Advertisement

ಅಪ್ಪನ ಬಳಿಕ ಮಕ್ಕಳಿಗೆ ಟಿಕೆಟ್‌ ಕೊಡುವುದು ಕುಟುಂಬ ರಾಜಕಾರಣವಲ್ಲ: K. Annamalai

12:40 AM Apr 25, 2023 | Team Udayavani |

ಬೆಂಗಳೂರು: ಅಪ್ಪನ ಅನಂತರ ಮಕ್ಕಳಿಗೆ ಚುನಾವಣಾ ಟಿಕೆಟ್‌ ನೀಡುವುದು ಕುಟುಂಬ ರಾಜಕಾರಣವಲ್ಲ. ಕುಟುಂಬ ರಾಜಕಾರಣದ ಸ್ವರೂಪ ಬೇರೆ ಇದೆ. ಒಂದು ಕುಟುಂಬ ಇಡೀ ಪಕ್ಷ ಅಥವಾ ಆಡಳಿತ ವ್ಯವಸ್ಥೆಯನ್ನು ನಿಯಂತ್ರಣ ಮಾಡುವುದು ಮಾತ್ರ ಡೈನಾಸ್ಟಿ ಪಾಲಿಟಿಕ್ಸ್‌. ಭಾರತೀಯ ಜನತಾ ಪಕ್ಷ ವಂಶವಾದಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಐಪಿಎಸ್‌ ಅಧಿಕಾರಿ, ಬಿಜೆಪಿಯ ಚುನಾವಣ ಸಹ ಉಸ್ತುವಾರಿ ಕೆ.ಅಣ್ಣಾಮಲೈ ವ್ಯಾಖ್ಯಾನಿಸಿದ್ದಾರೆ.
“ಉದಯವಾಣಿ’ಗೆ ನೀಡಿದ ವಿಶೇಷ ಸಂದ ರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, “ಜಾತಿವಾದ, ವಂಶವಾದ, ಭ್ರಷ್ಟ ವಾದ’ದ ವಿಚಾರ ದಲ್ಲಿ ಬಿಜೆಪಿಯ ಉಳಿದ ನಾಯಕರು ಮಾತನಾಡುವ ಶೈಲಿಯನ್ನೇ ಅನು ಸರಿಸಿದ್ದಾರೆ. “ಅಪ್ಪನ ಅನಂತರ ಮಕ್ಕಳಿಗೆ, ಗಂಡನ ಬದಲು ಹೆಂಡತಿಗೆ ಟಿಕೆಟ್‌’ ನೀಡಿದ ವಿಚಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

Advertisement

ಸಂದರ್ಶನದ ಪೂರ್ಣ ಪಾಠ ಹೀಗಿದೆ…
ವಿಧಾನಸಭಾ ಚುನಾವಣೆಗೆ ನೀವು ಸಹ ಉಸ್ತುವಾರಿಯಾಗಿ ಬಂದಿದ್ದೀರಿ. ನಿಮ್ಮ ಪಾತ್ರ ಏನೆಂಬುದರ ಬಗ್ಗೆ ಬಹಳಷ್ಟು ಜನರಿಗೆ ಪ್ರಶ್ನೆ ಇದೆಯಲ್ಲ ?
ನಾನು ಬಿಜೆಪಿಯ ಸಂಘಟನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇರುವ ವ್ಯಕ್ತಿ. ಇದು ನನಗೆ ಪಕ್ಷ ನೀಡಿರುವ ಜವಾಬ್ದಾರಿ. ನಮ್ಮ ಪಕ್ಷ ಸ್ಥಳೀಯ ನಾಯಕತ್ವದಲ್ಲಿ ಹೆಚ್ಚು ವಿಶ್ವಾಸವನ್ನು ಇಟ್ಟಿದೆ. ಕರ್ನಾಟಕದಲ್ಲೂ ನಾವು ಸ್ಥಳೀಯ ನಾಯಕತ್ವವನ್ನೇ ರಾಜಕೀಯವಾಗಿ ಮುಂಚೂಣಿಯಲ್ಲಿಟ್ಟಿದ್ದೇವೆ. ನಮ್ಮ ಪಾತ್ರ ಅವರಿಗೆ ಸಹಕಾರ ನೀಡುವುದು. ಈ ಚುನಾವಣೆಗೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಉಸ್ತುವಾರಿಗಳು. ಅವರ ಜತೆ ಮನ್ಸೂಖ್‌ ಭಾಯ್‌ ಮಾಂಡವೀಯ ಇದ್ದಾರೆ. ಕೇಂದ್ರ ಸರಕಾರದಲ್ಲಿ ಇವರಿಬ್ಬರು ಬಹಳ ಪ್ರಭಾವಿ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವುದರಿಂದ ನನ್ನನ್ನು ಸೇರಿ ಹಲವರಿಗೆ ಜವಾಬ್ದಾರಿಯ ಹಂಚಿಕೆ ಮಾಡಲಾಗಿದೆಯಷ್ಟೆ.

ಡಬಲ್‌ ಎಂಜಿನ್‌ ಸರಕಾರ ಎಂದು ಎಲ್ಲರೂ ಮಾತನಾಡು ತ್ತಾರೆ. ಹಾಗೆಂದರೆ ಏನು ? ಈ ವಾದ ಜನಸಾಮಾನ್ಯರನ್ನು ತಲುಪಿದೆಯೇ ?
ಒಂದೇ ಸೈದ್ಧಾಂತಿಕ ಹಿನ್ನೆಲೆ ಅಥವಾ ಒಂದೇ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದ್ದರೆ ಅದು ಡಬಲ್‌ ಎಂಜಿನ್‌ ಸರಕಾರ. ಸುದೈವದಿಂದ ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರಕಾರ ಅಧಿಕಾರದಲ್ಲಿದೆ. ಇದರಿಂದ ಅಭಿವೃದ್ಧಿ ಚಟುವಟಿಕೆಗಳು ಬಹಳ ವೇಗವಾಗಿ ನಡೆಯುತ್ತವೆ. ಉದಾಹರಣೆಗೆ “ಜಲ್‌ ಜೀವನ್‌ ಮಷಿನ್‌’ ಯೋಜನೆ. 2019ರಲ್ಲಿ ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದಾಗ ಕೇವಲ ಶೇ.16ರಷ್ಟು ಫ‌ಲಾನುಭವಿಗಳಿಗೆ ಮಾತ್ರ ತಲುಪಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ಈ ಪ್ರಮಾಣ ಶೇ.64ಕ್ಕೆ ಏರಿಕೆಯಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಯೋಜನೆಗಳ ಅನುಷ್ಠಾನ ತ್ವರಿತವಾಗುತ್ತದೆ. ಇದೇ ಜಲಜೀವನ್‌ ಮಷಿನ್‌ ಯೋಜನೆ ಪಕ್ಕದ ತಮಿಳುನಾಡಿನಲ್ಲಿ ಶೇ.45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಅಲ್ಲಿ ಭ್ರಷ್ಟಾಚಾರದ ಜತೆಗೆ ಸೈದ್ಧಾಂತಿಕ ಭಿನ್ನಮತವೂ ಕೆಲಸ ಮಾಡುತ್ತಿರುವುದರಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಅಂಥ ಪರಿಸ್ಥಿತಿ ಇಲ್ಲ. ವಿಮಾನ ನಿಲ್ದಾಣ, ರಸ್ತೆ, ಕುಡಿಯುವ ನೀರು, ಬೃಹತ ನೀರಾವರಿ, ಸಾಗರಮಾಲಾ, ವಿದೇಶಿ ಬಂಡವಾಳ ಹೂಡಿಕೆ ಸೇರಿದಂತೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಕರ್ನಾಟಕದಲ್ಲಿ ಆದಷ್ಟು ಸಮರ್ಪಕ ಜಾರಿ ಬೇರೆಲ್ಲೂ ಆಗಿಲ್ಲ. ಪ್ರತಿ ಊರಿನಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯೋಜನೆಗಳ ಫ‌ಲಾನುಭವಿಗಳು ನಮಗೆ ಸಿಗುತ್ತಾರೆ. ಡಬಲ್‌ ಎಂಜಿನ್‌ ಸರಕಾರ ಜನಸಾಮಾನ್ಯರನ್ನು ತಲುಪಿದೆ.

ವಂಶವಾದ, ಜಾತಿವಾದ, ಭ್ರಷ್ಟವಾದದ ವಿರುದ್ಧದ ವಿಚಾರ ದಲ್ಲಿ ಬಿಜೆಪಿಯ ಬೋಧನೆ ಮತ್ತು ಪಾಲನೆಗೆ ವ್ಯತ್ಯಾಸ ವಿಲ್ಲವೇ ? ಟಿಕೆಟ್‌ ಹಂಚಿಕೆಯಲ್ಲಿ ಇದು ಕಾಣುತ್ತಿದೆಯಲ್ಲ.
ಇಲ್ಲ. ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಮುಗಿದ ಅನಂತರ ಬಿಜೆಪಿ ಗೆಲ್ಲುವ ಪ್ರಮಾಣ ಶೇ. 25ರಷ್ಟು ಹೆಚ್ಚಿದೆ. ಈ ಪ್ರಕ್ರಿಯೆಯಿಂದ ಬಿಜೆಪಿಗೆ ಎಕ್ಸಟ್ರಾ ಚಾರ್ಮ್ ಬಂದಿದೆ. ಹೊಸ ಮುಖಗಳಿಗೆ, ಯುವಕರಿಗೆ ಆದ್ಯತೆ ನೀಡಲಾಗಿದೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಚುನಾವಣಾ ವ್ಯವಸ್ಥೆಯಲ್ಲಿ ಜಾತಿ ಸಮೀಕರಣ ನಡೆಸಬೇಕಾಗುತ್ತದೆ. ಎಲ್ಲ ಜಾತಿಯವರಿಗೂ ಅವಕಾಶ ನೀಡಬೇಕಾಗುತ್ತದೆ. ಜಾತಿ ಆಧಾರಿತ ಭೇದ-ಭಾವಕ್ಕೆ ಮಾತ್ರ ನಮ್ಮ ವಿರೋಧವಿದೆ. ಈ ಬಾರಿ ಟಿಕೆಟ್‌ ಹಂಚಿಕೆ ಮಾಡುವಾಗ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯದ ಅಡಿ ಸಮಾನ ಅವಕಾಶ ನೀಡಲಾಗಿದೆ. ಇನ್ನು ಅಪರಾಧ ಹಿನ್ನೆಲೆಯವರಿಗೆ ಟಿಕೆಟ್‌ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಆದರೆ ಪ್ರಕರಣದ ಹಿನ್ನೆಲೆಯನ್ನೂ ಗಮನಿಸಬೇಕು. ನನ್ನ ವಿರುದ್ಧ ತಮಿಳುನಾಡು ಸರಕಾರ 144 ಅಕ್ರಮ ಪ್ರಕರಣ ದಾಖಲಿಸಿದೆ. ಆ ಪೈಕಿ 80ಕ್ಕೂ ಮೇಲ್ಪಟ್ಟ ಪ್ರಕರಣದಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ. ಹಾಗಾದರೆ ನಾನು
ಅಪರಾಧ ಹಿನ್ನೆಲೆಯ ವ್ಯಕ್ತಿಯೇ ?

ನೀವು ವಂಶವಾದ ಅಥವಾ ಕುಟುಂಬ ರಾಜಕಾರಣದ ಬಗ್ಗೆ ಏನನ್ನೂ ಹೇಳಿಲ್ಲ …
ಕುಟುಂಬವಾದ ಅಥವಾ ಡೈನಾಸ್ಟಿ ಪಾಲಿಟಿಕ್ಸ್‌ಗೆ ಬೇರೆಯದೇ ಆದ ಸ್ವರೂಪ ಇದೆ. ಬಿಜೆಪಿ ಆ ವಿಚಾರಕ್ಕೆ ವಿರುದ್ಧವಾಗಿದೆ. ಆದರೆ ಅಪ್ಪನ ಅನಂತರ ಮಕ್ಕಳಿಗೆ ಅಥವಾ ಪತಿಯ ಬದಲು ಪತ್ನಿಗೆ, ಅಣ್ಣನ ಬದಲು ತಮ್ಮನಿಗೆ ಟಿಕೆಟ್‌ ನೀಡುವುದು ಕುಟುಂಬ ರಾಜಕಾರಣವಲ್ಲ. ಕೆಲವೊಮ್ಮೆ ಅದು ಕಾರ್ಯಕರ್ತರ ಅಪೇಕ್ಷೆಯಾಗಿರುತ್ತದೆ. ಶಾಸಕನ ಮಗ ಎಂಬ ಒಂದೇ ಕಾರಣಕ್ಕೆ ಟಿಕೆಟ್‌ ನಿರಾಕರಿಸಬೇಕೆಂಬ ವಾದ ಸರಿಯಲ್ಲ. ಉದಾಹರಣೆಗೆ ನಾವು ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಿದ್ದೇವೆ. ಅವರು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ಶಿಕಾರಿಪುರದ ಜನತೆಯ ಆಗ್ರಹವೂ ಅಗಿತ್ತು. ವಿಜಯೇಂದ್ರ ನಮ್ಮ ಪಕ್ಷದ ಕಾರ್ಯಕರ್ತರು. ಕಳೆದ ಬಾರಿ ಅವರಿಗೆ ಪಕ್ಷ ಟಿಕೆಟ್‌ ನೀಡಿರಲಿಲ್ಲ. ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ವಿಜಯೇಂದ್ರ ಸಮರ್ಥವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಇದು ಕುಟುಂಬ ರಾಜಕಾರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಒಂದು ಪಕ್ಷ ಅಥವಾ ಆಡಳಿತ ವ್ಯವಸ್ಥೆಯಲ್ಲಿ ಒಂದು ಕುಟುಂಬದವರು ಮಾತ್ರ ಎಲ್ಲವನ್ನು ನಿಯಂತ್ರಿಸುತ್ತಿದ್ದರೆ ಅದು ಡೈನಾಸ್ಟಿ ಪಾಲಿಟಿಕ್ಸ್‌. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಅಂಥ ಸ್ಥಿತಿ ಇದೆ. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡಿಲ್ಲ. ನಾನು ಕೂಡಾ ಒಬ್ಬ ಸಾಮಾನ್ಯ ಕಾರ್ಯಕರ್ತ. ಇಂಥ ಅನೇಕ ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ.

Advertisement

ನೀವು ರಾಜ್ಯದ ಅತ್ಯಂತ ಜನಪ್ರಿಯ ಐಪಿಎಸ್‌ ಅಧಿಕಾರಿಯಾಗಿದ್ದವರು. ಈಗ ರಾಜಕಾರಣಿಯಾಗಿದ್ದೀರಿ. ರಾಜಕಾರಣಕ್ಕೆ ಬಂದು ತಪ್ಪು ಮಾಡಿದೆ ಎಂದು ಅನ್ನಿಸುತ್ತಿದೆಯೇ ?
ನನ್ನ ಪ್ರಕಾರ ಅಧಿಕಾರ ಎಂಬುದರ ವ್ಯಾಖ್ಯಾನ ಬೇರೆ ಇದೆ. ಆಡಳಿತ ವರ್ಗದಲ್ಲಾಗಲಿ, ರಾಜಕಾರಣದಲ್ಲಾಗಲಿ ಅಧಿಕಾರ ಸಿಗುವುದು ಸೇವೆಗೆ ಮಾತ್ರ ಎಂದು ನಾನು ಭಾವಿಸಿಕೊಂಡಿ ದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಂಥ ವ್ಯಕ್ತಿಗಳು ಶತಮಾನಕ್ಕೆ ಒಮ್ಮೆ ಮಾತ್ರ ಆವೀರ್ಭವಿಸಲು ಸಾಧ್ಯ. ಅವರ ಮಾರ್ಗದರ್ಶನದಲ್ಲಿ ನಾನು ರಾಜಕಾರಣ ನಡೆಸುತ್ತಿದ್ದೇನೆ. ತಪ್ಪು ಮಾಡಿದೆ ಎಂದೆನಿಸಿಲ್ಲ.

ನಿಮ್ಮ ಪ್ರಕಾರ ಈ ಬಾರಿಯ
ಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಏನು ?
ನಾವು ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತೇವೆ. ಮೈತ್ರಿ ಸರಕಾರ ಬಂದರೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದು ರಾಜ್ಯದ ಜನರಿಗೆ ಗೊತ್ತು. ನಮ್ಮ ಗುರಿ 150 ಸ್ಥಾನ. ಕನಿಷ್ಠ 130ಕ್ಕಿಂತ ಹೆಚ್ಚು ಕಡೆಗಳಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬರುತ್ತೇವೆ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next