Advertisement

ಸಮಗ್ರ ಕೃಷಿ ಬಗ್ಗೆ ಹೆಮ್ಮೆ ಇದೆ: ಅಮರ್‌ ಡಿಸೋಜ

06:07 AM Jan 25, 2019 | |

ಬೆಂಗಳೂರು: “ನಮ್ಮ ಸಮುದಾಯದಲ್ಲಿ ಮತ್ತು ಕುಟುಂಬದಲ್ಲಿ ಎಲ್ಲರೂ ಪದವೀಧರರು. ನಾನು ಕೃಷಿ ಮಾಡುವಾಗ ಜತೆಗಿದ್ದವರೆಲ್ಲಾ ಕಲಿತು ಗಲ್ಫ್ ದೇಶಗಳಿಗೆ ಹೋಗುವ ಟ್ರೆಂಡ್‌ ಇತ್ತು. ನಾನೂ ಯಾಕೆ ಓದಲಿಲ್ಲ ಎಂಬ ಕೊರಗು ಮನಸ್ಸಿನೊಳಗೆ ಕೊರೆಯುತ್ತಿತ್ತು. ಪ್ರತಿಷ್ಠಿತರ ಕಾರ್ಯಕ್ರಮಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದೆ. ಆದರೆ, ಇವತ್ತು ನಾನು ಆಯ್ಕೆ ಮಾಡಿಕೊಂಡ ದಾರಿ ಸರಿ ಎನಿಸುತ್ತಿದೆ. ಹಾಗೂ ಅದರ ಬಗ್ಗೆ ಹೆಮ್ಮೆಯೂ ಇದೆ…’

Advertisement

ಕ್ಕಮಗಳೂರಿನ ಮಡೇನೆರಲು ಗ್ರಾಮದ ರೈತ ಅಮರ್‌ ಡಿಸೋಜ ಅವರ ಬಿಚ್ಚು ನುಡಿಗಳಿವು. ಅವರ ಈ ಸಾಧನೆಗೆ ಹೆಬ್ಟಾಳದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್‌ ಡಾ.ಜಿ.ಕೆ. ವೀರೇಶ್‌ ಅವರ ದತ್ತಿ ನಿಧಿ ಅಡಿ ಗುರುವಾರ “ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ’ ನೀಡಿ ಗೌರವಿಸಿತು. 

ನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಅಮರ್‌, “ಬಿಎ ಪದವಿ ಅರ್ಧಕ್ಕೆ ಕೈಬಿಟ್ಟು ಕೃಷಿಯತ್ತ ಮುಖಮಾಡಿದೆ, ಇಂದು ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ನೀಡಿದೆ. ಕೃಷಿಗೆ ಕಾಲಿಟ್ಟಾಗ ಅಳುಕು ಮತ್ತು ಹಿಂಜರಿಕೆ ಅವರಿಗಿತ್ತು. ಈಗ ತಿಂಗಳಿಗೆ ಕನಿಷ್ಠ 1.25 ಲಕ್ಷ ರೂ. ನಿವ್ವಳ ಲಾಭ ಸಿಗುತ್ತಿದೆ. ಶಾಶ್ವತವಾಗಿ 20 ಜನರಿಗೆ ಕೆಲಸ ಕೊಟ್ಟಿದ್ದೇನೆ. ಹೀಗಾಗಿ ಪ್ರಶಸ್ತಿ ಆಯ್ಕೆ ಬಗ್ಗೆ ಖುಷಿ ಎನಿಸುತ್ತಿದೆ ಎಂದರು.

ಉಪಕಸುಬಿನಲ್ಲೇ ಹೆಚ್ಚು ಆದಾಯ: 25 ಎಕರೆ ಜಮೀನಿನಲ್ಲಿ 20 ಎಕರೆಯಲ್ಲಿ ಕಾಫಿ, ಕಾಳಮೆಣಸು, ಅಡಿಕೆ, ಅಂಟುವಾಳ, ಭತ್ತ, ಸಿಲ್ವರ್‌, ಸಾಗವಾನಿ ಮರಗಳನ್ನು ಬೆಳೆದಿದ್ದೇನೆ. ಎರಡು ಎಕರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದೇನೆ. ಉಳಿದದ್ದರಲ್ಲಿ ಹಂದಿ ತಳಿ ಸಂವರ್ಧನೆ, ಹಸು, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಕೃಷಿ ಉಪಕರಣಗಳನ್ನು ಬಾಡಿಗೆ ಕೂಡ ನೀಡುತ್ತಿದ್ದೇನೆ.

ಇದೆಲ್ಲದರ ಪೈಕಿ ಕೃಷಿಗಿಂತ ನನ್ನ ಕೈಹಿಡಿದಿದ್ದು ಉಪಕಸುಬು. ಒಟ್ಟಾರೆ 25 ಲಕ್ಷ ರೂ. ಆದಾಯದಲ್ಲಿ ಬರೀ ಹಂದಿ ತಳಿ ಸಂವರ್ಧನೆಯಿಂದಲೇ 15 ಲಕ್ಷ ರೂ. ಬರುತ್ತಿದೆ. ತುಂಬಾ ಅಪರೂಪದ ಡುರಾಕ್‌ (Duroc) ಹಂದಿ ತಳಿ ಸಾಕುತ್ತಿದ್ದೇನೆ. ಸಾಮಾನ್ಯ ಹಂದಿಮರಿ (5 ತಿಂಗಳದ್ದು) ಹೆಚ್ಚೆಂದರೆ 5ರಿಂದ 6 ಸಾವಿರ ರೂ. ಆದರೆ, ಡುರಾಕ್‌ ಹಂದಿಮರಿ 20ರಿಂದ 22 ಸಾವಿರ ರೂ.ಗೆ ಮಾರಾಟ ಆಗುತ್ತದೆ ಎಂದರು. 

Advertisement

ಆಂಧ್ರಪ್ರದೇಶ, ತಮಿಳುನಾಡು, ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಹಂದಿಗೆ ಬೇಡಿಕೆಯಿದೆ. ಇನ್ನು ಕೃಷಿ ಉಪಕರಣಗಳನ್ನು ಬಾಡಿಗೆ ಕೊಡುವುದರಿಂದಲೇ ವಾರ್ಷಿಕ ಒಂದು ಲಕ್ಷ ಲಾಭ ಬರುತ್ತದೆ. ದೂರದ ಗ್ರಾಮದಲ್ಲಿ ನಾವು ಇರುವುದರಿಂದ ಸುರಕ್ಷತೆಗಾಗಿ ಹತ್ತು ನಾಯಿಗಳನ್ನು ಸಾಕಿದ್ದು, ತಳಿ ಸಂವರ್ಧನೆ ಕೂಡ ಮಾಡುತ್ತಿದ್ದೇನೆ. ಇದರಿಂದ ವಾರ್ಷಿಕ ಒಂದು ಲಕ್ಷ ರೂ. ಆದಾಯವಿದೆ ಎಂದು ಹೇಳಿದರು.

ಇದೇ ರೀತಿ, ಡಿ ಫಾರ್ಮ್ ಡಿಪ್ಲೊಮಾ ಪೂರೈಸಿರುವ ರಾಣೆಬೆನ್ನೂರಿನ ಕುಪ್ಪೆಲೂರು ಗ್ರಾಮದ ಮಾಲತೇಶ ಮಣಕೂರು ಔಷಧಿ ವ್ಯಾಪಾರ ಬಿಟ್ಟು ಕೃಷಿಯತ್ತ ಮುಖಮಾಡಿದ್ದಾರೆ. ಮಿಶ್ರ ಬೇಸಾಯ ಪದ್ಧತಿಯಿಂದ ವಾರ್ಷಿಕ 23ರಿಂದ 25 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿರುವುದಾಗಿ ಹೇಳಿದರು.

ಇನ್ನು ಮಾಗಡಿ ತಾಲೂಕಿನ ಎಚ್‌.ಕೆ. ಕುಮಾರಸ್ವಾಮಿ ತಮ್ಮ ಹತ್ತು ಎಕರೆ ಪ್ರದೇಶದಲ್ಲಿ ಭತ್ತ, ರಾಗಿ, ತೆಂಗು, ಮೆಕ್ಕೆಜೋಳ, ಬೇಲಿ ಮೆಂತೆ, ಗಿನಿ, ಓಕ್‌, ಹೆಬ್ಬೇವು ಜತೆಗೆ ನಾಟಿ ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ಬಂದ ಆದಾಯದಲ್ಲೇ 20 ಲಕ್ಷ ಮೌಲ್ಯದ ನಿವೇಶನ ಖರೀದಿಸಿದ್ದಾರೆ. ಹೊಸ ಟ್ರ್ಯಾಕ್ಟರ್‌ ಖರೀದಿಸಿದ್ದಾರೆ. ಇವರಿಬ್ಬರಿಗೂ “ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಸಚಿವರಾದ ಎನ್‌.ಎಚ್‌. ಶಿವಶಂಕರ ರೆಡ್ಡಿ, ಬಿ. ವೆಂಕಟರಾವ್‌ ನಾಡಗೌಡ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌, ವಿಶ್ರಾಂತ ಕುಲಪತಿ ಡಾ.ಕೆ. ನಾರಾಯಣಗೌಡ, ಅಲುಮ್ನಿ ಅಸೋಸಿಯೇಷನ್‌ ಅಧ್ಯಕ್ಷ ಡಾ.ಕೆ. ನಾರಾಯಣಗೌಡ ಉಪಸ್ಥಿತರಿದ್ದರು. 

ನಾನು ಕುರಿ ಮೇಯಿಸಿದ್ದೇನೆ – ಎಚ್‌ಡಿಡಿ: “ಕೃಷಿ ನನಗೆ ರಕ್ತಗತವಾಗಿ ಬಂದಿದೆ. ನನ್ನ ತಂದೆ ಕುರಿ ಕಾಯುತ್ತಿದ್ದರು. ನಾನೂ ಕುರಿ ಮೇಯಿಸಿದ್ದೇನೆ. ಈಗ ನನ್ನ ಮಗಳು ಕೂಡ ಚಿಕ್ಕ ಜಮೀನಿನಲ್ಲಿ 150 ಕುರಿ ಸಾಕುತ್ತಿದ್ದಾಳೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, “ಬೆಳಗಿನ ಜಾವ 3ರ ಸುಮಾರಿಗೆ ಎದ್ದು ಮೈಕೊರೆಯುವ ಚಳಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದೆ.

ಚಳಿಯ ಹೊಡೆತಕ್ಕೆ ಕೈಗಳು ಮಡಚಲಿಕ್ಕೂ ಬರುತ್ತಿರಲಿಲ್ಲ. ಪ್ರತಿಪಕ್ಷದ ನಾಯಕನಾಗಿದ್ದಾಗಲೂ ಶನಿವಾರ ಮತ್ತು ಭಾನುವಾರ ನಾನು ತೋಟದಲ್ಲೇ ಕಳೆಯುತ್ತಿದ್ದೆ. ಅಲ್ಪಾವಧಿಯ ಪ್ರಧಾನಿಯಾದ ಈ ದೇವೇಗೌಡ ಮೂಲತಃ ವ್ಯವಸಾಯ ಮತ್ತು ಸಣ್ಣ ಗುತ್ತಿಗೆದಾರನಾಗಿ ಜೀವನ ಆರಂಭಿಸಿದವನು’ ಎಂದು ಮೆಲುಕುಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next