Advertisement

ಪೌರತ್ವ ಕಾಯ್ದೆ; ಮೈಸೂರಿನಲ್ಲಿ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ, ವಿದ್ಯಾರ್ಥಿಗಳ ಆಕ್ರೋಶ

09:47 AM Dec 17, 2019 | Nagendra Trasi |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಜಟಾಪಟಿ ಇದೀಗ ದೇಶಾದ್ಯಂತ ವಿವಿಗಳಲ್ಲಿ ಪ್ರತಿಧ್ವನಿಸತೊಡಗಿದೆ.

Advertisement

ಉತ್ತರಪ್ರದೇಶದಲ್ಲಿ ಅಲಿಗಢ್ ಮುಸ್ಲಿಮ್ ವಿವಿ, ಹೈದರಾಬಾದ್ ನಲ್ಲಿ ಮೌಲಾನ ಆಜಾದ್ ಉರ್ದು ಯೂನಿರ್ವಸಿಟಿ, ಬನಾರಾಸ್ ಹಿಂದೂ ಯೂನಿರ್ವಸಿಟಿಯಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಹಿಂಸಾಚಾರ ಆರಂಭವಾಗಿದ್ದು ಹೇಗೆ?

ಭಾನುವಾರ ಸಂಜೆ ದಿಲ್ಲಿಯ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದು, ಇದು ಜಂತರ್ ಮಂತರ್ ನಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಮೆರವಣಿಗೆ ನಂತರ ಹಿಂಸಾಚಾರ ಆರಂಭಗೊಂಡಿತ್ತು. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ತಾರಕಕ್ಕೇರಿದ ವೇಳೆ ಬಸ್ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಲ್ಲು ತೂರಾಟದಲ್ಲಿ ಪೊಲೀಸರು, ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆ ನಂತರ ಪ್ರತಿಭಟನೆ ದೇಶದ ವಿವಿಧೆಡೆಗೂ ಹಬ್ಬಿತ್ತು.

ಮೈಸೂರಿನಲ್ಲಿ ಪ್ರತಿಭಟನೆ ನಡೆಸುವಂತಿಲ್ಲ: ಪೊಲೀಸ್ ಆಯುಕ್ತ

Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೈಕ್ ರಾಲಿ ಅಥವಾ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆಟಿ ಬಾಲಕೃಷ್ಣ ತಿಳಿಸಿದ್ದಾರೆ.

ಮೈಸೂರಿನ ಗಾಂಧಿ ಚೌಕ್, ಮಹಾವೀರ ವೃತ್ತ, ಪುರಭವನದ ಸುತ್ತಮುತ್ತ 500 ಮೀಟರ್ ನಿಷೇಧಾಜ್ಞೆ ಇಂದು ಮಧ್ಯರಾತ್ರಿ 12ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದರು.

ವಿವಿಧೆಡೆ ಪ್ರತಿಭಟನೆ:

ಹೈದರಾಬಾದ್ ನ ಮೌಲಾನ ಆಜಾದ್ ಉರ್ದು ಯೂನಿರ್ವಸಿಟಿ ಮತ್ತು ಬನಾರಸ್ ಹಿಂದೂ ಯೂನಿರ್ವಸಿಟಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೋಲ್ಕತಾದ ಜಾದವ್ ಪುರ್ ಯೂನಿರ್ವಸಿಟಿ ವಿದ್ಯಾರ್ಥಿಗಳು ಮಧ್ಯರಾತ್ರಿ ಮೆರವಣಿಗೆ ನಡೆಸಿದ್ದರು. ಅಲ್ಲದೇ ತಮ್ಮ ಪರೀಕ್ಷೆಗಳನ್ನು ಮುಂದೂಡುವಂತೆ ಮೌಲಾನ ಆಜಾದ್ ಉರ್ದು ವಿವಿ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next