Advertisement

BJP-JDS Alliance;ಅಧಿಕಾರಕ್ಕಾಗಿ ಜೆಡಿಎಸ್ ಯಾವುದೇ ಹೊಂದಾಣಿಕೆಗೂ ಸಿದ್ದ;ಸಿಎಂ ಸಿದ್ದರಾಮಯ್ಯ

01:05 PM Sep 09, 2023 | Team Udayavani |

ಹುಬ್ಬಳ್ಳಿ: ಜೆಡಿಎಸ್ ಬಿಜೆಪಿಯ ಬಿಟಿಎಂ ಎಂದು ಈ ಹಿಂದೆ ನಾನು ಹೇಳಿದಾಗ ಜೆಡಿಎಸ್ ನವರು ಕೋಪಗೊಳ್ಳುತ್ತಿದ್ದರು. ಆದರೆ ಇದೀಗ ಏನಾಗಿದೆ ಎಂಬುದು ರಾಜ್ಯದ ಜನತೆಯ ಮುಂದಿದೆ. ತತ್ವ ಸಿದ್ಧಾಂತ, ಬದ್ಧತೆ ಇಲ್ಲದ ಜೆಡಿಎಸ್ ನವರು ಅಧಿಕಾರದ ಲಾಲಸೆಗಾಗಿ ಯಾವ ಹೊಂದಾಣಿಕೆಗೂ ಸಿದ್ದ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement

ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಹೇಳಿಕೊಳ್ಳುವುದಕ್ಕೆ ಜಾತ್ಯಾತೀತ ಜನತಾದಳ ಆದರೆ ಅವರು ಚುನಾವಣಾ ಹೊಂದಾಣಿಕೆಗೆ ಮುಂದಾಗಿರುವುದು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ, ಜೆಡಿಎಸ್ ನವರಿಗೆ  ರಾಜಕೀಯ ತತ್ವ ಸಿದ್ಧಾಂತ ಇಲ್ಲವೇ ಇಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ ಎಂದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಯಾವ ಕಾರಣಕ್ಕೂ ಕೋಮುವಾದಿ ಶಕ್ತಿಗಳ ಜೊತೆ ಹೊಂದಾಣಿಕೆ ಇಲ್ಲವೇ ಇಲ್ಲ ಎನ್ನುತ್ತಿದ್ದರು. ಇದೀಗ ಜಿ.ಟಿ. ದೇವೇಗೌಡರ ಮೂಲಕ ಪಕ್ಷದ ಉಳಿವಿಗಾಗಿ ಹೊಂದಾಣಿಕೆ ಅನಿವಾರರ್ಯವೆಂದು ಹೇಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಖರ್ಗೆಯವರು ಕೇವಲ ಎಐಸಿಸಿ ಅಧ್ಯಕ್ಷರಲ್ಲ ಬದಲಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಅವರನ್ನು ಆಹ್ವಾನಿಸಬೇಕಾಗಿತ್ತು ಎಂದರು.

ನಾನು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿದ ಸಿಎಂ, ನನ್ನ ಮೇಲಿನ ಅಭಿಮಾನದಿಂದ ಕೆಲವರು ಈ ರೀತಿ ಹೇಳಿರಬಹುದು ಎಂದರಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡುತ್ತಿಲ್ಲ ವಿಷಯಧಾರಿತವಾಗಿ ಆರೋಪಿಸುತ್ತಿದ್ದೇನೆ ಎಂದು ತಿಳಿಸಿದರು.

Advertisement

ರಾಜ್ಯದ ಮಹದಾಯಿ, ಕಾವೇರಿ, ಕೃಷ್ಣ ಮೇಲ್ದಂಡೆ ಯೋಜನೆ ಹಾಗೂ ಮೇಕೆದಾಟು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ವಿಷಯ ಹಾಗೂ ಸಮಸ್ಯೆಗಳ ಕುರಿತಾಗಿ ಸರ್ವಪಕ್ಷದ ನಿಯೋಗ ಕರೆತರಲಾಗುತ್ತಿದ್ದು ಇದಕ್ಕೆ ಸಮಯಾವಕಾಶ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ಹತ್ತು ದಿನಗಳ ಹಿಂದೆ ಪತ್ರ ಬರೆದಿದ್ದೇನೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಇದನ್ನೂ ಓದಿ:Desi Swara:ಹೆಸರಿನ ಹಿಂದಿನ ಅಗಾಧತೆಯ ಹುಡುಕಿ…Pen ಇಲ್ಲದ Drive ಎಂಬುದೇ ಪೆನ್‌ ಡ್ರೈವ್‌!

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು ಕೇಂದ್ರ ಸರ್ಕಾರ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮೋದನೆ ನೀಡುತ್ತಿಲ್ಲ ಎಂದರು.

ಮಹದಾಯಿ ಯೋಜನೆಗೆ ಅಗತ್ಯವಿರುವ ರಾಜ್ಯ ವನ್ಯಜೀವಿ ಮಂಡಳಿ ಸಭೆಯಿಂದ ಅನುಮೋದನೆ ನೀಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಿಎಂ, ಕಳೆದ ಮೂರು ವರ್ಷ 10 ತಿಂಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿಯೂ ಅವರೇ ಅಧಿಕಾರದಲ್ಲಿದ್ದಾರೆ ಜ್ಯೋಶಿ ಅವರು ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದ್ದು, ಆಗಸ್ಟ್ ನಲ್ಲಿಬರಬೇಕಾದ ಪ್ರಮಾಣದ ಮಳೆ ಬರಲಿಲ್ಲ. ಇದರಿಂದ ವಿದ್ಯುತ್ ಸಮಸ್ಯೆ ಉಂಟಾಗಿರುವುದು ನಿಜ. ಇದು ರೈತರ ಕೃಷಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ವಿದ್ಯುತ್ ಸರಬರಾಜನ್ನು ಆದಷ್ಟು ಸರಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ನುಡಿದರು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದು, ಬರಗಾಲಕ್ಕೆ ಇರುವ ನಿಯಮಾವಳಿಗಳನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು ಇದುವರೆಗೂ ಯಾವುದೇ ಬದಲಾವಣೆ ಕೈಗೊಂಡಿಲ್ಲ. ರಾಜ್ಯ ಸರ್ಕಾರದಿಂದ ಅಗತ್ಯವಿರುವ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಬಿಜೆಪಿ ಸರ್ಕಾರದಲ್ಲಿ ನಡೆದ ಕೆಲ ಪ್ರಕರಣಗಳ ತನಿಖೆಗೆ ಆದೇಶಿಸಲಾಗಿದ್ದು ಮಕ್ಕಳಿಗೆ ಸಮವಸ್ತ್ರ ನೀಡಿಕೆ ಹಾಗೂ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಕಳಪೆ ಕಂಡುಬಂದಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಂದ ಸರಕಾರಕ್ಕಾಗಿರುವ ಹಾನಿ ಹಣವನ್ನು ವಸೂಲಿ ಮಾಡುವಂತೆ ಸೂಚಿಸಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಸಚಿವರಾದ ಚಲುವರಾಯಸ್ವಾಮಿ, ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಸಲೀಂ ಅಹ್ಮದ್ ಇನ್ನಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next