಗ್ರಾಲ್‌ ಅರೇಲಿಯವರು ಭಟ್ಟರ ಮಾದರಿ ಎಂದರೆ ಖುಷಿಯಿಂದ ಬಣ್ಣಿಸುತ್ತಾರೆ.

Advertisement

ಅಭಿಮಾನಿಗಳು ಕೊಟ್ಟ ಹೆಸರು
ಅಭಿಮಾನಿಗಳೂ ತಮ್ಮ ಸಂಶೋಧನ ಸಸ್ಯಗಳಿಗೆ ಭಟ್ಟರ ಹೆಸರು ಕೊಟ್ಟಿದ್ದಾರೆ: ಕೊಲ್ಲಾಪುರದ ಶಿವಾಜಿ ವಿ.ವಿ.ಯ ಎಸ್‌.ಆರ್‌.ಯಾದವ್‌, ಸೆಂದೇಡ್‌ ಕೊಟ್ಟ ಹೆಸರು ಸಿರೋಪೀಜಿಯಾ ಭಟ್ಟಿಯೈ, ಮಂಗಳೂರು ವಿ.ವಿ.ಯ ಕೆ.ರಶ್ಮಿ, ಡಾ| ಕೃಷ್ಣಕುಮಾರ್‌ ಕೊಟ್ಟ ಹೆಸರು ಎರಿಯೋಕಾಲನ್‌ ಗೋಪಾಲಕೃಷ್ಣಾನಮ್‌, ಕೇರಳ ತಳಿಪರಂಬ ಕಾಲೇಜಿನ ಕೆ.ಸುಬ್ರಹ್ಮಣ್ಯ ಪ್ರಸಾದ್‌, ಕೆ.ರವಿ ಇಟ್ಟ ಹೆಸರು ಭಟಿಯಾನಾ. ಈ ವರೆಗೆ ಯಾರೂ ವರದಿ ಮಾಡದ ಕುದುರೆಮುಖ, ತಲಕಾವೇರಿ, ಉಡುಪಿ ರೈಲ್ವೇ ನಿಲ್ದಾಣ ಬಳಿ, ಭಾರತದಲ್ಲಿ ಕಂಡುಬಂದ ಅಮೆರಿಕನ್‌ ಟ್ರಾಪಿಕಲ್‌ ಮೂಲದ ಗಿಡ ಹೀಗೆ ಒಟ್ಟು ನಾಲ್ಕು ಸಸ್ಯ ಪ್ರಭೇದಗಳನ್ನು ವರದಿ ಮಾಡಿದ್ದಾರೆ. ಡಾ| ಭಟ್ಟರ “ಫ್ಲೋರಾ ಆಫ್ ಉಡುಪಿ’, “ಫ್ಲೋರಾ ಆಫ್ ಸೌತ್‌ ಕೆನರಾ’ ಕೃತಿ ಸಸ್ಯ ಸಂಬಂಧಿ ಸಂಶೋಧಕರಿಗೆ ಆಕರಗ್ರಂಥ.

ಸಸ್ಯಶಾಸ್ತ್ರ ಶಿಕ್ಷಕರು, ಆಯುರ್ವೇದ ವಿದ್ಯಾರ್ಥಿಗಳು, ಫಾರ್ಮಸಿಸ್ಟ್‌ಗಳು, ಅರಣ್ಯ ಇಲಾಖೆಯವರು, ವಿಷವೈದ್ಯರು, ನಾಟಿವೈದ್ಯರು, ಸಸ್ಯರೋಗತಜ್ಞರು ಹೀಗೆ ಅನೇಕಾನೇಕ ಕ್ಷೇತ್ರದವರು ಸಸ್ಯ ವರ್ಗೀಕರಣ ಶಾಸ್ತ್ರವನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ ಎಂಬ ಅಭಿಪ್ರಾಯವನ್ನು ಭಟ್‌ ವ್ಯಕ್ತಪಡಿಸುತ್ತಾರೆ.

ಗೋಪಾಲಕೃಷ್ಣ ಭಟ್‌ ಪಶ್ಚಿಮ ಘಟ್ಟ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ತಿರುಗಾಡದ ಸ್ಥಳವಿಲ್ಲವೆನ್ನಬಹುದು. ಜೋಗ ಜಲಪಾತದ ಬುಡದಲ್ಲಿ ಇವರಿಗೊಂದು ಜಾತಿಯ ಹುಲ್ಲು ಸಿಕ್ಕಿತು. “ಫ್ಲೋರಾ’ ಪುಸ್ತಕದಲ್ಲಿ ಈ ಜಾತಿಯ ಹುಲ್ಲು ದಾಖಲಾಗಿದೆ. ಪಶ್ಚಿಮ ಘಟ್ಟದ ಬೇರೆಲ್ಲೂ ಈ ಹುಲ್ಲು ಕಂಡುಬಂದಿಲ್ಲವಾದ ಕಾರಣ “ಇದು ಆ ತಳಿಯ ಕೊನೆಯ ಸಂತತಿ. ಒಂದು ವೇಳೆ ಕಿತ್ತರೆ ಅದರ ಸಂತತಿ ಮುಗಿಯಿತು’ ಎಂದು ಡಾ| ಭಟ್‌ ಅಭಿಪ್ರಾಯಪಟ್ಟರು. ಆದರೆ ಇದನ್ನು ದಾಖಲಿಸಬಹುದೆ ಎಂದು ಅರವಿಂದ ಹೆಬ್ಟಾರ್‌ ಕೇಳಿದರೆ “ಬೇಡ, ನನ್ನದೇ ವರದಿ ಸರಿ ಎಂದು ಈಗಲೇ ಹೇಳುವುದು ಕಷ್ಟ. ನಿಖರವಾದ ದತ್ತಾಂಶ ಅಗತ್ಯವಿದೆ’ ಎಂದು ಉತ್ತರಿಸಿ ದ್ದರಂತೆ. ನಮಗೆ ತೃಣ ಸಮಾನವಾದುದು, ಭಟ್ಟರಿಗೆ ಅಲ್ಲ.

-ಮಟಪಾಡಿ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next