Advertisement

ಸಂತೆಯಲ್ಲೇ ನಡೆದಿತ್ತು, ವಧುಪರೀಕ್ಷೆ!

06:15 PM Mar 14, 2018 | |

ನನಗೆ ಮೊದಲಿನಿಂದಲೂ ತರಕಾರಿ ಮಾರ್ಕೆಟ್‌ಗೆ ಹೋಗುವುದೆಂದರೆ ಇಷ್ಟ. ಯಾರು ಹೊರಟರೂ ಅವರ ಜೊತೆ ಹೋಗುತ್ತಿದ್ದುದರಿಂದ ಹೆಚ್ಚು ಕಮ್ಮಿ ಅಲ್ಲಿ ಎಲ್ಲರ ಪರಿಚಯವಿತ್ತು. ಆದರೆ, ನನ್ನ ವಧುಪರೀಕ್ಷೆಯೂ ಅಲ್ಲೇ ಆಗುವುದೆಂದು ನಾನು ಅಂದುಕೊಂಡಿರಲಿಲ್ಲ.

Advertisement

ಬಿ.ಎ. ಮುಗಿದ ಮೇಲೆ ಮನೆಯಲ್ಲಿ ಸತತ ವರಾನ್ವೇಷಣೆ ನಡೆಯುತ್ತಿತ್ತು. ಒಮ್ಮೊಮ್ಮೆ ಅದು ಮನಸ್ಸಿನ ನೆಮ್ಮದಿ ಕೆಡಿಸುತ್ತಿತ್ತು. ಹೀಗಿರುವಾಗ ಊರಿನಲ್ಲೇ ಇದ್ದ ನೆಂಟಸ್ತನ ಬಂದಾಗ ನನಗೂ ಸಂತೋಷವೇ ಆಯಿತು. ಆದರೆ, ವಧು ನೊಡಲು ಬರುವುದು
ಸಮಸ್ಯೆ ಆಗಿತ್ತು. ಏಕೆಂದರೆ, ಅವರು ಒಪ್ಪದಿದ್ದರೆ ಅಕ್ಕಪಕ್ಕದ ಮನೆಯವರಿಗೆ ತಿಳಿದರೆ ಅವಮಾನ. ಹೀಗಾಗಿ ಗುಪ್ತವಾಗಿ 
ನೋಡಬೇಕು ಎಂದುಕೊಂಡು ಮಧ್ಯಸ್ತಿಕೆ ನಡೆಸಿಕೊಡುವವರು ಗುಟ್ಟಲ್ಲಿ ಮನೆಯವರಿಗೆ ತಿಳಿಸಿದ್ದರಂತೆ. ಆಗ ನಾನು ಮನೆಯಲ್ಲಿ  ಇರಲಿಲ್ಲ.

ಆವತ್ತು ಗೆಳತಿಯರ ಜೊತೆ ಮಾರ್ಕೆಟ್‌ಗೆ ಹೊರಟಾಗ ಅಮ್ಮ, “ಒಳ್ಳೆ ಸೀರೆ ಉಡಬಾರದೇನೇ’ ಎಂದರು. ಸರಿ, ಎಂದು ಅಮ್ಮನ ಸಮಾಧಾನಕ್ಕಾಗಿ ಸಿಲ್ಕ್ ಸೀರೆ ಉಟ್ಟೆ. ಸೇಬು ಹಾಗೂ ಅನಾನಸ್‌ ತರಲು ಅಮ್ಮ ಹೇಳಿದರು. ಇರುವುದಕ್ಕಿಂತ ಜಾಸ್ತಿ ಬೆಲೆಯನ್ನೇ ಅಂಗಡಿಯವರು ಹೇಳುವುದನ್ನು ಕೇಳಿ, ನಾನು ಚೌಕಾಸಿ ಮಾಡಿ ನೂರು ರೂಪಾಯಿ ಬದಲು ಎಂಬತ್ತು ರೂಪಾಯಿಗೆ ಬೆಲೆ ಇಳಿಸಿ ಒಂದು ಕೆ.ಜಿ ಸೇಬು ತಗೊಂಡೆ. ಪಕ್ಕದಲ್ಲಿ ಒಬ್ಬ ಹೆಂಗಸು, ಅವರ ಮನೆಯವರು ಹಾಗೂ ಇನ್ನಿಬ್ಬರು ನನ್ನನ್ನೇ ದಿಟ್ಟಿಸುತ್ತಿದ್ದರು. ಯಾಕೋ ಏನೋ ಎಂದುಕೊಂಡು ಮನೆಗೆ ಬಂದೆ.  ಸುಮಾರು ಏಳು ಗಂಟೆಗೆ ಅಪ್ಪ ಹಾಗೂ ಅಮ್ಮ ಫೋನ್‌ನಲ್ಲಿ ಮಾತನಾಡಿ
ಸಂತೋಷ ವ್ಯಕ್ತಪಡಿಸುವುದನ್ನು ಕೇಳಿ ನಾನು ಹೊರಗಡೆ ಬಂದು ಕಿವಿಗೊಟ್ಟು ಅವರ ಮಾತು ಕೇಳಿದೆ. ಏನೂ ತಿಳಿಯಲಿಲ್ಲ. ಅಮ್ಮ ಬಂದು, “ಹುಡುಗನ ಮನೆಯವರು ನಿನ್ನನ್ನು ಒಪ್ಪಿದ್ದಾರೆ ಕಣಮ್ಮಾ…’ ಎಂದಾಗ ನಾನು, “ಏನು ಹೇಳ್ತಿದ್ದೀಯ? ಕನಸು ಬಿದ್ದಿದೆಯಾ? ಯಾವ ಹುಡುಗ?’ ಎಂದು ಕೇಳಿದೆ. ಆಗ ಅಮ್ಮ, “ನಿನಗೆ ಗೊತ್ತಿದ್ದರೆ ತಾನೇ? ಮಧ್ಯಸ್ತಿಕೆ ವಹಿಸಿದ್ದ ಶ್ರೀಪಾದ, ಹುಡುಗನ ಮನೆಯವರನ್ನು ಕರೆದುಕೊಂಡು ಮಾರ್ಕೆಟ್‌ಗೆ ಬಂದು, ಹುಡುಗನ ಮನೆಯವರಿಗೆ ದೂರದಿಂದಲೇ ನಿನ್ನನ್ನು ತೋರಿಸಿದನಂತೆ. ನೀನು ಸೇಬು ವ್ಯಾಪಾರ ಮಾಡಿದ ರೀತಿ ನೋಡಿ, ಅವರ ಮನೆಗೆ ಸರಿಯಾದ ಹೆಣ್ಣು ಎಂದುಕೊಂಡರಂತೆ. ಈಗ ಅವರೇ ಫೋನು ಮಾಡಿದ್ದರು’ ಎಂದರು. ಓಹೋ, ಅವರೇ ನನ್ನನ್ನು ಹಾಗೆ ದಿಟ್ಟಿಸಿ ನೋಡುತ್ತಿದ್ದವರು ಎಂದುಕೊಂಡೆ. ಆದರೂ, ಹುಡುಗನ ಕಡೆಯವರಿಗೆ ಕಾಫಿ ಕೊಡುವುದು ತಪ್ಪಿತಲ್ಲ ಅಂತ ಬೇಜಾರಾಯಿತು.

ಹೀರಾ ರಮಾನಂದ್‌

Advertisement

Udayavani is now on Telegram. Click here to join our channel and stay updated with the latest news.

Next