Advertisement

ಅಡಿಕೆ ಸುಲಿಯೋ ಯಂತ್ರ

05:04 PM Apr 16, 2018 | |

ಕೂಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚಿನವರು ಅಡಿಕೆ ಕೃಷಿಗೆ ಗುಡ್‌ಬೈ ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೇ ರಾಮಚಂದ್ರ ಭಟ್ಟರು ಅಡಿಕೆ ಸುಲಿಯುವ ಹೊಸ ಯಂತ್ರವನ್ನು ತಯಾರಿಸಿದ್ದಾರೆ. ಈ ಯಂತ್ರ, ರಾಜ್ಯ, ದೇಶದ ಗಡಿಯನ್ನಷ್ಟೇ ಅಲ್ಲ, ಶ್ರೀಲಂಕಾದ ರೈತರ ಮೆಚ್ಚುಗೆಗೂ ಪಾತ್ರವಾಗಿದೆ. 

Advertisement

ಕೂಲಿಗೆ ಜನ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಡಿಕೆ ಬೆಳೆಯನ್ನೇ ನಂಬಿಕೊಂಡಿದ್ದ ಹಲವರು ಈಗ ಅಡಿಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹೊರಗಿನ ಜನರ ನೆರವಿಲ್ಲದೆ ಮನೆಯವರೇ ನಿರ್ವಹಣೆ ಮಾಡಬಹುದಾದ ಯಂತ್ರಗಳನ್ನು ಶೋಧಿಸುವ ಮೂಲಕ ಅಡಿಕೆ ಕೃಷಿಕರ ಪಾಲಿಗೆ ಆಪತ್ಕಾಲದ ನೆಂಟನಂತಾಗಿದ್ದಾರೆ ಸುಳ್ಯದ ರಾಮಚಂದ್ರ ಭಟ್ಟರು. ಪಟ್ಟಣದಿಂದ ಅನತಿ ದೂರದ ಜಯನಗರದಲ್ಲಿದೆ ಅವರ ಮನೆ.

ಭಟ್ಟರು ಕಂಡು ಹಿಡಿದಿರುವ ಒಣ ಅಡಿಕೆ ಸುಲಿಯುವ, ಕಾಳುಮೆಣಸು ಬೇರ್ಪಡಿಸುವ, ಕಾಂಪೋಸ್ಟ್‌ ಗೊಬ್ಬರದ ಸಲಕರಣೆಗಳನ್ನು ಹುಡಿ ಮಾಡುವ ಯಂತ್ರಗಳು. ರೈತರ ಮನದಲ್ಲಿ ಮಂದಹಾಸ ಮೂಡಿಸಿದೆ. ಅಡಿಕೆ ಸುಲಿಯುವ ಯಂತ್ರವನ್ನು ಪರಿಷ್ಕರಿಸಬೇಕಿದ್ದರೆ ಇಪ್ಪತ್ತೆ„ದಕ್ಕಿಂತ ಹೆಚ್ಚು ಸಲ ಅದನ್ನು ತಯಾರಿಸಿ,  ಪರಿಣಾಮಗಳನ್ನು ಗಮನಿಸಿ ಬದಲಾಯಿಸುತ್ತ ಹೋದ ಮೇಲೆ ಸುಧಾರಣೆ ಸಾಧ್ಯವಾಯಿತು ಎಂದು ತನ್ನ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ ಭಟ್ಟರು.

ಅರುವತ್ತೂಂದರ ಹರಯದ ರಾಮಚಂದ್ರ ಭಟ್ಟರು ಕೃಷಿಕ ಮನೆಯ ಕುಡಿಯೇ ಆದರೂ, ಬಿಕಾಂ ಪದವೀಧರರಾಗಿ ಐಟಿಡಬ್ಲ್ಯುಎ ಕೋರ್ಸ್‌ ಮಾಡಲು ಮಂಗಳೂರು ಸೇರಿದ್ದರು. ಹಾಸ್ಟೆಲ್‌ ವಾಸ. ದಿನದಲ್ಲಿ ಮೂರು ತಾಸು ತರಗತಿ. ಅಲ್ಲಿ ಅವರ ಅಣ್ಣ ಶಂಕರ ಭಟ್ಟರಿಗೆ ವರ್ಕ್‌ಶಾಪ್‌ ಇತ್ತು. ಅಲ್ಲಿ ಯಂತ್ರಗಳ ತಯಾರಿಕೆಯ ವಿಧಾನಗಳನ್ನು ನೋಡುತ್ತಿದ್ದ ರಾಮಚಂದ್ರ ಭಟ್ಟರ ಮನದೊಳಗೆ ಅಡಿಕೆ ಸುಲಿಯುವ ಪರಿಷ್ಕೃತ ಯಂತ್ರ ತಯಾರಿಕೆಯ ಕನಸು ಗರಿಗೆದರಿತು.

ತಾಂತ್ರಿಕ ತರಬೇತಿ ಪಡೆಯದೆಯೇ ಸ್ವಂತ ಯೋಚನಾ ಶಕ್ತಿಯಿಂದ ಅದರಲ್ಲಿ ಬದಲಾವಣೆಗಳನ್ನು ಮಾಡುತ್ತ ಹೋದ ಫ‌ಲವಾಗಿ ಅತ್ಯುತ್ತಮದ್ದು ಎನ್ನಬಹುದಾದ ಅಡಿಕೆ ಸುಲಿಯುವ ಯಂತ್ರ ತಯಾರಿಸಲು ಅವರಿಗೆ ಸಾಧ್ಯವಾಗಿದೆ. ಭಟ್ಟರ ಏಳು ವರ್ಷಗಳ ಸತತ ಪರಿಶ್ರಮದ ಫ‌ಲವಾಗಿ ಅಡಿಕೆ ಸುಲಿಯುವ ಯಂತ್ರ ರೂಪುಗೊಂಡಿದೆ. ಉಳಿದ ಯಂತ್ರಗಳಲ್ಲಿ ಅಡಿಕೆ ಸುಲಿಯುವಾಗ ಏಳುವ ವಿಪರೀತ ಧೂಳಿನ ಸಮಸ್ಯೆ ಇರುತ್ತಿತ್ತು.

Advertisement

ಇದರಲ್ಲಿ ಹಾಗಿಲ್ಲ, ತೀರ ಮೃದುವಾದ ಅಡಿಕೆಯ ಹೊರತು ಇನ್ನಿತರ ಹುಡಿಯಾಗುವ ಸಮಸ್ಯೆಯೇ ಇಲ್ಲ. ಯಂತ್ರದೊಳಗೆ ಸಿಪ್ಪೆಯನ್ನು ಉಜ್ಜಲು ವಾಹನದ ಟೈರನ್ನು ಬಳಸಿದ ಕಾರಣ ಅಡಿಕೆಯ ಮೇಲೆ ರವೆಯಷ್ಟೂ ಕಲೆಗಳು ಬೀಳುವುದಿಲ್ಲ. ಸಿಪ್ಪೆ ಅಂಟಿಕೊಳ್ಳುವ ಪ್ರಸಂಗಗಳು ತೀರಾ ವಿರಳ.  ಭಟ್ಟರು ಯಂತ್ರದಲ್ಲಿ ಮಾಡಿಕೊಂಡಿರುವ ಪರಿಷ್ಕರಣೆಯ ಫ‌ಲವಾಗಿ ತಾಸಿಗೆ 35ರಿಂದ 40 ಕಿಲೋ ಸುಲಿಯುವ ಯಂತ್ರದಿಂದ ಆರಂಭಿಸಿ ಮೂರೂವರೆ ಕ್ವಿಂಟಾಲಿನ ತನಕ ಸುಲಿಯಬಹುದು.

ಸಣ್ಣ ಯಂತ್ರದ ತಯಾರಿಕೆಯ ವೆಚ್ಚ ಎಂಭತ್ತು ಸಾವಿರವಾದರೆ ದೊಡ್ಡದಕ್ಕೆ ಮೂರು ಲಕ್ಷವಾಗುತ್ತದೆ. ತಾಂತ್ರಿಕ ದೋಷಗಳು ಸಂಭವಿಸುವುದು ವಿರಳ. ಇದು ಅರ್ಧ ಅಥವಾ ಒಂದು ಅಶ್ವ ಶಕ್ತಿಯ ಯಂತ್ರವಾದುದರಿಂದ ವಿದ್ಯುತ್ಛಕ್ತಿಯ ಬಳಕೆಯೂ ಕಡಿಮೆ.  ಇದೇ ಕಾರಣದಿಂದ ಹೆಂಗಸರು ಈ ಯಂತ್ರದ ನಿರ್ವಹಣೆ ಸುಲಭ. ಹೆಗ್ಗಳಿಕೆಯ ವಿಚಾರವೆಂದರೆ ಭಟ್ಟರ ಯಂತ್ರದ ವಿಷಯ ತಿಳಿದು ಶ್ರೀಲಂಕಾದಿಂದ ರೈತರು ಬಂದು ದುಂಬಾಲು ಬಿದ್ದು ಯಂತ್ರ ಮಾಡಿಸಿಕೊಂಡು ಹೋಗಿದ್ದಾರೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಗಳಿಂದಲೂ ರೈತರು ಯಂತ್ರವನ್ನು ಮಾಡಿಸಿಕೊಂಡು ಹೋಗಿ ಭಟ್ಟರ ಕಾರ್ಯವೈಖರಿಯನ್ನು ಹೊಗಳಿದ್ದಾರೆ. ಕಾಳುಮೆಣಸನ್ನು ಗೆರೆಗಳಿಂದ ಬೇರ್ಪಡಿಸುವ ಸರಳ ಯಂತ್ರವನ್ನೂ ಭಟ್ಟರು ತಯಾರಿಸಿದ್ದಾರೆ. ಅರ್ಧ ಅಶ್ವಶಕ್ತಿಯ ಯಂತ್ರದ ಮೂಲಕ ಕೆಲಸ ಮಾಡುವ ಈ ಯಂತ್ರದಲ್ಲಿ ಕಸ ಸಿಲುಕಿಕೊಂಡು ಯಂತ್ರದ ಕೆಲಸಕ್ಕೆ ತಡೆಯಾಗುವುದಿಲ್ಲ. ಹಣ್ಣಿನ ಸಿಪ್ಪೆ ಸುಲಿಯುವ ತೊಂದರೆಯಿಲ್ಲ.

ಕಾಳು ಮತ್ತು ಕಸ ಪ್ರತ್ಯೇಕವಾಗಿ ಬೀಳುತ್ತದೆ. ಪೂರ್ಣವಾಗಿ ಸ್ಟೇನ್‌ಲೇಸ್‌ ಸ್ಟೀಲಿನ ದೇಹವಿರುವ ಯಂತ್ರದ ಡ್ರಮ್‌ ದೊಡ್ಡದಾಗಿದೆ. ತುಕ್ಕಿನ ಭಯವಿಲ್ಲ. ತಾಸಿಗೆ ಒಂದೂಕಾಲು ಕ್ವಿಂಟಾಲ್‌ ಕಾಳನ್ನು ಬೇರ್ಪಡಿಸಿ ಕೊಡುತ್ತದೆ. ಇದನ್ನು ಕೂಡ ತಯಾರಿಸಲು 18ರಿಂದ 30 ಸಾವಿರ ರೂ. ಬೇಕಾಯಿತೆಂಬುದು ಅವರ ವಿವರಣೆ. ಎರೆಗೊಬ್ಬರ ಮತ್ತು ಕಾಂಪೋಸ್ಟ್‌ ತಯಾರಿಕೆಗೆ ಬೇಕಾಗುವ ತೆಂಗಿನ ಗರಿಗಳ ಕೊತ್ತಲಿಗೆ, ಅಡಿಕೆಹಾಳೆ, ತೆಂಗಿನ ಸಿಪ್ಪೆ ಇದನ್ನೆಲ್ಲ ಹುಡಿಯಾಗಿ ಗೋಧಿ ಹಿಟ್ಟಿನಂತೆ ಮಾಡಿಕೊಡಬಲ್ಲ ಯಂತ್ರವನ್ನೂ ಭಟ್ಟರು ನಿರ್ಮಿಸಿದ್ದಾರೆ.

ಕಬ್ಬಿಣದ ಶಕ್ತಿಯುತವಾದ ಬ್ಲೇಡ್‌ ಮತ್ತು ಗುದ್ದಿ ಹುಡಿ ಮಾಡಲು ಬಲಯುತವಾದ ಹ್ಯಾಮರ್‌ ಅಳವಡಿಸಿರುವ ಯಂತ್ರ ಎರಡು ಅಶ್ವ ಶಕ್ತಿಯನ್ನು ಉಪಯೋಗಿಸುತ್ತದೆ. ಇದನ್ನು ತಯಾರಿಸಲು 45 ಸಾವಿರ ರೂಪಾಯಿ ಬೇಕಾಯಿತು ಎನ್ನುತ್ತಾರೆ ಅವರು. ಈ ಯಂತ್ರಗಳನ್ನು ಬಯಸಿದವರಿಗೆ ಅವರು ಮಾಡಿಕೊಡುತ್ತಾರೆ. ಬಳಸಿದವರ ಮೊಗದ ತುಂಬ ತೃಪ್ತಿಯ ಹೂ ನಗು ಚೆಲ್ಲಿದೆ. ಬಳಸಲು ಸುಲಭ, ತಾಂತ್ರಿಕ ಸಮಸ್ಯೆಗಳು ವಿರಳವೆಂಬುದೇ ಅವರ ತಯಾರಿಕೆಯ ಹಿರಿಮೆ.

* ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next