Advertisement

ಜಾರಕಿಹೊಳಿ ಬ್ರದರ್ಸ್‌ ಈಗ ಸೈಲೆಂಟ್‌

11:41 PM Apr 30, 2019 | Lakshmi GovindaRaj |

ಬೆಳಗಾವಿ: ಕಳೆದೊಂದು ತಿಂಗಳಿಂದ ರಾಜಕೀಯ ಕೆಸರೆರಚಾಟ, ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದ ಗೋಕಾಕ್‌ನ ಜಾರಕಿಹೊಳಿ ಸಹೋದರರು ಈಗ ಸೈಲೆಂಟ್‌ ಆಗಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ರಮೇಶ ಜಾರಕಿಹೊಳಿ ಯಾವುದೇ ಹೇಳಿಕೆ ನೀಡದೆ ತಮ್ಮ ಪಾಡಿಗೆ ತಾವಿದ್ದಾರೆ.

Advertisement

ನಿತ್ಯ ಒಂದಿಲ್ಲೊಂದು ಹೇಳಿಕೆಗಳನ್ನು ಕೊಡುತ್ತ ರಾಜಕೀಯದಲ್ಲಿ ಭಿನ್ನಮತ ಭುಗಿಲೆಬ್ಬಿಸಿದ್ದ ಜಾರಕಿಹೊಳಿ ಸಹೋದರರ ನಡವಳಿಕೆ ದೋಸ್ತಿ ಸರ್ಕಾರವನ್ನೇ ಬೆಚ್ಚಿ ಬೀಳಿಸಿತ್ತು. ಸರ್ಕಾರ ಬಿದ್ದೇ ಬಿಡ್ತು ಎನ್ನುವ ಹಂತಕ್ಕೆ ಹೋಗಿತ್ತು. ಸಹೋದರರ ಜಗಳ ಬೀದಿ ಕಾಳಗವಾಗಿ ಮಾರ್ಪಟ್ಟಿತ್ತು. ಕಳೆದ 2-3 ದಿನಗಳಿಂದ ಸತೀಶ ಹಾಗೂ ರಮೇಶ ಯಾವುದೇ ಮಾಧ್ಯಮ ಹೇಳಿಕೆಗಳನ್ನು ನೀಡದೆ ಶಾಂತರಾಗಿದ್ದಾರೆ.

ಲೋಕಸಭೆ ಚುನಾವಣೆಗಿಂತ ಮುಂಚೆಯಿಂದಲೂ ಒಬ್ಬರಿಗೊಬ್ಬರು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದರು. ಲಖನ್‌ ಹಾಗೂ ಸತೀಶ ಒಂದಾಗುವ ಮೂಲಕ ರಮೇಶಗೆ ಟಾಂಗ್‌ ಕೊಟ್ಟಿದ್ದರು. ಇದರಿಂದ ಕೆರಳಿದ್ದ ರಮೇಶ, ಪ್ರತಿಷ್ಠೆಯನ್ನೇ ಸವಾಲಾಗಿ ಸ್ವೀಕರಿಸಿ ಪರಸ್ಪರ ಏಟು-ಏದಿರೇಟು ನೀಡಿದ್ದಾರೆ.

ಇಬ್ಬರಿಗೂ ಪ್ರತಿಷ್ಠೆಯೇ ಮುಖ್ಯ ಎಂದು ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರವಾಗಿಯೂ ವಿರೋಧ ವ್ಯಕ್ತಪಡಿಸುವ ಮಟ್ಟಿಗೆ ವಾಗ್ವಾದ ನಡೆದಿತ್ತು. ಆದರೆ, ಈಗ ಸತೀಶ ಜಾರಕಿಹೊಳಿಯವರು ವಿಧಾನಸಭೆ ಉಪ ಸಮರದಲ್ಲಿ ಮಗ್ನರಾಗಿದ್ದರೆ, ರಮೇಶ ಜಾರಕಿಹೊಳಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಮಾಧ್ಯಮದವರಿಂದ ದೂರ ಉಳಿದುಕೊಂಡಿದ್ದಾರೆ.

ತಮ್ಮನ ಮನವಿಗೆ ತಣ್ಣಗಾದ ಬ್ರದರ್ಸ್‌: ಸಹೋದರರ ಜಗಳ ರಾಜಕೀಯಕ್ಕೂ ಮೀರಿ ಕೌಟುಂಬಿಕ ಹಂತಕ್ಕೂ ಬಂದು ವಿಕೋಪಕ್ಕೆ ತಿರುಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಹೋದರ, ಅರಭಾಂವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಬ್ಬರನ್ನೂ ತಣ್ಣಗಾಗಿಸಿದ್ದಾರೆ.

Advertisement

ಜಾರಕಿಹೊಳಿ ಮನೆತನದಲ್ಲಿ ಬಾಲಚಂದ್ರ ಅವರಿಗೆ ವಿಶೇಷ ಗೌರವವಿದೆ. ಇವರ ಮಾತನ್ನು ಯಾರೂ ಮೀರುವುದಿಲ್ಲ. ಹೀಗಾಗಿ, ಹಿರಿಯ ಸಹೋದರರ ಬಾಯಿ ಮುಚ್ಚಿಸಿರುವ ಬಾಲಚಂದ್ರ, ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡದೆ ಸೈಲೆಂಟ್‌ ಆಗಿರುವಂತೆ ತಾಕಿತು ಮಾಡಿದ್ದಾರೆ.

ತಮ್ಮನ ಮಾತಿನಿಂದ ತಣ್ಣಗಾಗಿರುವ ಸತೀಶ ಮತ್ತು ರಮೇಶ 2-3 ದಿನಗಳಿಂದ ಯಾವುದೇ ಹೇಳಿಕೆ ನೀಡುತ್ತಿಲ್ಲ. ಬಾಯಿಗೆ ಬೀಗ ಹಾಕಿಕೊಂಡಿರುವ ಸಹೋದರರ ಮಾತಿಗೆ ಬ್ರೇಕ್‌ ಬಿದ್ದಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗೆ ಇಟ್ಟಿರುವ ರಮೇಶ, ಪಕ್ಷ ಬಿಡಲು ನಿರ್ಧರಿಸಿದ್ದಾರೆ.

ಕೈ ಪಡೆಯ ಹೈಕಮಾಂಡ್‌ ಹಾಗೂ ಇತರ ವರಿಷ್ಠರು ಎಷ್ಟೇ ಮನವೊಲಿಸಲು ಯತ್ನಿಸಿದರೂ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕರು ಮನವೊಲಿಕೆಗೆ ಕಸರತ್ತು ನಡೆಸಿದ್ದರೂ ರಮೇಶ ಇನ್ನೂ ಮನಸ್ಸು ಬದಲಿಸುತ್ತಿಲ್ಲ.

ರಮೇಶ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ದಿಂದ ಹೊರ ಬರುವುದು ನಿಶ್ಚಿತ. ಲೋಕಸಭೆ ಚುನಾವಣಾ ಫಲಿತಾಂಶ ಬರುವವರೆಗೆ ಕಾಯುತ್ತಾರಾ ಅಥವಾ ಮೇ 23ರೊಳಗೆಯೇ ಪಕ್ಷ ಬಿಟ್ಟು ಹೊರ ಬರುತ್ತಾರಾ ಎಂಬುದು ಇನ್ನೂ ನಿರ್ಧರಿಸಿಲ್ಲ. ಕಾಂಗ್ರೆಸ್‌ ವರಿಷ್ಠರ ಬಗ್ಗೆ ತೀವ್ರ ನೊಂದಿರುವ ರಮೇಶ ಯಾರ ಮಾತಿಗೂ ಕಿಮ್ಮತ್ತು ಕೊಡುತ್ತಿಲ್ಲ.

ಸಚಿವ ಸ್ಥಾನದ ಆಫರ್‌ ತಿರಸ್ಕಾರ: ರಮೇಶ ತಮ್ಮ ಬೆಂಬಲಿಗ ಶಾಸಕರೊಂದಿಗೆ ಪಕ್ಷ ಬಿಟ್ಟು ಹೋದರೆ ದೋಸ್ತಿ ಸರ್ಕಾರ ಬೀಳುವುದು ಖಚಿತ. ಹೀಗಾಗಿ, ಇದನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ವರಿಷ್ಠರು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

ಸಾಧ್ಯವಾದರೆ ರಮೇಶಗೆ ಸಚಿವ ಸ್ಥಾನ ಕೊಟ್ಟು ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಆದರೆ, “ಇಂಥ ಆಫರ್‌ಗಳ ಆಮಿಷಕ್ಕೆ ಬಲಿಯಾಗುವುದಿಲ್ಲ. ಅಧಿಕಾರಕ್ಕಾಗಿ ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಅಧಿಕಾರದಾಸೆಗಾಗಿ ಪಕ್ಷದಲ್ಲಿ ಉಳಿಯುವ ಮಾತೇ ಇಲ್ಲ’ ಎಂದು ರಮೇಶ ಈಗಾಗಲೇ ವರಿಷ್ಠರಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ಯಾವ ಸಾಹುಕಾರರ ಕಡೆಗೆ ನಗರಸಭೆ ಸದಸ್ಯರು?: ಗೋಕಾಕ್‌ ನಗರಸಭೆ ಸದಸ್ಯರು ಯಾವ ಸಾಹುಕಾರರ ಜತೆ ಗುರುತಿಸಿಕೊಳ್ಳುವುದೆಂಬ ಗೊಂದಲದಲ್ಲಿದ್ದಾರೆ. ಒಂದೆಡೆ, ರಮೇಶ ಜಾರಕಿಹೊಳಿ ಸಭೆ ನಡೆಸಿ, “ಬೆಂಗಳೂರಿನಿಂದ ವಾಪಸ್‌ ಆಗುವುದರೊಳಗಾಗಿ ಎಲ್ಲರೂ ನನ್ನ ಜತೆಗೆ ಇರಬೇಕು. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನನ್ನ ಅಧೀನದಲ್ಲಿಯೇ ನಡೆಯಲಿದೆ. ಹೀಗಾಗಿ, ನಿರ್ಧಾರ ಏನೆಂಬುದನ್ನು ತಿಳಿಸಿ’ ಎಂದು ಹೇಳಿದ್ದಾರೆ.

ಅದರಂತೆ ಸಹೋದರ ಲಖನ್‌ ಜಾರಕಿಹೊಳಿ ಸಭೆ ನಡೆಸಿ, “ಇಲ್ಲಿಯವರೆಗೆ ನಗರಸಭೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಈಗ ನನ್ನೊಂದಿಗೆ ಎಲ್ಲರೂ ಕೈ ಜೋಡಿಸಿ’ ಎಂದು ಹೇಳಿದ್ದಾರೆ. ಈ ಮಧ್ಯೆ, ಸದಸ್ಯರು ಯಾರ ಕಡೆಗೆ ವಾಲಬೇಕೆಂಬ ಅಡ್ಡಕತ್ತರಿಯಲ್ಲಿದ್ದಾರೆ. ಯಾರ ಮಾತನ್ನೂ ಮೀರಿ ಹೋಗುವಂತಿಲ್ಲ. ಗೊಂದಲದಲ್ಲಿ ಸಿಲುಕಿರುವ ಸದಸ್ಯರು ಯಾರ ಕಡೆಗೆ ಹೋದರೂ ಮತ್ತೂಬ್ಬ ಸಾಹುಕಾರ ಸಿಟ್ಟಾಗುತ್ತಾರೆಂಬ ಭಯದಲ್ಲಿದ್ದಾರೆ.

* ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next