Advertisement

ನೂತನ ಸಚಿವರ ಪರಿಚಯ: ಕಾಲೆಳೆದ ಕಾಂಗ್ರೆಸ್‌ ಸದಸ್ಯರು

11:39 PM Feb 18, 2020 | Lakshmi GovindaRaj |

ವಿಧಾನಸಭೆ: ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ನೂತನ ಸಚಿವರ ಪರಿಚಯ ಮಾಡಿಕೊಡುವ ವಿಚಾರದಲ್ಲಿ ಪ್ರತಿಪಕ್ಷ ಸದಸ್ಯರು ಆಡಳಿತ ಪಕ್ಷದ ಕಾಲೆಳೆದ ಪ್ರಸಂಗ ನಡೆಯಿತು. ಕಲಾಪ ಪ್ರಾರಂಭವಾದ ನಂತರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಯವರು ನೂತನ ಸಚಿವ ಪರಿಚಯ ಮಾಡಿಕೊಡಲಿದ್ದಾರೆ ಎಂದು ಹೇಳಿದರು.

Advertisement

ಯಡಿಯೂರಪ್ಪ ಅವರು ಎದ್ದು ನಿಂತು ಹೊಸ ಸಚಿವರ ಹೆಸರು ಹೇಳಲು ಪ್ರಾರಂಭಿಸಿದರು. ಆದರೆ, ಸದನದಲ್ಲಿ ಹಾಜರಿರದವರ ಹೆಸರು ಹೇಳಿದಾಗ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಲ್ಲಿರುವವರನ್ನು ಪರಿಚಯಿಸುವುದು ಸರಿ, ಸದನದಲ್ಲಿ ಇಲ್ಲದವರ ಹೆಸರು ಹೇಳಿದರೆ ಹೇಗೆ ಪರಿಚಯ ಮಾಡಿಕೊಳ್ಳುವುದು? ನಗೆಪಾಟಲಿಗೆ ಈಡಾಗುತ್ತದೆ ಅಷ್ಟೇ ಎಂದು ಕಾಲೆಳೆದರು. ಜತೆಗೆ, ಅವರೆಲ್ಲಾ ಇಲ್ಲಿದ್ದವರೇ ಬಿಡಿ ಗೊತ್ತು, ಪರಿಚಯ ಅಗತ್ಯವೇನಿಲ್ಲ ಎಂದರು.

ಆಗ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾಗಾದರೆ ಅವರ ಪರಿಚಯ ನಿಮಗಿಂತ ಆ ಭಾಗದ (ಆಡಳಿತ ಪಕ್ಷ)ದವರಿಗೆ ಅಗತ್ಯ ಎಂಬ ಭಾವನೆಯಾ ಎಂದು ಚಟಾಕಿ ಹಾರಿಸಿದರು. ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಎಲ್ಲರೂ ನಮ್ಮ ಬಳಿ ಇದ್ದವರೇ ಅಲ್ಲವೇ? ಈ ಸದನಕ್ಕೆ ಅವರನ್ನು ಪರಿಚಯಿಸಿದ್ದು ನಾವು ಎಂದು ಹೇಳಿದರು. ಕೊನೆಗೆ ಯಡಿಯೂರಪ್ಪ ಅವರು ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜ್‌, ಡಾ.ಕೆ.ಸುಧಾಕರ್‌, ಬಿ.ಸಿ.ಪಾಟೀಲ್‌ ಸೇರಿ ಸದನದಲ್ಲಿ ಹಾಜರಿದ್ದವರ ಪರಿಚಯ ಮಾಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next