Advertisement

ಶಿಕ್ಷಣ ಸಂಸ್ಥೆಗಳ ಬಳಿ ಪೊಲೀಸರಿಗೇನು ಕೆಲಸ? : ಸಿದ್ದರಾಮಯ್ಯ, ಡಿಕೆಶಿ ಕಿಡಿ

03:34 PM Feb 18, 2022 | Team Udayavani |

ಬೆಂಗಳೂರು : ಶಿಕ್ಷಣ ಸಂಸ್ಥೆಗಳ ಬಳಿ ಪೊಲೀಸರಿಗೇನು ಕೆಲಸ? ಪೊಲೀಸರ ಮೂಲಕ ಹೆದರಿಸೋದು ಯಾಕೆ? ಕೇಸ್, ಹಾಕ್ತೀವಿ, ಅರೆಸ್ಟ್ ಮಾಡ್ತೀವಿ ಎಂಬ ಚಿಕ್ಕ ಮಕ್ಕಳನ್ನು ಹೆದರಿಸೋದು ಯಾಕೆ? ಇದೇನು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರವೋ? ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಮಾತನಾಡಿ, ಹಿಜಾಬ್ ಕುರಿತು ಸರ್ಕಾರವೇ ಇತ್ಯರ್ಥ ಮಾಡಬಹುದಿತ್ತು, ನ್ಯಾಯಾಲಯದ ಮೆಟ್ಟಿಲು ಹತ್ತಲು ಅವಕಾಶವೇ ಕೊಡಬಾರದಿತ್ತು. ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ದುರುದ್ದೇಶದಿಂದ ಆರಂಭದಲ್ಲೇ ಅಲಕ್ಷ್ಯ ತೋರಿದ ಕಾರಣಕ್ಕೆ ಇಂದು ದೊಡ್ಡದಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರ ವಿರೋಧಿಸಿಲ್ಲ. ಸಮವಸ್ತ್ರದೊಂದಿಗೆ ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಎಫ್ ಐ ಆರ್ ದಾಖಲು ಮಾಡುತ್ತಿರುವುದು ತಪ್ಪು. ಇದಕ್ಕೆಲ್ಲ ಸರ್ಕಾರವೇ ಕಾರಣ ಎಂದರು.

ಸಂಘ ಪರಿವಾದವರು ಅನಗತ್ಯವಾಗಿ ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಜಾಬ್ ಧರಿಸುವುದು ನಿನ್ನೆ ಮೊನ್ನೆ ಆರಂಭವಾದುದ್ದಲ್ಲ, ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವರು ಧರಿಸುತ್ತಾರೆ, ಕೆಲವರು ಧರಿಸಲ್ಲ ಅದು ಮುಸ್ಲಿಂ ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆ. ಹಿಜಾಬ್ ಧರಿಸುವುದರಿಂದ ಇತರರಿಗೆ ಯಾವ ತೊಂದರೆ ಕೂಡ ಆಗಲ್ಲ. ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿದೆ ಕೂಡ. ಧರ್ಮದ ಸಂಪ್ರದಾಯದ ಪ್ರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರೆಗೆ ಯಾವ ತಕರಾರು ಇರಲಿಲ್ಲ. ಇದಕ್ಕೆ ಸಂವಿಧಾನ ಕೂಡ ಅವಕಾಶ ನೀಡಿದೆ, ಇದು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದರು.

ಮುಸ್ಲಿಂರು ಇತ್ತೀಚೆಗೆ ಶಿಕ್ಷಣದ ಕಡೆಗೆ ಒಲವು ತೋರಿ ಶಾಲಾ ಕಾಲೇಜಿಗೆ ಬರುತ್ತಿದ್ದಾರೆ, ಮೊದಲೆಲ್ಲ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವ ಪ್ರಮಾಣ ಕಡಿಮೆಯಿತ್ತು, ಸಂಘ ಪರಿವಾರದವರು ಹಿಜಾಬ್ ಅನ್ನು ವಿವಾದ ಮಾಡಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ಮಾಡಿದ್ದಾರೆ ಎಂದರು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ನಲ್ಲಿ ಮಧ್ಯಂತರ ತೀರ್ಪು ಬಂದಿದೆ. ಶಾಲಾಭಿವೃದ್ಧಿ ಕಮಿಟಿ ಇರುವ ಶಾಲೆಗಳಲ್ಲಿ ಅವರು ಒಂದು ಸಮವಸ್ತ್ರ ನೀತಿ ರೂಪಿಸಿದ್ದರೆ ಅಲ್ಲಿ ಮಾತ್ರ ಈ ಆದೇಶ ಅನ್ವಯವಾಗುತ್ತೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಎಲ್ಲರಿಗೂ ಇದು ಅನ್ವಯವಾಗಲ್ಲ. ಚಾಮರಾಜನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಅವರು ಈ ಸಮವಸ್ತ್ರ ನೀತಿ ಪದವಿ ಕಾಲೇಜುಗಳಿಗೆ ಅನ್ವಯವಾಗಲ್ಲ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಎಂಬುವವರು ಮೊನ್ನೆ 16 ನೇ ತಾರೀಖು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಮೇಲ್ಕಂಡ ಆದೇಶವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ ಶಾಲೆಗಳು (ಆಂಗ್ಲ ಮಾಧ್ಯಮ) ಶಾಲೆಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ. ಮೊದಲನೆಯದಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯೇ ಇರುವುದಿಲ್ಲ, ಶಾಲಾಭಿವೃದ್ಧಿ ಕಮಿಟಿ ಇಲ್ಲದಿದ್ದಾಗ ಸಮವಸ್ತ್ರ ನೀತಿ ರೂಪಿಸುವುದು ಯಾರು? ಹೀಗಿದ್ದಾಗ ನ್ಯಾಯಾಲಯದ ಆದೇಶ ಪಾಲನೆ ಎಲ್ಲಿ ಸಾಧ್ಯ? ಈ ಸುತ್ತೋಲೆ ಸಂಪೂರ್ಣ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.

Advertisement

ಅಲ್ಪಸಂಖ್ಯಾತ ನಿಯೋಗದ ಜೊತೆ ಡಿ.ಕೆ ಶಿವಕುಮಾರ್ ಅವರೊಂದಿಗೆ ಸಿಎಂ ಭೇಟಿ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದ್ದೇವೆ. ಮುಖ್ಯಮಂತ್ರಿಗಳು ಸಂಬಂಧಪಟ್ಟವರ ಜೊತೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಮತ್ತು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರದ ನಿಲುವೇ ಗೊಂದಲಮಯವಾಗಿದೆ. ಇದರಿಂದ ಮುಸ್ಲಿಂ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ಸಭೆ ಕರೆದು ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಜಾತ್ಯಾತೀತ ಸಿದ್ಧಾಂತಕ್ಕೆ ಬದ್ಧವಾಗಿದೆ. ಬಿಜೆಪಿ ಪಕ್ಷ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತ ಮಾಡಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಬಚಾವೊ, ಭೇಟಿ ಪಡಾವೋ ಎನ್ನುತ್ತಾರೆ, ಇದೊಂದು ರೀತಿ ಬಾಯಲ್ಲಿ ಬೆಣ್ಣೆ, ಕಂಕುಳಲ್ಲಿ ದೊಣ್ಣೆ ಎಂಬ ಗಾದೆ ಮಾತಂತೆ ಇದೆ. ಹೇಳೋದು ಒಂದು, ಮಾಡೋದು ಅದಕ್ಕೆ ವಿರುದ್ಧವಾದ ಕೆಲಸ. ಈ ವಿವಾದಕ್ಕೆ ಕಾರಣವಾದ ಯಾವುದೇ ಸಂಘಟನೆ ಇದ್ದರೂ ಅದನ್ನು ಖಂಡಿಸುತ್ತೇನೆ. ಅದು ಆರ್. ಎಸ್ಎಸ್ ಇರಲಿ, ಎಸ್.ಡಿ.ಪಿ.ಐ ಇರಲಿ, ಭಜರಂಗ ದಳವಿರಲಿ, ಎಲ್ಲಾ ಮೂಲಭೂತವಾದಿ ಸಂಘಟನೆಗಳ ವಿರುದ್ಧ ನನ್ನ ಖಂಡನೆಯಿದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ದೇಶದ್ರೋಹದ ಕೆಲಸ. ಯಾವ ಧರ್ಮ, ಜಾತಿಯವರೇ ಆದರೂ ಅವರಿಗೆ ಶಿಕ್ಷಣ ಸಿಗಬೇಕು ಎಂದರು.

ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಮಕ್ಕಳ ವಿದ್ಯಾಭ್ಯಾಸ ದ ಬಗ್ಗೆ ಈ ದೇಶದ ಸಂವಿಧಾನದಲ್ಲಿ ಹಕ್ಕಿದೆ. ಉಚಿತ ಮತ್ತು ಕಡ್ಡಾಯದ ಹಕ್ಕಿದೆ. ಅವರವರ ಧರ್ಮದ ಬಗ್ಗೆ ಎಲ್ಲರಿಗೂ ಅವಕಾಶ ಇದೆ. ಸಮವಸ್ತ್ರ ವಿಚಾರದಲ್ಲಿ ಯಾವುದೇ ನಿರ್ಭಂದ ಇರಲಿಲ್ಲ. ಈ ತಿಂಗಳು 5  ನೇ ತಾರಿಕಿನವರೆಗೆ ಯಾವುದೇ ಗೈಡ್ ಲೈನ್ಸ್ ಮಾಡಿದರು ಏಕೆ ಈಗ ಮಾಡಿದರು? ಎಂದು ಪ್ರಶ್ನಿಸಿದರು.

ಹಿಜಾಬ್ ವಿಚಾರ ಈಗ ಕೇವಲ ಸ್ಥಳಿಯ ವಿಚಾರವಾಗಿ ಉಳಿದಿಲ್ಲ. ಮೂಲಭೂತ ಹಕ್ಕಿಗೆ ಈಗ ತೊಂದರೆ ಬಂದಿದೆ. ಕೋರ್ಟ್ ಅದೇಶ ಇದ್ದರು ಮುಂದೆ ಹೋಗಿ ಆದೇಶ ಮಾಡಿದ್ದಾರೆ. ಉನ್ನತಶಿಕ್ಷಣ ಸಚಿವರು ಡಿಗ್ರಿ ಕಾಲೇಜಿಗೂ ಇದಕ್ಕೂ ಸಂಬಂಧ ಇಲ್ಲ ಅಂತಾರೆ. ಶಿಕ್ಷಣ ಸಚಿವರು ಇನ್ನೊಂದು ಹೇಳ್ತಾರೆ. ಅಭಿವೃದ್ಧಿ ಸಮಿತಿ ಎಲ್ಲಿದೆ ಅಂತಾ ಅವರೇ ಹೇಳಲಿ ನೋಡೋಣ ಎಂದರು.

ಹೊಸದಾಗಿ ಏನಾದರು ಬಂದಿದ್ರೆ ಪರವಾಗಿಲ್ಲ. ಇದು ಮೊದಲಿನಿಂದಲೂ ಇದೆ. ಕ್ರಿಶ್ಚಿಯನ್ ಸಂಸ್ಥೆಗಳಲ್ಲೂ ಹಿಜಾಬ್ ಹಾಕಿಕೊಂಡು ಹೋಗ್ತಾ ಇದಾರೆ. ಕರ್ನಾಟಕ ರಾಜ್ಯಕ್ಕೆ ಯಾರು ಕೂಡ ಬಂಡವಾಳ ಹಾಕಲು ಬರುವುದಿಲ್ಲ. ಇದಕ್ಕೆ ಸರ್ಕಾರವೇ ಅಡಿಪಾಯ ಹಾಕ್ತಾ ಇದೆ. ಸಿಎಂ ಇದನ್ನ ಗಮನದಲ್ಲಿ ಇಟ್ಕೋ ಬೇಕು. ಇಲ್ಲಿ ನ ಶಿಕ್ಷಣ, ಮೂಲಭೂತ ಸೌಕರ್ಯ, ಶಾಂತಿ ದೇಶದ ಗಮನ ಸೆಳೆದಿದೆ. ನಿಮ್ಮ ಪ್ರತಿಷ್ಠೆಯನ್ನ ಬದಿಗಿಟ್ಟು ನಾವೆಲ್ಲ ಕೆಲಸ ಮಾಡಬೇಕಿದೆ. ಸಮಾಜಕ್ಕೆ ಒಂದು ಕಪ್ಪು ಚುಕ್ಕಿ ಇಡುತ್ತಾ ಇದಾರೆ. ನಾವು ಸಮಾಜದಲ್ಲಿ ಮೊದಲಿಗೆ ಶಾಂತಿ ತರೋಣ.ನಮ್ಮ ಸಹಕಾರ ಸಂಪೂರ್ಣ ಇದೆ. ನಮ್ಮ ಧರ್ಮಗಳ ರಕ್ಷಣೆಯೇ ನಮ್ಮ ಸಂಸ್ಕೃತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next