Advertisement

ಭವಿಷ್ಯ ಕೇವಲ ರಾಜಕಾರಣಿಗಳ ಕೈಯಲ್ಲಿದೆಯೇ?

04:00 AM Jul 14, 2017 | |

ಯಾರು ಈ ಗದ್ದಲದ ನಡುವೆಯೂ “ಜೀವನವೆನ್ನುವುದು ನಮಗೆ ದೊರೆತ ಕೊಡುಗೆ, ಪ್ರೀತಿಯೇ ಜೀವನದ ಮೂಲ, ಅದುವೇ ಜೀವನಾರ್ಥ’ ಎಂದು ಅರಿಯುತ್ತಾರೋ, ಅವರು ಮಾತ್ರ ಸಹ ಜೀವಿಗಳಿಗೆ ಸ್ಪಂದಿಸಬಲ್ಲರು. 

Advertisement

ಸಂತಸಮಯ ಭವಿಷ್ಯವನ್ನು ಸೃಷ್ಟಿಸುವುದು ಅಸಾಧ್ಯವಾದ ಕೆಲಸ ಎಂದೇ ನಮ್ಮಲ್ಲಿ ಬಹುತೇಕರು ಇಂದು ಆತಂಕಪಡುತ್ತಿದ್ದಾರೆ. ಇಂಥ ಆತಂಕಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾದರೂ, ಸಂತಸ ಮಯ ಜಗತ್ತನ್ನು ಸೃಷ್ಟಿಸುವುದು ಅಸಾಧ್ಯ ಕೆಲಸವೇನೂ ಅಲ್ಲ ಎನ್ನುವುದನ್ನು ಹೇಳಲೇಬೇಕಾಗಿದೆ. ಸತ್ಯವೇನೆಂದರೆ, ಹೊರ ಜಗತ್ತಿನಿಂದ ವಿಮುಖವಾಗಿ ಬಾಗಿಲು ಹಾಕಿಕೊಳ್ಳುವುದನ್ನು ಬಿಟ್ಟಾಗ ಮಾತ್ರ ನಾವು ನಿರಾಶೆಯಿಂದ ಹೊರಬರಬಹುದು. ಸಂತೋಷವೆನ್ನುವುದು ಸೃಷ್ಟಿಯ ಒಂದು ಚಿಕ್ಕ ಅಣು ಮತ್ತು ಸಮಷ್ಟಿಯ ನಡುವಿರುವ ಸಾಮರಸ್ಯವನ್ನು ಅರಿತಾಗ ಮಾತ್ರ ಸಿಗುತ್ತದೆ. ವಿಜ್ಞಾನವೂ ಕೂಡ ಜಗತ್ತಿನ ಪ್ರತಿಯೊಂದು ಅಂಶವೂ ಇನ್ನೊಂದರ ಜೊತೆ ಸಂಪರ್ಕದಲ್ಲಿದೆ ಮತ್ತು ಸಂವಹಿಸುತ್ತದೆ ಎಂದು ಹೇಳುತ್ತದೆ(ಈ ವಿಷಯ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ). ಅಂದರೆ ನನ್ನಲ್ಲಿ ನೀವಿದ್ದೀರಿ. ನಿಮ್ಮಲ್ಲಿ ನಾನಿದ್ದೇನೆ. ನಮ್ಮೊಳಗೆ ಎಲ್ಲವೂ ಇದೆ.  

ಹೀಗಿದ್ದರೆ ಎಷ್ಟು ಚೆಂದ!
ಸುಮ್ಮನೇ ಒಮ್ಮೆ ಯೋಚಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಯಲ್ಲಿ ಸಮಾನತೆ ಅಡಕವಾದರೆ ಈ ಜಗತ್ತು ಎಷ್ಟು ಅದ್ಭುತವಾಗಿರು ತ್ತದೆ? ಒಂದೆಡೆ ಬಹುದೂರದ ಗ್ರಹಗಳನ್ನು ನಾವು ಹುಡುಕುತ್ತಿರುವ ವೇಳೆಯಲ್ಲೇ, ಇನ್ನೊಂದೆಡೆ ನಮ್ಮ ಸುತ್ತಲೂ ಇರುವ ಸಹೋದರರು ಮತ್ತು ಸಹೋದರಿಯರ ಅಗತ್ಯಗಳನ್ನು ಪುನಃ ನಾವು ಅನ್ವೇಷಿಸಿದರೆ ಈ ಜಗತ್ತು ಎಷ್ಟು ಅದ್ಭುತವಾಗಿರುತ್ತದೆ? “ಏಕತೆ’ ಎನ್ನುವ ಸುಂದರ ಪದವು ಕೇವಲ ಸಾಮಾಜಿಕ ಸೇವಾ ಕಾರ್ಯಗಳಿಗೆ ಸೀಮಿತವಾಗುವ ಬದಲು, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಲೋಕದಲ್ಲಿ ಮತ್ತು ವ್ಯಕ್ತಿಗಳು- ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗಟ್ಟಿಯಾಗಿ ಬೇರೂರಿಬಿಟ್ಟರೆ ಈ ಜಗತ್ತು ಎಷ್ಟು ಅದ್ಭುತವಾಗಿರುತ್ತದೆ? 

ನಿಜವಾದ ಒಗ್ಗಟ್ಟು ಹೇಗಿರಬೇಕು ಎಂದು ಜನರಿಗೆ ಮನದಟ್ಟು ಮಾಡಿಸಿದಾಗ ಮಾತ್ರ ನಾವು ಈಗಿನ “ಸಾಂಸ್ಕೃತಿಕ ನಷ್ಟದಿಂದ’ ಹೊರ ಬರಲು ಸಾಧ್ಯವಾಗುತ್ತದೆ. ನಮ್ಮ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ತಮಗರಿವಿಲ್ಲದಂತೆ ಜನರಿಗಿಂತ ವಸ್ತುಗಳಿಗೇ ಹೆಚ್ಚು ಮಹತ್ವ ಕೊಡ ತೊಡಗಿವೆ. ಈ ರೀತಿ ವಸ್ತುಗಳಿಂದಾಗಿ ಹಿನ್ನೆಲೆಗೆ ಸರಿದಿರುವ ಜನರನ್ನು ಮುನ್ನೆಲೆಗೆ ತಂದಾಗ ಮಾತ್ರ ಈ “ನಷ’rವನ್ನು ತಡೆಯಬಹುದು. 

ಯಾಂತ್ರಿಕ ವ್ಯವಸ್ಥೆಯಲ್ಲ ಒಗ್ಗಟ್ಟು
ಒಗ್ಗಟ್ಟು ಎನ್ನುವ ಪದವು ನಿಘಂಟಿನಿಂದ ಮಾಯವಾಗಬೇಕು ಎಂದು ಇಂದು ಬಹಳಷ್ಟು ಮಂದಿ ಬಯಸುತ್ತಿದ್ದಾರೆ. ಆದರೆ ಒಗ್ಗಟ್ಟು ಎನ್ನು ವುದು ಸ್ವಯಂಚಾಲಿತ ಯಾಂತ್ರಿಕ ವ್ಯವಸ್ಥೆಯಲ್ಲ. ಅದು ಅಳಿಸಿಹಾಕಬಹು ದಾದಂಥ ಪದವೂ ಅಲ್ಲ. ಒಗ್ಗಟ್ಟು ಪ್ರತಿಯೊಬ್ಬರ ಹೃದಯದಿಂದ ಉದ್ಭವಿಸುವ ನೈಜ ಪ್ರತಿಕ್ರಿಯೆ. ಹೌದು, ಅದು ನೈಜ ಪ್ರತಿಕ್ರಿಯೆ! 
ಯಾರು ಈ ಗದ್ದಲ ಮತ್ತು ವಿರೋಧಭಾಸಗಳ ನಡುವೆಯೂ “ಜೀವನವೆನ್ನುವುದು ನಮಗೆ ದೊರೆತ ಕೊಡುಗೆ, ಪ್ರೀತಿಯೇ ಜೀವನದ ಮೂಲ, ಅದುವೇ ಜೀವನಾರ್ಥ’ ಎಂದು ಅರ್ಥಮಾಡಿಕೊಳ್ಳುತ್ತಾರೋ, ಅವರು ಮಾತ್ರ ಸಹ ಜೀವಿಗಳಿಗೆ ಸ್ಪಂದಿಸಬಲ್ಲರು. 

Advertisement

ಒಬ್ಬರಿಗೆ ಒಳ್ಳೆಯದನ್ನು ಮಾಡಲು ನಮಗೆ ಧೈರ್ಯ ಬೇಕು, ಕ್ರಿಯಾಶೀಲತೆ ಬೇಕು. ನನಗೆ ಗೊತ್ತು, ಜಗತ್ತಿನಲ್ಲಿಂದು ಅನೇಕಾನೇಕ ಕ್ರಿಯಾಶೀಲ ಮನಸ್ಸುಗಳಿವೆ.ಹೀಗಾಗಿ ನಾವೆಲ್ಲರೂ ಇನ್ನೊಬ್ಬರಿಗೆ ಸಹಾಯ ಮಾಡೋಣ.”ಇನ್ನೊಬ್ಬರು’
ಎಂದರೆ ಅವರು ಒಂದು ಚಾರ್ಟಿನಲ್ಲಿ ಹಿಡಿದಿಡಬಹುದಾದ ಅಂಕಿ ಸಂಖ್ಯೆಗಳಲ್ಲ, ಬದಲಾಗಿ ಆ ಇನ್ನೊಬ್ಬರಿಗೂ ಮುಖವಿದೆ ಮತ್ತು ಮನಸ್ಸಿದೆ. 

ಕ್ರಾಂತಿ ಆಗಲಿ
ಇಂದು ಒಂದು ಬಹುದೊಡ್ಡ ಕ್ರಾಂತಿಯ ಅಗತ್ಯವಿದೆ. ಯಾವ ಕ್ರಾಂತಿಯದು? ಮಮತೆಯ ಕ್ರಾಂತಿ! ಮಮತೆ ಅಂದರೇನು? ನಮ್ಮ ಹೃದಯದಿಂದ ಆರಂಭವಾಗಿ  ಕಣ್ಣು, ಕಿವಿ, ಮತ್ತು ಕೈಗಳ ಮೂಲಕ ಚಲಿಸುವ ಭಾವನೆ ಯದು. ಮಮತೆಯೆಂದರೆ ನಮ್ಮ ಕಣ್ಣುಗಳ ಮೂಲಕ ಇನ್ನೊಬ್ಬರನ್ನು ನೋಡುವುದು, ಕಿವಿಯ ಮೂಲಕ  ಮಕ್ಕಳ, ಬಡವರ ಮತ್ತು ಭವಿಷ್ಯದ ಬಗ್ಗೆ ಹೆದರುವವರ ಮಾತುಗಳನ್ನು, ನಮ್ಮೆಲ್ಲರ ಏಕ ಮನೆಯಾಗಿರುವ ಈ ಭೂಮಿಯ ಮೌನ ರೋದನೆಯನ್ನು ಆಲಿಸುವುದು. 
 
ಮಮತೆ ಎನ್ನುವುದು ಮಕ್ಕಳ ಭಾಷೆ. ಒಂದು ಮಗುವಿಗೆ ತನ್ನ ತಂದೆ ತಾಯಿಯೆಡೆಗೆ ಪ್ರೇಮ ಬೆಳೆಯುತ್ತಾ ಸಾಗುವುದು ಅವರ ದೃಷ್ಟಿ, ಸ್ಪರ್ಶ, ಧ್ವನಿ ಮತ್ತು ಮಮತೆಯ ಮೂಲಕ‌. ಅಪ್ಪ-ಅಮ್ಮ ತಮ್ಮ ಕಂದಮ್ಮಗಳನ್ನು ಮಾತನಾಡಿಸುವ ರೀತಿಯಿದೆಯಲ್ಲ, ಅದು ನನಗೆ ನಿಜಕ್ಕೂ ಬಹಳ ಇಷ್ಟವಾಗುತ್ತದೆ. ಅವರು ತಮ್ಮ ಮಗುವಿಗೆ ಅರ್ಥವಾಗುವ ರೀತಿಯಲ್ಲಿಯೇ ತಮ್ಮ ಹಾವಭಾವಗಳನ್ನು ಬದಲಿಸಿಕೊಳ್ಳುತ್ತಾರೆ. ತೊದಲು ನುಡಿಗಳನ್ನಾಡುತ್ತಾರೆ. ಇದುವೇ ಮಮತೆ. ಅಂದರೆ, ಇನ್ನೊಬ್ಬರೊಡನೆ ಸಮಾನವಾಗಿ ನಿಲ್ಲುವುದು. ನಮಗೆ ಸಮಾನವಾಗಿ ನಿಲ್ಲಲು ಸ್ವತಃ ದೇವರೇ ಏಸುಕ್ರಿಸ್ತನ ರೂಪ ತಾಳಿ ಬಂದ. ಏಸು ಕ್ರಿಸ್ತ ಮಾಡಿದ್ದೂ ಇದನ್ನೇ. ಆತ ನಮ್ಮ ಹಂತಕ್ಕೆ ತನ್ನನ್ನು ತಾನು ಸರಿಹೊಂದಿಸಿಕೊಂಡ. ತನ್ನ ಇಡೀ ಮಾನವ ಅಸ್ತಿತ್ವವನ್ನು ಏಸುಕ್ರಿಸ್ತನು ಪ್ರೀತಿಯೆಂಬ ನಿಜವಾದ, ಬಲಿಷ್ಠವಾದ ಭಾಷೆಯನ್ನು ಕಲಿಯುತ್ತಾ ಕಳೆದ. 

ಹೌದು. ಮಮತೆಯೆನ್ನುವುದು ಜಗತ್ತಿನ ಅತಿ ಧೈರ್ಯವಂತ ಮಹಿಳೆ ಮತ್ತು ಪುರುಷರು ಮಾತ್ರ ಆಯ್ದುಕೊಳ್ಳುವ ಮಾರ್ಗ. ಮಮತೆ  ದೌರ್ಬಲ್ಯವಲ್ಲ, ಅದು ಧೈರ್ಯದ ಅತ್ಯುನ್ನತ ಸ್ಥಿತಿ. ಅದು ಏಕತೆಯ ಮಾರ್ಗ. ಅದು ನಮ್ರತೆಯ ಮಾರ್ಗ. 

ಅಧಿಕಾರ ಮತ್ತು ಜವಾಬ್ದಾರಿ
ನಾನು ಸ್ಪಷ್ಟವಾಗಿ ಮತ್ತು ಜೋರಾಗಿ ಹೇಳುತ್ತೇನೆ ಕೇಳಿ. ನೀವು  ಜೀವನದಲ್ಲಿ ಎಷ್ಟು ಅಧಿಕಾರ ಪಡೆಯುತ್ತಾ ಸಾಗುತ್ತೀರೋ, ಅಷ್ಟು ಪ್ರಮಾಣದಲ್ಲಿ ಜನರ ಮೇಲೆ ಪರಿಣಾಮ ಬೀರುತ್ತೀರಿ. ಹೆಚ್ಚು ಅಧಿಕಾರ ಬಂದಾಗ, ಹೆಚ್ಚು ವಿನಮ್ರರಾಗುವ ಜವಾಬ್ದಾರಿಯೂ ನಿಮ್ಮ ಮೇಲಿರುತ್ತದೆ. ನೀವು ವಿನಮ್ರತೆಯನ್ನು ರೂಢಿಸಿಕೊಳ್ಳದಿದ್ದರೆ, ನಿಮಗೆ ದೊರೆತ ಶಕ್ತಿ/ಅಧಿಕಾರ ನಿಮ್ಮನ್ನು ಮತ್ತು ನಿಮ್ಮ ಸುತ್ತಲಿರುವವರನ್ನು ಹಾಳು ಮಾಡುತ್ತದೆ. 

ಅರ್ಜೆಂಟೀನಾದಲ್ಲಿ ಒಂದು ಗಾದೆ ಮಾತಿದೆ: “ಅಧಿಕಾರವೆನ್ನುವುದು ಖಾಲಿ ಹೊಟ್ಟೆಯಲ್ಲಿ ಮದ್ಯ ಕುಡಿದಂತೆ’ ಎನ್ನುತ್ತದದು. ಖಾಲಿ ಹೊಟ್ಟೆಯಲ್ಲಿ ಮದ್ಯ(ಜಿನ್‌) ಸೇವಿಸಿದರೆ  ಕೂಡಲೇ  ನಿಮಗೆ ತಲೆಸುತ್ತು ಬರುತ್ತದೆ, ನೀವು ಸಮತೋಲನ ಕಳೆದುಕೊಂಡು ಕೆಳಕ್ಕೆ ಬೀಳುತ್ತೀರಿ. ನಿಮ್ಮ ಅಧಿಕಾರಕ್ಕೆ  ಮಮತೆ ಮತ್ತು ನಮ್ರತೆಯನ್ನು ಬೆಸೆಯದಿದ್ದರೆ ಕೊನೆಗೆ ನಿಮಗೆ ಮಾತ್ರವಲ್ಲ, ನಿಮ್ಮ ಸುತ್ತಲಿರುವವರಿಗೂ ನೋವುಂಟು ಮಾಡುತ್ತೀರಿ. 

ಇನ್ನೊಂದೆಡೆ ವಿನಮ್ರತೆ, ಪ್ರೀತಿ ಮತ್ತು ಪ್ರಬಲ ಶಕ್ತಿಯಾದ ಅಧಿಕಾರದ ಸಮ್ಮಿಲನವು  ಒಳ್ಳೆಯತನದ ರೂಪ ತಾಳಿಬಿಡುತ್ತದೆ.

ಭವಿಷ್ಯವಿರುವುದು ಕೇವಲ ರಾಜಕಾರಣಿಗಳು ಮತ್ತು ಬೃಹತ್‌ ಕಂಪೆನಿಗಳ ಕೈಯಲ್ಲಿ ಮಾತ್ರವಲ್ಲ. ನಿಜ, ಅವರ ಮೇಲೂ ಬೃಹತ್‌ ಜವಾಬ್ದಾರಿ ಇದ್ದೇ ಇದೆ. ಆದರೆ, ನಿಜವಾದ ಭವಿಷ್ಯವಿರುವುದು “ಎಲ್ಲರೊಳಗೂ ತನ್ನನ್ನು ತಾನು ಕಾಣುವ, ಎಲ್ಲರೂ ತನಗೆ ಸಮಾನರೆಂದು ಭಾವಿಸುವ’ ವ್ಯಕ್ತಿಗಳಲ್ಲಿ ಮಾತ್ರ. 

ನಮಗೆ ಪರಸ್ಪರರ ಅಗತ್ಯವಿದೆ. ಹೀಗಾಗಿ, ದಯವಿಟ್ಟೂ ನನ್ನ ಬಗ್ಗೆ ಯೋಚನೆ ಮಾಡುವಾಗಲೂ ನಿಮ್ಮಲ್ಲಿ ಮಮತೆಯಿರಲಿ. ಆ ಮೂಲಕ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕೆಂದು ನನಗೆ ವಹಿಸಲಾಗಿರುವ ಕೆಲಸವನ್ನು ನಾನು ಸಶಕ್ತವಾಗಿ ಮಾಡುತ್ತೇನೆ. ಧನ್ಯವಾದ.

– ಪೋಪ್‌ ಫ್ರಾನ್ಸಿಸ್‌ ಕ್ರೈಸ್ತರ ಧರ್ಮಗುರು

Advertisement

Udayavani is now on Telegram. Click here to join our channel and stay updated with the latest news.

Next