Advertisement

“ಶಾಯಿ ಪೆನ್ನು ಬಳಸಿ’ಅಭಿಯಾನಕ್ಕೆ ಕೈಜೋಡಿಸಿ

03:45 AM Jun 04, 2017 | |

ಜೂ. 5 ವಿಶ್ವ ಪರಿಸರ ದಿನ. ಕಣ್ಣಿಗೆ ಢಾಳಾಗಿ ಕಾಣದ ಆದರೆ ಕೋಟ್ಯಂತರ ಯೂಸ್‌ ಆ್ಯಂಡ್‌ ತ್ರೊ ಪೆನ್ನುಗಳು, ರೀಫಿಲ್‌, ರೀಫಿಲ್‌ ಕವರ್‌ಗಳನ್ನು ಭೂಮಿಗೆ ವಿಸರ್ಜಿಸುತ್ತಿದ್ದೇವೆ. ಇನ್ನು ಪ್ಲಾಸ್ಟಿಕ್‌ ಸಾಮಗ್ರಿ, ದೊಡ್ಡ ಮತ್ತು ಸಣ್ಣ ಕಾರ್ಖಾನೆಗಳ ಮಾಲಿನ್ಯ ಎಷ್ಟಿರಬಹುದು? ಇಷ್ಟು ಹಾನಿಗಳಿಗೆ ಪ್ರತಿಯಾಗಿ ಕೆಲವೇ ಕೆಲವು ಮಂದಿ ಆರ್ಥಿಕ ಸಿರಿವಂತಿಕೆಯನ್ನು ಗಳಿಸುತ್ತ ಇತರರಿಗೂ ಅದೇ ಆಸೆಯನ್ನು ತೋರಿಸಿ ಆಕರ್ಷಿಸುತ್ತಿದ್ದಾರೆ. “ನಾನು ಉತ್ಪಾದಿಸಿದ ಮಾಲಿನ್ಯದ ಮೊದಲ ಬಳಕೆದಾರ ನಾನೇ, ಆದ್ದರಿಂದ ನನ್ನಿಂದ ಅತಿ ಕನಿಷ್ಠ ಮಾಲಿನ್ಯ ಉತ್ಪಾದನೆಯಾಗುವಂತಾಗಲಿ’ಎಂಬ ಸಾಮಾಜಿಕ ಪ್ರಜ್ಞೆ ಮೂಡಬೇಕು. 

Advertisement

ಉಡುಪಿ ಜಿಲ್ಲೆಯಲ್ಲಿ ಹಿಂದಿನ ಸಾಲಿನಲ್ಲಿ 1ರಿಂದ 10ನೆಯ ತರಗತಿ ವರೆಗೆ 1.56 ಲಕ್ಷ ವಿದ್ಯಾರ್ಥಿಗಳಿದ್ದರು. ಪಿಯುಸಿ, ಪದವಿ ಸೇರಿಸಿದರೆ ಸುಮಾರು 2 ಲಕ್ಷ ವಿದ್ಯಾರ್ಥಿಗಳಿದ್ದರು. ಇದರ ಪ್ರಮಾಣ ದ.ಕ. ಜಿಲ್ಲೆಯಲ್ಲಿ ದುಪ್ಪಟ್ಟು, ಮೂರು ಪಟ್ಟು ಇದೆ. ರಾಜ್ಯದಲ್ಲಿ ಸುಮಾರು 1 ಕೋಟಿಯಷ್ಟಿದ್ದಾರೆ. ರಾಜ್ಯದ ಜನಸಂಖ್ಯೆ ಸುಮಾರು 6 ಕೋಟಿ. ಇವರೆಲ್ಲರೂ ಸೇರಿ ಬಳಸುವ ಪೆನ್ನುಗಳೆಷ್ಟಿರಬಹುದು? ಇದರಲ್ಲಿ ಬಾಲ್‌ ಪೆನ್ನು ಎಷ್ಟು? ಶಾಯಿ ಪೆನ್ನು ಎಷ್ಟು? ಬಾಲ್‌ ಪೆನ್ನಿನಲ್ಲಿ ಬಳಸಿ ಎಸೆಯುವುದೆಷ್ಟು? ರೀಫಿಲ್‌ ಎಸೆಯುವುದೆಷ್ಟು? 
ಯೂಸ್‌ ಆ್ಯಂಡ್‌ ತ್ರೋ ಪೆನ್ನು ತಿಂಗಳಿಗೆ ಎರಡಾದರೂ ಬೇಕಾಗುತ್ತದೆ. ಹೆಚ್ಚುಕಡಿಮೆ ಜನಪ್ರಿಯವಾಗಿರುವ ಜೆಲ್‌ ಪೆನ್‌ನಲ್ಲಿಯೂ ತಿಂಗಳಿಗೆ ಒಂದಾದರೂ ರೀಫಿಲ್‌ ಬಳಸಿ ಎಸೆಯುತ್ತಾರೆ. ಈ ರೀಫಿಲ್‌ ಜತೆಗೆ ತೆಳುವಾದ ಪ್ಲಾಸ್ಟಿಕ್‌ ಕವರ್‌ ಕೂಡ ಎಸೆಯುವಂಥದ್ದು. ತಿಂಗಳಿಗೆ ಪ್ರತೀ ಜಿಲ್ಲೆಯಲ್ಲಿ ಲಕ್ಷಗಟ್ಟಲೆ, ರಾಜ್ಯದಲ್ಲಿ ಕೋಟಿಗಟ್ಟಲೆ ಪೆನ್ನುಗಳನ್ನು ಎಸೆಯುತ್ತಿದ್ದೇವೆ. ದೇಶದ ಲೆಕ್ಕ ಕಲ್ಪನೆಗೂ ಅತೀತ.

ಇವೆಲ್ಲವೂ ಭೂಗರ್ಭಕ್ಕೆ ಸೇರುತ್ತಿದೆ. ಕಣ್ಣಿಗೆ ದೊಡ್ಡದೆಂದು ಗೋಚರಿಸದ ಕಾರಣ ನಾವು ಉತ್ಪಾದಿಸುವ ತ್ಯಾಜ್ಯಗಳಲ್ಲಿ ಇದೂ ಒಂದು ಎಂದು ಗೋಚರಿಸುತ್ತಿಲ್ಲ. ಇಷ್ಟು ಪೆನ್‌ ಮೂಲಕ ಪ್ಲಾಸ್ಟಿಕ್‌ ಸಾಮಗ್ರಿ ಭೂಮಿ ಒಡಲಿಗೆ ಸೇರಿದರೆ ಅಥವಾ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಇತರ ಪ್ಲಾಸ್ಟಿಕ್‌ ಸಾಮಗ್ರಿ ಭೂಮಿಯ ಒಡಲಿಗೆ ಸೇರಿದರೆ ಏನಾದೀತು?

ಶಾಯಿ ಪೆನ್ನು ಬಳಸಿದರೆ ಅದರ ಬಾಳಿಕೆ ಹೆಚ್ಚು. ಸುಮಾರು ಮೂರು ವರ್ಷ ಬಾಳಿಕೆಗೆ ಬರುತ್ತದೆ. ಶಾಯಿ ಖಾಲಿಯಾದಂತೆ ಮತ್ತೆ ತುಂಬಿಸಬಹುದು. ಮೊನೆಯೊಂದು ಹಾಳಾದರೆ ಬೇರೆ ಮೊನೆ ಹಾಕಬಹುದು ಅಥವಾ ಮೊನೆ ಎಸೆದು ಉಳಿದಂಶವನ್ನು ಮರುಬಳಕೆಗೆ ಗುಜರಿ ಅಂಗಡಿಗೆ ಕೊಡಬಹುದು. ಇದೇ ರೀತಿ ಯೂಸ್‌ ಆ್ಯಂಡ್‌ ತ್ರೋ ಪೆನ್ನುಗಳ ನಿಬ್‌ ಕತ್ತರಿಸಿ ಬೇರ್ಪಡಿಸುವುದು ಲಾಭದಾಯಕವಲ್ಲ. ಅದರ ಬೆಲೆಯೇ 2 ರೂ. ಇದನ್ನು ಕತ್ತರಿಸಿ ಬೇರ್ಪಡಿಸುವುದು ಗುಜರಿ ಅಂಗಡಿಯವರಿಗೆ ಲಾಭದಾಯಕವಾಗುವುದಿಲ್ಲ. ಗುಜರಿ ಅಂಗಡಿಯವರಿಗೂ ಇಂತಹ ಕ್ಷುಲ್ಲಕ ತ್ಯಾಜ್ಯಗಳು ಬೇಡವಾಗಿರುತ್ತದೆ. ಇದಕ್ಕಿಂತ ಮಿಗಿಲಾಗಿ ಪ್ಲಾಸ್ಟಿಕ್‌ ತೊಟ್ಟೆ, ಬಾಟಲಿಗಳನ್ನೇ ಗುಜರಿ ಅಂಗಡಿಗೆ ಕೊಡದೆ ಎಲ್ಲೆಂದರಲ್ಲಿ ಎಸೆಯುವ ಜನರು ಬಳಸಿದ ಪೆನ್ನುಗಳನ್ನು ಸಂಗ್ರಹಿಸಿ ಗುಜರಿ ಅಂಗಡಿಗೆ ಕೊಡುತ್ತಾರೆಯೆ? 

ಯೂಸ್‌ ಆ್ಯಂಡ್‌ ತ್ರೋ ಪೆನ್ನುಗಳನ್ನು ಬಳಸದೆ ಶಾಯಿ ಪೆನ್ನುಗಳನ್ನು ಬಳಸಿ ಎಂಬ ಆಂದೋಲನವನ್ನು ಉಡುಪಿಯಲ್ಲಿ ಸಾಮಾಜಿಕ ಕಾರ್ಯಕರ್ತ ಕಟಪಾಡಿಯ ಮಹೇಶ್‌ ಶೆಣೈ ಕಳೆದ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಿದರು. ಇಷ್ಟೊಂದು ಪ್ರಮಾಣದ ಪೆನ್ನುಗಳು ಭೂಗರ್ಭ ಸೇರುವ ಕುರಿತು ಕಳವಳಗೊಂಡ ಮಹೇಶ್‌ ಶೆಣೈ ಮೂಡಬಿದಿರೆಯ ಡಾ| ಮೋಹನ ಆಳ್ವರನ್ನು ಭೇಟಿಯಾಗಿ ಅವರಲ್ಲಿ ವಿನಂತಿಸಿಕೊಂಡ ಮೇರೆಗೆ ಆಳ್ವರು ವಿದ್ಯಾರ್ಥಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಯುಪಿಸಿಎಲ್‌ ಅದಾನಿ ಗ್ರೂಪ್‌ನ ಅಧಿಕಾರಿ ಕಿಶೋರ್‌ ಆಳ್ವ ತಮ್ಮ ಕಂಪೆನಿಯಿಂದ ಸುಮಾರು 80 ಶಾಲೆಗಳ ವಿದ್ಯಾರ್ಥಿಗಳಿಗೆ ಶಾಯಿ ಪೆನ್ನುಗಳನ್ನು ವಿತರಿಸುವುದಾಗಿ ಶೆಣೈ ಅವರಿಗೆ ಭರವಸೆ ನೀಡಿದ್ದಾರೆ. ಗುಜರಾತ್‌ಗೆ ಹೋದಾಗ ಅಲ್ಲಿನ ಎಡಿಜಿಪಿ ವಿನೋದ್‌ ಕುಮಾರ್‌ ಮಾಲ್‌ ಅವರು ತಾನೂ ಶಾಯಿ ಪೆನ್ನು ಉಪಯೋಗಿಸುವುದನ್ನು ತಿಳಿಸಿ ಶಾಯಿ ಪೆನ್ನಿನ ಆಂದೋಲನಕ್ಕೆ ಶುಭ ಹಾರೈಸಿದ್ದಾರೆ. ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್‌ ಡಿ’ಸೋಜರು ಸೆಲ್ಫಿ ಚಿತ್ರ ಕಳುಹಿಸಿದ್ದಲ್ಲದೆ ವಿಧಾನ ಮಂಡಲದಲ್ಲಿ ವಿಷಯ ಪ್ರಸ್ತಾವ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಶಾಸಕ ಕೆ.ರಘುಪತಿ ಭಟ್‌ ಅವರು ಪರಿಸರಕ್ಕೆ ಪೂರಕವಾದ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಟಪಾಡಿ ಎಸ್‌ವಿಎಸ್‌ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರೂ ಆಗಿರುವ ಶೆಣೈ ಶಾಯಿ ಪೆನ್ನುಗಳನ್ನು ವಿತರಿಸಿದ್ದಾರೆ. 

Advertisement

“ಉಡುಪಿ ಆರ್ಗಾನಿಕ್‌ ಕ್ಲಬ್‌’ ವಾಟ್ಸಪ್‌ ಗ್ರೂಪ್‌ ಮೂಲಕ ಪ್ರಚಾರ ಮಾಡುವುದಲ್ಲದೆ “ಸೆಲ್ಫಿ ವಿದ್‌ ಇಂಕ್‌ ಪೆನ್‌’ ಘೋಷಣೆಯಡಿ ಫೇಸ್‌ಬುಕ್‌ನಲ್ಲಿ ಚಿತ್ರ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗುವಾಗ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಅವರು ವಿಶೇಷ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಶಾಯಿ ಪೆನ್ನುಗಳನ್ನೇ ಪಡೆಯಲು ಸೂಚಿಸಬೇಕೆಂದು ಮಹೇಶ್‌ ಶೆಣೈ ವಿನಂತಿಸಿದ್ದಾರೆ. ಪಾನೀಯಗಳನ್ನು ಕುಡಿಯುವಾಗ ಉಪಯೋಗಿಸುವ ಪ್ಲಾಸ್ಟಿಕ್‌ ಸ್ಟ್ರಾ ಬಗ್ಗೆಗೂ ಇದೇ ರೀತಿಯ ಆಂದೋಲನ ಹಲದೇಶಗಳಲ್ಲಿದೆ. ಬಳಸಿ ಎಸೆಯುವ ಪೆನ್ನಿನಂತೆಯೇ ಸ್ಟ್ರಾ ಕೂಡ ಸಣ್ಣ ವಿಚಾರ. ಆದರೆ ಹನಿಗೂಡಿ ಹಳ್ಳ ಅನ್ನುವ ಗಾದೆ ಇಂತಹ ವಿಧದ ಮಾಲಿನ್ಯಕ್ಕೂ ಅನ್ವಯಿಸುತ್ತದೆ. ಪರಿಸರ ರಕ್ಷಣೆ ಎಂದರೆ ಗಿಡ ನೆಡುವುದು ಮಾತ್ರ ಅಲ್ಲ. ಈಗಾಗಲೇ ಕೆಟ್ಟಿರುವ ಪರಿಸರವನ್ನು ಇನ್ನಷ್ಟು ಹಾಳಾಗದಂತೆ ರಕ್ಷಿಸುವುದು. ಆ ದಿಶೆಯಲ್ಲಿ ಶಾಯಿ ಪೆನ್ನು ಉಪಯೋಗಿಸುವುದು, ಸಾಧ್ಯವಾದಲ್ಲೆಲ್ಲ ಸ್ಟ್ರಾ ಬಳಸದೆ ಇರುವುದು ಕೂಡ ಮುಖ್ಯವಾಗುತ್ತವೆ.

ಯಾವುದೇ ಆಂದೋಲನ ಯಶಸ್ವಿಯಾಗಬೇಕಾದರೆ “ನನಗಾಗುವ ಉಪಯೋಗವೇನು?’, “ಅನುಕೂಲತೆಗಳೇನು?’ ಎಂಬ ಮಾನದಂಡವೇ ಮುಖ್ಯ. ಒಂದು ವ್ಯವಸ್ಥೆಯಿಂದ ಪರೋಕ್ಷವಾಗಿ ತನಗೂ ಪ್ರತ್ಯಕ್ಷವಾಗಿ ಇತರರಿಗೂ ಸಮಾಜ-ಪ್ರಕೃತಿಗೂ ಎಷ್ಟೇ ತೊಂದರೆಯಾದರೂ ಆ ಮಾನ ದಂಡವನ್ನು ಯಾರೂ ಸ್ವೀಕರಿಸಲು ಸಿದ್ಧವಿಲ್ಲ. ಇತರರಿಗೆ, ಸಮಾಜಕ್ಕೆ, ಪ್ರಕೃತಿಗೆ ತೊಂದರೆಯಾದರೆ ತನಗೇನು ಎಂಬ ಮಾನಸಿಕತೆ ಹೆಮ್ಮರವಾಗಿ ಬೆಳೆದಿದೆ. ಶಾಯಿ ಪೆನ್ನುಗಳ ಗುಣಮಟ್ಟ, ಶಾಯಿಯ ಗುಣಮಟ್ಟ ಹೆಚ್ಚಿಸಬೇಕು. ಬೇಕಾದಂತೆ ಮೊನೆ, ಶಾಯಿ, ಪೆನ್ನುಗಳು ಎಲ್ಲ ಊರುಗಳಲ್ಲಿ ಲಭ್ಯ ಆಗುವಂತೆ ನೋಡಿಕೊಳ್ಳಬೇಕು. ಒಂದು ವ್ಯವಸ್ಥೆ ಸಂಪೂರ್ಣ ಸತ್ತು ಹೋದ ಮೇಲೆ ಅದನ್ನು ಮತ್ತೆ ಚಾಲ್ತಿಗೆ ತರುವುದು ಬಲು ಕಷ್ಟ. ಇದಕ್ಕೆ ಉದಾಹರಣೆ, ಪಾಲಿಶ್‌ ರಹಿತ ಅಕ್ಕಿ,  ಮಣ್ಣಿನ ಪಾತ್ರೆಯ ಅಡುಗೆ. ಇವುಗಳನ್ನು ನಿರ್ನಾಮ ಮಾಡಿದ ಬಳಿಕ ಇದು ಉತ್ತಮವೆಂದು ಈಗ ಕೆಲವರಿಗೆ ಜ್ಞಾನೋದಯವಾಗುತ್ತಿದೆ. ಶಾಯಿಪೆನ್ನೂ ಇದೇ ವರ್ಗಕ್ಕೆ ಸೇರ‌ಬಾರದು. ಮುಖ್ಯವಾಗಿ ತನ್ನಿಂದ ಕನಿಷ್ಠ ಮಾಲಿನ್ಯ ಉಂಟಾಗಲಿ ಎಂಬ ಪ್ರಜ್ಞೆ ಮೂಡಬೇಕು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next