Advertisement

ಇಬ್ಬನಿ ಕಾರಣ: ಭುವಿ

12:34 AM Apr 14, 2017 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌- ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಪಂದ್ಯದ ಫ‌ಲಿತಾಂಶದಲ್ಲಿ ಇಬ್ಬನಿ ವಿಲನ್‌ ಆಗಿ ಪರಿಣಮಿಸಿತು ಎಂಬುದಾಗಿ ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ದೂರಿದ್ದಾರೆ. ವಾಂಖೇಡೆಯಲ್ಲಿ ಬುಧವಾರ ರಾತ್ರಿ ನಡೆದ ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್‌ 4 ವಿಕೆಟ್‌ಗಳಿಂದ ಜಯಿಸಿತ್ತು. ಮೊದಲೇ ನಿರೀಕ್ಷಿಸಿದಂತೆ ಇದು ಹೈದರಾಬಾದ್‌ ಪಾಲಿಗೆ ಈ ಐಪಿಎಲ್‌ನ ಮೊದಲ ಅಗ್ನಿಪರೀಕ್ಷೆ ಆಗಿತ್ತು. ಕಾರಣ, ತವರಿನಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಹಾರಾಡುತ್ತಿದ್ದ ವಾರ್ನರ್‌ ಪಡೆ ಮೊದಲ ಬಾರಿಗೆ ಹೈದರಾಬಾದ್‌ನಾಚೆ ಆಡಲಿಳಿದಿತ್ತು. ತವರಿನ ವಾಂಖೇಡೆಯಲ್ಲಿ ಮುಂಬೈ ಗೆಲುವಿನ ನೆಚ್ಚಿನ ತಂಡವಾಗಿತ್ತು. ಫ‌ಲಿತಾಂಶವೂ ಇದೇ ರೀತಿಯಾಗಿ ಬಂತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹೈದರಾಬಾದ್‌ 8 ವಿಕೆಟಿಗೆ 158 ರನ್‌ ಗಳಿಸಿದರೆ, ಮುಂಬೈ 18.4 ಓವರ್‌ಗಳಲ್ಲಿ 6 ವಿಕೆಟಿಗೆ 159 ರನ್‌ ಬಾರಿಸಿ ಗೆದ್ದು ಬಂದಿತು. ಆರಂಭದಿಂದಲೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಹೈದರಾಬಾದ್‌ ಮೊದಲ ಬಾರಿಗೆ ಈ ಸ್ಥಾನದಿಂದ ಕೆಳಗಿಳಿದು ಎರಡಕ್ಕೆ ಬಂತು. 

Advertisement

‘ನಮ್ಮ ಬ್ಯಾಟಿಂಗ್‌ ಕುರಿತು ದೂರಲೇನೂ ಇಲ್ಲ. ಆವರು ಗರಿಷ್ಠ ಪ್ರಯತ್ನ ಮಾಡಿದ್ದಾರೆ. 10 ಓವರ್‌ ಮುಕ್ತಾಯಕ್ಕೆ ನೋಲಾಸ್‌ 79 ರನ್‌ ಮಾಡಿದ್ದ ನಾವು, ಅಂತಿಮವಾಗಿ ಗಳಿಸಿದ್ದು 158 ರನ್‌ ಮಾತ್ರ. ಇದು ಟಿ-20ಯ ಎವರೇಜ್‌ ಸ್ಕೋರ್‌. ಆದರೂ ಉಳಿಸಿಕೊಳ್ಳಲಾಗಲಿಲ್ಲ. ವಿಪರೀತ ಇಬ್ಬನಿ ಬೀಳುತ್ತಿರುವಾಗ ಬೌಲಿಂಗ್‌ ನಡೆಸುವುದು ನಿಜಕ್ಕೂ ಕಷ್ಟ. ಆದರೆ ಸೋಲಿಗೆ ಇದೊಂದು ಕಾರಣವಲ್ಲ. ಪವರ್‌-ಪ್ಲೇಯಲ್ಲಿ ನಾವು 2-3 ವಿಕೆಟ್‌ಗಳನ್ನಾದರೂ ಕೀಳ ಬೇಕಿತ್ತು…’ ಎಂದು 21ಕ್ಕೆ 3 ವಿಕೆಟ್‌ ಉರುಳಿಸಿ ಹೈದರಾಬಾದ್‌ನ ಯಶಸ್ವಿ ಬೌಲರ್‌ ಆಗಿ ಮೂಡಿಬಂದ ಭುವನೇಶ್ವರ್‌ ಹೇಳಿದರು. ಭುವಿ ಜತೆಗೆ ಈ ಐಪಿಎಲ್‌ನ ‘ಸೆನ್ಸೇಶನಲ್‌’ ಎನಿಸಿದ ಅಫ್ಘಾನಿಸ್ಥಾನದ ರಶೀದ್‌ ಖಾನ್‌ ಕೂಡ ನಿಯಂತ್ರಿತ ದಾಳಿ ಸಂಘಟಿಸಿದರು (4-0-19-1). ಆದರೆ ನೆಹ್ರಾ, ಮುಸ್ತಫಿಜುರ್‌, ಹೂಡಾ, ಕಟಿಂಗ್‌ ದುಬಾರಿಯಾದರು.

ವಾರ್ನರ್‌ ರಿವರ್ಸ್‌ ಸ್ವೀಪ್‌
49 ರನ್‌ ಮಾಡಿದ ವಾರ್ನರ್‌, ಭಜ್ಜಿ ಎಸೆತವೊಂದನ್ನು ರಿವರ್ಸ್‌ ಸ್ವೀಪ್‌ ಮಾಡಲು ಹೋಗಿ ವಿಕೆಟ್‌ ಒಪ್ಪಿಸಿದ್ದೇ ರನ್‌ಗತಿ ಕಡಿಮೆಯಾಗಲು ಕಾರಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭುವಿ, ‘ಹಾಗೇನಿಲ್ಲ. ವಾರ್ನರ್‌ ನೆಟ್ಸ್‌ನಲ್ಲಿ ಒಟ್ಟು 20 ನಿಮಿಷ ಬ್ಯಾಟಿಂಗ್‌ ನಡೆಸಿದರೆ ಇದರಲ್ಲಿ 5 ನಿಮಿಷಗಳಷ್ಟು ಕಾಲ ಬಲಗೈಯಲ್ಲೇ ಬ್ಯಾಟಿಂಗ್‌ ಮಾಡುತ್ತಾರೆ. ಹೀಗಾಗಿ ಇಲ್ಲಿ ಅಂಥದೇ ಆಟಕ್ಕೆ ಮುಂದಾದರು. ಹಿಂದಿನ ಎಸೆತವನ್ನು ಇದೇ ರೀತಿ ಸಿಕ್ಸರ್‌ಗೆ ರವಾನಿಸಿದ್ದರು. ಅದೊಂದು ಅದ್ಭುತ ಹೊಡೆತವಾಗಿತ್ತು. ಎಬಿಡಿ ಮಾತ್ರವೇ ಇಂಥ ಹೊಡೆತ ಬಾರಿಸಬಲ್ಲರು’ ಎಂದರು.

ಕೃಣಾಲ್‌ ಕಮಾಲ್‌
ಮುಂಬೈ ಚೇಸಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ (4), ಜಾಸ್‌ ಬಟ್ಲರ್‌ (14) ದೊಡ್ಡ ಮೊತ್ತ ಗಳಿಸಲು ವಿಫ‌ಲರಾದರು. ಆದರೆ ಪಾರ್ಥಿವ್‌ ಪಟೇಲ್‌ 10ನೇ ಓವರ್‌ ತನಕ ನಿಂತು 39 ರನ್‌ (24 ಎಸೆತ, 7 ಬೌಂಡರಿ) ಮಾಡಿದರು. ನಿತೀಶ್‌ ರಾಣ 36 ಎಸೆತಗಳಿಂದ 45 ರನ್‌ ಹೊಡೆದು (3 ಬೌಂಡರಿ, 2 ಸಿಕ್ಸರ್‌) ಮತ್ತೂಮ್ಮೆ ಆಪತ್ಬಾಂಧವನಾಗಿ ಮೂಡಿ ಬಂದರು. ಪೊಲಾರ್ಡ್‌ ಗಳಿಕೆ ಎಸೆತಕ್ಕೊಂದರಂತೆ 11 ರನ್‌. ಪೊಲಾರ್ಡ್‌ ನಿರ್ಗಮನದ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಕೃಣಾಲ್‌ ಪಾಂಡ್ಯ 20 ಎಸೆತಗಳಿಂದ 37 ರನ್‌ ಸೂರೆಗೈದರು. ಇದರಲ್ಲಿ 3 ಸಿಕ್ಸರ್‌, 3 ಬೌಂಡರಿ ಒಳಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ ಹೈದರಾಬಾದ್‌-8 ವಿಕೆಟಿಗೆ 158. ಮುಂಬೈ ಇಂಡಿಯನ್ಸ್‌ -18.4 ಓವರ್‌ಗಳಲ್ಲಿ 6 ವಿಕೆಟಿಗೆ 159 (ರಾಣ 45, ಪಾರ್ಥಿವ್‌ 39, ಕೃಣಾಲ್‌ ಪಾಂಡ್ಯ 37, ಭುವನೇಶ್ವರ್‌ 21ಕ್ಕೆ 3). ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ (4-0-24-3).

Advertisement

ಎಕ್ಸ್‌ಟ್ರಾ ಇನ್ನಿಂಗ್ಸ್‌: ಪಂದ್ಯ 10 ಮುಂಬೈ-ಹೈದರಾಬಾದ್‌
ಮುಂಬೈ ಇಂಡಿಯನ್ಸ್‌ 2013ರ ಬಳಿಕ 160ಕ್ಕೂ ಕಡಿಮೆ ಮೊತ್ತದ ಎಲ್ಲ ಪಂದ್ಯ ಗಳನ್ನೂ ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದಿತು. ಅಂದು ಆರ್‌ಸಿಬಿ ವಿರುದ್ಧ ಕೊನೆಯ ಸಲ ಸೋಲನುಭವಿಸಿತ್ತು.

ಮುಂಬೈ ಒಟ್ಟು 7 ಸಲ 157 ಹಾಗೂ ಅದಕ್ಕೂ ಕಡಿಮೆ ಮೊತ್ತವನ್ನು ಬೆನ್ನಟ್ಟುವಾಗ ಸೋತಿತ್ತು.

ಜಸ್‌ಪ್ರೀತ್‌ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಸಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇದು ಅವರ 34ನೇ ಪಂದ್ಯ.

ಸನ್‌ರೈಸರ್ ವಿರುದ್ಧ ‘ವಾಂಖೇಡೆ’ಯಲ್ಲಿ ಆಡಿದ ಎಲ್ಲ 3 ಪಂದ್ಯಗಳನ್ನೂ ಮುಂಬೈ ಗೆದ್ದಿತು.

ಐಪಿಎಲ್‌ ಇತಿಹಾಸದಲ್ಲಿ ವಾರ್ನರ್‌-ಧವನ್‌ ಮೊದಲ ವಿಕೆಟಿಗೆ ಅತ್ಯಧಿಕ 14 ಸಲ 50 ಪ್ಲಸ್‌ ರನ್‌ ಜತೆಯಾಟ ದಾಖಲಿಸಿದರು. ಮೈಕಲ್‌ ಹಸ್ಸಿ-ಮುರಳಿ ವಿಜಯ್‌ ಜೋಡಿಯ ದಾಖಲೆ (13) ಪತನಗೊಂಡಿತು.

ವಾರ್ನರ್‌-ಧವನ್‌ ಮೊದಲ ವಿಕೆಟಿಗೆ 81 ರನ್‌ ಜತೆಯಾಟ ನಡೆಸಿದರು. ಇದು ಮುಂಬೈ ವಿರುದ್ಧ ಈ ಜೋಡಿಯ 2ನೇ ದೊಡ್ಡ ಮೊತ್ತದ ಜತೆಯಾಟವಾಗಿದೆ.

ಹರ್ಭಜನ್‌ ವಾಂಖೇಡೆಯಲ್ಲಿ 51 ಟಿ-20 ವಿಕೆಟ್‌ ಕಿತ್ತರು. ಅವರು ನಿರ್ದಿಷ್ಟ ಅಂಗಳ ವೊಂದರಲ್ಲಿ 50 ವಿಕೆಟ್‌ ಉರುಳಿಸಿದ ಭಾರತದ ಮೊದಲ, ವಿಶ್ವದ 12ನೇ ಬೌಲರ್‌ ಎನಿಸಿದರು.

ರೋಹಿತ್‌ ಶರ್ಮ ಮುಂಬೈ ಇಂಡಿಯನ್ಸ್‌ ಪರ ಸತತ 100 ಐಪಿಎಲ್‌ ಪಂದ್ಯಗಳನ್ನಾಡಿದರು. ಅವರು ಐಪಿಎಲ್‌ ತಂಡವೊಂದರ ಪರ ಸತತ 100 ಪಂದ್ಯಗಳನ್ನಾಡಿದ 3ನೇ ಕ್ರಿಕೆಟಿಗ. ಉಳಿದಿಬ್ಬರೆಂದರೆ ಸುರೇಶ್‌ ರೈನಾ (ಚೆನ್ನೈ) ಮತ್ತು ವಿರಾಟ್‌ ಕೊಹ್ಲಿ (ಆರ್‌ಸಿಬಿ).

Advertisement

Udayavani is now on Telegram. Click here to join our channel and stay updated with the latest news.

Next