Advertisement

ಜ್ಯೋತಿ ವಿಜಯ ಯಾತ್ರೆ ಶುರು: ಸ್ವರ್ಣಿಂ ವಿಜಯ ದಿವಸ ಆಚರಣೆ ಆರಂಭ ; ಪ್ರಧಾನಿ ಮೋದಿ ಚಾಲನೆ

01:24 AM Dec 17, 2020 | mahesh |

ಹೊಸದಿಲ್ಲಿ: 1971ರ ಡಿಸೆಂಬರ್‌ 16ರಂದು ಪಾಕಿಸ್ತಾನಿ ಸೇನೆಯ ವಿರುದ್ಧದ ಭಾರತದ ಗೆಲುವಿಗೆ ಈಗ 50 ವರ್ಷ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವರ್ಷಪೂರ್ತಿ ಹಲವು ಕಾರ್ಯಕ್ರಮಗಳ ಮೂಲಕ “ಸ್ವರ್ಣಿಂ ವಿಜಯ ದಿವಸ’ ಆಚರಣೆ ನಡೆಯಲಿದೆ. ಬುಧವಾರ ಪ್ರಧಾನಿ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಜಯ ಜ್ಯೋತಿಯನ್ನು ಬೆಳಗಿಸಿ ವೀರ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಈ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

Advertisement

ಈ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಅನಂತರ ಇಂದಿನ ಬಾಂಗ್ಲಾದೇಶ ಜನ್ಮತಳೆಯಿತು. “”ವಿಜಯ ದಿವಸದಂದು ನಾವು ನಮ್ಮ ಸಶಸ್ತ್ರಪಡೆಗಳು 1971ರಂದು ತೋರಿದ ಅಚಲ ಧೈರ್ಯವನ್ನು ಸ್ಮರಿಸುತ್ತೇವೆ. ಈ ವಿಶೇಷ ವಿಜಯ ದಿವಸದಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಂ ವಿಜಯ ಜ್ಯೋತಿ ಬೆಳಗಿಸುವ ಗೌರವ ನನಗೆ ಸಿಕ್ಕಿದೆ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಸೇನಾ ಮುಖ್ಯಸ್ಥರು ಹಾಜರಿದ್ದರು. ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರೂ ಈ ವಿಚಾರದಲ್ಲಿ ಟ್ವೀಟ್‌ ಮಾಡಿದ್ದು, ಭಾರತೀಯ ಸೇನೆಯ ಪರಾಕ್ರಮ ಹಾಗೂ ಇಂದಿರಾ ಗಾಂಧಿಯವರ ನಾಯಕತ್ವವನ್ನು ಸ್ಮರಿಸಿದ್ದಾರೆ.

4 ಜ್ಯೋತಿಗಳು
ನಾಲ್ಕು ಸ್ವರ್ಣಿಂ ವಿಜಯ ಜ್ಯೋತಿಗಳನ್ನು 1971ರ ಯುದ್ಧದ ಪರಮವೀರಚಕ್ರ ಹಾಗೂ ಮಹಾವೀರ ಚಕ್ರ ಪಡೆದ ಧೀರ ಯೋಧರ ಗ್ರಾಮಗಳನ್ನು ಒಳಗೊಂಡು ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲಾಗುತ್ತಿದೆ. ಯೋಧರ ಗ್ರಾಮಗಳಿಂದ, ಹೋರಾಟದ ಜಾಗಗಳಿಂದ ಮಣ್ಣನ್ನು ತಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಡಲಾಗುವುದು ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

93,000 ಪಾಕ್‌ ಸೈನಿಕರು ಶರಣಾಗಿದ್ದರು
ಪಾಕಿಸ್ಥಾನ ವಿರುದ್ಧದ ಅಂದಿನ ಗೆಲುವಿನಲ್ಲಿ ಭಾರತೀಯ ಯೋಧರ ಶೌರ್ಯವನ್ನು ಮರೆಯುವಂತೆಯೇ ಇಲ್ಲ. ಆ ಸಮಯದಲ್ಲಿ ಪಾಕ್‌ ಸೇನೆಯ ಕ್ರೌರ್ಯಕ್ಕೆ 3,800ಕ್ಕೂ ಅಧಿಕ ಬಾಂಗ್ಲಾ (ಪೂರ್ವ ಪಾಕಿಸ್ಥಾನ) ನಾಗರಿಕರು ಮೃತಪಟ್ಟಿದ್ದರು. ಪಾಕ್‌ನ ಈ ಕ್ರೌರ್ಯವನ್ನು ಹತ್ತಿಕ್ಕಲು ಭಾರತೀಯ ಸೇನೆಯು ಮುಕ್ತಿ ವಾಹಿನಿಯ ಸಹಯೋಗದೊಂದಿಗೆ ಪಾಕ್‌ನ ಹೆಡೆಮುರಿಕಟ್ಟಿತ್ತು. ಭಾರತದ ಬಹು ಆಯಾಮದ ದಾಳಿಗೆ ತತ್ತರಿಸಿದ ಪಾಕ್‌ ಡಿ.16, 1971ರಂದು ಭಾರತೀಯ ಸೇನೆಯ ಮುಂದೆ ಮಂಡಿಯೂರಿತು. ಪಾಕ್‌ ಸೇನಾ ಮುಖ್ಯಸ್ಥ ಅಮಿರ್‌ ಅಬ್ದುಲ್ಲಾ ನಿಯಾಜಿ ಸೇರಿ 93 ಸಾವಿರ ಪಾಕ್‌ ಸೈನಿಕರು ಅಂದು ಭಾರತಕ್ಕೆ ಶರಣಾಗಿದ್ದರು. 13 ದಿನಗಳ ಈ ಯುದ್ಧದಲ್ಲಿ 3,800ಕ್ಕೂ ಅಧಿಕ ಭಾರತ-ಪಾಕ್‌ ಸೈನಿಕರು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next