Advertisement

ಮನೆ ಮೇಲೊಂದು ಕೈತೋಟ

10:07 AM Aug 19, 2019 | Naveen |

ವಿಜಯಕುಮಾರ ಎಸ್‌.ಕಲ್ಲಾ
ಜೇವರ್ಗಿ: ಸಾಮಾನ್ಯವಾಗಿ ಮನೆ ತಾರಸಿ ಮೇಲೆ ಹೂವಿನ ಕುಂಡ ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಸುವುದು ನಾವೆಲ್ಲ ನೋಡಿದ್ದೇವೆ. ಆದರೆ ಪಟ್ಟಣದ ದತ್ತನಗರ ನಿವಾಸಿಯೊಬ್ಬ ತನ್ನ ಮನೆಯ ಮೇಲ್ಛಾವಣಿ ಮೇಲೆ ಕುರಿ ಸಾಕಾಣಿಕೆ ಜೊತೆಗೆ ತರಹೇವಾರಿ ತರಕಾರಿ ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Advertisement

ವಿಜಯಪುರ ರಸ್ತೆಯಲ್ಲಿ ಬರುವ ಪಟ್ಟಣದ ದತ್ತನಗರದ ನಿವಾಸಿಯಾಗಿರುವ ಶಂಕರಯ್ಯ ಹೂಗಾರ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದವರು.

ತೀವ್ರ ಬಡತನವಿರುವ ಕಾರಣ ಅಲ್ಲಲ್ಲಿ ನಡೆಯುವ ಸಂತೆಗಳಲ್ಲಿ ಪೇಡೆ, ಬೆಳ್ಳುಳ್ಳಿ ವ್ಯಾಪಾರ ಮಾಡುವ ಮೂಲಕ ಉಪಜೀವನ ಸಾಗಿಸುತ್ತಿದ್ದರು. ಕಳೆದ 2004ರಲ್ಲಿ ಸ್ವಗ್ರಾಮ ಕೋಹಳ್ಳಿದಿಂದ ಪಟ್ಟಣಕ್ಕೆ ಬಂದು ನೆಲೆಸಿದ ಶಂಕರಯ್ಯ ಅವರ ಬದುಕು ಈಗ ಸಂಪೂರ್ಣ ಬದಲಾಗಿದೆ. ಕಾಲಿ ಕೈಯಲ್ಲಿ ಪಟ್ಟಣಕ್ಕೆ ಬಂದ ಇವರು ಜೇವರ್ಗಿ ಸುತ್ತಮುತ್ತ ಶಹಾಪುರ, ಮೋರಟಗಿ, ಸಿಂದಗಿ ಸೇರಿದಂತೆ ಅನೇಕ ಕಡೆ ನಡೆಯುವ ಸಂತೆಗಳಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಇದರ ಜೊತೆಗೆ ತಳ್ಳುಬಂಡಿಯಲ್ಲಿ ವ್ಯಾಪಾರ ಪ್ರಾರಂಭಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕಳೆದ ಐದಾರು ವರ್ಷದ ಹಿಂದೆ ಎಂಟು ಲಕ್ಷ ರೂ. ನೀಡಿ ನಿವೇಶನ ಖರೀದಿಸಿ 14 ಲಕ್ಷ ರೂ.ಖರ್ಚು ಮಾಡಿ ಸುಂದರ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಏಳು ಲಕ್ಷ ರೂ. ವೆಚ್ಚದ ಮತ್ತೂಂದು ನಿವೇಶನವನ್ನು ಮನೆ ಹತ್ತಿರವೇ ಖರೀದಿಸಿದ್ದಾರೆ. ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರಿಗೆ ಜಮೀನು ಇಲ್ಲದ ನೋವು ಸದಾ ಕಾಡುತ್ತಿತ್ತು. ಆಗ ಅವರಿಗೆ ಮೊದಲು ಹೊಳೆದಿದ್ದೇ ಮನೆ ಮೇಲ್ಛಾವಣಿ.

ಮಳೆಗಾಲದಲ್ಲಿ ಎಲ್ಲರ ತಾರಸಿ ನೀರು ಹೀರಿ ಖಾಲಿಯಾಗಿ ಉಳಿದರೆ, ಇವರ ಮನೆ ತಾರಸಿ ಹಾಗಲ್ಲವೇ ಅಲ್ಲ. ಮಳೆಗಾಲ ಆರಂಭದಿಂದ ಕಡೆಯತನಕ ಅದರಲ್ಲಿ ಹಸಿರೋ ಹಸಿರು.

Advertisement

ಶಂಕರಯ್ಯನವರು ತಮ್ಮ ಮನೆ ತಾರಸಿ ಮೇಲೆ ವಾಟರ್‌ ಫ್ರೂಫ್‌ ಪ್ಲಾಸ್ಟಿಕ್‌ ಬಳಸಿ ಅದರಲ್ಲಿ ಎರೆಮಣ್ಣು ಹಾಕಿದ್ದಾರೆ. ಸಿಂಟೆಕ್ಸ್‌ ಮೂಲಕ ನೀರು ಹರಿಬಿಟ್ಟು ಅದರಲ್ಲಿ ಬೆಂಡೆಕಾಯಿ, ಮೆಂತೆ, ಪಾಲಕ್‌, ಕೊತಂಬರಿ, ಪುಂಡಿ ಪಲ್ಯಾ, ಚವಳಿ ಕಾಯಿ, ಕುಂಬಳಕಾಯಿ ಹಾಗೂ ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದಾರೆ. ಖಾಲಿ ನಿವೇಶನದಲ್ಲಿ ಕಬ್ಬು, ಬಾಳೆಗಿಡ, ಕುರಿಗಳಿಗಾಗಿ ಮೇವು, ಸಾಗವಾನಿ, ಹೆಬ್ಬೇವಿನ ಗಿಡಗಳನ್ನು ನೆಟ್ಟಿದ್ದಾರೆ. ಅದರ ಜೊತೆಗೆ ಐದಾರು ಕುರಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿ ಸಾಕಾಣಿಕೆ ಇರುವ ಕಾರಣ ತಾರಸಿ ತೋಟಕ್ಕೆ ಬೇಕಾದಷ್ಟು ಗೊಬ್ಬರ ಲಭ್ಯವಾಗುತ್ತಿದೆ.

ನಮಗೆ ಇರಲು ಜಾಗವಿಲ್ಲ, ಇವೆಲ್ಲಾ ಕೈತೋಟ ಎಲ್ಲಿ ಮಾಡೋಣ ಎನ್ನುವುದು ಕೆಲವರ ಪ್ರಶ್ನೆಯಾಗಿರುತ್ತದೆ. ಆದರೆ ಇದಕ್ಕೆ ಶಂಕರಯ್ಯನವರ ತಾರಸಿ ತೋಟ ತಾಜಾ ಉದಾಹರಣೆ. ದೊಡ್ಡ ನಗರಗಳಲ್ಲಿ ಒಂದಡಿ ಜಾಗ ಬಿಡದೇ ಮನೆ ಕಟ್ಟುವ ಪರಿಸ್ಥಿತಿ ಇರುವುದರಿಂದ ಕೈತೋಟ ಮಾಳಿಗೆ ಏರಿ ಕುಳಿತುಕೊಳ್ಳುವಂತಾಗಿದೆ. ಶಂಕರಯ್ಯನವರಿಗೆ ತಾರಸಿ ತೋಟ ಖುಷಿ, ನೆಮ್ಮದಿ ನೀಡುವುದರ ಜೊತೆಗೆ ವಿಷ ರಹಿತವಾದ ತರಕಾರಿ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ ಬಿಸಿಲಿನಿಂದ ಬಣಗುಡುವ ತಾರಸಿಗೆ ಹಸಿರು ಗಿಡಗಳು, ಪೊದೆಗಳು ತಂಪಾದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ತಾರಸಿಯ ಕೆಳಗಿನ ಕೋಣೆಗಳು ಬೇಸಿಗೆ ಕಾಲದಲ್ಲಿ ತಂಪಾಗಿರುತ್ತದೆ. ಈ ತೋಟದಿಂದ ವಾರದ ತರಕಾರಿ ಖರ್ಚು ಉಳಿತಾಯ ಹಾಗೂ ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ನೀಡುತ್ತೇವೆ ಎಂದು ಶಂಕರಯ್ಯನ ಪತ್ನಿ ಗುಂಡಮ್ಮ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next