Advertisement

ಐಪಿಎಲ್‌ಗೆ ಬಿಗ್‌ ಬ್ರೇಕ್‌ ಹಾಕಿದ ಕೋವಿಡ್‌

10:48 PM May 04, 2021 | Team Udayavani |

ಹೊಸದಿಲ್ಲಿ: ಕೋವಿಡ್‌ ತೀವ್ರತೆಯ ಕಾರಣ ದಿಂದ 14ನೇ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಜೈವಿಕ ಸುರಕ್ಷಾ ವಲಯದಲ್ಲಿರುವ ಇನ್ನಷ್ಟು ಮಂದಿ ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ವಿಶ್ವದ “ಕ್ಯಾಶ್‌ ರಿಚ್‌ ಕ್ರಿಕೆಟ್‌ ಲೀಗ್‌’ ಕೂಟದ ನಡುವೆ ಇಂಥದೊಂದು ಸಂಕಟಕ್ಕೆ ಸಿಲುಕಿದ ಮೊದಲ ನಿದರ್ಶನ ಇದಾಗಿದೆ.

Advertisement

ಮಂಗಳವಾರ ಹೈದರಾಬಾದ್‌ ತಂಡದ ಆಟಗಾರ ವೃದ್ಧಿಮಾನ್‌ ಸಾಹಾ ಮತ್ತು ಡೆಲ್ಲಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟ ಬಳಿಕ ಬೇರೆ ದಾರಿ ಕಾಣದ ಬಿಸಿಸಿಐ ಕೂಟವನ್ನು ಮುಂದೂಡಲು ನಿರ್ಧರಿಸಿತು.

ಇನ್ನಷ್ಟು ಆಟಗಾರರಿಗೆ ಸೋಂಕು :

ಸೋಮವಾರ ಕೆಕೆಆರ್‌ನ ವರುಣ್‌ ಚಕ್ರವರ್ತಿ, ಸಂದೀಪ್‌ ವಾರಿಯರ್‌; ಚೆನ್ನೈ ತಂಡದ ಬೌಲಿಂಗ್‌ ಕೋಚ್‌ ಲಕ್ಷ್ಮೀಪತಿ ಬಾಲಾಜಿ, ಸಿಇಒ ಕಾಶಿ ವಿಶ್ವನಾಥನ್‌ ಮತ್ತು ತಂಡದ ಬಸ್‌ ಚಾಲಕರೊಬ್ಬರಿಗೆ ಕೋವಿಡ್‌ ಅಂಟಿತ್ತು. ಹೀಗಾಗಿ ಸೋಮವಾರ ರಾತ್ರಿ ನಡೆಯಬೇಕಿದ್ದ ಕೆಕೆಆರ್‌- ಆರ್‌ಸಿಬಿ ನಡುವಿನ ಪಂದ್ಯವನ್ನು ಮುಂದೂಡಲಾಗಿತ್ತು.

ಮಂಗಳವಾರ ಮುಂಬೈ-ಹೈದರಾಬಾದ್‌ ಮುಖಾ ಮುಖೀ ಆಗಬೇಕಿತ್ತು. ಆದರೆ ಹೈದರಾಬಾದ್‌ ತಂಡದ ಸಾಹಾಗೆ ಕೋವಿಡ್‌ ಸೋಂಕು ಅಂಟಿಕೊಂಡದ್ದು ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು.

Advertisement

ಹೈದರಾಬಾದ್‌ ತಂಡದ ಎಲ್ಲ ಆಟಗಾರರೂ  ಕ್ವಾರಂ ಟೈನ್‌ಗೆ ಒಳಗಾಗಬೇಕಿತ್ತು. ಆಗ ಮಂಗಳವಾರದ ಪಂದ್ಯ ವನ್ನೂ ಮುಂದೂಡಬೇಕಾದ ಸ್ಥಿತಿ ಎದುರಾಗುತ್ತಿತ್ತು. ಆದರೆ ಈ ರಗಳೆಯೇ ಬೇಡ ಎಂಬ ತೀರ್ಮಾನಕ್ಕೆ ಬಂದ ಬಿಸಿಸಿಐ ಮತ್ತು ಐಪಿಎಲ್‌ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಪಂದ್ಯಾವಳಿಯನ್ನು ಮುಂದೂಡುವ ತೀರ್ಮಾನ ತೆಗೆದುಕೊಂಡಿತು.

ಗೊಂದಲದ ಹೇಳಿಕೆ :

ಈ ಕುರಿತು ಹೇಳಿಕೆ ನೀಡಿದ ಐಪಿಎಲ್‌ ಚೇರ್ಮನ್‌ ಬೃಜೇಶ್‌ ಪಟೇಲ್‌, “ಈ ಐಪಿಎಲ್‌ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ಮಾನಿಸಲಾಗಿದೆ. ಐಪಿಎಲ್‌ ಆಡಳಿತ ಮಂಡಳಿ ಕೌನ್ಸಿಲ್‌ ಮತ್ತು ಬಿಸಿಸಿಐ ತುರ್ತು ಸಭೆ ನಡೆಸಿ ಅವಿರೋಧವಾಗಿ ಇಂಥದೊಂದು ನಿರ್ಧಾರಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯಾವಕಾಶ ಲಭಿಸಿದಾಗ ಆಯೋಜಿಸಲಾಗುವುದು. ಆದರೆ ಈ ತಿಂಗಳಲ್ಲೇ ನಡೆಯುವ ಯಾವುದೇ ಸಾಧ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಆದರೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಬೇರೆಯದೇ ಹೇಳಿಕೆ ನೀಡಿದ್ದಾರೆ. “ಅವಕಾಶ ಲಭಿಸಿದರೆ ಈ ಕೂಟವನ್ನು ಮುಂದೆ ನಡೆಸಲಾಗುವುದು ಎಂಬುದೆಲ್ಲ ಬರೀ ಊಹಾಪೋಹ. ಈ ಸಲದ ಐಪಿಎಲ್‌ ಇಲ್ಲಿಗೇ ಕೊನೆಗೊಂಡಿದೆ’ ಎಂದಿದ್ದಾರೆ. ಈ ವಿಭಿನ್ನ ಹೇಳಿಕೆಗಳು ಸಹಜವಾಗಿಯೇ ಗೊಂದಲ ಮೂಡಿಸುವಂತಿವೆ.

“ಆಟಗಾರರ, ಅಧಿಕಾರಿಗಳ ಹಾಗೂ ಸಹಾಯಕ ಸಿಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಕೂಟವನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಯಿತು. ಪರಿಸ್ಥಿತಿ ತಿಳಿಯಾದ ಬಳಿಕ ಈ ಕೂಟ ಮತ್ತೆ ಮುಂದುವರಿಸುವ ಯೋಜನೆ ಇದೆ’ ಎಂದು ಐಪಿಎಲ್‌ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ರಂಜನೆಯೇ ಉದ್ದೇಶವಾಗಿತ್ತು :

“ಇದೊಂದು ಅತ್ಯಂತ ಸಂಕಟದ ಸಮಯ. ಭಾರತವೂ ಇದಕ್ಕೆ ಹೊರತಲ್ಲ. ಈ ಸಂದರ್ಭದಲ್ಲಿ ಒಂದಿಷ್ಟು ರಂಜನೆ, ಖುಷಿ ಕೊಡುವ ಉದ್ದೇಶ ನಮ್ಮದಾಗಿತ್ತು. ಹೀಗಾಗಿ ಜೈವಿಕ ಸುರಕ್ಷಾವಲಯದಲ್ಲಿ ಕೂಟವನ್ನು ನಡೆಸಲು  ಮುಂದಾದೆವು. ಕಳೆದ ವರ್ಷ ಯುಎಇಯಲ್ಲಿ ಇದು ಯಶಸ್ಸು ಕಂಡಿತ್ತು. ಆದರೆ ಇಲ್ಲಿ ಪರಿಸ್ಥಿತಿ ಕೈ ಮೀರಲಾರಂಭಿಸಿದೆ. ಹೀಗಾಗಿ ಕೂಟವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಎಲ್ಲರೂ ಈ ಸಂದಿಗ್ಧ ಸ್ಥಿತಿಯಲ್ಲಿ ತಮ್ಮ ಕುಟುಂಬದವರನ್ನು, ಪ್ರೀತಿ ಪಾತ್ರರನ್ನು ಸೇರಿಕೊಳ್ಳಬಹುದಾಗಿದೆ’ ಎಂದೂ ಐಪಿಎಲ್‌ ಮಂಡಳಿ ತಿಳಿಸಿದೆ.

ಯುಎಇಯಲ್ಲೇ ಐಪಿಎಲ್‌? :

ಯುಎಇಯಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆಯುವುದು ಅಧಿಕೃತಗೊಂಡ ಬಳಿಕ, ಈ ಪ್ರತಿಷ್ಠಿತ ಕೂಟಕ್ಕೂ ಒಂದು ತಿಂಗಳು ಮೊದಲು 2021ರ ಐಪಿಎಲ್‌ ಪಂದ್ಯಾವಳಿಯನ್ನು ಮುಂದುವರಿಸುವುದು ಬಿಸಿಸಿಐ ಯೋಜನೆ. ಇದರಿಂದ ವಿಶ್ವಕಪ್‌ ಪಂದ್ಯಾವಳಿಗೆ ಅಭ್ಯಾಸವನ್ನೂ ನಡೆಸಿದಂತಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ.

ಆದರೆ ಇದು ಕೂಡ ಪರಿಸ್ಥಿತಿಯನ್ನು ಅವಲಂಬಿಸಿದೆ. ಆಗ ಐಪಿಎಲ್‌ ನಡೆಸಿದರೆ ಎಷ್ಟು ಮಂದಿ ವಿದೇಶಿ ಆಟಗಾರರು ಲಭ್ಯರಾದಾರು, ಆ ಸಮಯದಲ್ಲಿ ಬೇರೆ ಅಂತಾರಾಷ್ಟ್ರೀಯ ಸರಣಿಗಳಿವೆಯೇ ಎಂಬುದು ಕೂಡ ಮುಖ್ಯವಾಗುತ್ತದೆ.

ವಿದೇಶಿ ಕ್ರಿಕೆಟಿಗರ ಪ್ರಯಾಣಕ್ಕೆ “ಸೂಕ್ತ ಮಾರ್ಗ’: ಪಟೇಲ್‌ :

ಐಪಿಎಲ್‌ ಪಂದ್ಯಾವಳಿಯನ್ನು ಮುಂದೂಡಿದ್ದರಿಂದ ಭಾರೀ ಸಮಸ್ಯೆಗೆ ಸಿಲುಕಿದವರೆಂದರೆ ವಿದೇಶಿ ಕ್ರಿಕೆಟಿಗರು. ಇವರದ್ದೀಗ ಇಲ್ಲಿಯೂ ಇರಲಾಗದ, ತವರಿಗೂ ತೆರಳಲಾಗದ ತ್ರಿಶಂಕು ಸ್ಥಿತಿ.

ಇವರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಿಲು ನಾವು “ಸೂಕ್ತ ಮಾರ್ಗ’ವೊಂದನ್ನು ಕಂಡುಕೊಳ್ಳಲಿದ್ದೇವೆ ಎಂದು ಐಪಿಎಲ್‌ ಚೇರ್ಮನ್‌ ಬೃಜೇಶ್‌ ಪಟೇಲ್‌ ಹೇಳಿದ್ದಾರೆ.

ಸದ್ಯ ಕಾಂಗರೂ ನಾಡಿನ 14, ನ್ಯೂಜಿಲ್ಯಾಂಡಿನ 10, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದ ತಲಾ 11, ಕೆರಿಬಿಯನ್‌ ನಾಡಿನ 9, ಅಫ್ಘಾನ್‌ನ ಮೂವರು ಹಾಗೂ ಬಾಂಗ್ಲಾದ ಇಬ್ಬರು ಆಟಗಾರರಿದ್ದಾರೆ.

 ವಿಮಾನ ಯಾನ ನಿರ್ಬಂಧ :

ಸದ್ಯ ಆಸ್ಟ್ರೇಲಿಯದಲ್ಲಿ ಭಾರತದ ವಿಮಾನಗಳಿಗೆ ಮೇ 15ರ ತನಕ ನಿರ್ಬಂಧವಿದೆ. ಕ್ರಿಕೆಟಿಗರಿಗಾಗಿ ಇದನ್ನು ಸಡಿಲಿಸಲಾಗದು ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಮತ್ತು ಆಸ್ಟ್ರೇಲಿಯನ್‌ ಕ್ರಿಕೆಟರ್ ಅಸೋಸಿಯೇಶನ್‌ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮೇ 15ರ ತನಕ ತಮ್ಮ ದೇಶದ ಆಟಗಾರರಿಗೆ ಭಾರತದಲ್ಲೇ ಸೂಕ್ತ ಹಾಗೂ ಸುರಕ್ಷಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಬಿಸಿಸಿಐ ಮುಂದಾಗಬೇಕಿದೆ ಎಂದು ತಿಳಿಸಿವೆ. ದಕ್ಷಿಣ ಆಫ್ರಿಕಾದಲ್ಲಿ ಇಂಥ ನಿರ್ಬಂಧವಿಲ್ಲ. ಆದರೆ ಭಾರತದಿಂದ ಆಗಮಿಸುವ ಕ್ರಿಕೆಟಿಗರು ಕಠಿನವಾದ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.

ಬಿಸಿಸಿಐ ಈ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಲಿದೆ ಎಂಬ ನಂಬಿಕೆ ಇದೆ ಎಂಬುದು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿಯ ಹೇಳಿಕೆ.

ಬಿಸಿಸಿಐಗೆ 2,500 ಕೋಟಿ ರೂ. ನಷ್ಟ! :

ಒಂದು ವೇಳೆ ಐಪಿಎಲ್‌ನ ಉಳಿದಭಾಗ ರದ್ದಾದರೆ ಬಿಸಿಸಿಐಗೆ ಅಂದಾಜು 2000 ಕೋಟಿ ರೂ.ನಿಂದ 2,500 ಕೋಟಿ ರೂ. ನಷ್ಟವಾಗಲಿದೆ. ಹೀಗೆಂದು ಮೂಲಗಳು ಹೇಳಿವೆ. ಸದ್ಯ 29 ಪಂದ್ಯಗಳು ಮುಗಿದಿವೆ. ಇನ್ನು 31 ಪಂದ್ಯಗಳು ಬಾಕಿಯಿವೆ. ಒಂದುವರ್ಷದ ಐಪಿಎಲ್‌ ನೇರಪ್ರಸಾರಕ್ಕೆ ಸ್ಟಾರ್‌ನ್ಪೋರ್ಟ್ಸ್ ಬಿಸಿಸಿಐಗೆ 3,269 ಕೋಟಿ ರೂ. ನೀಡುತ್ತದೆ. ಸದ್ಯ ನಡೆದಿರುವ 29 ಪಂದ್ಯಗಳಿಗೆ 1,580 ಕೋ.ರೂ. ಮಾತ್ರ ನೀಡಲಿದೆ. ಉಳಿದ 1,690 ಕೋ.ರೂ. ನಷ್ಟ. ಇನ್ನು ವಿವೋ, ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ನೀಡುವ 440 ಕೋಟಿ ರೂ.ನಲ್ಲಿ ಅರ್ಧಹಣ ಕಡಿತಗೊಳ್ಳಲಿದೆ. ಇತರೆ ಪ್ರಾಯೋಕತ್ವಗಳಿಂದ ಬರಬೇಕಾಗಿರುವ 600 ಕೋಟಿ ರೂ.ಗಳಲ್ಲಿ ಅರ್ಧಹಣ ಮಾತ್ರ ಬರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next