Advertisement

ಅನನ್ಯ ಸಂಸ್ಕೃತಿಯೇ ಆಭರಣ

08:16 PM Aug 16, 2020 | Karthik A |

ನಮ್ಮ ದೇಶ ಎಂದಾಗ ತತ್‌ಕ್ಷಣ ವಾತ್ಸಲ್ಯ ತುಂಬಿದ ತಾಯಿಯ ಮುಖ ಕಣ್ಣೆದುರು ಬರುತ್ತದೆ.

Advertisement

ತಾಯಿಯಿಂತೆ ನಮ್ಮನ್ನು ಮಡಿಲಲ್ಲಿ ಬೆಳೆಸಿ ಸಲಹುವ ನಿನ್ನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಅಮ್ಮ, ಇನ್ನೊಂದು ವಿಷಯ ಗೊತ್ತ? ಶಾಲೆಯಲ್ಲಿ ಒಂದು ದಿನ ಪಾಠ ಮಾಡುತ್ತ ಶಿಕ್ಷಕರು ನಮ್ಮ ದೇಶದ ಇತಿಹಾಸದಲ್ಲೇ ಇಷ್ಟರ ವರೆಗೆ ಬೇರೆ ರಾಷ್ಟ್ರದ ಮೇಲೆ ದಂಡೆತ್ತಿ ಹೋದ, ಆಕ್ರಮಣ ಮಾಡಿದ ಉಹಾರಣೆಯೇ ಇಲ್ಲ ಎಂದಿದ್ದರು.

ಆ ದಿನ ನಿನ್ನ ಬಗ್ಗೆ ಎಷ್ಟು ಹೆಮ್ಮೆ ಆಗಿತ್ತು.

ಗೊತ್ತಾ? ವ್ಯಾಪಾರದ ಸೋಗಿನಲ್ಲಿ ಬಂದು ಪರಕೀಯರು ಅನೇಕ ಶತಮಾನಗಳ ಕಾಲ ಇಲ್ಲೇ ತಳವೂರಿದ್ದರೂ ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಆಚಾರ-ವಿಚಾರಗಳಿಗೆ ಯಾವುದೇ ಕುಂದುಂಟಾಗಿಲ್ಲ ಎನ್ನುವಾಗ ಹೆಮ್ಮೆಯಿಂದ ತಲೆ ಎತ್ತಿ ನಡೆಯುತ್ತೇವೆ. ವಿವಿಧತೆಯಲ್ಲಿ ಏಕತೆ ನಮ್ಮನ್ನು ಇತರರಿಗಿಂತ ವಿಶೇಷವಾಗಿಸುವ ಇನ್ನೊಂದು ಅಂಶ. ನಮ್ಮಲ್ಲಿ ಅನೇಕ ಭಾಷೆ, ಆಚಾರ-ವಿಚಾರ, ಸಂಸ್ಕೃತಿ, ಮತಗಳಿದ್ದರೂ ನಿನ್ನ ವಿಷಯ ಬಂದಾಗ ಒಂದಾಗಿ ಬಿಡುತ್ತೇವೆ.

Advertisement

ಇದುವೇ ನೀನು ನಮ್ಮೆಲ್ಲರಿಗೆ ಕಲಿಸಿದ ಅನನ್ಯ ಗುಣ. ಇದನ್ನು ಇತರೆಡೆಗಳಲ್ಲಿ ಹುಡುಕಿದರೂ ಕಾಣ ಸಿಗದು. ಅದರಲ್ಲೂ ಒಂದೇ ಭಾಷೆ ಸುಮಾರು ಆರು ಕಿ.ಮೀ.ಗೆ ಬದಲಾಗುತ್ತದಂತೆ. ಅಷ್ಟೊಂದು ವೈವಿಧ್ಯವಿದ್ದರೂ ಒಗ್ಗಟ್ಟಿನಿಂದ ಮುಂದುವರಿಯಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಿ. ಅದೇ ಕಾರಣಕ್ಕೆ ಎಲ್ಲರ ರಕ್ತದಲ್ಲೂ ಸಹಿಷ್ಣುತೆಯ ಗುಣ ಹರಿಯುತ್ತಿದೆ.

ಅಮ್ಮಾ, ಇಡೀ ವಿಶ್ವಕ್ಕೆ ಆಯುರ್ವೇದ ಔಷಧದ ಮಹತ್ವ ತಿಳಿಸಿಕೊಟ್ಟಿದ್ದು ನಾವು ಎನ್ನುವ ಹೆಮ್ಮೆ ಇದೆ. ಈಗ ಕೊರೊನಾ ಸಂಕಟದಲ್ಲೂ ನಮ್ಮ ಕೈ ಹಿಡಿಯುತ್ತಿರುವುದು ಗಿಡ ಮೂಲಿಕೆಗಳ ಔಷಧವೇ. ನಮ್ಮಲ್ಲೇ ಹುಟ್ಟಿಕೊಂಡ ಯೋಗದ ಮಹತ್ವ ಅರಿವಾದ್ದರಿಂದಲೇ ಜಗತ್ತಿನ ಎಲ್ಲೆಡೆ ಅದಕ್ಕೆ ಮನ್ನಣೆ ದೊರೆತಿದೆ ಎಂದು ನಾವು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಇನ್ನು ಸೊನ್ನೆಯನ್ನು ಕಂಡು ಹಿಡಿದು ಗಣಿತ ಲೋಕಕ್ಕೆ ಅರ್ಪಿಸಿದ್ದು ನಮ್ಮವರೇ ಎನ್ನುವಾಗ ನೀನೆಷ್ಟು ಸಂಭ್ರಮ ಪಟ್ಟಿದ್ದಿರಬಹುದಲ್ಲ? ಬಾಹ್ಯಾಕಾಶಕ್ಕೆ ನಿನ್ನದೇ ಮಕ್ಕಳು ಕಾಲಿಟ್ಟಾಗ, ಸಮುದ್ರ, ಭೂಗರ್ಭದಲ್ಲಿ ಸಂಶೋಧನೆ ನಡೆಸಿದಾಗ, ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ ವೆಲ್ತ್‌, ವಿಶ್ವಕಪ್‌ ಕ್ರಿಕೆಟ್‌ ಮುಂತಾದ ಕ್ರೀಡಾಕೂಟ, ವಿವಿಧ ರಂಗಗಳಲ್ಲಿ ನಿನ್ನ ಮಕ್ಕಳು ಸಾಧನೆ ಮಾಡಿದಾಗ ನೀನೆಷ್ಟು ಸಂತಸಪಟ್ಟಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಬಲ್ಲೇ. ಆಗೆಲ್ಲ ನಾವೂ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟಿದ್ದೆವು.

ಅಮ್ಮಾ, ಈ ಸಂದರ್ಭ ನಾವೆಲ್ಲ ನಿನ್ನ ವೀರಪುತ್ರರಾದ ಯೋಧರನ್ನು ಸ್ಮರಿಸಿಕೊಳ್ಳಲೇಬೇಕು. ನನ್ನಂತಹ ಕೋಟ್ಯಂತರ ಜನರು ಇಂದು ನೆಮ್ಮದಿಯಿಂದ, ಸುರಕ್ಷಿತವಾಗಿರಲು ಅವರೇ ಕಾರಣ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನಮಗಾಗಿ ಅವರು ಎಲ್ಲವನ್ನೂ ತ್ಯಾಗ ಮಾಡಿ ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ಗಡಿ ಕಾಯುತ್ತಿದ್ದಾರೆ. ಅವರ ಸೇವೆಗೆ ಪರ್ಯಾಯವೇ ಇಲ್ಲ.

ಪ್ರಕೃತಿ ವಿಕೋಪ ಸಂಭವಿಸಿದಾಗ, ಅನಾಹುತ, ಅಪ‌ಘಾತವಾದಾಗ, ಉಗ್ರರ ದಾಳಿಯಾದಾಗ, ಸಾಂಕ್ರಾಮಿಕ ರೋಗ ಹಬ್ಬಿದಾಗ ನಿನ್ನ ಹಾಗೆ ನಾವು ಬೇಸರ ಪಟ್ಟುಕೊಂಡಿದ್ದೇವೆ. ಈ ಸಂಕಟದಿಂದ ಬೇಗ ಪಾರು ಮಾಡು ದೇವ ಎಂದು ಮೊರೆ ಇಟ್ಟಿದ್ದೇವೆ. ಪ್ರಕೃತಿಯನ್ನು ಹಾಳು ಮಾಡಿದಾಗ, ಅಲ್ಲಲ್ಲಿ ಕಸ ಎಸೆದು ನಿನ್ನ ಸುಂದರ ರೂಪವನ್ನು ವಿರೂಪಗೊಳಿಸಿದಾಗ, ನಮ್ಮ ಒಡಹುಟ್ಟಿದವರಂತಿರುವ ಪ್ರಾಣಿ, ಪಕ್ಷಿ, ಕೀಟಗಳನ್ನು ಕೆಲವರು ಹಿಂಸಿಸಿದಾಗ, ಕೊಂದಾಗ ಅಮ್ಮಾ ನನಗೆ ಕೋಪ ಬರುತ್ತದೆ. ಆದಷ್ಟು ಅವರನ್ನು ತಿದ್ದಲು ಪ್ರಯತ್ನಿಸುವೆ. ಮತ್ತೂ ಸಾಧ್ಯವಾಗದಾಗ ಅವರಿಗೆ ಉತ್ತಮ ಬುದ್ಧಿ ಕೊಡು ದೇವರೇ ಎಂದು ಪ್ರಾರ್ಥಿಸುತ್ತೇನೆ.

ನಿನ್ನ ನೆಚ್ಚಿನ ಸ್ವಾತಂತ್ರ್ಯೋತ್ಸವ ಬಂದೇ ಬಿಟ್ಟಿತು. ಆ ನೆಪದಲ್ಲಿ ಇದನ್ನೆಲ್ಲ ಹಂಚಿಕೊಂಡೆ. ನೀನು ಸದಾ ನಗು ನಗುತ್ತಾ, ಸಂತೋಷದಿಂದ ಇರಬೇಕು ಎನ್ನುವುದೇ ನನ್ನ ಹಾರೈಕೆ.

ವಿದ್ಯಾರತ್ನಾ ಭಟ್‌, ವಿವೇಕಾನಂದ ಎಂಜಿನಿಯರಿಂಗ್‌  ಕಾಲೇಜು, ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next