Advertisement

ನೆಹರೂ ಕೋಮುವಾದಿ ಆಗಿದ್ದರೇ: ಮೋದಿ ಪ್ರಶ್ನೆ

10:08 AM Feb 08, 2020 | Team Udayavani |

ಹೊಸದಿಲ್ಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಕೋಮುವಾದಿಯೇ?
ಇದು ಪ್ರಧಾನಿ ನರೇಂದ್ರ ಮೋದಿ ಲೋಕ ಸಭೆಯಲ್ಲಿ ಕಾಂಗ್ರೆಸನ್ನು ಉದ್ದೇಶಿಸಿ ಕೇಳಿದ ಪ್ರಶ್ನೆ. ಸಂವಿಧಾನ ರಚನೆಯಾದ ಮಾರನೇ ದಿನವೇ ಪಂಡಿತ್‌ ನೆಹರೂ ಅವರು ಪಾಕಿಸ್ಥಾನ ಮತ್ತು ಪೂರ್ವ ಪಾಕಿಸ್ಥಾನ (ಈಗಿನ ಬಾಂಗ್ಲಾ)ದಲ್ಲಿನ ಧಾರ್ಮಿಕ ಅಲ್ಪಸಂಖ್ಯಾಕರನ್ನು ಗುರುತಿಸುವಂತೆ ಗೋಪಿನಾಥ್‌ಜಿಗೆ ಪತ್ರ ಬರೆದಿದ್ದರು. ಹಾಗಿದ್ದರೆ ನೆಹರೂ ಕೋಮುವಾದಿಯಾಗಿದ್ದರೇ ಅವರು ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದರೇ ಎಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಗಳಿಗೆ ಮೋದಿ ಸಾಲು ಸಾಲು ಪ್ರಶ್ನೆ ಕೇಳಿದರು.

Advertisement

ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಅರ್ಪಿಸಿ ಸುಮಾರು ಒಂದೂವರೆ ತಾಸು ಕಾಲ ಮಾತನಾಡಿದ ಮೋದಿ, ಕಾಂಗ್ರೆಸ್‌ ಮತ್ತು ಅದರ ನಾಯಕರನ್ನೇ ತರಾಟೆಗೆ ತೆಗೆದುಕೊಂಡರು.

ಮೋದಿ ಹೇಳಿದ್ದೇನು?
- ಪಶ್ಚಿಮ ಪಾಕ್‌, ಪೂರ್ವ ಪಾಕ್‌ನ ಧಾರ್ಮಿಕ ಅಲ್ಪಸಂಖ್ಯಾಕರ ರಕ್ಷಣೆ ನೆಹರೂ ಆದ್ಯತೆಯಾಗಿತ್ತು. ದೇಶದ ಸ್ಥಾಪಕರ ಆಶಯಗಳನ್ನು ನಾವೀಗ ಈಡೇರಿಸುತ್ತಿದ್ದೇವೆ.

- ದೇಶದ 130 ಕೋಟಿ ಜನತೆಗೆ ನಾನಿಲ್ಲಿ ಹೇಳುತ್ತಿದ್ದೇನೆ… ಸಿಎಎಯಿಂದಾಗಿ ಮುಸ್ಲಿಮರಿಗೂ ಯಾರಿಗೂ ಯಾವುದೇ ಹಾನಿಯಾಗದು.

- ಸಿಎಎ ವಿರೋಧಿಸಿ ಕಾಂಗ್ರೆಸ್‌ ಸೃಷ್ಟಿಸುತ್ತಿರುವ ವಾತಾವರಣಕ್ಕೆ ನಾನೀಗ ಧನ್ಯವಾದ ಹೇಳಲೇಬೇಕಿದೆ. ಇಲ್ಲದಿದ್ದರೆ ಸಿಎಎನ ನಿಜ ವಿಚಾರ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ.

Advertisement

- ಸಂವಿಧಾನಕ್ಕೆ ನಾವು ಗೌರವ ಕೊಡುತ್ತಿದ್ದೇವೆ ಎಂದು ಮಾತನಾಡುತ್ತಿರುವವರು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಶಕಗಳ ಕಾಲ ಅದನ್ನು ಜಾರಿ ಮಾಡಲು ಮುಂದಾಗಲೇ ಇಲ್ಲ.

- ಸಂವಿಧಾನ ಉಳಿಸುತ್ತೇವೆ ಎಂದು ಆಗಾಗ್ಗೆ ಮಾತನಾಡುತ್ತಿರುವಂಥ ಮಂದಿ ಸಂವಿಧಾನಕ್ಕೆ ಆಗಾಗ ತಿದ್ದುಪಡಿಗಳು ತಂದವರು ತಾವೇ ಎಂಬುದನ್ನು ಮರೆತಿದ್ದಾರೆ.

– ತುರ್ತು ಪರಿಸ್ಥಿತಿ ತಂದವರಾರು? ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತಂದವರಾರು? ಆರ್ಟಿಕಲ್‌ 356 ಅನ್ನು ಹೆಚ್ಚಾಗಿ ಜಾರಿಗೊಳಿಸಿದವರಾರು? ಇವರೇ ಸಂವಿಧಾನದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು.

– ಕಾಂಗ್ರೆಸ್‌ನವರು ಸಂವಿಧಾನ ಉಳಿಸಿ ಎಂದು ಹೇಳುವ ಮುನ್ನ, ತಮ್ಮಿಂದ ಹಿಂದೆ ಸಂವಿಧಾನದ ವಿಷಯದಲ್ಲಿ ಆಗಿರುವ ತಪ್ಪುಗಳನ್ನು ತಿಳಿದುಕೊಳ್ಳುವುದು ಒಳಿತು. ತುರ್ತು ಪರಿಸ್ಥಿತಿ ವೇಳೆ ಯಾವ ಘೋಷಣೆ ಚಾಲ್ತಿಯಿತ್ತು ಎಂಬುದನ್ನು ನೆನಪಿಸಿಕೊಳ್ಳಲಿ.

– ನಮ್ಮ ದೇಶ 70 ವರ್ಷಗಳಿಂದ ರಾಜಕಾರಣವನ್ನು ನೋಡುತ್ತಿದೆ. ಆದರೆ ಕಾಂಗ್ರೆಸ್‌ನ ಯಾವ ಒಬ್ಬ ನಾಯಕರೂ ಸ್ವಾವಲಂಬಿಯಾಗಿರಲಿಲ್ಲ (ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಉಲ್ಲೇಖೀಸಿ).

– ಉದ್ಯೋಗ ಸೃಷ್ಟಿಸದಿದ್ದರೆ ಇನ್ನಾರು ತಿಂಗಳಲ್ಲಿ ದೇಶದ ಯುವಜನತೆ ಬಡಿಗೆ ತೆಗೆದುಕೊಂಡು ಬಡಿಯಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ. ನಾನೀಗ ಹೆಚ್ಚು ಸೂರ್ಯ ನಮಸ್ಕಾರ ಮಾಡಿ ಬೆನ್ನನ್ನು ಗಟ್ಟಿ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಈ ಹಿಂದೆಯೂ ನಾನು ಈ ರೀತಿಯ ಪೆಟ್ಟುಗಳನ್ನು ತಿಂದಿದ್ದೇನೆ.

– ಜತೆಯಲ್ಲಿ ಫೋಟೋ ತೆಗೆಸಿಕೊಳ್ಳುವುದರ ಬಗ್ಗೆಯೇ ಹೆಚ್ಚು ಆಸಕ್ತಿ ವಹಿಸುವ ಗುಂಪು, ದೇಶವನ್ನು ತುಂಡು ಮಾಡಲು ಹೊರಟಿದೆ.

– ಜಾತ್ಯತೀತತೆ ಬಗ್ಗೆ ಮಾತನಾಡುವ ಪಕ್ಷ 1984ರಲ್ಲಿ ಸಿಕ್ಖ್ ವಿರೋಧಿ ದಂಗೆಗಳನ್ನು ಮರೆಯಿತೇ? ದಂಗೆಗೆ ಕುಮ್ಮಕ್ಕು ನೀಡಿದ ಆ ಪಕ್ಷದ ಒಬ್ಬರು ಈಗ ಸಿಎಂ ಆಗಿದ್ದಾರೆ.

ಪ್ರತಿಭಟನೆಗೆ ಕುಮ್ಮಕ್ಕು
ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಸಿಎಎ ವಿರೋಧಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸಿದ ಪ್ರಧಾನಿ, ಸಂಸತ್‌ ಮತ್ತು ರಾಜ್ಯ ವಿಧಾನಸಭೆಗಳಲ್ಲಿನ ನಿರ್ಧಾರಗಳ ವಿರುದ್ಧ ದೊಂಬಿ, ರಸ್ತೆಗಳಲ್ಲಿ ಬಡಿದಾಟ, ಪ್ರತಿಭಟನೆಗಳು ನಡೆದರೆ ಅದು ಅರಾಜಕತೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು. ವಿಪಕ್ಷಗಳು ಕಾಲ್ಪನಿಕ ಭಯವನ್ನು ಜನರಲ್ಲಿ ಮೂಡಿಸುತ್ತಿವೆ. ಪಾಕಿಸ್ಥಾನವು ನಮ್ಮ ಕಾಯ್ದೆಯ ಬಗ್ಗೆ ಯಾವ ರೀತಿಯ ಮಾತುಗಳನ್ನಾಡುತ್ತದೆಯೋ ಅದೇ ಧ್ವನಿಯಲ್ಲಿ ಇಲ್ಲಿನ ವಿಪಕ್ಷಗಳ ನಾಯಕರು ಮಾತಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next