Advertisement

ಪತಿಯ ಜತೆಗಿನ ಬಾಳ ಪಯಣದಲ್ಲಿ ಹೆಮ್ಮೆಯಿದೆ

07:06 AM Apr 10, 2017 | Harsha Rao |

ನಾವು ಮದುವೆಯಾಗುವ ವೇಳೆಗಾಗಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿತ್ತು. ನನಗೆ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರು ಎಂದು ತಿಳಿದಿತ್ತು. ಆದರ್ಶವಾದಿಗಳು ಸಾಮಾನ್ಯವಾಗಿ ಬಡವರೇ ಎಂದೂ ನನಗೆ ಅಂದಾಜಿತ್ತು.  ನನಗೂ ಹೋರಾಟ, ಚಳುವಳಿಗಳ ಬಗ್ಗೆ ಗೌರವ ಇತ್ತು. ಒಟ್ಟಲ್ಲಿ ಅವರ ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡೆ.

Advertisement

ನಾನು ಮದುವೆಯಾಗಿ ಹೋಗಿದ್ದು ತುಂಬು ಕುಟುಂಬಕ್ಕೆ. ನಾನಾಗ 18 ವರ್ಷದ ಹುಡುಗಿ. ಮನೆ ತುಂಬಾ ಜನರಿದ್ದರು. ಆದರೆ ಪತಿ ಮಾತ್ರ ಮನೆಯಲ್ಲಿ ಇರುತ್ತಿರಲಿಲ್ಲ. ಹೋರಾಟ, ಚಳುವಳಿ ಎಂದು ಸಾದಾ ಹೊರಗಡೆಯೇ ಓಡಾಡುತ್ತಿದ್ದರು. ಮದುವೆಯಾದ ಮೊದಲ ವರ್ಷದಲ್ಲೇ ನಮ್ಮ ಮೊದಲ ಮಗ ಹುಟ್ಟಿದ. ನಂತರದ 3 ವರ್ಷಗಳ ಬಹುತೇಕ ದಿನಗಳನ್ನು ನಾನು ತವರಿನಲ್ಲೇ ಕಳೆದೆ. ನನ್ನ ಮಗನಿಗೆ ಅಪ್ಪ ಎಂದರೆ ಏನು ಎಂದು ತಿಳಿದೇ ಇರಲಿಲ್ಲ. ದೊರೆಸ್ವಾಮಿ ಮನೆಗೆ ಬಂದಾಗ ಆತ ಅವರನ್ನು ಮಾಮ ಎಂದು ಕರೆಯುತ್ತಿದ್ದ! ಇವರೇ ನನ್ನ ಅಪ್ಪ ಎಂದು ತಿಳಿಯುವ ವೇಳೆಗಾಗಲೇ ಅವನಿಗೆ 10 ವರ್ಷವಾಗಿತ್ತು. ಅಪ್ಪ ಎಂಬುವರು ಮನೆಯಲ್ಲಿದ್ದು, ಮಕ್ಕಳನ್ನು ಎತ್ತಿ ಆಡಿಸಿದರೆ ತಾನೆ ಮಕ್ಕಳಿಗೆ ಅಪ್ಪನ ಬಗ್ಗೆ ತಿಳಿಯೋದು? ತವರಲ್ಲಿ ಮೂರು ವರ್ಷಗಳು ಇದ್ದು ಬಳಿಕ ಬೆಂಗಳೂರಿನಲ್ಲಿ ನಾವು ಮನೆ ಮಾಡಿದೆವು. ಆಗಲೂ ಅವರು ಮನೆಯಲ್ಲಿರುತ್ತಿದ್ದದ್ದೇ ಅಪರೂಪ. ಅವರು ಮನೆಯಿಂದ ಹೊರಹೋಗುವಾಗ ಅವರ ಮುಖ ನೋಡುತ್ತಿದ್ದುದು ಬಿಟ್ಟರೆ, ಮರಳಿ ಬಂದಾಗಲೇ ಅವರ ಮುಖ ನೋಡುತ್ತಿದ್ದದ್ದು. ಮಧ್ಯದಲ್ಲಿ ಅವರನ್ನು ಕುರಿತು ಯಾವುದೇ ಮಾಹಿತಿಗಳು ನನಗೆ ಸಿಗುತ್ತಿರಲಿಲ್ಲ. ಮೊದಲಿಗೆ ಆತಂಕದಿಂದ ದಿನ ದೂಡುತ್ತಿದ್ದೆ. ಬಳಿಕ ಎಲ್ಲಾ ಅಭ್ಯಾಸವಾಯಿತು. ಇನ್ನೂ ಹೆಚ್ಚಾಗಿ, ಮನೆ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಆ ಕಡೆ ಗಮನ ಹರಿಸುತ್ತಿದ್ದೆ. (ಈಗಲೂ ಅವರು ಪ್ರತಿಭಟನೆಗಳಿಗೆ ಹೋಗುತ್ತಾರೆ. ಮೊಬೈಲ್‌ ಬಳಸುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅವರ ಆರೋಗ್ಯದ ಬಗ್ಗೆ ಆತಂಕವಾಗುತ್ತದೆ.)  

ಆದರೆ ನನಗೂ ಗಂಡನ ಜೊತೆ ಸಮಯ ಕಳೆಯಬೇಕು, ಪ್ರವಾಸ ಹೋಗಬೇಕು ಎಂಬೆಲ್ಲಾ ಆಸೆಗಳಿದ್ದವು. ನನ್ನ ಆಸೆ ಕೈಗೂಡುವುದಿಲ್ಲವೆಂದು ಅಷ್ಟರೊಳಗೆ ಅರ್ಥವಾಗಿತ್ತು. ಅದೂ ಅಲ್ಲದೇ ಅವರು “ಪೌರವಾಣಿ’ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ನಮ್ಮ ಆರ್ಥಿಕ ಪರಿಸ್ಥಿತಿ ಕುರಿತು ನನಗೆ ಅರಿವಿತ್ತು. ಹಾಗಾಗಿ ನಾನು ಹೆಚ್ಚಿನದೇನನ್ನೂ ನಿರೀಕ್ಷಿಸುತ್ತಿರಲಿಲ್ಲ. ಯಾವತ್ತೂ ನನಗೆ ಇಂಥ ಸೀರೆ ಬೇಕು, ಒಡವೆ ಬೇಕು ಎಂದು ಅವರಿಗೆ ಕೇಳಿಯೇ ಇಲ್ಲ. ನಾವು ಮದುವೆಯಾದ ಹೊಸತರಲ್ಲಿ, ವಿದೇಶದಲ್ಲಿದ್ದ ನನ್ನ ಪತಿಯ ಸ್ನೇಹಿತರೊಬ್ಬರು ಉತ್ತರ ಭಾರತದ ಪ್ರವಾಸ ಮಾಡಲು ಭಾರತಕ್ಕೆ ಬಂದಿದ್ದರು. ಆಗ ನಾವವರ ಜೊತೆ ಒರಿಸ್ಸಾಗೆ ಹೋಗಿದ್ದೆವು. ಅದಾದ 13 ವರ್ಷಗಳ ಬಳಿಕ ದೆಹಲಿಯಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ಹೊರಟಿದ್ದರು. ಆಗ ಏನೆನ್ನಿಸಿತೋ ಗೊತ್ತಿಲ್ಲ. ನೀನೂ ಬಾ.. ಎಂದು ಕರೆದರು. ಆಗ ಅವರೊಟ್ಟಿಗೆ ದೆಹಲಿಗೆ ಹೋಗಿದ್ದು ಅಷ್ಟೇ. ನಾವು ಇದುವರೆಗೆ 2 ಬಾರಿಯಷ್ಟೇ ಪ್ರವಾಸ ಹೋಗಿರುವುದು.

ಅವರು ಮನೆಯಲ್ಲಿದ್ದಾಗ ನಾನು ಮಾಡಿದ ಅಡುಗೆಯನ್ನು ಖುಷಿಯಿಂದ ತಿನ್ನುತ್ತಿದ್ದರು. ಯಾವತ್ತಿಗೂ ಇಂಥದ್ದೇ ಅಡುಗೆ ಮಾಡು ಎಂದು ಹೇಳಿಲ್ಲ.  ಅವರು ತಿಂಗಳಲ್ಲಿ 20 ದಿನಗಳು ಮನೆಯಿಂದ ಹೊರಗಿರುತ್ತಿದ್ದರೂ  ನನಗೆ ಇಂದಿಗೂ ಈ ವಿಷಯದಲ್ಲಿ ಬೇಸರವಿಲ್ಲ. ಗಂಡ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದರೆ, / ಪರಸ್ತ್ರೀ ಸಹವಾಸ ಮಾಡಿದರೆ ಬೇಸರಿಸುವುದರಲ್ಲಿ ಅರ್ಥವಿದೆ. ಆದರೆ ನನ್ನ ಗಂಡ ಬಡವರ, ಶೋಷಿತರ ಪರ ಹೋರಾಟಕ್ಕಾಗಿ ತೊಡಗಿಕೊಂಡಿದ್ದವರು. ಅವರ ಕೆಲಸದ ಬಗ್ಗೆ ನನಗೆ ಹೆಮ್ಮೆ ಇತ್ತು-ಇದೆ. ಎಲ್ಲದಕ್ಕಿಂತ ಅವರ ಧೈರ್ಯ, ಬುದ್ಧಿವಂತಿಕೆ ಬಗ್ಗೆ ವಿಶ್ವಾಸ ಇತ್ತು. ಕುಟುಂಬಕ್ಕೆ ಅವರು ಸಮಯ ಕೊಡಲಿಲ್ಲ ಎಂದು ನನಗೆ ಇವತ್ತಿಗೂ ಬೇಸರವಿಲ್ಲ. 

ಬಡತನದಲ್ಲೇ ಬದುಕಿದೆವು: ನನಗೆ ಮೂವರು ಅಣ್ಣಂದಿರು. ಪ್ರತೀ ಹಬ್ಬಕ್ಕೂ ತವರಿನವರು ಸೀರೆ, ಹಣ, ಅಗತ್ಯ ಸಾಮಾಗ್ರಿಗಳನ್ನು ಕೊಡುತ್ತಿದ್ದರು. ನನ್ನ ಕಷ್ಟದ ಸಮಯಗಳಲ್ಲಿ ಅವರು ನನಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಆದ್ದರಿಂದ ಕುಟುಂಬವನ್ನು ಹೇಗೋ ನಿಭಾಯಿಸಿದೆ.  ನನ್ನ ಮಕ್ಕಳು ಬುದ್ಧಿವಂತರಿದ್ದರು. ಚನ್ನಾಗಿ ಓದುತ್ತಿದ್ದರು. ಆದರೆ ನಮಗೆ ತುಂಬಾ ಬಡತನ, ನನ್ನ ಮಗ ಆಡಿಕೊಳ್ಳಲು ಒಂದು ಚೆಂಡು ಕೊಡಿಸಲೂ ನನ್ನ ಬಳಿ ಹಣ ಇರುತ್ತಿರಲಿಲ್ಲ. ಬೇರೆಯವರ ಮಕ್ಕಳು ಥರಾವರಿ ಉಡುಗೆ ತೊಟ್ಟು, ಗೊಂಬೆಗಳ ಜೊತೆ ಆಡುವುದನ್ನು ನೋಡಿದಾಗ, ಈ ಅನುಕೂಲಗಳು ನನ್ನ ಮಕ್ಕಳಿಗಿಲ್ಲವಲ್ಲಾ ಎಂದು ತುಂಬಾ ನೊಂದುಕೊಂಡಿದ್ದೇನೆ. 

Advertisement

ನಾವೂ ಜಗಳ ಆಡ್ತಿದ್ವಿ: ಜಗಳವೇ ಆಡದ ದಂಪತಿ ಎಲ್ಲಾದರೂ ಇರ್ತಾರ? ನಾವೂ ಸಾಕಷ್ಟು ಜಗಳವಾಡಿದ್ದೇವೆ. ಜಗಳವಾದಾಗ ಇಬ್ಬರಲ್ಲೊಬ್ಬರು ಮನೆಯಿಂದ ಹೊರಗೆ ಹೋಗಿಬಿಡುತ್ತಿದ್ದೆವು. ನಾನು ಯಾರಿಂದಾದರೂ ಹಣಕಾಸಿನ ಸಹಾಯ ಪಡೆದಾಗ ಇವರಿಗೆ ತುಂಬಾ ಕೋಪ ಬರುತ್ತಿತ್ತು. ಹೆಚ್ಚಿನ ಜಗಳಗಳು ಆ ಕಾರಣಕ್ಕಾಗಿಯೇ ಆಗಿವೆ. ನನ್ನ ಮಗ ದಾವಣಗೆರೆಯಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ಸಮಯವದು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ನಮ್ಮನೆಯವರು ಜೈಲಿನಲ್ಲಿದ್ದರು. ನನ್ನ ಮಗನಿಂದ ಪತ್ರ ಬಂದಿತು. ಪರೀಕ್ಷೆಗೆ ಹಣ ಕಟ್ಟದಿದ್ದರೆ ಒಂದು ವರ್ಷ ಮನೆಯಲ್ಲಿರಬೇಕಾಗುತ್ತದೆ ಎಂದು ಅವನು ಬರೆದಿದ್ದ. ಇವರಿಗೆ ಈ ಕುರಿತು ಸುದ್ದಿ ಮುಟ್ಟಿಸಿದೆ. ಇವರು ಈ ವರ್ಷ ಅವನು ಮನೆಯಲ್ಲೇ ಇರಲಿ. ಮುಂದಿನ ವರ್ಷ ಪರೀಕ್ಷೆ ಬರೆಯಲಿ ಎಂದು ಹೇಳಿದರು. ನನ್ನದು ಅಸಹಾಯಕ ಪರಿಸ್ಥಿತಿ. ನನ್ನ ಪತಿಯ ಸ್ನೇಹಿತರೊಬ್ಬರಿಗೆ ಈ ವಿಷಯ ಹೇಗೋ ತಿಳಿಯಿತು. ಅವರು ದಾವಣಗೆರೆಗೆ ಹೋಗಿ ಪರೀಕ್ಷಾ ಶುಲ್ಕ ಕಟ್ಟಿ, ಮಗನ ಕೈಗೆ ಸ್ವಲ್ಪ ಹಣವನ್ನೂ ಕೊಟ್ಟು ಬಂದಿದ್ದರು. ಜೈಲಿನಿಂದ ಬಂದ ಬಳಿಕ ಇವರಿಗೆ ಶುಲ್ಕದ ವಿಷಯ ತಿಳಿದು ಬಹಳ ಕೋಪಗೊಂಡರು. ನೀನ್ಯಾಕೆ ಹಣ ಪಡೆದೆ ಎಂದು ನನ್ನ ಮೇಲೆ ಕೂಗಾಡಿದ್ದರು.

ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಜೊತೆಗಿದ್ರೆ ಹಬ್ಬ: ನಮಗೆ 3 ಮೊಮ್ಮಕ್ಕಳು, 2 ಮರಿ ಮೊಮ್ಮಕ್ಕಳಿದ್ದಾರೆ. ಮಗಳ ಇಬ್ಬರು ಮಕ್ಕಧಿಳನ್ನು ನಾನೇ ಸಾಕಿ ಬೆಳೆಸಿದೆ. ಮೊಮ್ಮಕ್ಕಳು ನನ್ನ ಬೇಸರವನ್ನು ದೂರ ಮಾಡಿದರು. ಈಗ ಬೇಸಿಗೆ ರಜೆ ಇರುವುದರಿಂದ ಮರಿ ಮೊಮ್ಮಕ್ಕಳು ಮನೆಗೆ ಬಂದು ಸಂಜೆವರೆಗೂ ನಮ್ಮ ಜೊತೆ ಇರುತ್ತಾರೆ. ಈಗ ಅವರ ಜೊತೆ ಕಾಲ ಕಳೆಯುತ್ತಾ ಸಂತೋಷ ಪಡುತ್ತೇವೆ. 

ಈ ಸೋಮವಾರ, ನನ್ನ ಯಜಮಾನರು 99 ವರ್ಷ ತುಂಬಿ 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಕಾರಣದಿಂದಲೇ ಅವತ್ತು ಇಡೀ ದಿನ ಮನೆಯಲ್ಲಿ ಸಂಭ್ರಮ ಇರುತ್ತದೆ. ಇದೇ 16ರಂದು ನಮ್ಮ ಮಗ, ಅವರ ಮನೆಯಲ್ಲಿ ಸಂತೋಷ ಕೂಟ ಏರ್ಪಡಿಸಿದ್ದಾನೆ. 
(ನಿರೂಪಣೆ ಚೇತನ.ಜೆ.ಕೆ)

– ಲಲಿತಮ್ಮ ದೊರೆಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next