Advertisement

ಐಟಿ ದಾಳಿ ಅಂತ್ಯ ದಾಖಲೆ ಪರಿಶೀಲನೆ ಶುರು

06:00 AM Aug 06, 2017 | Team Udayavani |

ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಅವರ ಸದಾಶಿವನಗರ ನಿವಾಸ ಹಾಗೂ ಅವರ ಮಾಲೀಕತ್ವದ ಸಂಸ್ಥೆಗಳು, ಮೈಸೂರು, ಹಾಸನ ಸೇರಿದಂತೆ ವಿವಿಧ ಸ್ಥಳಗಳಲ್ಲಿರುವ ಸಂಬಂಧಿಕರು, ಆಪ್ತರ ಮನೆಗಳಲ್ಲಿನ 4 ದಿನಗಳ ಐಟಿ ದಾಳಿ ಅಂತ್ಯಗೊಂಡಿದ್ದು, ಇದೀಗ ದಾಖಲೆಗಳ ಪರಿಶೀಲನೆ ಪ್ರಾರಂಭವಾಗಿದೆ. ಡಿಕೆಶಿ ಅವರಿಂದ ಹೆಚ್ಚು ಕಡಿಮೆ 300 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಬುಧವಾರ ಮುಂಜಾನೆ ಆರಂಭವಾಗಿದ್ದ ದಾಳಿ ನಿರಂತರ ನಾಲ್ಕು ದಿನ ಮುಂದುವರಿದು ಶನಿವಾರ ಅಂತ್ಯಗೊಂಡಿತು. ಶೋಧ ನಡೆಸಿದ ಸಂದರ್ಭದಲ್ಲಿ ಎಲ್ಲೆಡೆ ಪತ್ತೆಯಾದ ದಾಖಲೆ, ಹಣ, ಚಿನ್ನಾಭರಣ ಹಾಗೂ ಮತ್ತಿತರ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಪ್ರಧಾನ ಕಚೇರಿಗೆ ತಲುಪಿಸಲಾಗಿದೆ. ಅತ್ತ ಮೈಸೂರಿನ ಮಾವನ ಮನೆಯಲ್ಲಿಯೂ ಶನಿವಾರ ಮಧ್ಯಾಹ್ನ ದಾಳಿ ಅಂತ್ಯಗೊಳಿಸಿದ ಐಟಿ ಅಧಿಕಾರಿಗಳು, ವಶಪಡಿಸಿಕೊಂಡಿರುವ ದಾಖಲೆಗಳೆಲ್ಲವನ್ನೂ ಪ್ರಾದೇಶಿಕ ಕಚೇರಿಗೆ ಸಾಗಿಸಿದ್ದಾರೆ.

ದಾಳಿ ವೇಳೆ 300 ಕೋಟಿ ರೂ. ಮೊತ್ತದ ಆಸ್ತಿ ಪತ್ರಗಳು, ವಹಿವಾಟಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಹಾಗೂ ಅಪಾರ ಪ್ರಮಾ ಣದ ನಗದು, ಚಿನ್ನಾಭರಣ ವಶಪಡಿಸಿ ಕೊಳ್ಳಲಾ ಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಶನಿವಾರ ಬೆಳಗ್ಗೆ 10.30ರ ತನಕವೂ ಶೋಧ ನಡೆಸಿದ 10ಕ್ಕೂ ಅಧಿಕ ಅಧಿಕಾರಿಗಳ ತಂಡ ಅಂತಿಮವಾಗಿ
ಡಿ.ಕೆ. ಶಿವಕುಮಾರ್‌ ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದ ಎಲ್ಲಾ ದಾಖಲೆ ಪತ್ರ ಸೇರಿದಂತೆ ವಿವಿಧ ವಸ್ತುಗಳ ಬಗ್ಗೆ ಪಂಚನಾಮೆ ನಡೆಸಿದರು. ಅಗತ್ಯ ದಾಖಲೆ ಗಳನ್ನು ಕಾರಿನಲ್ಲಿ ಹಾಕಿಕೊಂಡು ಭದ್ರತಾ ಸಿಬ್ಬಂದಿ ಜತೆ ಕಚೇರಿಯತ್ತ ಸಾಗಿದರು. ದಾಳಿ ನಡೆಸಿದ ಎಲ್ಲಾ ಸ್ಥಳಗಳಲ್ಲಿಯೂ ದೊರೆತ ಆಸ್ತಿ ದಾಖಲೆಗಳು, ರಿಯಲ್‌ ಎಸ್ಟೇಟ್‌ ವ್ಯವಹಾರದ ದಾಖಲೆಗಳು, ಕಂಪೆನಿಗಳಲ್ಲಿ ಹೂಡಿಕೆ, ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ
ಪರಿಶೀಲನೆ ನಡೆಸುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮ್ಮ ಬಳಿಯಿರುವ ದಾಖಲೆಗಳ ಜೊತೆಗೆ ಶಿವಕುಮಾರ್‌ ಅವರ ಆಸ್ತಿ ಮೌಲ್ಯ, ಅವರ ಆದಾಯದ ಮೂಲ, ಕುಟುಂಬ ಸದಸ್ಯರ ಆದಾಯ ಮೂಲ, ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಷೇರುಗಳನ್ನು ತಾಳೆ ನೋಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಆಗಿದ್ದರೆ ಇಡಿ ಎಂಟ್ರಿ?: ದಾಖಲೆಗಳ ಪರಿಶೀಲನೆ ನಂತರ ಡಿ.ಕೆ. ಶಿವಕುಮಾರ್‌ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ್ದರೆ, ತೆರಿಗೆ ವಂಚಿಸಿದ್ದರೆ, ಬೇನಾಮಿ ಹೆಸರುಗಳಲ್ಲಿ ಆಸ್ತಿ ಹೊಂದಿರುವುದು ಕಂಡು ಬಂದರೆ ಮಾತ್ರವೇ ಐಟಿ ಇಲಾಖೆ ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ವರದಿ ನೀಡಲಿದ್ದಾರೆ. ಈ ವರದಿ ಆಧರಿಸಿ, ಬಳಿಕ ಜಾರಿ ನಿರ್ದೇಶನಾಲಯವು ಅಕ್ರಮ ಹಣ ಸಾಗಣೆ ತಡೆ (ಪಿಎಂಎಲ್‌ಎ)ಕಾಯ್ದೆಡಿ ಪ್ರಕರಣ ಹಾಗೂ ವಂಚನೆ ಆರೋಪದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಯಿದೆ. ದಾಖಲೆಗಳಲ್ಲಿ ಎಲ್ಲವೂ
ಸಕ್ರಮವಾಗಿದ್ದರೆ ಯಾವುದೇ ವರದಿ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಸಚಿವ ಡಿ.ಕೆ ಶಿವಕುಮಾರ್‌, ಸದ್ಯಕ್ಕೆ ಇಡಿ ವಿಚಾರಣೆ ನಡೆಸುವ ಸಾಧ್ಯತೆಗಳು ಕಡಿಮೆ. ಏಕೆಂದರೆ, ಕಳೆದ ನಾಲ್ಕು ದಿನಗಳಲ್ಲಿ ಶೋಧ ಕಾರ್ಯದಲ್ಲಿಯೇ ಅಕ್ರಮ ಕಂಡು ಬಂದಿದ್ದರೆ ಈ ವೇಳೆಗಾಗಲೇ ಐಟಿ ಇಲಾಖೆ ಇಡಿಗೆ ವರದಿ ನೀಡುತ್ತಿತ್ತು ಎಂದೂ ಹೇಳಲಾಗಿದೆ.

Advertisement

ಇಂದು ಸಂಜೆ ದೆಹಲಿಗೆ?
ಕಳೆದ ಒಂದು ವಾರದಿಂದ ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‌ ಶಾಸಕರು ಭಾನುವಾರ ಸಂಜೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ರಕ್ಷಾ ಬಂಧನ ಹಬ್ಬ ಇರುವುದರಿಂದ ಸೋನಿಯಾ ಗಾಂಧಿ ಕೈಯಿಂದ ರಕ್ಷೆ ಕಟ್ಟಿಸಿಕೊಂಡು
ಗುಜರಾತ್‌ ಶಾಸಕರು ಸೋಮವಾರ ಸಂಜೆ ಅಹಮದಾಬಾದ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ ಶಾಸಕರ ಜವಾಬ್ದಾರಿ ವಹಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಅವರೊಂದಿಗೆ
ದೆಹಲಿಗೆ ತೆರಳಿ ಹೈ ಕಮಾಂಡ್‌ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next