Advertisement
ಸದ್ಯಕ್ಕೆ ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ, ಹೊಸ ವರ್ಷದಂದು ಶಿಶುಗಳ ಜನನ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾದಲ್ಲಿ ಆ ದಿನ 46,299 ಶಿಶುಗಳು ಜನಿಸಿವೆ ಎಂದು ಯುನಿಸೆಫ್ನ ಕಾರ್ಯ ನಿರ್ವಾಹಕ ನಿರ್ದೇಶಕ ಹೆನ್ರಿಟ್ಟಾ ಪೊರೆ ತಿಳಿಸಿದ್ದಾರೆ.
ಬೊಂಬೆಗಳೇ ಜಪಾನಿಯರ ಒಡನಾಡಿಗಳಾಗಿವೆ. ಮನೆಗಳಲ್ಲಿ ಶಾಲೆಗಳಲ್ಲಿ ಬೊಂಬೆಗಳನ್ನು ಸಂಗ್ರಹಿಸಿ ಇಡುವ ಸಂಪ್ರದಾಯ ಬೆಳೆದಿದೆ. ಬಸ್ ನಿಲ್ದಾಣಗಳಲ್ಲಿ, ಪಾರ್ಕ್ಗಳಲ್ಲಿ ಮನುಷ್ಯರನ್ನು ಹೋಲುವ ದೊಡ್ಡ ಬೊಂಬೆಗಳನ್ನು ಇಡಲಾಗುತ್ತದೆ. ಅವಿವಾಹಿತರು ಸಾಂಗತ್ಯಕ್ಕಾಗಿ ಬೊಂಬೆಗಳನ್ನು ಖರೀದಿಸಲಾರಂಭಿಸಿದ್ದಾರೆ!
Related Articles
Advertisement
ಜಪಾನ್ನ ಯುವತಿಯರು ವಿವಾಹಕ್ಕೂ ಮೊದಲೇ ಗರ್ಭಕೋಶ ತೆಗೆಸಿಕೊಳ್ಳುತ್ತಿದ್ದಾರೆ…ಮಕ್ಕಳ ಲಾಲನೆ ಪಾಲನೆ ಬೇಡ ಎಂದು ವಿವಾಹ ಪೂರ್ವದಲ್ಲಿಯೇ ಯುವತಿಯರು ಶಸ್ತ್ರ ಚಿಕಿತ್ಸೆ ಮೂಲಕ ತಮ್ಮ ಗರ್ಭಕೋಶವನ್ನೇ ಕಳೆದುಕೊಳ್ಳುತ್ತಿದ್ದಾರಂತೆ. ಸರಕಾರಕ್ಕೆ ಈ ಬಗ್ಗೆ ಪೂರ್ಣ ಅರಿವಿದ್ದರೂ ಏನು ಮಾಡಲಾಗುತ್ತಿಲ್ಲ ಎಂದು ಹಿರಿಯ ಜಪಾನಿಗರು ನೋವಿನಿಂದ ಹೇಳುತ್ತಾರೆ. ಮಕ್ಕಳಿಲ್ಲದೆ ಅಲ್ಲಿಯ ಜನರ ಬದುಕು ನಿರಾಶಾದಾಯಕ ವಾಗತೊಡಗಿದೆ. ಲವಲವಿಕೆ – ಸಾಧನೆಗಳು ಕಣ್ಣಿಗೆ ಕಾಣುತ್ತಿಲ್ಲ. ಜಪಾನಿಯರ ಬದುಕು ಅಕ್ಷರಶಃ ಜಡವಾಗತೊಡಗಿದೆ. ಮಕ್ಕಳ ನಲಿದಾಟ ಕಡಿಮೆಯಾದಂತೆ ಕವಿಗಳು ಹಾಡು ಕಟ್ಟುವುದು ಕಡಿಮೆಯಾಗಿದೆ. ಹಾಗೆಯೇ ಕಲಾವಿದರು ಹಾಡು ನಿಲ್ಲಿಸಿದ್ದಾರೆ. ಇಡೀ ದೇಶ ಸಾಂಸ್ಕೃತಿಕ ಬಡತನಕ್ಕೆ ತುತ್ತಾಗುತ್ತಿರುವುದು ನಿಜಕ್ಕೂ ಭಯಾನಕ ಸಂಗತಿ. ಒಂದು ದೇಶದ ಆಸ್ಮಿತೆ ಅಲ್ಲಿಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಕವಾಗಿರುತ್ತದೆ. ಜಪಾನಿನ ಸುಕುಮಿ ಅಯನೋ ಎಂಬ ಖ್ಯಾತ ಕಲಾವಿದೆ ವಿದ್ಯಾರ್ಥಿಗಳನ್ನು ಹೋಲುವ ಉತ್ತಮ ಗೊಂಬೆಗಳನ್ನು ನಿರ್ಮಿಸುತ್ತಾರೆ. ಅವರು ಮಕ್ಕಳಿಲ್ಲದ ಶಾಲೆಗಳಲ್ಲಿ ಗೊಂಬೆಗಳನ್ನೆ ಮಕ್ಕಳಂತೆ ಕೂಡ್ರಿಸಿ ಪಾಠ ಮಾಡುತ್ತಾರೆ. ಮಕ್ಕಳ ಶಾಲಾ ವಾರ್ಷಿಕೋತ್ಸವವನ್ನು ಉಂಡೊಕಾಯ್ ಎಂದು ಕರೆಯುತ್ತಾರೆ; ಗೊಂಬೆಗಳ ಮೂಲಕವೇ ಸುಕುಮಿ ಅಯನೋ ಉಂಡೋಕಾಯ ಕಾರ್ಯಕ್ರಮ ನಡೆಸಿ ಜಪಾನ್ನ ಇಂದಿನ ಸ್ಥಿತಿ ಕಣ್ಣಿಗೆ ರಾಚುವಂತೆ ಪ್ರದರ್ಶಿಸಿ ಅಲ್ಲಿಯ ಜನರಲ್ಲಿ ತಾಯ್ತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜಪಾನ್ ಧರ್ಮರಹಿತ ದೇಶ. ಅಲ್ಲಿ ಧರ್ಮದ ಗೊಂದಲಗಳಿಲ್ಲ. ಹೊರದೇಶಗಳಿಂದ ಬಂದವರಿಗೆ ಅಲ್ಲಿ ಮುಕ್ತವಾಗಿ ತಮ್ಮ ಧರ್ಮ ಆಚರಿಸಿಕೊಳ್ಳುವ ಅವಕಾಶವಿದೆ. ವಿದೇಶಗಳಿಂದ ಬಂದ ಕ್ರೆಸ್ತರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜನಸಂಖ್ಯೆ ಪ್ರತಿ ವರ್ಷ ಕುಸಿಯುತ್ತಿರುವುದರ ಬಗ್ಗೆ ಜಪಾನ್ಪ್ರಧಾನಿ ಸಿಂಜೋ ಅಬೆ ಬಹಳ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಜನಗಣತಿ ಇಲ್ಲಿ ನಡೆಸಲಾಗುತ್ತಿತ್ತು. ಈಗ ಪ್ರತಿ 2 ವರ್ಷಕ್ಕೆ ಒಮ್ಮೆ ಗಣತಿ ಮಾಡಿ ವಿವರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಜಪಾನದ ರಾಜಧಾನಿ ಟೋಕಿಯೋದಲ್ಲಿ ತಾಯ್ತನದ ಅನುಭೂತಿಯ ಕತೆಗಳನ್ನು ಹೇಳುವ ಕಾರ್ಯಕ್ರಮಗಳನ್ನು ಸರಕಾರ ಸಂಘಟಿಸತೊಡಗಿದೆ. ಭಾರತದಲ್ಲಿ ನಡೆದ ಸಂತಾನಹರಣ ಚಿಕಿತ್ಸೆಯ ಕ್ರೂರ ಕತೆ ಇಲ್ಲಿ ಉದಾಹರಿಸಬಹುದಾಗಿದೆ. 1975-1977ರ ಅವಧಿಯಲ್ಲಿ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿ ಅವರ ಮಗ ಸಂಜಯಗಾಂಧಿ ಭಾರತದ ತುಂಬ ಕುಟುಂಬ ಯೋಜನೆಯ ಅಭಿಯಾನ ಆರಂಭಿಸಿದ್ದರು. ಜನಸಂಖ್ಯೆ ನಿಯಂತ್ರಣದ ಉದ್ದೇಶ ಒಳ್ಳೆಯದೇ ಆಗಿದ್ದರೂ ಅದು ತೀರ ಅತಿ ಎನ್ನುವಂತೆ ಜಾರಿಗೆ ತರಲಾಗಿತ್ತು. ಅವಿವಾಹಿತರಿಗೂ ಕೂಡ ಬಲವಂತವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಹಿಂಸೆ ದೇಶದ ತುಂಬ ಕೊಡಲಾಯಿತು. ಮುಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ- ಸಂಜಯಗಾಂಧಿ ಸೋಲು ಅನುಭವಿಸಿದರು. ಮಾತ್ರವಲ್ಲ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದು ಈಗ ಇತಿಹಾಸ. ತಾಯ್ತನ ಹಿರಿಮೆಯ ಒಂದು ಘಟನೆ ಈಗ ಥಟ್ಟನೆ ನೆನಪಾಗುತ್ತಿದೆ. ನಾರ್ವೆ ದೇಶದ ಖ್ಯಾತ ಕವಯಿತ್ರಿ ಸಿಗ್ರಿಡ್ ಆನ್ಸೆಟ್ ಅವರಿಗೆ ನೋಬೆಲ್ ಪ್ರಶಸ್ತಿ ಪ್ರಕಟವಾಗುತ್ತಲೇ ಸ್ಥಳೀಯ ಪತ್ರಕರ್ತರು ಸಂದರ್ಶನಕ್ಕೆ ಆಕೆಯ ಮನೆಗೆ ತೆರಳಿದರು. ಅವರನ್ನು ಕಂಡು ಸಿಗ್ರಿಡ್ ಹೇಳಿದರು. “”ಕ್ಷಮಿಸಿ ನನಗೆ ನಿಮ್ಮೊಡನೆ ಮಾಡನಾಡಲು ಸಮಯವಿಲ್ಲ. ಏಕೆಂದರೆ ನಾನೀಗ ನನ್ನ ಪುಟ್ಟ ಮಗುವನ್ನು ಮಲಗಿಸುತ್ತಿದ್ದೇನೆ. ನಾನು ಲಾಲಿ ಹಾಡಿದಾಗಲೇ ಈ ಮಗು ಮಲಗುತ್ತದೆ. ನೋಬೆಲ್ ಪ್ರಶಸ್ತಿ ಪಡೆದ ಸಂತೋಷ ನನಗಿದೆ. ಆದರೆ ಅದಕ್ಕಿಂತ ಹೆಚ್ಚಿನ ಸಂತೋಷ ನನಗೆ ನನ್ನ ಮಗುವಿನ ಪಾಲನೆ ಪೋಷಣೆಯಲ್ಲಿ ಸಿಗುತ್ತದೆ.” ಈ ತಾಯಿಯ ವಾತ್ಸಲ್ಯ ಕಂಡು ನಿಬ್ಬೆರಗಾದ ಪತ್ರಕರ್ತರು ತುಟಿಪಿಟಿಕೆನ್ನದೆ ಅಲ್ಲಿಂದ ತೆರಳಿದರು. ಅವ್ವ, ತಾಯಿ, ಜನನಿ, ಅಮ್ಮ, ಮದರ್ ಮಾತೆ ಹೀಗೆ ಹೆಸರು ನೂರಿರಬಹುದು: ಭಾಷೆಯೂ ಬೇರೆ ಇರಬಹುದು. ಆದರೆ ಆಕೆಯ ಉಸಿರಿನಲ್ಲಿರುವುದು ಅದೇ ಮಮತೆ, ಅದೇ..ಕಕ್ಕುಲತೆ. ಜಪಾನಿನ ಮಹಿಳೆಯರು ತಾಯ್ತನ ಮತ್ತು ಪುರುಷರು ಅಪ್ಪನಾಗುವ ಅನುಭೂತಿ ಕಳೆದು ಕೊಳ್ಳುತ್ತಿರುವುದರಿಂದ ಆ ದೇಶ ಬಡವಾಗತೊಡಗಿದೆ. -ಮಲ್ಲಿಕಾರ್ಜುನ ಹೆಗ್ಗಳಗಿ