Advertisement

ಜಾಲ್ಸೂರು-ಕಾಸರಗೋಡು ರಸ್ತೆ: ಅಪಾಯಕಾರಿ ತಿರುವು

05:51 AM Feb 11, 2019 | |

ಜಾಲ್ಸೂರು: ಸುಳ್ಯ- ಕಾಸರಗೋಡು ರಸ್ತೆಯಲ್ಲಿ ಜಾಲ್ಸೂರು ಗೇಟ್ನಿಂದ ಮುಂದೆ ದೊಡ್ಡ ತಿರುವಿದ್ದು, ನಿರಂತರ ಅಪಘಾತಗಳು ನಡೆಯುತ್ತಿವೆ. ವಾಹನ ದಟ್ಟನೆ ಇರುವ ರಸ್ತೆಯಲ್ಲಿ ಕಾರು, ಬೈಕ್‌ಗಳು ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬೀಳುತ್ತವೆ. ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಜನಪ್ರತಿನಿಧಿಗಳ ಜಾಣ ಮೌನವೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಲವು ವರ್ಷಗಳಿಂದ ಅಪಘಾತಗಳು ಸತತವಾಗಿ ನಡೆಯುತ್ತಿರುವ ಕುರಿತು ‘ಉದಯವಾಣಿ’ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿದ್ದರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಭಾರೀ ಅನಾಹುತ ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಸಂಭಾವ್ಯ ಅಪಾಯ ತಪ್ಪಿಸಲಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸುವುದು ಒಳಿತು.

ವ್ಯರ್ಥ ತಡೆಗೋಡೆ
ಲೋಕೋಪಯೋಗಿ ಇಲಾಖೆಯಿಂದ 2003-2004ರಲ್ಲಿ ಜಾಲ್ಸೂರು ತಿರುವಿನಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಪರಿಸ್ಥಿತಿ ಬದಲಾಗಿಲ್ಲ. ಕಾಮಗಾರಿಯ ಅವ್ಯವಸ್ಥಿತ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅನುದಾನದ ಕೊರತೆ ಕಾರಣ ನೀಡಿ ಕಾಮಗಾ ರಿಯನ್ನು ಅರೆಬರೆ ನಡೆಸಲಾಗಿತ್ತು.

ಸೂಚನ ಫ‌ಲಕವೂ ಇಲ್ಲ
ಇತ್ತೀಚೆಗೆ ಕಾರೊಂದು ಇದೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಅದೃಷ್ಟ ವಶಾತ್‌ ಯಾವುದೇ ಪ್ರಾಣ ಹಾನಿಯಾಗಿ ರಲಿಲ್ಲ. ಪ್ರಯಾಣಿಕರ ಗಮನಕ್ಕಾಗಿ ರಸ್ತೆ ಬದಿ ‘ಅಪಘಾತ ವಲಯ’ ಎನ್ನುವ ಸೂಚನ ಫ‌ಲಕವನ್ನೂ ಅಳವಡಿಸಿಲ್ಲ. ಮಳೆಗಾಲದಲ್ಲಿ ಇಲ್ಲಿ ಮಣ್ಣು ಕುಸಿಯುತ್ತಿದ್ದರೂ ಅಧಿಕಾರಿಗಳು ಭರವಸೆ ಕೊಟ್ಟು ಮತ್ತೆ ಆ ಕಡೆ ತಿರುಗಿ ನೋಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ತವ್ಯಮರೆತ ಜನಪ್ರತಿನಿಧಿಗಳು
ತಿರುವಿನ ಸಮಸ್ಯೆಯ ಕುರಿತು ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಕೊಟ್ಟರೂ, ಯಾವುದೇ ಸ್ಪಂದನೆ ಇಲ್ಲ. ಗ್ರಾಮಸಭೆಯಲ್ಲೂ ವಿಷಯ ಪ್ರಸ್ತಾವಿಸಲಾಗಿದೆ. ಅಭಿವೃದ್ಧಿಯ ಮಾತು ಚುನಾವಣೆಯ ಸಂದರ್ಭದಲ್ಲಿ ಮತಕ್ಕಾಗಿ ಹೇಳುತ್ತಾರೆ. ಆಮೇಲೆ ನಮ್ಮ ಕಡೆ ತಿರುಗಿ ಕೂಡ ನೋಡುವುದಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಚೇರಿ ಗಳಿಗೆ ಅಲೆಯುವುದು ಬಿಟ್ಟು ಯಾವುದೇ ಪ್ರತಿಫ‌ಲವಿಲ್ಲ ಎನ್ನುವುದು ಜನರ ವಿಷಾದ. ತಾತ್ಕಾಲಿಕ ಪರಿಹಾರವಾದರೂ ಮಾಡಲಿ ಎಂದು ಜನರು ಆಗ್ರಹಿಸಿದ್ದಾರೆ.

Advertisement

ಕ್ರಮ ಕೈಗೊಳ್ಳುತ್ತೇವೆ
ತಿರುವಿನಲ್ಲಿ ಅಪಘಾತ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಇದೆ. ತತ್‌ಕ್ಷಣ ತಾತ್ಕಾಲಿಕ ಪರಿಹಾರ ಮಾಡಲಾಗುವುದು. ತಡೆ ಬೇಲಿ ಅಥವಾ ಟ್ಯಾಪ್‌ ಹಾಕಲು ಕ್ರಮ ಕೈಗೊಳ್ಳುತ್ತೇವೆ.
 -ಸಂದೇಶ್‌,
ಅಸಿಸ್ಟೆಂಟ್ ಎಂಜಿನಿಯರ್‌, ಪಿಡಬ್ಲ್ಯೂಡಿ, ಸುಳ್ಯ

ಅಧಿಕಾರಿಗಳ ನಿರ್ಲಕ್ಷ್ಯ 
ತಿರುವಿನಲ್ಲಿ ವಾಹನಗಳು ತೋಟಕ್ಕೆ ಬೀಳುವುದು ಸಾಮಾನ್ಯವಾಗಿವೆ. ಇತ್ತೀಚೆಗೆ ಕಾರೊಂದು ಪಲ್ಟಿಯಾಗಿ ನಜ್ಜುಗುಜ್ಜಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ  ಅನಾಹುತಗಳಿಗೆ ಕಾರಣವಾಗುತ್ತಿವೆ.
– ಶೇರ್ಕ ಕಾಳಮನೆ,
ಜಾಲ್ಸೂರು

Advertisement

Udayavani is now on Telegram. Click here to join our channel and stay updated with the latest news.

Next