Advertisement

ನಿಸಾರ್ ಸಂದರ್ಶನ: ಇದು ನನಗೂ ಆಶ್ಚರ್ಯದ ಸಂಗತಿ: ಕನ್ನಡಿಗರ ಅಂತಃಸತ್ವ ತಿಳಿಸುತ್ತದೆ..

03:36 PM May 03, 2020 | |

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ ರಾಜ್ಯಸರಕಾರ ಹಿರಿಯ ಕವಿ, 82 ವರ್ಷದ  ಪ್ರೊ| ನಿಸಾರ್‌ ಅಹಮದ್‌ ಅವರನ್ನು ಆಯ್ಕೆ ಮಾಡಿದ್ದ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹರ್ಷಚಿತ್ತದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರ ಪೂರ್ಣ ಪಾಠ ಇಲ್ಲಿದೆ….

Advertisement

ಮೈಸೂರು ದಸರಾ ಉದ್ಘಾಟಕರನ್ನಾಗಿ ಸರಕಾರ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಏನನ್ನಿಸುತ್ತಿದೆ?
ನಿಜಕ್ಕೂ ಸರಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಕನ್ನಡ ತಾಯಿಯ ಆಶೀರ್ವಾದದಿಂದ ಈ ಭಾಗ್ಯ ಸಿಕ್ಕಿದೆ. ನಾಡಿನಲ್ಲಿ ಇನ್ನೂ ಹಲವಾರು ಹಿರಿಯರು ಇದ್ದಾಗಲೂ ದಸರಾ ಉದ್ಘಾಟನೆಯ ಭಾಗ್ಯ ನನಗೆ ದೊರೆತಿದ್ದು ನನ್ನ ಸೌಭಾಗ್ಯ.

ಸರಕಾರ ನಿಮ್ಮನ್ನೇ ಆಯ್ಕೆ ಮಾಡಿದ್ದೇಕೆ?
ನಿಜಕ್ಕೂ ಇದು ನನಗೂ ಅನಿರೀಕ್ಷಿತ ಹಾಗೂ ಆಶ್ಚರ್ಯದ ಸಂಗತಿ. ಒಂದೆರಡು ವರ್ಷಗಳಿಂದ ದಸರಾ ಸಂದರ್ಭದಲ್ಲಿ ನನ್ನ ಹೆಸರು ಕೇಳಿಬರುತ್ತಿತ್ತು. ಅಂತಹ ಊಹಾಪೋಹಗಳನ್ನೆಲ್ಲ ನಾನು ತಲೆಗೆ ಹಚ್ಚಿಕೊಂಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ 30-32 ವರ್ಷಗಳ ಸ್ನೇಹವಿದೆ. ಅವರು ರಾಮಕೃಷ್ಣ ಹೆಗ್ಗಡೆ ಅವರ ಸರಕಾರದಲ್ಲಿ ಪ್ರಪ್ರಥಮಬಾರಿಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ, ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದೆ. ಹೀಗಾಗಿ ಕಾವಲು ಸಮಿತಿಯ ಅಧಿಕಾರೇತರ ಸದಸ್ಯನಾಗಿ ಸಭೆಗಳಿಗೆ ಹೋಗುತ್ತಿದ್ದೆ. ಆಗಿನಿಂದ ಅವರ ಜತೆಗೆ ಸ್ನೇಹವಿದೆ. ಆದರೆ, ಸರಕಾರಕ್ಕೆ ಬೇಡಿಕೆ ಸಲ್ಲಿಸಿ ಯಾವುದನ್ನೂ ಪಡೆದುಕೊಂಡವನಲ್ಲ ನಾನು.

ನೀವು ಮೊದಲ ಬಾರಿ ಮೈಸೂರು ದಸರಾ ನೋಡಿದ್ದು ಯಾವಾಗ?
1957ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಮೊದಲ ಬಾರಿ ನನ್ನ ತಂದೆ ಮೈಸೂರು ದಸರೆಗೆ ಕರೆದುಕೊಂಡು ಬಂದಿದ್ದರು. ಎರಡು ದಿನ ಮೈಸೂರಿನಲ್ಲಿ ಇದ್ದು ದಸರೆಯ ವೈಭವವನ್ನು ಕಣ್ತುಂಬಿಕೊಂಡು ಹೋಗಿದ್ದೆ. 1959ರಲ್ಲಿ ಎಂಎಸ್‌ಸಿ ಮುಗಿಸಿದ್ದಾಗ ರಾಷ್ಟ್ರಕವಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದೆ. ಆ ನಂತರದಲ್ಲಿ ಎರಡು ಬಾರಿ ದಸರಾ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದೆ. ಹೀಗೆ ಆರೇಳು ಬಾರಿ ಮೈಸೂರು ದಸರಾ ನೋಡಿದ್ದೇನೆ.

ರಾಜಾಶ್ರಯದಲ್ಲಿ ನಡೆಯುತ್ತಿದ್ದ ದಸರೆಗೂ, ಸರಕಾರಿ ದಸರೆಗೂ ಏನು ವ್ಯತ್ಯಾಸ ಕಾಣುತ್ತೆ?
ಹಿಂದೆ ಸಾಂಪ್ರದಾಯಿಕ ದಸರಾ ನಡೆಯುತ್ತಿತ್ತು. ಈಗ ಪ್ರಜಾಪ್ರಭುತ್ವದ ದಸರಾ ನಡೆಯುತ್ತಿದೆ. ರಾಜರು ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಹೊರಟಾಗ ಜನ ಕೈಮುಗಿದು, ಜೈಕಾರ ಕೂಗುತ್ತಿದ್ದರು. ಈಗ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಜತೆಗೆ ಇನ್ನಷ್ಟು ವೈವಿಧ್ಯಮಯವಾಗಿ ದಸರಾ ನಡೆಯುತ್ತಿದೆ.

Advertisement

ಸತತ ಬರಗಾಲದಿಂದ ರೈತ ಸಮುದಾಯ ಕಂಗಾಲಾಗಿರುವಾಗ ಅದ್ಧೂರಿ ದಸರಾ ನಡೆಸುವ ಆವಶ್ಯಕತೆ ಇತ್ತಾ?
ಹಿಂದೊಮ್ಮೆ ಶಿವರಾಮ ಕಾರಂತರನ್ನು ಬರಗಾಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಬರಗಾಲ ಬಂತೆಂದು ನಮ್ಮ ಜನ ಮಸಾಲೆ ದೋಸೆ ತಿನ್ನುವುದು ಬಿಟ್ಟಿದ್ದಾರಾ? ಎಂದು ತಿರುಗೇಟು ಕೊಟ್ಟಿದ್ದು ನೆನಪಾಗುತ್ತದೆ. ರೈತರ ಬಗ್ಗೆ ನಮಗೂ ಸಹಾನುಭೂತಿ, ಅನುಕಂಪವಿದೆ. ಆದರೆ, ವಿಜಯನಗರ ಸಾಮ್ರಾಜ್ಯದ ಕಾಲದಿಂದ ನಡೆಸಿಕೊಂಡು ಬರುತ್ತಿರುವ ನಾಡಿನ ಪರಂಪರೆ ಬಿಂಬಿಸುವ ದಸರಾ ಮಹೋತ್ಸವ ಆಚರಣೆ ನಿಲ್ಲಿಸುವುದು ಸರಿಯಲ್ಲ. ಆದರೆ, ಹಣಕಾಸು ವೆಚ್ಚದಲ್ಲಿ ಮಿತಿ ಅನುಸರಿಸಬೇಕು. ದಸರೆಯೇ ಬೇಡವೆಂದರೆ, ಇದಕ್ಕಾಗಿ ಮೀಸಲಿಟ್ಟ ಹಣ ಇನ್ಯಾವುದಕ್ಕೋ ಪೋಲಾಗುವ ಸಾಧ್ಯತೆ ಇರುತ್ತದೆ. ದಸರಾ ಆಚರಣೆ ಬಗ್ಗೆ ಅಪಸ್ವರ ಎತ್ತುವುದೆಲ್ಲ ಬಾಯಿ ಚಪಲಕ್ಕೆ ಹೇಳುವಂತಹ ಮಾತುಗಳು.

ನಾಡಹಬ್ಬದ ಬಗ್ಗೆ ಏನಂತೀರಿ?
“ದಸರೆ’ ಎಂಬುದು ಧಾರ್ಮಿಕತೆ, ಜಾತಿ-ಮತ ಎಲ್ಲವನ್ನೂ ಮೀರಿ ದೇಶ-ವಿದೇಶಗಳ ಲಕ್ಷಾಂತರ ಜನರನ್ನು ಸೆಳೆಯುವ ಸಾಂಸ್ಕೃತಿಕ ಮಹಾ ಘಟನೆ.  ಧಾರ್ಮಿಕತೆಯ ಬೇರಿನಲ್ಲಿ ರೆಂಬೆ-ಕೊಂಬೆಗಳೆಲ್ಲ ಸಾಂಸ್ಕೃತಿಕವಾದದ್ದು, ಜಾತ್ಯತೀತವಾದದ್ದು, ಮತ ನಿರಪೇಕ್ಷಿತವಾದದ್ದು. ಕನ್ನಡ ನಾಡಿನ ವೈಶಿಷ್ಟ್ಯವನ್ನು ಜಗತ್ತಿಗೆ ಸಾರಲು ಇದೊಂದು ದೊಡ್ಡ ಅವಕಾಶ. ದಸರೆಯಿಂದ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗ್ಗೆ ಎಲ್ಲರಿಗೂ ಅಭಿಮಾನ ಮೂಡುತ್ತೆ. ಜಂಬೂಸವಾರಿ ಜತೆಗೆ ಸಾಗುವ ಸ್ತಬ್ಧಚಿತ್ರಗಳು ಸಂಕೀರ್ಣವಾದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಕನ್ನಡಿಗರ ಅಂತಃಸತ್ವವನ್ನು ಜಗತ್ತಿಗೆ ತಿಳಿಸಲು ಇರುವ ದೊಡ್ಡ ಗವಾಕ್ಷಿ ದಸರೆ.

ಉದ್ಘಾಟಕರಾಗಿ ನಾಡಿನ ಜನತೆಗೆ ನಿಮ್ಮ ಸಂದೇಶವೇನು?
ನಮ್ಮ ಜನರಲ್ಲಿ ಸಹಮತ ಮೂಡಬೇಕು. ದೇಶದ ಬಗ್ಗೆ ಗೌರವದ ಜೊತೆಗೆ ಸಾಹಿತ್ಯ-ಸಂಸ್ಕೃತಿಯ ಬಗ್ಗೆಯೂ ಅಭಿಮಾನ ಹೆಚ್ಚಬೇಕು, ನಮ್ಮ ರಾಜ್ಯದಲ್ಲಿರುವ ಅನ್ಯ ಭಾಷಿಕರು, ಕನ್ನಡ ಮಾತಾಡಲು, ಕನ್ನಡದಲ್ಲಿಯೇ ವ್ಯವಹರಿಸಲು ಕಲಿಯಬೇಕು.

ನಿತ್ಯೋತ್ಸವ ನಡಿಗೆ
1936ರ ಫೆಬ್ರವರಿ 5ರಂದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದವರು ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌. ತಂದೆ ಷೇಕ್‌ ಹೈದರ್‌, ತಾಯಿ ಹಮೀದಾ ಬೇಗಂ. ಷೇಕ್‌ ಹೈದರ್‌ ಅವರು ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್‌, ಸಂಸ್ಕೃತ ಬಲ್ಲ ಸುಸಂಸ್ಕೃತರು. ದೇವನಹಳ್ಳಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ನಂತರ ಹೊಸಕೋಟೆ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ಕಲಿತರು. ಮುಂದೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಓದಿದ್ದು ಭೂಗರ್ಭಶಾಸ್ತ್ರವಾದರೂ ಕನ್ನಡದಲ್ಲಿ ಆಸಕ್ತಿ ಬೆಳೆಯಲು ಗುರುಗಳಾಗಿದ್ದ ಎಲ್‌.ಗುಂಡಪ್ಪ, ಎಂ.ವಿ.ಸೀತಾರಾಮಯ್ಯ, ರಾಜರತ್ನಂ, ವಿ.ಸೀ ಕಾರಣರು. ಪದವಿ ನಂತರ 1957-58ರಲ್ಲಿ ಭೂ ವಿಜ್ಞಾನಿಯಾಗಿ ಕಲಬುರ್ಗಿ (ಅಂದಿನ ಗುಲ್ಬರ್ಗಾ)ಯಲ್ಲಿ ಉದ್ಯೋಗ ಆರಂಭಿಸಿದರು. ಕೆಲಸದಲ್ಲಿ ತೃಪ್ತಿ ದೊರೆಯದೆ, ಎಂಎಸ್‌.ಸಿ.ಮುಗಿಸಿ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಸೇವೆ ನಂತರ ಮತ್ತೆ ಶಿವಮೊಗ್ಗ ಕಾಲೇಜಿನಲ್ಲಿ ಸೇವೆಯಲ್ಲಿದ್ದಾಗ ನಿವೃತ್ತರಾದರು. ಸೇವೆಯಲ್ಲಿದ್ದಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪ್ರಕಟಿಸಿದ ಚಂದನ ತ್ರೆ„ಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ ಮಾಡಿದರು. ದೆಹಲಿಯಲ್ಲಿ ವಿಚಾರಸಂಕಿರಣ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಇವರದ್ದು. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಳಿಯ ಸದಸ್ಯರು.

ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಭಾವಗೀತೆಯ ಕ್ಯಾಸೆಟ್‌ ತಂದ ಕೀರ್ತಿ ಇವರದ್ದು. ನಿತ್ಯೋತ್ಸವ, ಸುಶ್ರಾವ್ಯ, ನವೋಲ್ಲಾಸ, ಸುಮಧುರ, ಅಪೂರ್ವ, ಹೊಂಬೆಳಕು ಕ್ಯಾಸೆಟ್‌ಗಳು, ಮನಸು ಗಾಂಧಿಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ಸ್ವಯಂಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು ಕವನ ಸಂಕಲನಗಳು.

ಎ ಮಿಡ್‌ ಸಮ್ಮರ್‌ ನೈಟ್ಸ್‌ ಡ್ರೀಮ್‌, ಒಥೆಲೋ-ಕನ್ನಡಕ್ಕೆ ಅನುವಾದ. ನವ ಕರ್ನಾಟಕ ವಿಶ್ವ ಕಥಾಕೋಶಕ್ಕೆ ಹೆಜ್ಜೆ ಗುರುತುಗಳು ಕಥಾ ಸಂಕಲನ ಅನುವಾದ. ಇದು ಬೆಡಗಲ್ಲೊ ಅಣ್ಣ, ಮನದೊಂದಿಗೆ ಮಾತುಕಥೆ, ಅಚ್ಚುಮೆಚ್ಚು- ಗದ್ಯ ಬರಹಗಳು. ಹಲವಾರು ಮಕ್ಕಳ ಕೃತಿಗಳನ್ನು ಪ್ರಕಟಿಸಿದ್ದಾರೆ. ಸೋವಿಯತ್‌ ಲ್ಯಾಂಡ್‌ ನೆಹರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್‌, ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿ, ಬಿಎಂಶ್ರೀ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದ ಡಾಕ್ಟರೆಟ್‌, ಭಾರತ ಸರಕಾರದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ಸಂದರ್ಶನ:  ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next