Advertisement

7 ದಶಕಗಳ ಹಗ್ಗದ ನಡಿಗೆಗೆ ಮುಕ್ತಿ; ದ್ವೀಪದ ಊರಿಗೆ ಸಂಪರ್ಕ ಸೇತು ಖಾತ್ರಿ

10:48 PM Nov 13, 2020 | mahesh |

ಬೆಳ್ತಂಗಡಿ: ಹಲವು ದಶಕಗಳಿಂದ ಮಳೆಗಾಲದಲ್ಲಿ ಸಂಚಾರಕ್ಕೆ ಸೇತುವೆ ಭಾಗ್ಯ ಕಾಣದೆ ದ್ವೀಪದಂತಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಲ್ಲಾಜೆ ಪ್ರದೇಶದ ಜನರ ಕನಸು ಕಡೆಗೂ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣವಾಗುವ ಮೂಲಕ ಈಡೇರುವ ಕಾಲ ಸನ್ನಿಹಿತವಾಗಿದೆ.

Advertisement

ಸುಮಾರು 65 ಕುಟುಂಬಗಳು ಪ್ರತಿ ಮಳೆಗಾಲಕ್ಕೂ ಅಗತ್ಯ ಆವಶ್ಯಕತೆ ಪೂರೈಸಲು ನರಕಯಾತನೆ ಅನುಭವಿಸುತ್ತಿರುವುದರಿಂದ 7 ದಶಕಗಳಿಂದ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಆದರೆ ಪ್ರಯೋಜನ ಶೂನ್ಯವಾಗಿತ್ತು. ಈ ಕುರಿತು ಉದಯವಾಣಿ ನಿರಂತರ ವರದಿ ಪ್ರಕಟಿಸಿತ್ತು.

ಕೋವಿಡ್‌ ಕಾರಣದಿಂದ ವಿಳಂಬ
ಈ ಬೇಡಿಕೆಯನ್ನು ಶಾಸಕ ಹರೀಶ್‌ ಪೂಂಜ ಅವರ ಗಮನಕ್ಕೆ ತರಲಾಗಿತ್ತು. ಅವರು ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಪಶ್ಚಿಮವಾಹಿನಿ ಯೋಜನೆಯಡಿ 2.50 ಕೋ.ರೂ. ವೆಚ್ಚದಲ್ಲಿ ಸೇತುವೆ ಜತೆಗೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಬೇಸಗೆಯಲ್ಲಿ ಕಾಮಗಾರಿ ಆರಂಭಿಸಬೇಕಾಗಿದ್ದರೂ ಕೋವಿಡ್‌ ಕಾರಣದಿಂದ ವಿಳಂಬವಾಗಿತ್ತು. ಪ್ರಸಕ್ತ ನದಿ ನೀರು ಹರಿವು ಹೆಚ್ಚಾಗಿರುವುದರಿಂದ ಕಾಮಗಾರಿಗೆ ಅಗತ್ಯದ ಶೇ. 50ರಷ್ಟು ಜಲ್ಲಿ, ಕಬ್ಬಿಣ, ಇತರ ಸಲಕರಣೆಗಳನ್ನು ಸಂಗ್ರಹಿಸಲಾಗಿದೆ. ನದಿ ನೀರು ಇಳಿಕೆಯಾದಲ್ಲಿ ಶೀಘ್ರ ಶಿಲಾನ್ಯಾಸ ನೆರವೇರಲಿದೆ.

6 ತಿಂಗಳ ಸಾಮಗ್ರಿ
ಪುಲ್ಲಾಜೆಯ 65 ಕುಟುಂಬಗಳಲ್ಲಿ ಸುಮಾರು ಒಂದು ಸಾವಿರ ಮಂದಿ ವಾಸಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲ ಆರಂಭದಲ್ಲಿ 6 ತಿಂಗಳ ಆಹಾರ ಸೇರಿದಂತೆ ಇತರ ಅಗತ್ಯ ವಸ್ತು ಸಂಗ್ರಹಿಸಬೇಕಾಗಿತ್ತು. ನದಿ ನೀರು ಹೆಚ್ಚಾದಲ್ಲಿ ಮಕ್ಕಳಿಗೆ ಶಾಲೆ ಇಲ್ಲ. ಶಾಸಕ ಹರೀಶ್‌ ಪೂಂಜ ಅವರ ಶ್ರಮದಿಂದ ಸೇತುವೆ ಭಾಗ್ಯ ದೊರೆತಿದೆ. ಶೀಘ್ರದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಮೂಲಕ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ ಸ್ಥಳೀಯರಾದ ಸಂದೀಪ್‌ ಪುಲ್ಲಾಜೆ ಹಾಗೂ ನವೀನ್‌ ನೆರಿಯಾ ತಿಳಿಸಿದ್ದಾರೆ.

ಹಗ್ಗದ ನಡಿಗೆಗೆ ಮುಕ್ತಿ
ಬೆಳ್ತಂಗಡಿ ತಾಲೂಕಿನಿಂದ 35 ಕಿ.ಮೀ. ದೂರವಿರುವ ನೆರಿಯ ಗ್ರಾಮದ ಅಣಿಯೂರಿನಿಂದ ಸುಮಾರು 8 ಕಿ.ಮೀ. ದೂರದಲ್ಲಿ ಪುಲ್ಲಾಜೆ ಪ್ರದೇಶವಿದೆ. ಮಾರ್ಗ ಮಧ್ಯ ನೆರಿಯ ಹೊಳೆ ಹರಿಯುತ್ತ¤ದೆ. ಈ ಹೊಳೆಗೆ ಸೇತುವೆ ಇಲ್ಲದೆ ಪ್ರತಿ ಮಳೆಗಾಲದಲ್ಲಿ ಸ್ಥಳೀಯರು ಹಗ್ಗದ ಆಸರೆ ಪಡೆಯುತ್ತಿದ್ದರು. ವಿದ್ಯಾರ್ಥಿಗಳು, ಗರ್ಭಿಣಿಯರು, ವೃದ್ಧರು, ಮಕ್ಕಳು, ಭಯದಲ್ಲೇ ಪ್ರತಿ ವರ್ಷ ಹರಸಾಹಸದಿಂದ ನದಿ ದಾಟುತ್ತಿದ್ದರು. ಮಳೆಗಾಲದಲ್ಲಿ ದ್ವೀಪವಾಸಿಗಳಾಂತಾಗುವ ಇವರ ಸಂಕಷ್ಟ 70 ವರ್ಷಗಳ ಬಳಿಕ ಕರಗಲಿದೆ.

Advertisement

2.50 ಕೋ.ರೂ. ವೆಚ್ಚ
2.50 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಕಿಂಡಿ ಅಣೆಕಟ್ಟು- ಸೇತುವೆ ಉದ್ದ 24.80 ಮೀ. ಇರಲಿದೆ. 2.5 ಮೀ. ನೀರಿನ ಮಟ್ಟ ಶೇಖರಣೆಯಾಗಲಿದೆ.
-ಗೋಕುಲ್‌ ದಾಸ್‌, ಕಾರ್ಯಪಾಲಕ ಅಭಿಯಂತ, ಸಣ್ಣನೀರಾವರಿ ವಿಭಾಗ

ಮಳೆಗಾಲದಲ್ಲಿ ನೆರಿಯಾ ಪುಲ್ಲಾಜೆ ಜನರ ಸಂಕಷ್ಟ ಅರಿತು ಪಶ್ಚಿಮವಾಹಿನಿ ಯೋಜನೆಯಡಿ ವಾಹನ ಸಂಚಾರ ಹಾಗೂ ನೀರು ಶೇಖರಣೆಗೆ ಅವಶ್ಯ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಲಾಗಿದೆ. ಶೀಘ್ರ ಶಿಲಾನ್ಯಾಸ ನೆರವೇರಲಿದೆ.
-ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next