Advertisement

Janatha Darshana: ಯಾರಿಗೂ ಇಲ್ಲದ ನಿರ್ಬಂಧ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾಡಿಲ್ಲ

10:38 PM Jul 06, 2024 | Team Udayavani |

ಮಂಡ್ಯ: ಯಾರಿಗೂ ಇಲ್ಲದ ನಿರ್ಬಂಧವನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಮಾಡಿಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಆದೇಶವೇ ಈಗಲೂ ಇದೆ. ಪ್ರಜಾಪ್ರಭುತ್ವದಲ್ಲಿ ಯಾರ್ಯಾರ ವ್ಯಾಪ್ತಿ ಎಷ್ಟು ಎಂಬುದು ಅವರಿಗೂ ಗೊತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

Advertisement

ಜನತಾದರ್ಶನಕ್ಕೆ ಅಧಿಕಾರಿಗಳನ್ನು ನಿರ್ಬಂಧಿಸಿ ಸರಕಾರ ಸಣ್ಣತನ ತೋರಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು. ಕುಮಾರಸ್ವಾಮಿ ಒಬ್ಬರೇ ದೊಡ್ಡವರು, ಮಿಕ್ಕವರೆಲ್ಲ ಸಣ್ಣವರು, ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಕುಮಾರಸ್ವಾಮಿ ಅವರು ಮಂಡ್ಯದ ಎಲ್ಲ ತಾಲೂಕುಗಳಿಗೆ ವಿಶೇಷ ಅನುದಾನ ಕೊಡಿಸಲಿ. ಕೈಗಾರಿಕೆಗಳನ್ನು ತಂದು ಜಿಲ್ಲೆ ಅಭಿವೃದ್ಧಿ ಮಾಡಲಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಿ, ದಿಶಾ ಸಭೆಯಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ಮಾಡುವುದಕ್ಕೆ ಅಧಿಕಾರ ಇದೆ. ಎಲ್ಲ ಅಧಿಕಾರಿಗಳನ್ನು ಕೂರಿಸಿಕೊಂಡು ಜನತಾದರ್ಶನ ಮಾಡುವುದಕ್ಕೆ ಅಧಿಕಾರ ಇಲ್ಲ. ಜನರ ಅಹವಾಲು ಸ್ವೀಕರಿಸಿ ಜಿಲ್ಲಾಧಿಕಾರಿಗೆ ತಲುಪಿಸಬಹುದು ಅಷ್ಟೇ.

ಹಿಂದೆ ಅನಧಿಕೃತವಾಗಿ ಡಿ.ಕೆ. ಸುರೇಶ್‌ ಈ ರೀತಿಯ ಕಾರ್ಯಕ್ರಮ ಮಾಡಿದ್ದರೂ ತಪ್ಪು. ಚಿತ್ರದುರ್ಗದ ಸಂಸದರಾಗಿದ್ದ ನಾರಾಯಣಸ್ವಾಮಿ ಹೀಗೆ ಮಾಡಲು ಹೊರಟಾಗ ಮಾಡಿದ್ದ ಸುತ್ತೋಲೆಯನ್ನೇ ಈಗಲೂ ಹೊರಡಿಸಲಾಗಿದೆ ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next