Advertisement

Mangalore: ಭರತ್‌ ಶೆಟ್ಟಿ ಮೇಲಿನ FIR ಬಗ್ಗೆ ತನಿಖೆ: ಗೃಹ ಸಚಿವ ಪರಮೇಶ್ವರ್‌

10:27 PM Feb 15, 2024 | Team Udayavani |

ಬೆಂಗಳೂರು: ಮಂಗಳೂರು ಉತ್ತರದ ಶಾಸಕ ಭರತ್‌ ಶೆಟ್ಟಿ ಅವರು ಜೆರೋಸಾ ಶಾಲೆಯ ವಠಾರದಲ್ಲಿ ಇಲ್ಲದಿದ್ದರೂ ಅವರ ಮೇಲೆ ಎಫ್ಐಆರ್‌ ಹಾಕಿರುವುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

Advertisement

ಆದರೆ ಇಷ್ಟಕ್ಕೇ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ಎಫ್ಐಆರ್‌ ದಾಖಲಿಸಿದ ಎಸ್‌ಐ ಅನ್ನು ತತ್‌ಕ್ಷಣವೇ ಅಮಾನತು ಮಾಡಬೇಕು ಮತ್ತು ಶಾಲೆಯ ವಿರುದ್ದ ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಎಫ್ಐಆರ್‌ ದಾಖಲಿಸಬೇಕು ಎಂದು ಆಗ್ರಹಿಸಿದರು. ಇದು ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟ ಕಾರಣ ಸದನವನ್ನು ಮುಂದೂಡಲಾಯಿತು.
ತಾನು ಸ್ಥಳದಲ್ಲಿಲ್ಲದಿದ್ದರೂ ಅನಿಲ್‌ ಲೋಬೋ ನೀಡಿದ ದೂರಿನ ಆಧಾರದಲ್ಲಿ ನನ್ನ ಮೇಲೆ ದೂರು ದಾಖಲಾಗಿದೆ ಎಂದು ಭರತ್‌ ಶೆಟ್ಟಿ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಗೃಹ ಸಚಿವರು, ಭರತ್‌ ಶೆಟ್ಟಿ ಶಾಲೆಯ ಬಳಿಗೆ ಹೋಗಿಲ್ಲ. ನಾನು ಇದರ ಬಗ್ಗೆ ಪರಿಶೀಲಿಸಿಕೊಂಡಿದ್ದೇನೆ. ಡಿಡಿಪಿಐ ಕಚೇರಿಗೆ ಹೋಗಿ ಹಿಂದೂ ಮಕ್ಕಳನ್ನು ಕ್ರಿಶ್ಚಿಯನ್‌ ಶಾಲೆಗೆ ಸೇರಿಸಬೇಡಿ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದು ಪ್ರಚೋದನಕಾರಿ ಹೇಳಿಕೆ ಅಂತ ದೂರಿನಲ್ಲಿ ಸೇರಿಸಿದ್ದಾರೆ ಎಂದರು.

ಆದರೆ ಸುನಿಲ್‌ ಕುಮಾರ್‌ ಮತ್ತು ಆರ್‌. ಅಶೋಕ್‌ ಅವರು, ಪ್ರಕರಣಕ್ಕೆ ಸಂಬಂಧಿಸಿ ಎರಡು ದೂರುಗಳು ಸಲ್ಲಿಕೆಯಾಗಿದ್ದರೂ ಒಂದು ಮಾತ್ರ ಎಫ್‌ಐಆರ್‌ ಆಗಿದೆ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಮಾಡಲಾಗಿದೆ. ಸ್ಥಳದಲ್ಲಿಲ್ಲದ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿ ಕರ್ತವ್ಯಲೋಪ ಎಸಗಿದ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಬೇಕು. ಹಿಂದೂಗಳಿಗೆ ಅವಮಾನ ಮಾಡಿದರೆ ಕೋಮು ಪ್ರಚೋದನೆ ಆಗುವುದಿಲ್ಲವೇ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ, ಶಾಲೆಯವರು ಶಿಕ್ಷಕಿಯನ್ನು ಅಮಾನತು ಮಾಡಿ ನ್ಯಾಯಬದ್ಧ ಕ್ರಮ ಕೈಗೊಂಡಿದ್ದಾರೆ. ಆದರೆ ಸರಕಾರವೇ ಕ್ಲೀನ್‌ಚಿಟ್‌ ಕೊಡುತ್ತಿದೆ ಎಂದು ಟೀಕಿಸಿದರು.
ಪ್ರಾಥಮಿಕ ತನಿಖೆ ವೇಳೆ ಶಿಕ್ಷಕಿಯ ತಪ್ಪಿಲ್ಲ ಎಂಬುದು ಗೊತ್ತಾಗಿದೆ ಅದನ್ನು ಸದನಕ್ಕೆ ತಿಳಿಸಿದ್ದೇನೆ. ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಬೇಕು. ಒಂದು ವೇಳೆ ಅಧಿಕಾರಿ ತಪ್ಪು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದರು. ಜತೆಗೆ, ಶಾಸಕ ಭರತ್‌ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಕ್ರಿಶ್ಚಿಯನ್‌ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂಬಂತೆ ಪೋಸ್ಟ್‌ ಮಾಡಿದ್ದನ್ನು ಓದಿ, ಹೀಗಿದ್ದಾಗ್ಯೂ ಎಫ್‌ಐಆರ್‌ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದರು. ಅದರಲ್ಲಿ ಏನು ತಪ್ಪಿದೆ ಎಂದು ಭರತ್‌ ಶೆಟ್ಟಿ ಅವರು ಪ್ರಶ್ನಿಸಿದರು.

ಯಾಕೆ ಕೂಗಾಡುತ್ತೀರಿ, ಕೋಪ ನಿಮಗೆ ಮಾತ್ರ ಬರುತ್ತಾ? ಯಾರನ್ನು ಹೆದರಿಸುತ್ತೀರಿ, ಇದು ವಿಧಾನಸಭೆ; ಹೌದು, ಇದೇ ಸತ್ಯ. ನಾನು ನನ್ನ ಹೇಳಿಕೆಗೆ ಬದ್ಧನಿದ್ದೇನೆ ಎಂದು ಗೃಹಸಚಿವರು ಏರುಧ್ವನಿಯಲ್ಲಿ ಹೇಳಿದರು. ಆಡಳಿತ ಪಕ್ಷದ ಸದಸ್ಯರು ಗೃಹಸಚಿವರ ಬೆಂಬಲಕ್ಕೆ ನಿಂತರು. ಕೆಲಕಾಲ ಸದನದಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಕೊನೆಗೆ ವಿಧಾನಸಭಾಧ್ಯಕ್ಷರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next