Advertisement

ಮಣಿಯಿತೇ ಚೀನ? ಎಲ್‌ಎಸಿಯಿಂದ 2 ಕಿ.ಮೀ. ಹಿಂದಕ್ಕೆ ಕೆಂಪುರಾಷ್ಟ್ರದ ಸೇನೆ

02:03 AM Jun 05, 2020 | Sriram |

ಲಡಾಖ್‌: ಭಾರತ ಮತ್ತು ಚೀನ ಸೇನೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆಗೆ ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಉಭಯ ದೇಶಗಳು ಶಾಂತಿ ಸ್ಥಾಪನೆಯತ್ತ ಹೆಜ್ಜೆ ಇರಿಸಿವೆ. ಎರಡೂ ದೇಶಗಳ ಸೇನೆಗಳು ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಯಿಂದ ಒಂದಷ್ಟು ಹಿಂದಕ್ಕೆ ಸರಿದಿದ್ದು, ಶಾಂತಿ ಮಾತುಕತೆಗೆ ಪೂರಕ ವಾತಾವರಣ ಕಲ್ಪಿಸಿವೆ.

Advertisement

ಚೀನ ಸೇನೆಯು ಎಲ್‌ಎಸಿಯಿಂದ 2 ಕಿ.ಮೀ.ಗಳಷ್ಟು ಹಿಂದಕ್ಕೆ ಸರಿದಿದ್ದರೆ ಭಾರತೀಯ ಪಡೆಗಳು 1 ಕಿ.ಮೀ.ನಷ್ಟು ಹಿಂದಕ್ಕೆ ಬಂದಿವೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ಮೂಲಕ ಶನಿವಾರದ ಉಭಯ ದೇಶಗಳ ಲೆಫ್ಟಿನೆಂಟ್‌ ಜನರಲ್‌ಗ‌ಳ ನಡುವಿನ ಸಭೆಗೂ ಮುನ್ನ ಲಡಾಖ್‌ ಗಡಿಯಲ್ಲಿ ಶಾಂತಿ ನೆಲೆಸುವ ಮುನ್ಸೂಚನೆ ಲಭಿಸಿದೆ.

ಆದರೆ ಪ್ಯಾಂಗ್ಯಾಂಗ್‌ ಸರೋವರದ ಸುತ್ತಮುತ್ತ ಚೀನದ ಸೈನಿಕರ ಓಡಾಟ ಹಾಗೆಯೇ ಇದೆ. ಪ್ಯಾಂಗ್ಯಾಂಗ್‌ ಸರೋವರ ಪ್ರದೇಶವನ್ನು 8 ವಲಯಗಳಾಗಿ ವಿಂಗಡಿಸಲಾಗಿದ್ದು, ಭಾರತವು 1ರಿಂದ 4 ಮತ್ತು ಚೀನವು 5ರಿಂದ 8 ವಲಯಗಳನ್ನು ನಿಯಂತ್ರಿಸುತ್ತಿವೆ. ಪ್ರತಿ ಬಾರಿಯೂ ಇಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಗಸ್ತು ತಿರುಗುವಾಗ ಮುಖಾಮುಖೀಯಾಗುವುದು ಸಾಮಾನ್ಯ.

ಲೆ| ಜ| ಹರೀಂದರ್‌ ಸಿಂಗ್‌ ನೇತೃತ್ವ
ಶನಿವಾರದ ಸಭೆಯು ವಿವಾದಕ್ಕೆ ಕಾರಣವಾಗಿರುವ ಅಂದರೆ, ಪ್ಯಾಂಗ್ಯಾಂಗ್‌ ಸರೋವರದ ದಡದಲ್ಲೇ ನಡೆಯಲಿದೆ. ಭಾರತದ ಕಡೆಯಿಂದ ಲೆ| ಜ| ಹರೀಂದರ್‌ ಸಿಂಗ್‌ ಭಾಗವಹಿಸಲಿದ್ದಾರೆ. ಇವರು ಲೇಹ್‌ನಲ್ಲಿರುವ 14 ಕಾಪ್ಸ್‌ನ ಕಮಾಂಡರ್‌. ಈ ಕಾಪ್ಸ್‌ಗೆ ಫೈರ್‌ ಆ್ಯಂಡ್‌ ಫ‌ುರಿ ಕಾಪ್ಸ್‌ಎಂದೇ ಹೆಸರಿದೆ.

ಎಷ್ಟೇ ಕಷ್ಟಕರ ಪರಿಸ್ಥಿತಿ ಇದ್ದರೂ ಅಲ್ಲಿ ಸೆಣಸುವ ಸಾಮರ್ಥ್ಯ ಹೊಂದಿರುವ ಗಟ್ಟಿಗ ಸೇನಾತಂಡ ಇದು. ಇಂಥ 14 ಕಾಪ್ಸ್‌ಗೆ ಮುಖ್ಯಸ್ಥರಾಗಿ ಲೆ| ಜ| ಹರೀಂದರ್‌ ಸಿಂಗ್‌ ಕಳೆದ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಮಾತುಕತೆ ವೇಳೆ, ಪ್ಯಾಂಗ್ಯಾಂಗ್‌ ತ್ಸೋ, ಗಾಲ್ವಾನ್‌ ವ್ಯಾಲಿ ಮತ್ತು ಡೆಮ್‌ಚುಕ್‌ನಲ್ಲಿನ ಉದ್ವಿಗ್ನ ಸ್ಥಿತಿ ನಿವಾರಿಸುವುದು ಮತ್ತು ಗಡಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ಭಾರತ ಪ್ರಸ್ತಾವಿಸುವ ಸಾಧ್ಯತೆ ಇದೆ.

Advertisement

ಅನಂತನಾಗ್‌ನಲ್ಲಿ ತುರ್ತು ವಾಯುನೆಲೆ
ಚೀನ ಸೇನೆ ಗಡಿಯಿಂದ ಹಿಂದೆ ಸರಿಯುತ್ತಿದ್ದರೂ ಡ್ರ್ಯಾಗನ್‌ ನಡೆಯನ್ನು ಭಾರತ ಏಕಾಏಕಿ ಒಪ್ಪಲು ಸಿದ್ಧವಿಲ್ಲ. ಭಾರತೀಯ ಸೇನೆಯು ಗಡಿ ಭದ್ರತೆಗೆ ಇನ್ನಷ್ಟು ಒತ್ತುಕೊಟ್ಟಿದ್ದು, ದಕ್ಷಿಣ ಕಾಶ್ಮೀರದಲ್ಲಿ ತುರ್ತು ವಾಯುನೆಲೆ ನಿರ್ಮಾಣವನ್ನು ಆರಂಭಿಸಿದೆ. ಅನಂತನಾಗ್‌ ಜಿಲ್ಲೆಯಲ್ಲಿ ಫೈಟರ್‌ ಜೆಟ್‌ಗಳನ್ನು ನಿಭಾಯಿಸಬಲ್ಲ ತುರ್ತು ವಾಯುನೆಲೆಯ ನಿರ್ಮಾಣ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೈಗೆತ್ತಿಕೊಂಡಿದೆ. ಅಂದಹಾಗೆ ಇದು ಕಾಶ್ಮೀರದ 3ನೇ ವಾಯುನೆಲೆೆ.ಅನಂತನಾಗ್‌ನ ಬಿಜ್ಬೆಹರಾದಲ್ಲಿ ಬುಲ್ಡೋಜರ್‌ಗಳು ರಸ್ತೆ ವಿಸ್ತರಣೆಯಲ್ಲಿ ತೊಡಗಿವೆ. ಕಾಮಗಾರಿಯ ಸಿಬಂದಿಗೆ ಮಾತ್ರವೇ ಪಾಸ್‌ ನೀಡಿ ವಾಯುನೆಲೆ ಪ್ರದೇಶದ ಒಳಗೆ ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಭಾರತ-ಆಸೀಸ್‌ ಇನ್ನಷ್ಟು ಹತ್ತಿರ

ಹೊಸದಿಲ್ಲಿ: ಸಾಗರ ವಲಯದಲ್ಲಿ ಚೀನದ ಪ್ರಭಾವ ಮತ್ತು ಆಕ್ರಮಣ ಶೀಲತೆಗೆ ಕಡಿವಾಣ ಹಾಕುವುದಕ್ಕಾಗಿ ಇಂಡೋ- ಪೆಸಿಫಿಕ್‌ ಭಾಗದ ದೇಶಗಳು ಪರಸ್ಪರ ಒಂದಾಗುತ್ತಿವೆ. ಭಾರತ ಮತ್ತು ಆಸ್ಟ್ರೇಲಿಯಾ ಹತ್ತಿರಗೊಳ್ಳುವುದಕ್ಕೂ ಇದು ಕಾರಣ ಎನ್ನಲಾಗಿದೆ.ಭಾರತ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ನಡುವೆ ಗುರುವಾರ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ವಿಚಾರ ಮುನ್ನೆಲೆಗೆ ಬಂದಿದೆ. ಪೆಸಿಫಿಕ್‌ ಸಾಗರದಲ್ಲಿ ಒಂದಾ ಗುವುದು ಕೇವಲ ನಮಗೆ ಮಾತ್ರ ಅಲ್ಲ, ಜಗತ್ತಿಗೇ ಮುಖ್ಯ ಎಂದು ಮೋದಿ ಹೇಳಿದ್ದಾರೆ. ಭವಿಷ್ಯದಲ್ಲಿ ಇಂಡೋ- ಪೆಸಿಫಿಕ್‌ ವಲಯದಲ್ಲಿ ಭಾರತದ ಪಾತ್ರ ನಿರ್ಣಾಯಕ ಎಂದು ಮಾರಿಸನ್‌ ಕೂಡ ಹೇಳಿದ್ದಾರೆ.

ಮಹತ್ವದ ಚರ್ಚೆ
ಉಭಯ ಪ್ರಧಾನಿಗಳು 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಎರಡೂ ರಾಷ್ಟ್ರಗಳು ಪರಸ್ಪರ ಸರಕು ಸಾಗಣೆ ಬೆಂಬಲ ಒಪ್ಪಂದ (ಎಂಎಲ್‌ಎಸ್‌ಎ)ಕ್ಕೆ ಅಂಕಿತ ಹಾಕಿ ರುವುದು ಮಹತ್ವದ ಅಂಶ.

ಸೈಬರ್‌ ಸುರಕ್ಷೆ ಮತ್ತು ವ್ಯಾಪಾರದಲ್ಲಿ ಪೂರೈಕೆ ಸರಪಳಿಯ ಬಲವರ್ಧನೆಗೆ ಎರಡೂ ರಾಷ್ಟ್ರಗಳು ಮಹತ್ವದ ಯೋಜನೆ ರೂಪಿಸಿವೆ. ಪ್ರಸ್ತುತ ಭಾರತದಲ್ಲಿ ಆಸ್ಟ್ರೇಲಿಯಾದ ಹೂಡಿಕೆ 10.74 ಶತಕೋಟಿ ಡಾಲರ್‌ ಆಗಿದ್ದರೆ, ಆಸ್ಟ್ರೇಲಿಯಾದ ಉದ್ಯಮ ಕ್ಷೇತ್ರದಲ್ಲಿ ಭಾರತ 10.45 ಶತಕೋಟಿ ಡಾಲರ್‌ಗಳಷ್ಟು ಬಂಡವಾಳ ಹೂಡಿದೆ. “ಪರಸ್ಪರ ವ್ಯಾಪಾರ ಬಲವರ್ಧನೆಗೆ ಎರಡೂ ರಾಷ್ಟ್ರಗಳು ಹೆಚ್ಚು ಆದ್ಯತೆ ನೀಡಲಿವೆ’ ಎಂದು ಭಾರತ ಹೇಳಿದೆ.

ಆಸ್ಟ್ರೇಲಿಯಾಕ್ಕೆ ಮೋದಿ ಧನ್ಯವಾದ
ಕೋವಿಡ್‌-19ದ ಸಂಕಷ್ಟದ ಅವಧಿಯಲ್ಲಿ ಭಾರತೀಯ ಸಮುದಾಯ ಮತ್ತು ವಿದ್ಯಾರ್ಥಿಗಳನ್ನು ಕಾಳಜಿಯಿಂದ ನೋಡಿಕೊಂಡಿರುವುದಕ್ಕೆ ಆಸ್ಟ್ರೇಲಿಯಾಕ್ಕೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ಉಭಯ ರಾಷ್ಟ್ರಗಳು ಹೊಸ ಅವಕಾಶವೆಂದು ಭಾವಿಸಿ ಮುನ್ನಡೆಯಬೇಕು.

ಈಗಾಗಲೇ ಭಾರತದಲ್ಲಿ ಸಮಗ್ರ ಆರ್ಥಿಕ ಸುಧಾರಣೆಯ ಪ್ರಕ್ರಿಯೆಗಳು ಆರಂಭಗೊಂಡಿವೆ. ಆಸ್ಟ್ರೇಲಿಯಾದ ಜತೆಗೂಡಿ ಹೊಸ ಎತ್ತರವನ್ನು ತಲುಪಲು ಭಾರತ ಬಯಸುತ್ತಿದೆ ಎಂದವರು ಹೇಳಿದ್ದಾರೆ.

ಏನು ಲಾಭ?
ಎರಡೂ ರಾಷ್ಟ್ರಗಳು ತುರ್ತು ಸಂದರ್ಭಗಳಲ್ಲಿ ಪರಸ್ಪರ ನೌಕಾನೆಲೆಗಳನ್ನು ಬಳಸಿಕೊಳ್ಳಲು “ಎಂಎಲ್‌ಎಸ್‌ಎ’ ಅವಕಾಶ ಕಲ್ಪಿಸುತ್ತದೆ. ಮಿಲಿಟರಿ ಉಪಕರಣ ದುರಸ್ತಿ ಮತ್ತು ಮರುಪೂರಣಕ್ಕೆ ನೆರವು ಪಡೆಯಬಹುದು. ಸೇನಾ ಬಲವರ್ಧನೆಗೆ ಸಹಕಾರ, ಜಂಟಿ ಸಮರಾಭ್ಯಾಸಗಳಿಗೂ ಅವಕಾಶ ಇದೆ. ಭಾರತವು ಈಗಾಗಲೇ ಅಮೆರಿಕ, ಫ್ರಾನ್ಸ್‌ ಮತ್ತು ಸಿಂಗಾಪುರದ ಜತೆಗೆ ಎಂಎಲ್‌ಎಸ್‌ಎ ಒಪ್ಪಂದ ಮಾಡಿಕೊಂಡಿದೆ.

ಸಮೋಸಾ ಆಯ್ತು,
ಮುಂದೆ ಗುಜರಾತಿ ಖೀಚಡಿ
ಕಳೆದ ವಾರ ತಯಾರಿಸಿದ ಸಮೋಸಾ, ಮಾವಿನ ಕಾಯಿ ಚಟ್ನಿಯ ನೆನಪನ್ನೂ ಆಸೀಸ್‌ ಪ್ರಧಾನಿ ಸಭೆಗೆ ಹೊತ್ತು ತಂದಿದ್ದರು. “ದ್ವಿಪಕ್ಷೀಯ ಸಭೆಯಲ್ಲಿ ನಾನು ಮೋದಿ ಅವರ ಅಪ್ಪುಗೆಯನ್ನು ನಿರೀಕ್ಷಿಸಿದ್ದೆ. ಸಮೋಸಾ, ಚಟ್ನಿ (ಸ್ಕೊಮೋಸಾಸ್‌) ಮಾಡಿ ತುಂಬಾ ಖುಷಿಪಟ್ಟೆವು. ಮುಂದಿನ ಸಲ ಅಡುಗೆಮನೆಯಲ್ಲಿ ಗುಜರಾತಿ ಖೀಚಡಿ ತಯಾರಿಸಲು ಪ್ರಯತ್ನಿಸುತ್ತೇನೆ’ ಎಂದು ಸ್ಕಾಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next