Advertisement

ಪತ್ರಕರ್ತರಿಗೆ ವೃತ್ತಿ ಬದ್ದತೆ ಅಗತ್ಯ

02:06 PM May 11, 2022 | Team Udayavani |

ಯಾದಗಿರಿ: ಪತ್ರಕರ್ತರು ವೃತ್ತಿಯಲ್ಲಿ ಬದ್ಧತೆ ಮೈಗೂಡಿಸಿಕೊಂಡಾಗ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.

ವೃತ್ತಿ ರಂಗದಲ್ಲಿ ಪತ್ರಕರ್ತರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಇವುಗಳನ್ನು ಮರೆತುಕೊಂಡು ಎಲ್ಲರೂ ಒಂದಾಗಿ ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸ ಮಾಡುತ್ತಾರೆ. ಅವರು ಮಾಡುವಂತಹ ಸಮಾಜಮುಖೀ ಕಾರ್ಯಗಳು ಮಾದರಿಯಾಗಿವೆ ಎಂದು ತಿಳಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಪತ್ರಕರ್ತರು ನಿಷ್ಠುರವಾಗಿ ವರದಿಗಳನ್ನು ಬರೆಯುವ ಮೂಲಕ ಸಮಾಜದಲ್ಲಿ ಕಣ್ಣು ತೆರೆಯಿಸುವಂತಹ ಕಾರ್ಯ ಮಾಡಬೇಕಿದೆ. ನಾವು ಎಡವಿದಾಗ ನನ್ನ ವಿರುದ್ಧ ಬರೆದರು ಕೂಡ ಇದರ ಬಗ್ಗೆ ನಾನು ಚಿಂತನೆ ನಡೆಸುವುದಿಲ್ಲ. ನಿಮ್ಮ ಸೇವೆ ಅಮೋಘವಾಗಿದೆ ಎಂದು ಬಣ್ಣಿಸಿದರು.

ಕೊರೊನಾ ಬಂದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೀರಿ. ಇದಲ್ಲದೇ ನೆರೆ ಹಾವಳಿ ಬಂದಾಗ ಕೂಡ ನೀವು ನೀಡಿರುವ ಸೇವೆ ಮರೆಯಲು ಸಾಧ್ಯವಿಲ್ಲ. ಹೀಗಾಗಿಯೇ ಮಾಧ್ಯಮಗಳ ಮೇಲೆ ಜನರಿಗೆ ಅಪಾರವಾದ ಗೌರವವಿದೆ ಎಂದು ತಿಳಿಸಿದರು.

Advertisement

ಎಸ್ಪಿ ಸಿ.ಬಿ. ವೇದಮೂರ್ತಿ ಮಾತನಾಡಿ, ಜೀವದ ಕಡೆಗೆ ಗಮನ ಹರಿಸಬೇಕು. ಜೀವ ಒತ್ತೆಯಿಟ್ಟು ಜನರಿಗೆ ಸುದ್ದಿ ನೀಡುವಂತಹ ಕೆಲಸ ಯಾವುದೇ ಕಾರಣಕ್ಕೂ ಪತ್ರಕರ್ತರು ಮಾಡಬಾರದು. ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಮುಂದಾಗುವುದು ಅಗತ್ಯವಿದೆ ಎಂದರು.

ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ ಮಾತನಾಡಿದರು. ರಾಜ್ಯ ಪರಿಷತ್‌ ಸದಸ್ಯ ರಾಘವೇಂದ್ರ ಕಾಮನಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಸುವ ಚಿಂತನೆ ನಡೆದಿದೆ. ಜಿಲ್ಲೆಯಾದಗಿನಿಂದ ಸಮ್ಮೇಳನ ಆಗಿಲ್ಲ. ಈ ಬಾರಿ ಆಯೋಜಿಸುವ ಚಿಂತನೆಯಿದೆ ಎಂದು ಹೇಳಿದರು.

ಪತ್ರಕರ್ತರ ಸಿದ್ದಪ್ಪ ಲಿಂಗೇರಿ ಆಶಯ ನುಡಿಯಾಡಿದರು. ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್‌ ಠಾಕೂರ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್‌ ಪಾಟೀಲ್‌, ಸದಸ್ಯ ಚನ್ನಕೇಶವಗೌಡ ಬಾಣತಿಹಾಳ, ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ ವಿ.ಸಿ., ಮಲ್ಲಣಗೌಡ ಹತ್ತಿಕುಣಿ, ದೇವಿಂದ್ರಪ್ಪ ಆವಂಟಿ ಸೇರಿದಂತೆ ಇನ್ನಿತರರಿದ್ದರು. ಪತ್ರಕರ್ತ ಲಕ್ಷ್ಮೀಕಾಂತ ಕುಲಕರ್ಣಿ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಪತ್ರಕರ್ತ ಮಹೇಶ ಕಲಾಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next